ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹಾ ಹೈಡ್ರಾಮಾಕ್ಕೆ ವೇದಿಕೆ ಸಜ್ಜಾಗಿದೆ. ರಾಜ್ಯದ ಜನತೆ ಬರಗಾಲ, ಅಭಿವೃದ್ಧಿ ಕುಂಠಿತದಂತಹ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದರೆ, ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಕುರ್ಚಿ ಉಳಿಸಿಕೊಳ್ಳುವ ಮತ್ತು ಕಸಿದುಕೊಳ್ಳುವ ಬೃಹತ್ ಕಸರತ್ತು ತಾರಕಕ್ಕೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣಗಳ ನಡುವಿನ ಶೀತಲ ಸಮರ ಇದೀಗ ಸ್ಫೋಟಗೊಳ್ಳುವ ಹಂತಕ್ಕೆ ತಲುಪಿದ್ದು, ವಿಧಾನಸೌಧದ ಪಡಸಾಲೆಯಲ್ಲಿ ವಿದೇಶಿ ಪ್ರವಾಸ ಮತ್ತು ರೆಸಾರ್ಟ್ ರಾಜಕೀಯದ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಬಜೆಟ್ ಅಧಿವೇಶನದ ಹೊತ್ತಲ್ಲೇ ಶಾಸಕರ ಹಾರಾಟ!
ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಮುಂಬರುವ ಬಜೆಟ್ ಮಂಡನೆ ಬಗ್ಗೆ ಗಂಭಿರ ಚರ್ಚೆ ನಡೆಯಬೇಕಾದ ಸಂದರ್ಭದಲ್ಲೇ, ಆಡಳಿತ ಪಕ್ಷದ ಶಾಸಕರು ವಿದೇಶ ಪ್ರವಾಸಕ್ಕೆ ಸಜ್ಜಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸುಮಾರು 25 ಶಾಸಕರು ಒಟ್ಟಾಗಿ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.
ಪಶುಸಂಗೋಪನೆ ಸಚಿವ ವೆಂಕಟೇಶ್ ಅವರ ನೇತೃತ್ವದಲ್ಲಿ ಈ ತಂಡವು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗೆ ಹಾರಲಿದೆ. ಫೆಬ್ರವರಿ 16 ರಿಂದ ಮಾರ್ಚ್ 6ರವರೆಗೆ ಅಂದರೆ ಬರೋಬ್ಬರಿ 15 ದಿನಗಳ ಕಾಲ ಈ ಶಾಸಕರು ರಾಜ್ಯದಿಂದ ಹೊರಗಿರಲಿದ್ದಾರೆ. ಮೇಲ್ನೋಟಕ್ಕೆ ಇದು ಪಶುಸಂಗೋಪನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹದ ಅಧ್ಯಯನ ಪ್ರವಾಸ ಎಂದು ಬಿಂಬಿತವಾಗಿದ್ದರೂ, ಇದರ ಅಸಲಿ ಉದ್ದೇಶವೇ ಬೇರೆ ಎಂಬುದು ರಾಜಕೀಯ ಪಡಸಾಲೆಯ ಗುಟ್ಟಾಗಿ ಉಳಿದಿಲ್ಲ. ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ವಿರೋಧಿ ಬಣಕ್ಕೆ ತಮ್ಮ ಶಕ್ತಿ ಪ್ರದರ್ಶನ ಮಾಡುವುದು ಮತ್ತು ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವ ತಂತ್ರಗಾರಿಕೆ ಇದರ ಹಿಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಡಿಕೆಶಿ ಬಣದಿಂದ ರೆಸಾರ್ಟ್ ಪಾಲಿಟಿಕ್ಸ್ ಅಸ್ತ್ರ?
ಒಂದೆಡೆ ಸಿದ್ದರಾಮಯ್ಯ ಅವರ ಬಣ ವಿದೇಶಕ್ಕೆ ಹಾರಲು ಸಜ್ಜಾಗಿದ್ದರೆ, ಇತ್ತ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪಾಳೆಯದಲ್ಲಿ ಆತಂಕ ಮತ್ತು ಆಕ್ರೋಶದ ಹೊಗೆಯಾಡುತ್ತಿದೆ. ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಡಿಕೆಶಿ, ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದಾಗ ಶಾಸಕರನ್ನು ರಕ್ಷಿಸಿ ಹೈಕಮಾಂಡ್ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ, ಸ್ವತಃ ತಮ್ಮದೇ ತವರಲ್ಲಿ ತಮಗೆ ಸಿಗಬೇಕಾದ ಅಧಿಕಾರ ಸಿಗುತ್ತಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ ಎನ್ನಲಾಗಿದೆ.
ದೆಹಲಿಗೆ ಮೂರು ನಾಲ್ಕು ಬಾರಿ ಎಡತಾಕಿದರೂ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಗದಿರುವುದು ಡಿಕೆಶಿ ಅವರ ಅಸಮಾಧಾನವನ್ನು ಹೆಚ್ಚಿಸಿದೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಸಿಎಂ ಎಂದು ಹೇಳಿಕೆ ನೀಡಿರುವುದು ಮತ್ತು ಈಗ ದಿಢೀರನೆ 25 ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿರುವುದು ಡಿಕೆಶಿ ಬಣಕ್ಕೆ ನುಂಗಲಾರದ ತುತ್ತಾಗಿದೆ. ಈ ವಿದೇಶಿ ರಾಜಕೀಯಕ್ಕೆ ಪ್ರತ್ಯುತ್ತರ ನೀಡಲು ಡಿಕೆಶಿ ಬಣವು ರೆಸಾರ್ಟ್ ರಾಜಕೀಯಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ತಮ್ಮ ನಿಷ್ಠಾವಂತ ಶಾಸಕರು ಕೈತಪ್ಪಿ ಹೋಗದಂತೆ ನೋಡಿಕೊಳ್ಳಲು ಮತ್ತು ಹೈಕಮಾಂಡ್ ಮೇಲೆ ಒತ್ತಡ ಹೇರಲು ರೆಸಾರ್ಟ್ ರಾಜಕಾರಣವೇ ಮದ್ದು ಎಂದು ಡಿಕೆಶಿ ಬಣ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕರ ಪಟ್ಟಿ ಮತ್ತು ಟಿಕೆಟ್ ಬುಕ್ಕಿಂಗ್ ರಹಸ್ಯ
ಈಗಾಗಲೇ ವಿದೇಶ ಪ್ರವಾಸಕ್ಕೆ ಟಿಕೆಟ್ ಬುಕ್ ಆಗಿರುವ ಶಾಸಕರ ಪಟ್ಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪುಟ್ಟರಂಗ ಶೆಟ್ಟಿ, ಬಿ.ಎಂ. ನಾಗರಾಜು, ಯಶವಂತಗೌಡ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬಸನಗೌಡ ದದ್ದಲ್, ರಾಘವೇಂದ್ರ ಹಿಟ್ನಾಳ್, ಅನಿಲ್ ಚಿಕ್ಕಮಾಧು, ಜೆ.ಟಿ. ಪಾಟೀಲ್, ಎ.ಆ.ರ್ ಕೃಷ್ಣಮೂರ್ತಿ ಸೇರಿದಂತೆ ಪ್ರಮುಖ ಶಾಸಕರು ಈ ಪಟ್ಟಿಯಲ್ಲಿದ್ದಾರೆ. ಇವರೆಲ್ಲರೂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು ಎಂಬುದು ವಿಶೇಷ.
ಮೈದಳೆದ ಸಿದ್ದರಾಮೋತ್ಸವ ವರ್ಸಸ್ ಕಾಂಗ್ರೆಸ್ ಉತ್ಸವ ವಿವಾದ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಫೆಬ್ರವರಿ 16ಕ್ಕೆ 1000 ದಿನಗಳು ತುಂಬಲಿವೆ. ಇದೇ ವೇಳೆ ಮಾರ್ಚ್ 6ಕ್ಕೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಲಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮೋತ್ಸವ ನಡೆಸಲು ಉತ್ಸುಕರಾಗಿದ್ದರೆ, ಡಿಕೆ ಶಿವಕುಮಾರ್ ಅವರು ವ್ಯಕ್ತಿ ಪೂಜೆಗಿಂತ ಪಕ್ಷದ ಕಾರ್ಯಕ್ರಮ ಮಾಡೋಣ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇದು ನಾಯಕತ್ವ ಬದಲಾವಣೆ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಸಿಎಂ ಮೌನ ಮತ್ತು ಜನರ ಆಕ್ರೋಶ
ನಾಯಕತ್ವ ಬದಲಾವಣೆ ಮತ್ತು ಶಾಸಕರ ವಿದೇಶ ಪ್ರವಾಸದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರೆ. ಈ ಪ್ರಶ್ನೆಯನ್ನು ಪದೇ ಪದೆ ಕೇಳಬೇಡಿ, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿ ಜಾರಿಕೊಂಡಿದ್ದಾರೆ. ಅಲ್ಲದೆ, ಶಾಸಕರು ಸ್ವಂತ ಖರ್ಚಿನಲ್ಲಿ ಹೋಗುವುದಾದರೆ ತಪ್ಪೇನು ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ, ರಾಜ್ಯದ ಜನತೆ ಮಾತ್ರ ಈ ಬೆಳವಣಿಗೆಯಿಂದ ರೋಸಿ ಹೋಗಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಹೆಚ್ಚಿದೆ ಎಂಬ ಚರ್ಚೆ ನಡೆಯುತ್ತಿರುವಾಗಲೇ, ಜನಪ್ರತಿನಿಧಿಗಳು ಅಭಿವೃದ್ಧಿ ಮರೆತು ವಿದೇಶಿ ಪ್ರವಾಸ ಮತ್ತು ರೆಸಾರ್ಟ್ ರಾಜಕೀಯದಲ್ಲಿ ಮುಳುಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರ ದಾಹಕ್ಕಾಗಿ ನಡೆಯುತ್ತಿರುವ ಈ ಕಿತ್ತಾಟದಲ್ಲಿ ಆಡಳಿತ ಯಂತ್ರ ಕುಸಿದು ಬೀಳುವ ಆತಂಕ ಎದುರಾಗಿದೆ. ವಿರೋಧ ಪಕ್ಷಗಳು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುವುದಕ್ಕೆ ಸೀಮಿತವಾಗದೆ, ಸರ್ಕಾರದ ಈ ನಡೆಗೆ ಬಲವಾದ ವಿರೋಧ ವ್ಯಕ್ತಪಡಿಸಬೇಕಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.








