ನವದೆಹಲಿ: ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯನ್ನು ಕೀಳು ಮಟ್ಟದ ನಗ್ನ ರಾಜಕೀಯ ಎಂದು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ನಾಚಿಕೆಗೇಡು ಅಂದರೆ ಏನು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ ಎಂದು ಸವಾಲು ಹಾಕಿರುವ ರಾಹುಲ್, ವಿವಾದಾತ್ಮಕ ಎಪ್ಸ್ಟೀನ್ ಫೈಲ್ ಮತ್ತು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಸಮ್ಮೇಳನದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಯನ್ನು ಪ್ರಧಾನಿ ಮೋದಿ ಟೀಕಿಸಿದ್ದರು. ಇದಕ್ಕೆ ವಿಡಿಯೋ ಸಂದೇಶದ ಮೂಲಕ ಆಕ್ರೋಶಭರಿತ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ದೇಶದ ಪ್ರಧಾನಮಂತ್ರಿಯವರೇ ನಾಚಿಕೆಪಟ್ಟುಕೊಳ್ಳಬೇಕಾದ ಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಅಮೆರಿಕಕ್ಕೆ ದೇಶವನ್ನು ಮಾರಾಟ ಮಾಡಿದ್ದೀರಿ
ಪ್ರಧಾನಿ ಮೋದಿಯವರೇ, ನೀವು ನಾಚಿಕೆಯ ಬಗ್ಗೆ ಮಾತನಾಡುತ್ತೀರಾ? ಹಾಗಾದರೆ ಕೇಳಿ, ಅಮೆರಿಕದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿ ದೇಶದ ಹಿತಾಸಕ್ತಿಯನ್ನು ಬಲಿಗೊಟ್ಟಿರುವುದು ನಿಜವಾದ ನಾಚಿಕೆಗೇಡಿನ ಸಂಗತಿ. ಈ ಒಪ್ಪಂದದ ಮೂಲಕ ನೀವು ಭಾರತದ ಡೇಟಾ ಭದ್ರತೆಯನ್ನು ಅಮೆರಿಕದ ಪಾಲಿಗೆ ಒಪ್ಪಿಸಿದ್ದೀರಿ. ಇದರಿಂದ ನಮ್ಮ ರೈತರು ಮತ್ತು ದೇಶದ ಬೆನ್ನೆಲುಬಾದ ವಸ್ತ್ರೋದ್ಯಮಕ್ಕೆ ಮರಣಶಾಸನ ಬರೆದಂತಾಗಿದೆ. ಭಾರತೀಯರ ಡೇಟಾ ಮತ್ತು ಹಿತಾಸಕ್ತಿಯನ್ನು ವಿದೇಶಕ್ಕೆ ಮಾರಿರುವುದು ನಾಚಿಕೆಗೇಡಿನ ಪರಮಾವಧಿ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಎಪ್ಸ್ಟೀನ್ ಫೈಲ್ ಬಾಂಬ್ ಸಿಡಿಸಿದ ರಾಹುಲ್
ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ ರಾಹುಲ್ ಗಾಂಧಿ, ಕುಖ್ಯಾತ ಎಪ್ಸ್ಟೀನ್ ಫೈಲ್ಸ್ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಿಮ್ಮ ಹೆಸರು, ನಿಮ್ಮ ಸಚಿವರ ಹೆಸರು ಮತ್ತು ನಿಮ್ಮ ಆಪ್ತ ಸ್ನೇಹಿತರ ಹೆಸರುಗಳು ಎಪ್ಸ್ಟೀನ್ ಫೈಲ್ಗಳಲ್ಲಿ ಕಾಣಿಸಿಕೊಳ್ಳುತ್ತವೆ. ಜಗತ್ತಿನ ಕೀಳು ಮಟ್ಟದ ಅಪರಾಧಿಯೊಂದಿಗೆ ನಂಟು ಹೊಂದಿರುವುದು ಪ್ರಧಾನಿ ಹುದ್ದೆಯಲ್ಲಿರುವವರಿಗೆ ಶೋಭೆಯಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿಯ ಕಂಠ ಹಿಡಿದಿರುವ ಅಮೆರಿಕ
ಸಂಸತ್ತಿನಲ್ಲಿ ನಾನು ಹೇಳಿದ ಸತ್ಯ ಈಗ ಸಾಬೀತಾಗುತ್ತಿದೆ. ಈ ದೇಶದ ಪ್ರಧಾನಮಂತ್ರಿಯ ಕಂಠವನ್ನು ಅಮೆರಿಕ ಹಿಡಿದಿಟ್ಟುಕೊಂಡಿದೆ. ಅವರು ಭಾರತವನ್ನು ಒತ್ತಡಕ್ಕೆ ಒಳಪಡಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದಾರೆ. ಅಮೆರಿಕದಲ್ಲಿ ಉದ್ಯಮಿ ಅದಾನಿ ವಿರುದ್ಧ ನಡೆಯುತ್ತಿರುವ ಪ್ರಕರಣವು ಬಿಜೆಪಿ ಮತ್ತು ಅದರ ಆರ್ಥಿಕ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸುತ್ತಿದೆ. ಈ ಕಾರಣಕ್ಕಾಗಿಯೇ ನಿಮ್ಮ ನಿದ್ದೆ ಹಾರಿಹೋಗಿದೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
ಅದಾನಿ ರಕ್ಷಣೆಗೆ ನಿಂತ ಸರ್ಕಾರ
ಒಂದು ವರ್ಷಕ್ಕೂ ಹೆಚ್ಚು ಕಾಲವಾದರೂ ಅದಾನಿ ಸಮೂಹದ ವಿರುದ್ಧದ ಆರೋಪಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರ ಕೇವಲ ಉದ್ಯಮಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ರಾಹುಲ್ ಕಿಡಿಕಾರಿದ್ದಾರೆ.
ಮೋದಿಯವರ ಕಣ್ಣಲ್ಲಿ ಭಯವಿದೆ
ಪ್ರಧಾನಿ ಮೋದಿ ಅವರು ಭಯದಿಂದ ಸಂಸತ್ತಿಗೆ ಬರುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರೇ, ನಿಮ್ಮ ಪ್ರಧಾನಮಂತ್ರಿಯ ಕಣ್ಣಲ್ಲಿ ಒಮ್ಮೆ ನೋಡಿ, ಅಲ್ಲಿ ನಿಮಗೆ ಭಯ ಕಾಣಿಸುತ್ತದೆ. ಅವರು ಸಂಸತ್ತನ್ನು ಎದುರಿಸಲು ಹೆದರುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಗಾಂಧಿ, ಭಗತ್ ಸಿಂಗ್ ಹಾದಿಯೇ ನಮ್ಮದು
ಶಾಂತಿಯುತ ಪ್ರತಿಭಟನೆ ಮತ್ತು ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಜೀವಾಳ. ಮಹಾತ್ಮ ಗಾಂಧಿ ಮತ್ತು ಭಗತ್ ಸಿಂಗ್ ತೋರಿಸಿದ ದಾರಿ ಇದು. ಯುವಕರು ಶರ್ಟ್ ಬಿಚ್ಚಿ ಪ್ರತಿಭಟಿಸಿದರೆ ಅದು ಪ್ರಜಾಪ್ರಭುತ್ವದ ಹಕ್ಕು, ಅದನ್ನು ನಾಚಿಕೆಗೇಡು ಎನ್ನಲು ಸಾಧ್ಯವಿಲ್ಲ. ಆದರೆ ದೇಶವನ್ನು ಮಾರುವುದು ಮತ್ತು ಅಪರಾಧಿಗಳೊಂದಿಗೆ ಸಂಬಂಧ ಹೊಂದುವುದು ನಿಜವಾದ ನಾಚಿಕೆಗೇಡು. ರೈತರು, ಕಾರ್ಮಿಕರು, ಎಂಎಸ್ಎಂಇಗಳು ಮತ್ತು ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್ ತನ್ನ ಹೋರಾಟದಲ್ಲಿ ಒಂದು ಹೆಜ್ಜೆಯೂ ಹಿಂದಿಡುವುದಿಲ್ಲ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.








