ಬಾಲಿವುಡ್ ಅಂಗಳದಲ್ಲಿ ಪ್ರಸ್ತುತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ ಧುರಂಧರ್ 2 ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಒಂದು ಕಡೆ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದು ಕಡೆ ಇದೊಂದು ಪ್ರೊಪಗಾಂಡ ಸಿನಿಮಾ ಎಂಬ ಟೀಕೆಗಳು ಕೇಳಿಬರುತ್ತಿವೆ. ಈ ವಿವಾದಗಳ ನಡುವೆ ಬಾಲಿವುಡ್ನ ಹಿರಿಯ ಹಾಗೂ ದಿಗ್ಗಜ ನಟ ಅನುಪಮ್ ಖೇರ್ ಚಿತ್ರದ ಬೆಂಬಲಕ್ಕೆ ನಿಂತಿದ್ದು, ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಚಿತ್ರವನ್ನು ವೀಕ್ಷಿಸಿದ ಬಳಿಕ ಭಾವುಕರಾಗಿರುವ ಅನುಪಮ್ ಖೇರ್, ಇದೊಂದು ಕೇವಲ ಸಿನಿಮಾವಲ್ಲ, ಬದಲಾಗಿ ಪ್ರತಿಯೊಬ್ಬ ಭಾರತೀಯನೂ ಎದೆಯುಬ್ಬಿಸಿ ಹೆಮ್ಮೆಪಡುವಂತಹ ಒಂದು ಅದ್ಭುತ ಅನುಭವ ಎಂದು ಬಣ್ಣಿಸಿದ್ದಾರೆ. ಮಾರ್ಚ್ 21ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ ತಕ್ಷಣವೇ ನಿರ್ದೇಶಕ ಆದಿತ್ಯ ಧರ್ ಅವರಿಗೆ ಖುದ್ದಾಗಿ ಫೋನ್ ಮಾಡಿ ಅಭಿನಂದನೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಒಂದು ಅದ್ಭುತ ಸಿನಿಮಾ ನೋಡಿದಾಗ ಕೆಲವೊಮ್ಮೆ ಅದನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಸಿನಿಮಾ ಮುಗಿಸಿ ಚಿತ್ರಮಂದಿರದಿಂದ ಹೊರಬಂದಾಗ ನಿಮ್ಮೊಳಗೆ ಆವರಿಸುವ ಒಂದು ಆಳವಾದ ಮೌನವೇ ಎಲ್ಲವನ್ನೂ ಹೇಳುತ್ತದೆ. ಧುರಂಧರ್ 2 ನನಗೆ ಅಂತಹದ್ದೇ ಒಂದು ರೋಮಾಂಚಕ ಅನುಭವ ನೀಡಿದೆ. ಇದು ನೇರವಾಗಿ ಪ್ರತಿಯೊಬ್ಬರ ಹೃದಯವನ್ನು ತಟ್ಟುತ್ತದೆ ಎಂದು ಖೇರ್ ಅತ್ಯಂತ ಭಾವುಕರಾಗಿ ನುಡಿದಿದ್ದಾರೆ.
ಇದೇ ವೇಳೆ, ಚಿತ್ರದ ವಿರುದ್ಧ ಕೇಳಿಬರುತ್ತಿರುವ ಪ್ರೊಪಗಾಂಡ ಹಾಗೂ ಅತಿರೇಕದ ದೇಶಭಕ್ತಿ ಎಂಬ ಟೀಕೆಗಳ ಬಗ್ಗೆ ಅನುಪಮ್ ಖೇರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ಪ್ರೊಪಗಾಂಡ ಎಂದು ಕರೆಯುವವರ ಕುರಿತು ನನಗೆ ನಿಜಕ್ಕೂ ಕನಿಕರವೆನಿಸುತ್ತದೆ ಮತ್ತು ಅವರಿಗೆ ನಾಚಿಕೆಯಾಗಬೇಕು. ಈ ಹಿಂದೆ ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಿಡುಗಡೆಯಾದಾಗಲೂ ಇವರು ಹೀಗೆಯೇ ಬೊಬ್ಬೆ ಹೊಡೆದಿದ್ದರು. ನಿಮಗೆ ದೇಶದ ನೈಜತೆಯನ್ನು ಬಿಂಬಿಸುವ ಇಂತಹ ಚಿತ್ರಗಳನ್ನು ಸಹಿಸಲು ಸಾಧ್ಯವಾಗದಿದ್ದರೆ, ನೀವೇ ಸ್ವತಃ ಹಣ ಹೂಡಿ, ಬರಹಗಾರರನ್ನು ಇಟ್ಟುಕೊಂಡು ನಿಮಗೆ ಬೇಕಾದ ಹಾಗೆ ಸಿನಿಮಾ ಮಾಡಿಕೊಳ್ಳಿ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಆಧುನಿಕ ಭಾರತದ ವ್ಯವಸ್ಥೆ, ಗುಪ್ತಚರ ಇಲಾಖೆಗಳು ಮತ್ತು ದೇಶದ ಭದ್ರತಾ ಏಜೆನ್ಸಿಗಳು ಎಷ್ಟು ಸಮರ್ಥವಾಗಿವೆ ಹಾಗೂ ಶಕ್ತಿಶಾಲಿಯಾಗಿವೆ ಎಂಬುದನ್ನು ಈ ಸಿನಿಮಾ ಅತ್ಯಂತ ನೈಜವಾಗಿ ತೆರೆಯ ಮೇಲೆ ತಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ವತಃ ನಟನೆಯ ಶಾಲೆಯನ್ನು ನಡೆಸುತ್ತಿರುವ ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ನಟನೆಯ ಪಾಠ ಹೇಳಿಕೊಟ್ಟಿರುವ ಅನುಪಮ್ ಖೇರ್ ಅವರು ಧುರಂಧರ್ 2 ಸಿನಿಮಾದಲ್ಲಿನ ನಾಯಕ ನಟ ರಣವೀರ್ ಸಿಂಗ್ ಅಭಿನಯಕ್ಕೆ ಸಂಪೂರ್ಣವಾಗಿ ಫಿದಾ ಆಗಿದ್ದಾರೆ. ನಾನೊಬ್ಬ ನಟನಾ ಶಿಕ್ಷಕನಾಗಿ ಹೇಳುತ್ತಿದ್ದೇನೆ, ಸಾಮಾನ್ಯಾವಾಗಿ ಒಬ್ಬ ನಟನಿಗೆ ನಾನು ಸಲಾಂ ಹೊಡೆಯಬೇಕೆಂದರೆ ಅದಕ್ಕೆ ಬಹಳ ಸಮಯ ಹಿಡಿಯುತ್ತದೆ ಮತ್ತು ಅವರ ನಟನೆ ನನ್ನ ಮನಸ್ಸಿಗೆ ಆಳವಾಗಿ ನಾಟಬೇಕು. ಆದರೆ ರಣವೀರ್, ಈ ಚಿತ್ರದಲ್ಲಿ ನಿಮ್ಮ ಬಾಡಿ ಲಾಂಗ್ವೇಜ್, ನಿಮ್ಮ ಒಳಗಿನ ಆಕ್ರೋಶ ಮತ್ತು ಆಳವಾದ ನೋವು ಅದ್ಭುತವಾಗಿ ಮೂಡಿಬಂದಿದೆ. ಕ್ಲೈಮ್ಯಾಕ್ಸ್ ಸೇರಿದಂತೆ ಕೆಲವು ದೃಶ್ಯಗಳಲ್ಲಿ ನಿಮ್ಮ ಕಣ್ಣಲ್ಲಿನ ನೋವು ನೋಡಿ ನನ್ನ ಹೃದಯವೇ ಭಾರವಾಯಿತು ಎಂದು ರಣವೀರ್ ಸಿಂಗ್ ಬೆನ್ನು ತಟ್ಟಿದ್ದಾರೆ.
ಒಂದೆಡೆ ಚಿತ್ರಕ್ಕೆ ಈ ಪಾಟಿ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಧುರಂಧರ್ 2 ಸಿನಿಮಾಗೆ ನೆಗೆಟಿವ್ ವಿಮರ್ಶೆಗಳ ಸುರಿಮಳೆಯೂ ಆಗುತ್ತಿದೆ. ಇದು ಸಂಪೂರ್ಣವಾಗಿ ಆಡಳಿತಾರೂಢ ಬಿಜೆಪಿ ಪಕ್ಷದ ತಪ್ಪುಗಳನ್ನು ಮುಚ್ಚಿಹಾಕಿ, ಅವರನ್ನು ಸಮರ್ಥಿಸುವ ಉದ್ದೇಶದಿಂದಲೇ ಮಾಡಿದ ಸಿನಿಮಾ ಎಂದು ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಕಟುವಾಗಿ ಟೀಕಿಸಿದ್ದಾರೆ.
ಆದರೆ ಈ ಎಲ್ಲಾ ಪರ ವಿರೋಧ ಚರ್ಚೆಗಳ ನಡುವೆಯೂ ಚಿತ್ರದ ತಾರಾಗಣ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಾಲಿವುಡ್ ಹಾಗೂ ಸೌತ್ ಸಿನಿರಂಗದ ಘಟಾನುಘಟಿಗಳಾದ ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಮ್ಪಾಲ್, ರಣವೀರ್ ಸಿಂಗ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಮುಂತಾದವರು ಈ ಬಹುತಾರಾಗಣದ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದು, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.







