ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿರುವ ಮುಂಬರುವ ಟಿ20 ಸರಣಿಯ ತಂಡದ ಪಟ್ಟಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಆರ್ ಸಿಬಿ ತಂಡದ ದಶಕಗಳ ಕಾಲದ ಕನಸನ್ನು ನನಸು ಮಾಡಿ, ಸತತ ಎರಡು ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದ ಯಶಸ್ವಿ ನಾಯಕ ರಜತ್ ಪಾಟೀದಾರ್ ಅವರನ್ನು ಬಿಸಿಸಿಐ ಆಯ್ಕೆಗಾರರು ಕಡೆಗಣಿಸಿದ್ದಾರೆ. ಸತತ ಎರಡು ಐಪಿಎಲ್ ಮುಕುಟಗಳನ್ನು ಗೆದ್ದುಕೊಟ್ಟ ನಾಯಕನಿಗೆ ಭಾರತ ಟಿ20 ತಂಡದ ಬಾಗಿಲು ಈಗ ಶಾಶ್ವತವಾಗಿ ಮುಚ್ಚಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಇಂದಿನ ಕ್ರಿಕೆಟ್ ಜಗತ್ತು ಕಾರ್ಪೊರೇಟ್ ಕಂಪನಿಗಳ ಹಾದಿಯಲ್ಲೇ ಸಾಗುತ್ತಿದೆ. ಯಾವುದೇ ದೊಡ್ಡ ಸಂಸ್ಥೆಯಲ್ಲಿ ಅನುಭವಕ್ಕಿಂತ ಹೆಚ್ಚಾಗಿ ಸುದೀರ್ಘ ಭವಿಷ್ಯ ಇರುವ ಯುವಕರಿಗೆ ಆದ್ಯತೆ ನೀಡಲಾಗುತ್ತದೆ. ಬಿಸಿಸಿಐ ಕೂಡ ಈಗ ಅದೇ ಹಾದಿ ಹಿಡಿದಿದೆ. 33 ವರ್ಷದ ಪಾಟೀದಾರ್ ಅವರಿಗಿಂತ 15 ವರ್ಷದ ವೈಭವ್ ಸೂರ್ಯವಂಶಿಯಂತಹ ಯುವ ಪ್ರತಿಭೆಗಳನ್ನು ಬೆಳೆಸಲು ಆಯ್ಕೆಗಾರರು ಉತ್ಸುಕರಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪಾಟೀದಾರ್ ಅವರ ಮೈದಾನದ ಶಾಂತತೆ ಮತ್ತು ಪ್ರಬುದ್ಧ ನಾಯಕತ್ವ ಮೂಲೆಗುಂಪಾಗಿದೆ. ಐಐಟಿ ಸೀಟು ಪಡೆಯುವುದಕ್ಕಿಂತಲೂ ಕಠಿಣವಾಗಿರುವ ಭಾರತ ತಂಡದ ಸ್ಥಾನದಲ್ಲಿ, 33ರ ಹರೆಯದ ಆಟಗಾರನಿಗೆ ಅವಕಾಶ ನೀಡುವುದು ಬಿಸಿಸಿಐ ಲೆಕ್ಕಾಚಾರದಲ್ಲಿ ವ್ಯರ್ಥ ಎಂಬಂತಾಗಿದೆ.
ರಜತ್ ಪಾಟೀದಾರ್ ಅವರನ್ನು ಕಡೆಗಣಿಸಿರುವುದಕ್ಕೆ ಯಾವುದೇ ತಾಂತ್ರಿಕ ಕಾರಣಗಳು ಸಿಗುತ್ತಿಲ್ಲ. ಏಕೆಂದರೆ ಅವರು ಬ್ಯಾಟರ್ ಆಗಿಯೂ ಈ ಬಾರಿ ಅಬ್ಬರಿಸಿದ್ದಾರೆ. ಸ್ಪಿನ್ ಮತ್ತು ವೇಗದ ಬೌಲಿಂಗ್ ಎರಡನ್ನೂ ಸಮರ್ಥವಾಗಿ ಎದುರಿಸಿರುವ ಅವರು, ಕಳೆದ ಐಪಿಎಲ್ ಸೀಸನ್ ನ 14 ಇನ್ನಿಂಗ್ಸ್ ಗಳಿಂದ 192.69 ರ ಅದ್ಭುತ ಸ್ಟ್ರೈಕ್ ರೇಟ್ ನಲ್ಲಿ 501 ರನ್ ಚಚ್ಚಿದ್ದಾರೆ. ಇಷ್ಟೊಂದು ಪ್ರಭಾವಶಾಲಿ ಅಂಕಿ ಅಂಶಗಳನ್ನು ಹೊಂದಿದ್ದರೂ, ಅವರನ್ನು ಕನಿಷ್ಠ ಐರ್ಲೆಂಡ್ ಪ್ರವಾಸದಂತಹ ಸಣ್ಣ ಸರಣಿಗಳಿಗೂ ಪರಿಗಣಿಸದಿರುವುದು ಕ್ರಿಕೆಟ್ ಪಂಡಿತರ ಕೆಂಗಣ್ಣಿಗೆ ಗುರಿಯಾಗಿದೆ.
ನಾಯಕತ್ವದ ರೇಸ್ ನಲ್ಲಿ ಕೊನೆಗೂ ಶ್ರೇಯಸ್ ಅಯ್ಯರ್ ಅವರ ಅನುಭವಕ್ಕೆ ಬಿಸಿಸಿಐ ಮನ್ನಣೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಸುನಿಲ್ ಗವಾಸ್ಕರ್, ಶ್ರೇಯಸ್ ಅಯ್ಯರ್ ಅವರು ಹಲವು ಫ್ರಾಂಚೈಸಿಗಳನ್ನು ಮುನ್ನಡೆಸಿದ ಅನುಭವ ಹೊಂದಿರುವುದರಿಂದ ಅವರಿಗೆ ಆದ್ಯತೆ ಸಿಕ್ಕಿದೆ, ರಜತ್ ಪಾಟೀದಾರ್ ನಿಜಕ್ಕೂ ಅನ್ ಲಕ್ಕಿ ಎಂದು ಹೇಳಿದ್ದಾರೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕೇವಲ 15 ಆಟಗಾರರನ್ನು ಮಾತ್ರ ಆರಿಸಬೇಕಾದ ಅನಿವಾರ್ಯತೆಯನ್ನು ಮುಂದಿಟ್ಟು ಪಾಟೀದಾರ್ ಅವರನ್ನು ಹೊರಗಿಟ್ಟಿದೆ. ವಿಶ್ವಕಪ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನೇ ಫಾರ್ಮ್ ಕೊರತೆಯಿಂದ ಕೈಬಿಟ್ಟಿರುವ ಬಿಸಿಸಿಐ, ಪಾಟೀದಾರ್ ಅವರ ಸತತ ಎರಡು ಟ್ರೋಫಿಗಳ ಸಾಧನೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.
ಒಂದು ಕಡೆ ಆಯ್ಕೆಗಾರರ ನಿರ್ಧಾರದಿಂದ ಅಭಿಮಾನಿಗಳು ಆಕ್ರೋಶಗೊಂಡಿದ್ದರೆ, ರಜತ್ ಪಾಟೀದಾರ್ ಮಾತ್ರ ಮೌನವಾಗಿದ್ದಾರೆ. ರಾಷ್ಟ್ರೀಯ ತಂಡದ ಆಯ್ಕೆಯ ಬಗ್ಗೆ ನಾನು ಎಂದಿಗೂ ಹಪಹಪಿಸುವುದಿಲ್ಲ. ಅವರಿಗೆ ನನ್ನ ಅಗತ್ಯವಿದ್ದರೆ ಆಯ್ಕೆ ಮಾಡಲಿ, ಇಲ್ಲದಿದ್ದರೆ ಬೇಡ ಎಂದು ಹೇಳುವ ಮೂಲಕ ತಮ್ಮ ಅದ್ಭುತ ಆತ್ಮವಿಶ್ವಾಸವನ್ನು ಮೆರೆದಿದ್ದಾರೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿ ಅಥವಾ ಬಿಡಲಿ, ಆರ್ ಸಿಬಿ ತಂಡಕ್ಕೆ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟ ಮತ್ತು ಅದನ್ನು ಉಳಿಸಿಕೊಂಡು ಬಂದ ಪಾಟೀದಾರ್, ಕೋಟ್ಯಂತರ ಕನ್ನಡಿಗರ ಮತ್ತು ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಪ್ರೀತಿಯ ನಾಯಕನಾಗಿ ಉಳಿದಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳ ಸರ್ಟಿಫಿಕೇಟ್ ಇಲ್ಲದಿದ್ದರೂ ಪಾಟೀದಾರ್ ಸಾಧನೆ ಇತಿಹಾಸದಲ್ಲಿ ಸದಾ ದಾಖಲಾಗಿರುತ್ತದೆ.








