ಪ್ರಯಾಗ್ರಾಜ್ ಕುಂಭಮೇಳದಲ್ಲಿ ಮಣಿಮಾಲೆ ಮಾರುತ್ತಾ ತನ್ನ ಆಕರ್ಷಕ ಕಣ್ಣುಗಳಿಂದಲೇ ದೇಶಾದ್ಯಂತ ವೈರಲ್ ಆಗಿದ್ದ ಮಧ್ಯಪ್ರದೇಶದ ಯುವತಿ ಮೊನಾಲಿಸಾ ಭೋಂಸ್ಲೆ ಅವರ ವಿವಾಹ ಇದೀಗ ಭಾರಿ ವಿವಾದದ ಸ್ವರೂಪ ಪಡೆದುಕೊಂಡಿದೆ. ಕುಟುಂಬದ ತೀವ್ರ ವಿರೋಧದ ನಡುವೆಯೂ ಕೇರಳದಲ್ಲಿ ಮುಸ್ಲಿಂ ಯುವಕ ಫರ್ಮಾನ್ ಖಾನ್ನನ್ನು ಮೊನಾಲಿಸಾ ಮದುವೆಯಾಗಿದ್ದು, ಇದು ಆಕೆಯನ್ನು ವ್ಯವಸ್ಥಿತವಾಗಿ ಮೋಸದಿಂದ ಬಲೆಗೆ ಬೀಳಿಸಿರುವ ಕೃತ್ಯ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮಗಳ ಹಠಾತ್ ಮದುವೆಯ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿರುವ ಮೊನಾಲಿಸಾ ತಂದೆ ಜಯಸಿಂಗ್ ಭೋಂಸ್ಲೆ ಅವರು ನ್ಯಾಯಕ್ಕಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಮೊರೆ ಹೋಗಿದ್ದಾರೆ. ಕೇರಳಕ್ಕೆ ತೆರಳಿ ಅಲ್ಲಿನ ವಾಸ್ತವ ಅರಿತು ವಾಪಸ್ಸಾದ ನಂತರ ಮಾಧ್ಯಮಗಳೊಂದಿಗೆ ತಮ್ಮ ಅಳಲು ತೋಡಿಕೊಂಡ ಅವರು, ತನ್ನ ಮಗಳನ್ನು ಸಂಪೂರ್ಣವಾಗಿ ದಾರಿ ತಪ್ಪಿಸಿ ವಿವಾಹವಾಗಲಾಗಿದೆ. ಇದು ಸ್ಪಷ್ಟವಾಗಿ ಲವ್ ಜಿಹಾದ್ ಪ್ರಕರಣವಾಗಿದೆ. ನನ್ನ ಮಗಳು ಇಂದು ದೇಶಾದ್ಯಂತ ಚಿರಪರಿಚಿತಳಾಗಿದ್ದಾಳೆ, ಆಕೆಯನ್ನು ಕೇರಳದಿಂದ ಸುರಕ್ಷಿತವಾಗಿ ಮಧ್ಯಪ್ರದೇಶಕ್ಕೆ ಕರೆತರಲು ಸರ್ಕಾರ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಮೊನಾಲಿಸಾಗೆ ಸಿನಿಮಾ ರಂಗದಲ್ಲಿ ದೊಡ್ಡ ಅವಕಾಶಗಳ ಆಮಿಷ ಒಡ್ಡಲಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಆಕೆ ಕೇವಲ ನಟನೆ ಮತ್ತು ನೃತ್ಯ ತರಬೇತಿ ಪಡೆಯಲು ಕೇರಳಕ್ಕೆ ಹೋಗಿದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಆಕೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾಳೆ ಎಂಬ ಮಾಹಿತಿ ಮಾತ್ರ ಪೋಷಕರಿಗಿತ್ತು. ಆದರೆ, ಸಿನಿಮಾ ತರಬೇತಿಯ ನೆಪದಲ್ಲಿ ಆಕೆಯನ್ನು ಕೇರಳಕ್ಕೆ ಕರೆದೊಯ್ದು, ಈ ರೀತಿ ದಿಢೀರ್ ಮದುವೆಯಾಗುತ್ತಾರೆ ಎಂದು ನಾವು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಜಯಸಿಂಗ್ ಆಕ್ರೋಶ ಹಾಗೂ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಸಾರ್ವಜನಿಕ ವಲಯದಲ್ಲಿಯೂ ದಿಗ್ಭ್ರಮೆ ಮೂಡಿಸಿದೆ. ಗ್ಲಾಮರ್ ಲೋಕದಿಂದ ಸನ್ಯಾಸ ದೀಕ್ಷೆ ಪಡೆದಿರುವ ಹರ್ಷ ರಿಚಾರಿಯಾ ಎಂಬುವವರು ಈ ಬೆಳವಣಿಗೆಯನ್ನು ದಿ ಕೇರಳ ಸ್ಟೋರಿ 3 ಎಂದು ಬಣ್ಣಿಸಿದ್ದಾರೆ. ಕುಂಭಮೇಳದಲ್ಲಿ ಸಾಮಾನ್ಯ ಹುಡುಗಿಯಾಗಿ ಕಾಣಿಸಿಕೊಂಡು ರಾತ್ರೋರಾತ್ರಿ ಸ್ಟಾರ್ ಆದವಳು, ಸಿನಿಮಾದ ಅವಕಾಶದ ಹೆಸರಿನಲ್ಲಿ ಕೇರಳ ಸೇರಿ ಭಾರಿ ಭದ್ರತೆಯ ನಡುವೆ ಫರ್ಮಾನ್ ಖಾನ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರಂಭದಲ್ಲಿ ಇದೊಂದು ಸಿನಿಮಾದ ಪ್ರಚಾರ ತಂತ್ರ ಎಂದುಕೊಂಡಿದ್ದೆವು, ಆದರೆ ಇದು ನಿಜವಾದ ಕೇರಳ ಸ್ಟೋರಿಯ ಮುಂದುವರಿದ ಭಾಗದಂತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬೆಳ್ಳಿ ಪರದೆಯ ಮೇಲೆ ಮಿಂಚುವ ಕನಸು ಹೊತ್ತು ಹೋದ ಯುವತಿಯ ಭವಿಷ್ಯ ಇದೀಗ ಫರ್ಮಾನ್ ಖಾನ್ ಜೊತೆಗಿನ ವಿವಾಹದ ನಂತರ ಏನಾಗಲಿದೆ ಎಂಬುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಧ್ಯಪ್ರದೇಶ ಸರ್ಕಾರ ಈ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಿದೆ ಮತ್ತು ಮೊನಾಲಿಸಾ ಅವರನ್ನು ಮರಳಿ ತಮ್ಮ ರಾಜ್ಯಕ್ಕೆ ಕರೆತರುವಲ್ಲಿ ಯಶಸ್ವಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.








