ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ನೂತನ ಶಾಸಕರ ಸಚಿವ ಸ್ಥಾನದ ಬೇಡಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಬಲ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿರಿಯರೇ ಸತತವಾಗಿ ಅಧಿಕಾರ ಅನುಭವಿಸುವ ಬದಲು, ಹೊಸ ರಕ್ತ ಮತ್ತು ಹೊಸ ಆಲೋಚನೆಗಳಿಗೆ ಮಣೆ ಹಾಕಬೇಕು ಎಂದು ಹೇಳುವ ಮೂಲಕ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ.
ಈಗಾಗಲೇ ಐವರು ನೂತನ ಶಾಸಕರು ತಮಗೆ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಈ ಬೆಳವಣಿಗೆಯ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಮೊದಲ ಬಾರಿಗೆ ಗೆದ್ದವರಿಗೆ ಅವಕಾಶ ನೀಡಬಾರದು ಎನ್ನುವ ನಿಯಮವೇನಿಲ್ಲ ಎಂದು ಐತಿಹಾಸಿಕ ಉದಾಹರಣೆಗಳನ್ನು ನೀಡಿ ಸಮರ್ಥಿಸಿಕೊಂಡರು.
ನರೇಂದ್ರ ಮೋದಿ ಮತ್ತು ಸ್ವತಃ ತಮ್ಮ ಉದಾಹರಣೆ ನೀಡಿದ ಡಿಕೆಶಿ
ಹೊಸಬರ ಬೇಡಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡ ಡಿಕೆಶಿ, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗುವಾಗ ಶಾಸಕರೇ ಆಗಿರಲಿಲ್ಲ. ಆದರೂ ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗಿತ್ತಲ್ಲವೇ? ನಾನು ಕೂಡ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದಗಲೇ ಮಂತ್ರಿಯಾಗಿದ್ದೆ. ಹೀಗಿರುವಾಗ ಈಗ ಗೆದ್ದಿರುವ ಹೊಸಬರು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರಿಗೆ ಆ ಅರ್ಹತೆ ಮತ್ತು ಹಕ್ಕಿದೆ ಎಂದು ಸ್ಪಷ್ಟಪಡಿಸಿದರು.
ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ?
ರಾಜಕೀಯದಲ್ಲಿ ಪೀಳಿಗೆಯ ಬದಲಾವಣೆ ಅನಿವಾರ್ಯ ಎಂಬುದನ್ನು ತಮ್ಮದೇ ಶೈಲಿಯಲ್ಲಿ ವಿವರಿಸಿದ ಡಿಕೆಶಿ, ನಾನು ಮಂತ್ರಿಯಾಗಿ 36 ವರ್ಷಗಳಾಗಿವೆ. ನಾವೇ ಇಲ್ಲೇ ಗೂಟ ಹೊಡೆದುಕೊಂಡು ಶಾಶ್ವತವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೊಸ ಜನರೇಷನ್ ಬೆಳೆಯಬೇಕು, ಹೊಸ ಆಲೋಚನೆಗಳು ಆಡಳಿತಕ್ಕೆ ಬರಬೇಕು. ಹಿರಿಯರಾದ ನಾವು ಹೊಸಬರಿಗೆ ಪ್ರೇರಣೆ ನೀಡಬೇಕು ಮತ್ತು ದಾರಿ ಮಾಡಿಕೊಡಬೇಕು ಎಂದು ಮಾರ್ಮಿಕವಾಗಿ ನುಡಿದರು.
ಸಂಪುಟ ಪುನಾರಚನೆ ಖಚಿತ?
ಸಚಿವ ಸಂಪುಟ ಪುನಾರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮಂತ್ರಿಮಂಡಲಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ಆದರೆ ಮುಖ್ಯಮಂತ್ರಿಗಳು ಈಗಾಗಲೇ ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಸೂಕ್ತ ಸಮಯದಲ್ಲಿ ಆ ಪ್ರಕ್ರಿಯೆ ನಡೆಯಲಿದೆ. ಹೊಸಬರನ್ನು ತಯಾರು ಮಾಡುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದರು.
ಮಹದೇವಪ್ಪ ಹೇಳಿಕೆಗೆ ಡಿಕೆಶಿ ವ್ಯಂಗ್ಯದ ಏಟು
ಇದೇ ವೇಳೆ ಸಚಿವ ಎಚ್.ಸಿ. ಮಹದೇವಪ್ಪ ಅವರು ದಲಿತ ಸಿಎಂ ವಿಚಾರ ಪ್ರಸ್ತಾಪಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಡಿಕೆಶಿ ತಮ್ಮದೇ ಧಾಟಿಯಲ್ಲಿ ಉತ್ತರಿಸಿದರು. ಮಹದೇವಪ್ಪ ಅವರು ನಮ್ಮ ಪಕ್ಷದ ಹೈಕಮಾಂಡ್ ನಾಯಕರಿದ್ದಂತೆ. ಬಹುಶಃ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವ ವಿಚಾರ ಅವರಿಗೆ ತಿಳಿದಿರಬೇಕು. ಆ ಮಾಹಿತಿ ನನಗಿನ್ನೂ ಬಂದಿಲ್ಲ, ಆದರೆ ಅವರಿಗೆ ಗೊತ್ತಿರಬಹುದು ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸುವ ಮೂಲಕ ಕುತೂಹಲ ಮೂಡಿಸಿದರು.
ಒಟ್ಟಾರೆಯಾಗಿ, ಡಿಕೆ ಶಿವಕುಮಾರ್ ಅವರ ಈ ಹೇಳಿಕೆಯು ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದು, ಸಂಪುಟ ಪುನಾರಚನೆಯಾದರೆ ಹಲವು ಹಿರಿಯ ತಲೆಗಳು ಉರುಳಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ ಎಂಬ ಸಂದೇಶವನ್ನು ರವಾನಿಸಿದೆ.








