ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ದುರಂತ. ಕರ್ತವ್ಯ ನಿರತ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆಯೇ ಪುಂಡರ ಗುಂಪೊಂದು ರಾಜಾರೋಷವಾಗಿ ದಮ್ಕಿ ಹಾಕಿ ಹಲ್ಲೆಗೆ ಮುಂದಾಗಿರುವ ಘಟನೆ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ. ಸಾರ್ವಜನಿಕರ ರಕ್ಷಣೆಗೆ ನಿಲ್ಲಬೇಕಾದ ಖಾಕಿ ಪಡೆಗೇ ಇಂದು ಭದ್ರತೆ ಇಲ್ಲದಂತಾಗಿದೆ.
ಕಳೆದ ಏಪ್ರಿಲ್ ಮೂರರಂದು ಮಧ್ಯರಾತ್ರಿ ಸುಮಾರು ಹನ್ನೆರಡು ಗಂಟೆ ನಲವತ್ತು ನಿಮಿಷದ ಸುಮಾರಿಗೆ ಈ ಅಮಾನವೀಯ ಘಟನೆ ನಡೆದಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯ ದಕ್ಷ ಅಧಿಕಾರಿ ಪಿಎಸ್ಐ ನಾಗಮ್ಮ ಹಾಗೂ ಜೀಪ್ ಚಾಲಕ ವೇಣುಗೋಪಾಲ್ ಅವರು ತಮ್ಮ ವಾಡಿಕೆಯಂತೆ ರಾತ್ರಿ ಗಸ್ತಿನಲ್ಲಿದ್ದರು. ಈ ಸಂದರ್ಭದಲ್ಲಿ ಚಿನ್ನಸಂದ್ರ ಗ್ರಾಮದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ತಡರಾತ್ರಿಯಾದರೂ ಹೋಟೆಲ್ ಒಂದನ್ನು ತೆರೆದಿರುವುದು ಅವರ ಗಮನಕ್ಕೆ ಬಂದಿದೆ.
ಕರ್ತವ್ಯ ಪ್ರಜ್ಞೆಯಿಂದ ಇದನ್ನು ಪ್ರಶ್ನಿಸಲು ಹೋದ ಮಹಿಳಾ ಅಧಿಕಾರಿಯ ಮೇಲೆ ಸ್ಥಳೀಯ ಪುಂಡರಾದ ನಾಗೇಂದ್ರ, ನವೀನ್, ಪುನೀತ್ ಮತ್ತು ನರೇಂದ್ರ ಎಂಬುವವರು ಮುಗಿಬಿದ್ದಿದ್ದಾರೆ. ಪೊಲೀಸ್ ಸಮವಸ್ತ್ರದಲ್ಲಿದ್ದಾರೆ ಎಂಬ ಕನಿಷ್ಠ ಗೌರವವೂ ಇಲ್ಲದೆ, ಕಾನೂನಿನ ಭಯವೇ ಇಲ್ಲದೆ ಏಕವಚನದಲ್ಲಿ ನಿಂದಿಸಿ ಪ್ರಾಣಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಮಹಿಳಾ ಅಧಿಕಾರಿ ಮತ್ತು ಚಾಲಕನ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ಈ ಅಟ್ಟಹಾಸದ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಯ ಅಣಕದಂತಿದೆ.
ಈ ಆಘಾತಕಾರಿ ಘಟನೆ ನಡೆದು ಮೂರು ದಿನಗಳು ಉರುಳಿವೆ. ಆದರೆ ಇಲಾಖೆಯ ಉನ್ನತ ಅಧಿಕಾರಿಗಳು ಮಾತ್ರ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಆಲಂಬಗಿರಿಯ ಈ ನಾಲ್ವರು ಆರೋಪಿಗಳ ವಿರುದ್ಧ ಕೇವಲ ಒಂದು ಎಫ್ಐಆರ್ ದಾಖಲಿಸಿ ಪೊಲೀಸರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ. ವಿಡಿಯೋ ಸಾಕ್ಷ್ಯ ಕಣ್ಣ ಮುಂದಿದ್ದರೂ ಮಹಿಳಾ ಅಧಿಕಾರಿಯ ಮೇಲೆ ದರ್ಪ ಮೆರೆದ ಆರೋಪಿಗಳು ರಾಜಾರೋಷವಾಗಿ ಊರಿನಲ್ಲಿ ತಿರುಗಾಡಿಕೊಂಡಿದ್ದಾರೆ ಎಂದರೆ ಇದರ ಹಿಂದಿನ ಮರ್ಮವೇನು ಎಂಬುದು ನಿಗೂಢವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮದೇ ಇಲಾಖೆಯ ಸಿಬ್ಬಂದಿಗೆ ನ್ಯಾಯ ಒದಗಿಸಲು ವಿಫಲರಾಗುತ್ತಿದ್ದಾರೆಯೇ ಎಂಬ ಗಂಭೀರ ಅನುಮಾನ ಮೂಡಿದೆ.
ಈ ಪ್ರಕರಣದ ಹಿಂದೆ ಪ್ರಭಾವಿ ರಾಜಕೀಯ ಮುಖಂಡರ ಕೈವಾಡ ಇರುವ ಶಂಕೆ ದಟ್ಟವಾಗಿದೆ. ಸ್ಥಳೀಯ ರಾಜಕಾರಣಿಗಳ ತೀವ್ರ ಒತ್ತಡಕ್ಕೆ ಮಣಿದು ಪೊಲೀಸರು ಆರೋಪಿಗಳ ಬಂಧನಕ್ಕೆ ಹಿಂದೇಟು ಹಾಕುತ್ತಿದ್ದಾರೆಯೇ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿವೆ. ರಾಜಕೀಯ ಪ್ರಭಾವದ ಮುಂದೆ ಕಾನೂನು ಮಂಡಿಯೂರಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಮಹಿಳಾ ಪಿಎಸ್ಐಗೆ ಈ ಗತಿಯಾದರೆ, ನಾಳೆ ಸಾಮಾನ್ಯ ಮಹಿಳೆಯರ ಪಾಡೇನು ಎನ್ನುವ ಆತಂಕ ಜನರನ್ನು ಕಾಡುತ್ತಿದೆ.
ರಕ್ಷಣೆ ನೀಡಬೇಕಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಗೃಹ ಇಲಾಖೆ ಈ ವಿಚಾರದಲ್ಲಿ ತುರ್ತು ಕ್ರಮ ಕೈಗೊಳ್ಳದಿರುವುದು ಇಡೀ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹುಸಿಗೊಳಿಸುತ್ತಿದೆ. ಇದು ರೌಡಿರಾಜ್ಯ ಬಿಹಾರವಲ್ಲ, ಇದು ಕಾನೂನಿಗೆ ಬೆಲೆ ಕೊಡುವ ಕರ್ನಾಟಕ ಎಂಬುದನ್ನು ಆಡಳಿತ ವರ್ಗ ನೆನಪಿನಲ್ಲಿಟ್ಟುಕೊಳ್ಳಬೇಕು.
ಕೂಡಲೇ ಈ ಪುಂಡಾಟಿಕೆಗೆ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕು. ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಎಲ್ಲಾ ಆರೋಪಿಗಳನ್ನು ತಕ್ಷಣವೇ ಹೆಡೆಮುರಿ ಕಟ್ಟಿ ಜೈಲಿಗಟ್ಟಬೇಕು. ಇಲ್ಲವಾದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೂಲಕ ಪೊಲೀಸ್ ಇಲಾಖೆ ತನ್ನ ಘನತೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಾರ್ವಜನಿಕರು ಮತ್ತು ಪ್ರಜ್ಞಾವಂತರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.








