ಬೆಂಗಳೂರು: ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನವು ನಿನ್ನೆ ಕೇವಲ ಆರ್ಥಿಕ ಚರ್ಚೆಗಳಿಗೆ ಸೀಮಿತವಾಗದೆ, ರಾಜಕೀಯದ ಬಿಸಿಬಿಸಿ ಚರ್ಚೆ, ವ್ಯಂಗ್ಯ ಮತ್ತು ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕಾರಿ ಸಂವಾದಕ್ಕೆ ವೇದಿಕೆಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಂದಿನ ಶೈಲಿಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕಾಲೆಳೆಯುವ ಭರದಲ್ಲಿ ಬಿಜೆಪಿಯ ಆಂತರಿಕ ಬಣಗಳ ರಾಜಕೀಯವನ್ನು ಕೆದಕಿದರೆ, ಸ್ವಪಕ್ಷದ ಡಿಕೆಶಿ ವಿಚಾರದಲ್ಲಿ ಅತ್ಯಂತ ಜಾಣ್ಮೆಯ ನಡೆಯನ್ನು ಪ್ರದರ್ಶಿಸಿದರು.
ಸದನದಲ್ಲಿ ನಗೆಗಡಲು: ನಿನಗೆ ಸಿಎಂ ಆಗೋ ಆಸೆ ಇಲ್ವಾ ಅಶೋಕ್?
ಬಜೆಟ್ ಮೇಲಿನ ಗಂಭೀರ ಚರ್ಚೆಯ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಢೀರನೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರತ್ತ ತಿರುಗಿ ರಾಜಕೀಯ ಬಾಂಬ್ ಒಂದನ್ನು ಸಿಡಿಸಿದರು. ನೇರವಾಗಿ ಅಶೋಕ್ ಅವರನ್ನುದ್ದೇಶಿಸಿ, ನಿನಗೆ ಮುಖ್ಯಮಂತ್ರಿಯಾಗುವ ಆಸೆ ಇಲ್ವಾ ಅಶೋಕ್? ಎಂದು ಪ್ರಶ್ನಿಸಿದಾಗ ಇಡೀ ಸದನದಲ್ಲಿ ನಗೆಯ ಅಲೆ ಎದ್ದಿತು. ಸಿದ್ದರಾಮಯ್ಯ ಅವರ ಈ unexpected ಪ್ರಶ್ನೆಗೆ ಅಶೋಕ್ ಬಳಿ ನಗುವೊಂದೇ ಉತ್ತರವಾಗಿತ್ತು.
ಅಷ್ಟಕ್ಕೇ ಸುಮ್ಮನಾಗದ ಸಿದ್ದರಾಮಯ್ಯ, ಬಿಜೆಪಿಯ ಒಳಜಗಳಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದರು. ಅಶೋಕ್ ಆದರೂ ಆಗಲಿ, ಅರವಿಂದ ಬೆಲ್ಲದ್ ಅಥವಾ ಅಶ್ವಥ್ ನಾರಾಯಣ್ ಯಾರೇ ಸಿಎಂ ಆದರೂ ನನಗೆ ಸಂತೋಷವೇ. ಆದರೆ ಬಿ.ವೈ. ವಿಜಯೇಂದ್ರ ನಿಮ್ಮನ್ನು ಸಿಎಂ ಆಗಲು ಬಿಡುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಈ ಮೂಲಕ ಬಿಜೆಪಿಯಲ್ಲಿ ವಿಜಯೇಂದ್ರ ಮತ್ತು ಹಿರಿಯ ನಾಯಕರ ನಡುವಿನ ಶೀತಲ ಸಮರವನ್ನು ಸದನದಲ್ಲಿ ಪ್ರಸ್ತಾಪಿಸಿ ವಿಪಕ್ಷಗಳ ಬಾಯಿ ಮುಚ್ಚಿಸುವ ತಂತ್ರ ಹೂಡಿದರು.
ಡಿಕೆಶಿ ಹೆಸರು ಪ್ರಸ್ತಾಪಿಸದ ಸಿಎಂ: ಬಿಜೆಪಿಯಿಂದ ಕೌಂಟರ್ ಅಟ್ಯಾಕ್
ಸಿದ್ದರಾಮಯ್ಯ ಅವರು ಬಿಜೆಪಿಯ ಆಂತರಿಕ ವಿಚಾರ ಮಾತನಾಡುತ್ತಿದ್ದಂತೆ, ಬಿಜೆಪಿ ಶಾಸಕ ಸುನಿಲ್ ಕುಮಾರ್ ಮಧ್ಯಪ್ರವೇಶಿಸಿ ಕಾಂಗ್ರೆಸ್ ಪಾಳಯಕ್ಕೆ ತಿರುಗೇಟು ನೀಡಿದರು. ನೀವು ಬಿಜೆಪಿಯ ನಾಯಕರ ಹೆಸರನ್ನು ಹೇಳುತ್ತಿದ್ದೀರಿ, ನಿಮ್ಮ ಪಕ್ಷದ ಅರ್ಹ ನಾಯಕರ ಪಟ್ಟಿಯನ್ನು ಹೇಳುವಾಗ ಡಿ.ಕೆ. ಶಿವಕುಮಾರ್ ಹೆಸರನ್ನು ಯಾಕೆ ಹೇಳುತ್ತಿಲ್ಲ? ಎಂದು ಚುಚ್ಚು ಮಾತು ಆಡಿದರು.
ಇದಕ್ಕೆ ತಮ್ಮದೇ ಆದ ಶೈಲಿಯಲ್ಲಿ ಚಾಣಾಕ್ಷ ಉತ್ತರ ನೀಡಿದ ಸಿದ್ದರಾಮಯ್ಯ, ಹೈಕಮಾಂಡ್ ಯಾವಾಗ ಹೇಳುತ್ತದೋ ಆಗ ಅವರು ಸಿಎಂ ಆಗುತ್ತಾರೆ. ಅಲ್ಲಿಯವರೆಗೂ ನಾನೇ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಎಂ.ಬಿ. ಪಾಟೀಲ್, ಮುನಿಯಪ್ಪ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವರ ಹೆಸರುಗಳನ್ನು ಸಿಎಂ ಹುದ್ದೆಗೆ ಅರ್ಹರು ಎಂದು ಪಟ್ಟಿ ಮಾಡಿದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ ಹೆಸರನ್ನು ಆರಂಭದಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸದೇ ಇರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಇದು ಕೇವಲ ಕಾಕತಾಳೀಯವೋ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ರಾಜಕೀಯ ಲೆಕ್ಕಾಚಾರವಿದೆಯೋ ಎಂಬ ಪ್ರಶ್ನೆ ಎದ್ದಿದೆ.
ಸ್ಪೀಕರ್ ಖಾದರ್ ಮೇಲೂ ಅಶೋಕ್ ಜೋಕ್
ಚರ್ಚೆಯ ವಿಷಯಾಂತರವಾಗಿ ಸದನದ ಗ್ರೂಪ್ ಫೋಟೋ ಶೂಟ್ ವಿಚಾರ ಪ್ರಸ್ತಾಪವಾಯಿತು. ಆರ್. ಅಶೋಕ್ ಅವರು ಸ್ಪೀಕರ್ ಯು.ಟಿ. ಖಾದರ್ ಅವರನ್ನು ಕಿಚಾಯಿಸುತ್ತಾ, ಐದು ವರ್ಷಕ್ಕೊಮ್ಮೆ ಫೋಟೋ ತೆಗೆಸುವ ಪದ್ಧತಿ ಇದೆ. ಆದರೆ ಸ್ಪೀಕರ್ ಖಾದರ್ ಈಗಲೇ ಯಾಕೆ ಫೋಟೋ ತೆಗೆಸಿದ್ದಾರೆ? ಇವರು ಸ್ಪೀಕರ್ ಸ್ಥಾನ ಬಿಟ್ಟು ಮಂತ್ರಿ ಆಗೋಕೆ ಹೊರಟಿದ್ದಾರಾ? ಎಂದು ಹಾಸ್ಯ ಮಾಡಿದರು.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಿಎಂ, ಖಾದರ್ ಎಲ್ಲಿಗೂ ಹೋಗಲ್ಲ, ಅವರು 2028ರಲ್ಲೂ ಗೆಲ್ಲುತ್ತಾರೆ. ನೀನು ಅವರ ವಿಚಾರದಲ್ಲಿ ಜಾಕ್ ಹಾಕಬೇಡ, ನಿನ್ನ ಕಿತಾಪತಿಗೆ ಅವರು ತಲೆ ಕೆಡಿಸಿಕೊಳ್ಳಲ್ಲ ಎಂದು ಅಶೋಕ್ ಅವರನ್ನು ತಮಾಷೆಯಾಗಿಯೇ ಗದರಿಸಿದರು.
224 ಶಾಸಕರೂ ಸಿಎಂ ಆಗಲು ಅರ್ಹರು: ಸಿದ್ದರಾಮಯ್ಯ ಫೈನಲ್ ಟಚ್
ಚರ್ಚೆಯ ಅಂತ್ಯದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಜಾಪ್ರಭುತ್ವದ ತತ್ವವನ್ನು ಎತ್ತಿ ಹಿಡಿಯುವಂತೆ ಮಾತನಾಡಿದರು. ಈ ಸದನದಲ್ಲಿರುವ 224 ಶಾಸಕರೂ ಮುಖ್ಯಮಂತ್ರಿಯಾಗಲು ಅರ್ಹರೇ. ಎಂ.ಬಿ. ಪಾಟೀಲ್, ಮುನಿಯಪ್ಪ ಸೇರಿದಂತೆ ಎಲ್ಲರಿಗೂ ಆ ಯೋಗ್ಯತೆ ಇದೆ. ಆದರೆ ಯೋಗ್ಯತೆ ಇದ್ದವರಿಗೂ ಅವಕಾಶಗಳು ಸಿಗಬೇಕು, ಕಾಲ ಕೂಡಿ ಬರಬೇಕು ಅಷ್ಟೇ ಎಂದು ತತ್ವಜ್ಞಾನಿಯಂತೆ ನುಡಿದರು.
ಒಟ್ಟಾರೆಯಾಗಿ, ಇಂದಿನ ಕಲಾಪವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಯಿತು. ತಮ್ಮ ಕುರ್ಚಿ ಭದ್ರವಾಗಿದೆ ಎಂಬ ಸಂದೇಶವನ್ನು ರವಾನಿಸುತ್ತಲೇ, ವಿರೋಧ ಪಕ್ಷದಲ್ಲಿನ ನಾಯಕತ್ವದ ಗೊಂದಲವನ್ನು ಕೆದಕಿ, ಡಿಕೆಶಿ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವ ಮೂಲಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ತಾವು ಹಳೆಯ ಹುಲಿ ಎಂಬುದನ್ನು ಸಾಬೀತುಪಡಿಸಿದರು.







