ಭೂ ಸುಧಾರಣಾ ಕಾಯ್ದೆ | ಸಿದ್ದರಾಮಯ್ಯಗೆ ಪ್ರಶ್ನೆಗಳ ಸುರಿಮಳೆಗೈದ ಅಶೋಕ್
ಬೆಂಗಳೂರು : ಭೂ ಸುಧಾರಣಾ ಕಾಯ್ದೆಯಲ್ಲಿನ 79 ಎ ಮತ್ತು ಬಿ ಕೈಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಕಂದಾಯ ಸಚಿವ ಆರ್. ಅಶೋಕ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆಯಲ್ಲಿನ 79 ಎ ಮತ್ತು ಬಿ ಕೈಬಿಡುವ ವಿಚಾರದಲ್ಲಿ ಸರ್ಕಾರವನ್ನು ಟೀಕಿಸುವ ಮೊದಲು ಈ ವಿಚಾರದಲ್ಲಿ ತಮ್ಮ ಪಕ್ಷದ ನಿಲುವೇನು..? ಎನ್ನುವುದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧರಿಸಿಕೊಂಡು ಬರಲಿ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಲ್ಲಿ ಸರ್ಕಾರ ಹಗರಣ ನಡೆಸಿದೆ. ಇದ್ದ ಪ್ರಕರಣಗಳನ್ನು ಕೈಬಿಟ್ಟಿದ್ದಾರೆ. ಇದರಿಂದ 10 ಸಾವಿರ ಕೋಟಿ ರೂ ಲೂಟಿ ಹೊಡೆಯಲಾಗಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ ಉಳ್ಳವರ, ಬಲಾಢ್ಯರ ಕೇಸ್ ಗಳನ್ನು ಹಿಂದೆ ಇವರೇ ಮುಗಿಸಿದ್ದಾರೆ. ಬಡವರ ಕೇಸ್ ಮಾತ್ರ ಬಾಕಿ ಉಳಿದಿವೆ. ಈಗ ದೊಡ್ಡ ಹಗರಣ ನಡೆದಿದೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಕ್ಕೆ ಅಶೋಕ್ ಟಾಂಗ್ ನೀಡಿದರು.
ಅಧಿವೇಶನದಲ್ಲಿ ಅವರ ಪಕ್ಷದ ಅಧ್ಯಕ್ಷರೇ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಲ್ಲಿನ 79 ಎ ಮತ್ತು ಬಿ ತೆಗೆಯಬೇಕು ಎಂದಿದ್ದರು. ಈಗ ಇವರು ವಿರೋಧ ಮಾಡುತ್ತಿದ್ದಾರೆ. ಈ ರೀತಿ ಒಳಗೊಂದು ಹೊರಗೊಂದು ಧೋರಣೆ ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಬೇಡ. ಮಲಗಿದ್ದವರನ್ನು ಎಬ್ಬಿಸಬಹುದು ಆದರೆ ಮಲಗಿದಂತೆ ನಾಟಕ ಮಾಡುವವರನ್ನು ಎಬ್ಬಿಸುವುದು ಕಷ್ಟ ಎಂದು ತಮ್ಮ ಹಳೆ ಡೈಲಾಗನ್ನ ಪುನರುಚ್ಚರಿಸಿದರು.
ಹಳೆಯ ಕಾಯ್ದೆ ಕಠಿಣ ಕಾಯ್ದೆ ಎನ್ನುತ್ತಾರೆ. ಆದರೆ 45 ವರ್ಷದಲ್ಲಿ ಒಂದು ಎಕರೆಯನ್ನೂ ವಶಕ್ಕೆ ಪಡೆಯಲು ಆಗಲಿಲ್ಲ. ವರ್ಷಕ್ಕೆ ಒಂದು ಸಾವಿರ ಎಕರೆ ಅಂದರೂ 45 ವರ್ಷದಲ್ಲಿ 45 ಸಾವಿರ ಎಕರೆ ಭೂಮಿ ವಾಪಸ್ ಪಡೆಯಬಹುದಿತ್ತು. ಆದರೆ ಇವರು ಅದನ್ನು ಮಾಡಲಿಲ್ಲ. ಈ ಕಾಯ್ದೆಯನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದರು. ದಂಧೆ ನಿಲ್ಲಿಸಿದ್ದಕ್ಕೆ ಕೋಪ ಮಾಡಿಕೊಂಡಿದ್ದಾರೆ. ಹಳೆ ಕಾಯ್ದೆಯಡಿ 1.80 ಲಕ್ಷ ಕೇಸ್ ಹಾಕಿದ್ದರು. ಅವೆಲ್ಲಾ ಕ್ಲಿಯರ್ ಆಗಿದ್ದು ಯಾಕೆ..? ಯಾವ ಪ್ರಕರಣದಲ್ಲೂ ಜಮೀನು ಮುಟ್ಟುಗೋಲು ಹಾಕಿಕೊಂಡಿಲ್ಲ ಯಾಕೆ ಎಂದು ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಇನ್ನು ದೇಶದ ಯಾವ ರಾಜ್ಯದಲ್ಲೂ ಇಲ್ಲದ ಕಾಯ್ದೆಯನ್ನು ನಾವು ಇಟ್ಟುಕೊಂಡು ಮಾಡುವುದಾದರೂ ಏನು ಎಂದು ಪ್ರಶ್ನಿಸಿದ ಅಶೋಕ್, ಆ ಕಾಲಕ್ಕೆ ಅದು ಅಗತ್ಯವಾಗಿತ್ತು. ಆದರೆ ಈಗ ಬದಲಾಗಬೇಕು. ಕೃಷಿ ವಲಯ ಜಾಸ್ತಿ ಮಾಡಲು ತಿದ್ದುಪಡಿ ಬೇಕು ಎಂದು ಸರ್ಕಾರದ ಸುಗ್ರೀವಾಜ್ಞೆಯನ್ನು ಸಮರ್ಥಿಸಿಕೊಂಡರು.








