1992ರಲ್ಲಿ ತಂಡದಿಂದ ಕೈಬಿಟ್ಟಿರುವುದರಿಂದ ಗಂಗೂಲಿ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯ್ತು – ಅರುಣ್ ಲಾಲ್
ಸೌರವ್ ಗಂಗೂಲಿ.. ಈ ಹೆಸರು ಹೇಳಿದಾಗ ಪ್ರತಿಯೊಬ್ಬರು ಹೇಳುವುದು ಒಂದೇ ಮಾತು… ಆತ ಅಪ್ರತಿಮ ನಾಯಕ. ನಾಯಕ ಅಂದ್ರೆ ಗಂಗೂಲಿ.. ಗಂಗೂಲಿ ಅಂದ್ರೆ ನಾಯಕ.. ಇದಕ್ಕೆ ಕಾರಣವೂ ಇದೆ. ಗಂಗೂಲಿ ನಾಯಕನಾಗಿ ಟೀಮ್ ಇಂಡಿಯಾಗೆ ಹೊಸ ಸ್ವರೂಪವನ್ನು ನೀಡಿದ್ದರು. ತಂಡದಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿದ್ರು. ಆಕ್ರಮಣಕಾರಿ ಪ್ರವೃತ್ತಿಯನ್ನು ರೂಢಿಸಿಕೊಳ್ಳುವಂತೆ ಮಾಡಿದ್ದರು. ಯುವ ಆಟಗಾರರಿಗೆ ಅವಕಾಶವ ಕೊಟ್ಟು ಬಲಿಷ್ಠ ತಂಡವನ್ನೂ ಕಟ್ಟಿದ್ದರು.
ಆದ್ರೆ ಗಂಗೂಲಿಯ ನಾಯಕತ್ವದ ಮುಂದೆ ಅವರ ಪ್ರತಿಭೆ ಮಾತ್ರ ಮಂಕಾಗಿ ಹೋಯ್ತು. ಅವರು ಎಷ್ಟೇ ರನ್ ದಾಖಲಿಸಿದ್ರೂ ಅವರನ್ನು ಬೊಟ್ಟು ಮಾಡಿ ತೋರಿಸುವಂತೆ ಮಾಡಿದ್ದು ಮಾತ್ರ ಅವರ ನಾಯಕತ್ವ. ಹೀಗಾಗಿ ಗಂಗೂಲಿಯ ಪ್ರತಿಭೆಯನ್ನು ಮರೆತು ಹೋಗುವಂತೆ ಮಾಡಿತ್ತು. ಹೀಗೆ ಗಂಗೂಲಿಯ ಪ್ರತಿಭೆಯ ಬಗ್ಗೆ ಮಾತನಾಡಿದ್ದು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಅರುಣ್ ಲಾಲ್.
ಅರುಣ್ ಲಾಲ್ ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ. ಸದ್ಯ ವೀಕ್ಷಣೆ ವಿವರಣೆಕಾರರಾಗಿದ್ದಾರೆ. ಅರುಣ್ ಲಾಲ್ ಅವರು ಗಂಗೂಲಿಯವರನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಅವರ ಏಳು ಬೀಳುಗಳನ್ನು ಕಣ್ಣಾರೆ ನೋಡಿದ್ದಾರೆ. ನಾಯಕತ್ವದಲ್ಲಿ ಗಂಗೂಲಿ ಉತ್ತುಂಗಕ್ಕೇರಿದ್ರೂ ಅವರಲ್ಲಿನ ಪ್ರತಿಭೆಯನ್ನೂ ಅರುಣ್ ಲಾಲ್ ನೆನಪು ಮಾಡಿಕೊಂಡಿದ್ದಾರೆ.
ನಾನು ಯಾವಾಗಲೂ ಸೌರವ್ ಗಂಗೂಲಿಯವರ ಅಪ್ಪಟ ಅಭಿಮಾನಿ. ಸಚಿನ್ ಮತ್ತು ಸೌರವ್ ಗಂಗೂಲಿ ವಿಶೇಷ ಆಟಗಾರರು. ನನಗೆ ಇನ್ನೂ ನೆನಪಿದೆ. ಬಹುಶಃ ಗಂಗೂಲಿಗೆ ಆಗ 16-17 ವಯಸ್ಸಿರಬೇಕು. ಕೊಲ್ಕತ್ತಾದ ಸಿಸಿಎಫ್ಸಿನಲ್ಲಿ ಪ್ರದರ್ಶನ ಪಂದ್ಯವೊಂದು ನಡೆದಿತ್ತು. ಆ ಪಂದ್ಯದಲ್ಲಿ ಗಂಗೂಲಿ ಕೂಡ ಆಡಿದ್ದರು. ಗಂಗೂಲಿ ಆ ಪಂದ್ಯದಲ್ಲಿ ಲೀಲಾಜಾಲವಾಗಿ ಆರೇಳು ಸಿಕ್ಸರ್ಗಳನ್ನು ಸಿಡಿಸಿದ್ದರು. ಗಂಗೂಲಿಯವರಲ್ಲಿ ಅದ್ಭುತ ಕ್ರಿಕೆಟ್ ಪ್ರತಿಭೆ ಇತ್ತು. ಗಂಗೂಲಿ ಮತ್ತು ಸಚಿನ್ ಕ್ರಿಕೆಟ್ಗಾಗಿಯೇ ಹುಟ್ಟಿದವರು ಎಂದು ಅರುಣ್ ಲಾಲ್ ಬಣ್ಣಿಸಿದ್ರು.
ಗಂಗೂಲಿ ಏನೇ ಆಗಿರಲಿ.. ಆದ್ರೆ ಆತ ಡಿಫರೆಂಟ್ ಪ್ಲೇಯರ್. 1992ರಲ್ಲಿ ಗಂಗೂಲಿ ಭಾರತ ಏಕದಿನ ತಂಡಕ್ಕೆ ಆಯ್ಕೆಯಾಗಿದ್ರು. ನಂತರ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ನಾಲ್ಕು ವರ್ಷಗಳ ಬಳಿಕ ಮತ್ತೆ ತಂಡವನ್ನು ಸೇರಿಕೊಂಡ್ರು. ಲಾಡ್ರ್ಸ್
ಅಂಗಣದಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಗಂಗೂಲಿ ಶತಕ ಸಿಡಿಸಿದ್ರು. ನಂತರ ಹಿಂತಿರುಗಿ ನೋಡಲೇ ಇಲ್ಲ. ನಾಲ್ಕು ವರ್ಷಗಳ ಅಂತರದಲ್ಲಿ ಟೀಮ್ ಇಂಡಿಯಾದ ನಾಯಕನಾದ್ರು. ಐದು ವರ್ಷಗಳ ಕಾಲ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಈ ಹಂತದಲ್ಲೇ ಟೀಮ್ ಇಂಡಿಯಾ ವಿಶ್ವಕ್ರಿಕೆಟ್ನಲ್ಲಿ ಪ್ರಜ್ವಲಿಸಿತ್ತು. ಇದು ಈಗ ಇತಿಹಾಸ.
ಅಂದು ತಂಡದಿಂದ ಕೈ ಬಿಡದಿದ್ರೆ ಗಂಗೂಲಿ ಇವತ್ತು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಟೀಮ್ ಇಂಡಿಯಾ ಆಟಗಾರನಾಗಿ, ನಾಯಕನಾಗಿ ಈಗ ಬಿಸಿಸಿಐ ಅಧ್ಯಕ್ಷನಾಗಿದ್ದಾರೆ. ತಂಡದಿಂದ ಕೈಬಿಟ್ಟ ಸಮಯದಲ್ಲಿ ಗಂಗೂಲಿಗೆ ಪ್ರಬುದ್ಧರಾಗಲು ಅವಕಾಶ ಸಿಕ್ಕಿತ್ತು. ತನ್ನನ್ನು ತಾನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯ್ತು. ಅವರಿಗೆ ಕಮ್ ಬ್ಯಾಕ್ ಒಳ್ಳೆಯ ವೇದಿಕೆಯೂ ಸಿಕ್ಕಿತ್ತು ಎಂದು ಅರುಣ್ ಲಾಲ್ ಹೇಳಿದ್ದಾರೆ.








