ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಗ್ದಾಳಿ ತಾರಕಕ್ಕೇರಿದ್ದು, ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ಅತ್ಯಂತ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಇನ್ನು ಮುಂದೆ ನಕಲಿ ದೇಶಪ್ರೇಮಿಗಳ ಆಟ ನಡೆಯುವುದಿಲ್ಲ ಎಂದು ಅವರು ನೇರ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯ ನಾಯಕತ್ವ ಮತ್ತು ಸಂಪ್ರದಾಯಗಳನ್ನು ಪ್ರಶ್ನಿಸಿರುವ ಹರಿಪ್ರಸಾದ್, ಕಾಂಗ್ರೆಸ್ ಪಕ್ಷದಲ್ಲಿ ಹಣ ನೀಡಿ ಅಧ್ಯಕ್ಷರಾಗುವ ಅಥವಾ ಅಧಿಕಾರ ಹಿಡಿಯುವ ರೂಢಿ ಇಲ್ಲ. ಕೊಲೆ ಪ್ರಕರಣಗಳಲ್ಲಿ ಗಡಿಪಾರಾದವರು, ಪೋಕ್ಸೋ ಕಾಯಿದೆಯಡಿ ಆರೋಪ ಎದುರಿಸುತ್ತಿರುವವರು ಹಾಗೂ ಜೈಲು ವಾಸ ಅನುಭವಿಸಿದ ಕ್ರಿಮಿನಲ್ ಗಳನ್ನು ಉನ್ನತ ಸ್ಥಾನಕ್ಕೆ ಏರಿಸುವ ಕೆಟ್ಟ ಪರಂಪರೆ ಕಾಂಗ್ರೆಸ್ ನಲ್ಲಿ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ನರೇಂದ್ರ ಮೋದಿ ಅವರ ರಾಜಕೀಯ ಇತಿಹಾಸವನ್ನು ಕೆದಕಿರುವ ಅವರು, ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸದ ವ್ಯಕ್ತಿಯನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿ ಮಾಡಿದ ಇತಿಹಾಸ ಬಿಜೆಪಿಯದ್ದು. ಯಾವ ಜನರ ಬೆಂಬಲದಿಂದ ಅವರು ಅಂದು ಅಧಿಕಾರ ಹಿಡಿದಿದ್ದರು ಎಂಬುದು ಬಿಜೆಪಿಗೆ ನೆನಪಿದೆಯೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಕನಿಷ್ಠಪಕ್ಷ ಸಂಘಪರಿವಾರದ ಒಳಗೆ ಯಾವುದೇ ಚುನಾವಣೆ ಎದುರಿಸದ ಮೋಹನ್ ಭಾಗವತ್ ಅವರನ್ನು ಆಯ್ಕೆ ಮಾಡಿದವರು ಯಾರು ಎಂದು ಕೇಳುವ ಮೂಲಕ ಆರ್ ಎಸ್ ಎಸ್ ಕಾರ್ಯವೈಖರಿಯನ್ನು ಲೇವಡಿ ಮಾಡಿದ್ದಾರೆ.
ಚುನಾವಣಾ ಚಾಣಕ್ಯ ಎಂಬ ಹಣೆಪಟ್ಟಿಯೊಂದಿಗೆ ಹೂಜೂರ್ ಎನ್ನುವ ಬಿಜೆಪಿ, ಕರ್ನಾಟಕದಲ್ಲಿ ಎಂದಿಗೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ ಮತ್ತು ಮುಂದೆಯೂ ಬರುವುದಿಲ್ಲ ಎಂದು ಹರಿಪ್ರಸಾದ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿಯ ಪಾಕಿಸ್ತಾನ ಪ್ರೇಮದ ಬಗ್ಗೆ ಮಾತನಾಡುತ್ತಾ, ದ್ವಿರಾಷ್ಟ್ರ ಸಿದ್ಧಾಂತ ಪ್ರತಿಪಾದಿಸಿದ ಸಾವರ್ಕರ್ ಕಾಲದಿಂದ ಹಿಡಿದು ಇಂದಿನ ನಾಯಕರವರೆಗೆ ಪಾಕಿಸ್ತಾನದೊಂದಿಗೆ ಮಾತುಕತೆಯ ಬಾಗಿಲು ಮುಚ್ಚಬಾರದು ಎನ್ನುವವರ ವರೆಗೆ ಬಿಜೆಪಿಗೆ ಪಾಕಿಸ್ತಾನದ ಮೇಲೆ ವಿಶೇಷ ಪ್ರೀತಿ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆರ್ ಎಸ್ ಎಸ್ ಮತ್ತು ಬಿಜೆಪಿ ಪ್ರತಿಪಾದಿಸುವ ಹಿಂದುತ್ವವು ನಕಲಿ ಎಂದು ಕಿಡಿಕಾರಿರುವ ಅವರು, ನಾನು ಈ ನಕಲಿ ಹಿಂದುತ್ವವನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದೇನೆ ಮತ್ತು ಮುಂದೆಯೂ ವಿರೋಧಿಸುತ್ತಲೇ ಇರುತ್ತೇನೆ. ದೇಶಪ್ರೇಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ನಕಲಿ ದೇಶಪ್ರೇಮಿಗಳ ಆಟಕ್ಕೆ ಕರ್ನಾಟಕದಲ್ಲಿ ಇನ್ನು ಜಾಗವಿಲ್ಲ ಎಂದು ಅವರು ಗುಡುಗಿದ್ದಾರೆ.








