ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಸಾರಿಗೆ ಬಸ್ ಪ್ರಯಾಣಿಕರಿಗೆ ಮತ್ತು ಪಾರ್ಸೆಲ್ ಸೇವೆ ಬಳಸುವವರಿಗೆ ದಿಢೀರ್ ಹೊರೆ ಎನ್ನುವಂತೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಲಗೇಜ್ ಸಾಗಾಣಿಕೆ ದರವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಮುಖ್ಯವಾಗಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ (Unaccompanied Luggage) ದರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಅಂದರೆ ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸದೇ, ಕೇವಲ ವಸ್ತುಗಳನ್ನು ಅಥವಾ ಪಾರ್ಸೆಲ್ ಗಳನ್ನು ಬೇರೆ ಊರಿಗೆ ಕಳುಹಿಸುವ ದರದಲ್ಲಿ ಏರಿಕೆ ಮಾಡಲಾಗಿದೆ.
ಪರಿಷ್ಕೃತ ದರಗಳ ವಿವರ ಈ ಕೆಳಗಿನಂತಿದೆ:
ಕೆಎಸ್ಆರ್ಟಿಸಿ ಬಸ್ಗಳಲ್ಲಿನ ಲಗೇಜ್ ದರವನ್ನು ಹಂತಗಳಿಗೆ (Stages) ಅನುಗುಣವಾಗಿ ಹೆಚ್ಚಳ ಮಾಡಲಾಗಿದೆ.
1 ರಿಂದ 5ನೇ ಹಂತದವರೆಗಿನ (ಅಲ್ಪ ದೂರದ) ಸಾಗಾಣಿಕೆಗೆ 6 ರೂಪಾಯಿ ನಿಗದಿಪಡಿಸಲಾಗಿದೆ.
6 ರಿಂದ 12 ಹಂತದವರೆಗಿನ ದೂರಕ್ಕೆ 12 ರೂಪಾಯಿ ನಿಗದಿಪಡಿಸಲಾಗಿದೆ.
ದೂರದ ಪ್ರಯಾಣಕ್ಕೆ ಅಂದರೆ 156 ರಿಂದ 160 ಹಂತದವರೆಗಿನ ಲಗೇಜ್ ಸಾಗಾಣಿಕೆಗೆ ಬರೋಬ್ಬರಿ 145 ರೂಪಾಯಿ ದರವನ್ನು ಹೆಚ್ಚಳ ಮಾಡಿ ಆದೇಶಿಸಲಾಗಿದೆ.
ಏರಿಕೆ ಏಕೆ?
ಕಳೆದ 2021ರಲ್ಲಿ ಪ್ರಯಾಣಿಕ ರಹಿತ ಲಗೇಜ್ ದರವನ್ನು ಏರಿಕೆ ಮಾಡಲಾಗಿತ್ತು. ಆ ಬಳಿಕ ಸಾರಿಗೆ ನಿಗಮವು ಬಸ್ ಟಿಕೆಟ್ ದರಗಳಲ್ಲಿ ಪರಿಷ್ಕರಣೆ ಮಾಡಿದ್ದರೂ, ಲಗೇಜ್ ದರವನ್ನು ಹೆಚ್ಚಿಸಿರಲಿಲ್ಲ. ಇಂಧನ ಬೆಲೆ ಏರಿಕೆ ಮತ್ತು ನಿರ್ವಹಣಾ ವೆಚ್ಚದ ಹಿನ್ನೆಲೆಯಲ್ಲಿ, ಇದೀಗ ಬಾಕಿ ಉಳಿದಿದ್ದ ಲಗೇಜ್ ದರ ಪರಿಷ್ಕರಣೆಯನ್ನು ಮಾಡಲಾಗಿದೆ.
ಈ ಆದೇಶವು ಇಂದಿನಿಂದಲೇ ಜಾರಿಗೆ ಬರುತ್ತಿದ್ದು, ಬಸ್ ಮೂಲಕ ತಮ್ಮ ಊರುಗಳಿಗೆ ಸರಕು, ಹೂವು, ಹಣ್ಣು ಮತ್ತು ತರಕಾರಿಗಳನ್ನು ಕಳುಹಿಸುವ ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಈ ದರ ಏರಿಕೆಯು ಬಿಸಿ ಮುಟ್ಟಿಸಲಿದೆ.







