ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇರಾನ್–ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಬಂದ್ ಅನ್ನು ಇರಾನ್ ಬಂದ್ ಮಾಡಿರುವುದರಿಂದ ವಿಶ್ವದ ಹಲವಾರು ದೇಶಗಳಂತೆ ಭಾರತಕ್ಕೂ ತೈಲ ಪೂರೈಕೆ ಬಗ್ಗೆ ಚಿಂತೆ ಹೆಚ್ಚಾಗಿದೆ. ಈ ಜಲಸಂಧಿಯ ಮೂಲಕವೇ ಜಾಗತಿಕ ತೈಲ ಸಾಗಣೆಯ ದೊಡ್ಡ ಪ್ರಮಾಣ ನಡೆಯುತ್ತದೆ.
ಪ್ರಸ್ತುತ ಭಾರತದಲ್ಲಿ ಕೇವಲ ಸುಮಾರು 25 ದಿನಗಳಷ್ಟು ಮಾತ್ರ ಕಚ್ಚಾ ತೈಲ ಸಂಗ್ರಹ ಇರುವುದಾಗಿ ತಿಳಿದುಬಂದಿದೆ. ಇದರಿಂದ ದೇಶದ ಇಂಧನ ಭದ್ರತೆ ಕುರಿತು ಆತಂಕ ವ್ಯಕ್ತವಾಗಿತ್ತು. ಆದರೆ ಈ ಸಂಕಷ್ಟದ ವೇಳೆಯಲ್ಲಿ ರಷ್ಯಾ ಭಾರತಕ್ಕೆ ನೆರವಾಗಲು ಮುಂದಾಗಿದೆ.
ಭಾರತದ ಇಂಧನ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ರಷ್ಯಾ ಹೆಚ್ಚುವರಿ 9.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಪೂರೈಸಲು ಸಿದ್ಧತೆ ತೋರಿದೆ. ಈ ನಿರ್ಧಾರದಿಂದ ಗಲ್ಫ್ ರಾಷ್ಟ್ರಗಳಿಂದ ಆಗುವ ಪೂರೈಕೆ ವ್ಯತ್ಯಯವನ್ನು ಭಾಗಶಃ ಸಮತೋಲನಗೊಳಿಸಲು ಸಾಧ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವಾಗಿ ಇತ್ತೀಚಿನ ಜಾಗತಿಕ ರಾಜಕೀಯ ಬೆಳವಣಿಗೆಗಳ ನಡುವೆ ಭಾರತಕ್ಕೆ ತೈಲ ಪೂರೈಕೆ ಸ್ಥಿರವಾಗಿರುವುದು ಮಹತ್ವದ್ದಾಗಿದೆ. ರಷ್ಯಾದ ಈ ಕ್ರಮವು ಭಾರತ–ರಷ್ಯಾ ನಡುವಿನ ದೀರ್ಘಕಾಲದ ಇಂಧನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ. ಇದರಿಂದ ದೇಶದ ಇಂಧನ ಭದ್ರತೆಗೂ ತಾತ್ಕಾಲಿಕವಾಗಿ ರಕ್ಷಣೆಯಂತೆ ಕಾರ್ಯನಿರ್ವಹಿಸಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.








