ಲಡಾಖ್ ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
ನವದೆಹಲಿ : ಭಾರತ-ಚೀನಾ ಗಡಿ ವಿವಾದದ ಮಧ್ಯೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಖ್ ಮತ್ತು ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿದ್ದಾರೆ. ರಕ್ಷಣಾ ಸಚಿವರು ಲಡಾಖ್ ನ ಲೇಹ್ ಗೆ ಭೇಟಿ ನೀಡಿದ್ದು, ಇವರೊಂದಿಗೆ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಕೂಡ ಆಗಮಿಸಿದ್ದಾರೆ.
ಭೇಟಿಗೂ ಮೊದಲು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, ಲಡಾಖ್ ಮತ್ತು ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಯಲ್ಲಿ ಲೇಹ್ ಗೆ ತೆರಳುತ್ತಿದ್ದೇನೆ. ಗಡಿಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲು ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ನಮ್ಮ ಸಶಸ್ತ್ರ ಪಡೆಗಳ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದರು.
ಇಂದು ಲೇಹ್ ನ ಸ್ಟಕ್ನಾ ಮುಂಚೂಣಿ ಪ್ರದೇಶಕ್ಕೆ ತೆರಳಿದ ರಾಜನಾಥ್ ಸಿಂಗ್, ಪಿಕಾ ಮೆಷಿನ್ ಗನ್ ಕೈಗೆತ್ತಿಕೊಂಡರು. ಸೇನಾಧಿಕಾರಿಗಳಿಂದ ಅದರ ಕಾರ್ಯವೈಖರಿಯನ್ನು ತಿಳಿದುಕೊಂಡರು.
ಬಳಿಕ ಯೋಧರ ಪ್ಯಾರಾ ಡ್ರಾಪಿಂಗ್ ಕೌಶಲ್ಯ ವೀಕ್ಷಿಸಿದರು.
ಈ ವೇಳೆ ಸಚಿವ ರಾಜನಾಥ್ ಸಿಂಗ್, ಬಿಪಿನ್ ರಾವತ್ ಮತ್ತು ನರವಣೆ ಅವರ ಸಮಕ್ಷಮದಲ್ಲಿ ಭೂ ಸೇನೆ ತನ್ನ ಬಲಾಬಲ ಪ್ರದರ್ಶಿಸಿತು. ರಷ್ಯಾ ಮೂಲದ ಟಿ-90 ಯುದ್ಧ ಟ್ಯಾಂಕ್ ಮತ್ತು ಸಮರಾಂಗಣದಲ್ಲಿ ಪಾದರಸದಂತೆ ಚಲಿಸಬಲ್ಲ ಬಿಎಂಪಿ ಇನ್ಫೆಂಟ್ರಿ ಕೋಂಬಾಟ್ ವಾಹನಗಳ ಸಮರಾಭ್ಯಾಸವನ್ನು ರಕ್ಷಣಾ ಸಚಿವರು ಮತ್ತು ಸೇನಾ ಮಹಾದಂಡ ನಾಯಕರು ವೀಕ್ಷಿಸಿದರು.
ಜುಲೈ 3 ರಂದು ಪ್ರಧಾನಿ ಲಡಾಖ್ ಗೆ ದಿಢೀರ್ ಭೇಟಿ ನೀಡಿ ಸೇನಾ ಪಡೆಗಳಿಗೆ ಧೈರ್ಯ ತುಂಬಿದ್ದರು. ಇದೀಗ ರಕ್ಷಣಾ ಸಚಿವರು ಲಡಾಖ್ ಗೆ ತೆರಳಿ ಪರಿಸ್ಥಿತಿ ಪರಿಶೀಲಿಸಿರುವುದು ಕುತೂಹಲ ಕೆರಳಿಸಿದೆ.








