ಬೆಂಗಳೂರು: ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ, ಅಧಿಕಾರದ ಮದದಲ್ಲಿ ಮೆರೆಯುವವರಿಗೆ ಕಾಲವೇ ಉತ್ತರ ನೀಡಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲಚಕ್ರದ ಉದಾಹರಣೆ ನೀಡಿ ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ಮೇಲೆ ಹೋದವನು ಕೆಳಗೆ ಬರಲೇಬೇಕು
ಕಾಲಚಕ್ರ ಯಾವಾಗಲೂ ತಿರುಗುತ್ತಲೇ ಇರುತ್ತದೆ. ಇಂದು ಮೇಲೆ ಹೋದವನು ನಾಳೆ ಕೆಳಗೆ ಬರಲೇಬೇಕು, ಕೆಳಗಿರುವವರು ಮೇಲೆ ಹೋಗಲೇಬೇಕು. ನಾನೇ ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತೇನೆ ಎಂಬ ಅಹಂಕಾರ ಸರಿಯಲ್ಲ. ಪ್ರತಿಯೊಂದು ಅಧಿಕಾರಕ್ಕೂ ಒಂದು ಅಂತ್ಯವಿರುತ್ತದೆ ಎಂಬುದನ್ನು ಮರೆಯಬಾರದು ಎಂದು ಎಚ್ಡಿಕೆ ಮಾರ್ಮಿಕವಾಗಿ ನುಡಿದರು.
ರಾಮನಗರ ಬಿಟ್ಟ ವಿಚಾರಕ್ಕೆ ಆಕ್ರೋಶ
ಕುಮಾರಸ್ವಾಮಿ ರಾಮನಗರ ಬಿಟ್ಟು ಹೋಗಿದ್ದಾರೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕಿಡಿಕಾರಿದ ಸಚಿವರು, ನಾನು ಯಾರ ಅನುಮತಿ ಪಡೆದು ಜಿಲ್ಲೆ ಬಿಡಬೇಕು? ರಾಮನಗರ ಮತ್ತು ಮಾಗಡಿಯ ಜನತೆ ನಮಗೆ ಲಕ್ಷಾಂತರ ಮತಗಳನ್ನು ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಲ್ಲಿನ ಜನರೇ ಇವರ ತಮ್ಮನನ್ನು ಮನೆಗೆ ಕಳುಹಿಸಿದ್ದಾರೆ, ಹಾಗಾದರೆ ಅವರು ಕನಕಪುರ ಬಿಟ್ಟು ಹೋಗಿದ್ದಾರಾ? ಇಂತಹ ಕ್ಷುಲ್ಲಕ ಮಾತುಗಳನ್ನು ಬಿಟ್ಟು ಜನರಿಗೆ ಉಪಯುಕ್ತವಾಗುವ ಕೆಲಸ ಮಾಡುವುದನ್ನು ಕಲಿಯಲಿ ಎಂದು ಕಿವಿಮಾತು ಹೇಳಿದರು.
ಇಡೀ ರಾಜ್ಯಕ್ಕೋ ಅಥವಾ ನಾಲ್ಕು ತಾಲೂಕುಗಳಿಗೋ ಮುಖ್ಯಮಂತ್ರಿ?
ಡಿ.ಕೆ. ಶಿವಕುಮಾರ್ ಅವರು ಕೇವಲ ಬೆಂಗಳೂರು ದಕ್ಷಿಣ ಜಿಲ್ಲೆಗೆ ಅಥವಾ ನಾಲ್ಕು ತಾಲೂಕುಗಳಿಗೆ ಮಾತ್ರ ಸೀಮಿತವಾಗಿದ್ದಾರೆಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿಯನ್ನು ಮರೆತಂತಿದೆ ಎಂದು ಟೀಕಿಸಿದರು. ಬಿಡದಿ ಟೌನ್ಶಿಪ್ ವಿಚಾರದಲ್ಲಿ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ಅವರು ತಿಳಿದುಕೊಳ್ಳಬೇಕು. ಈ ಹಿಂದೆ ಕನಕಪುರ ಮತ್ತು ಸಾತನೂರು ಭಾಗದಲ್ಲಿ ಕನಿಷ್ಠ ವಿದ್ಯುತ್ ಮತ್ತು ನೀರಿನ ಸೌಲಭ್ಯವೂ ಇರಲಿಲ್ಲ. ಆ ಸೌಲಭ್ಯಗಳನ್ನು ಕಲ್ಪಿಸಿದ್ದು ಯಾರು ಎನ್ನುವುದು ಜನರಿಗೆ ತಿಳಿದಿದೆ. ನಾನು ಬಂಡೆ ಹೊಡೆದು ವಿದೇಶಕ್ಕೆ ಸಾಗಿಸಲಿಲ್ಲ, ಬದಲಾಗಿ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ ಎಂದು ಲೇವಡಿ ಮಾಡಿದರು.
ಗ್ಯಾರಂಟಿ ಯೋಜನೆಯಲ್ಲಿ ಜಾತಿ ರಾಜಕಾರಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯಲ್ಲಿ ಜಾತಿಯನ್ನು ಎಳೆದು ತರುತ್ತಿರುವುದಕ್ಕೆ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದರು. ನಾನು ಎಂದಿಗೂ ಜಾತಿ ನೋಡಿ ರಾಜಕೀಯ ಮಾಡಿದವನಲ್ಲ. ಸಹಾಯ ಕೇಳಿ ಬಂದವರಿಗೆ ಜಾತಿ ಕೇಳದೆ ಸ್ಪಂದಿಸಿದ್ದೇನೆ. ಆದರೆ ಈ ಸರ್ಕಾರ ಗ್ಯಾರಂಟಿ ಫಲಾನುಭವಿಗಳನ್ನು ಗುರುತಿಸಲು ಜಾತಿಯ ಕಾಲಂ ಅಳವಡಿಸಿರುವುದು ಖಂಡನೀಯ. ಇದು 2028ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರನ್ನು ಜಾತಿ ಹೆಸರಲ್ಲಿ ಒಡೆಯುವ ಸಂಚು ಎಂದು ಗಂಭೀರ ಆರೋಪ ಮಾಡಿದರು.
ಅರ್ಕಾವತಿ ಬಡಾವಣೆಯ ಹೆಸರಿನಲ್ಲಿ ಜನರನ್ನು ಬೀದಿಗೆ ತಂದವರು ಇವರು. ಈಗ ಡಿನೋಟಿಫಿಕೇಷನ್ ಬಗ್ಗೆ ಮಾತನಾಡುತ್ತಿದ್ದಾರೆ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ಬಿಡದಿ ಯೋಜನೆಯನ್ನು ನಾನು ಅಂದೇ ಕೈಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ ಮೇಲೆ ಡಿನೋಟಿಫಿಕೇಷನ್ ಪ್ರಶ್ನೆಯೇ ಬರುವುದಿಲ್ಲ. ಇವರ ದಡ್ಡತನಕ್ಕೆ ಮಿತಿಯೇ ಇಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಡಿ.ಕೆ. ಶಿವಕುಮಾರ್ ಅವರ ಪ್ರತಿಯೊಂದು ಟೀಕೆಗೂ ಅಂಕಿ-ಅಂಶಗಳ ಸಮೇತ ತಿರುಗೇಟು ನೀಡಿದ ಎಚ್.ಡಿ. ಕುಮಾರಸ್ವಾಮಿ, ಅಧಿಕಾರದ ಅಹಂಕಾರದಿಂದ ವರ್ತಿಸುವುದನ್ನು ಬಿಟ್ಟು ಜನಹಿತಕ್ಕಾಗಿ ಕೆಲಸ ಮಾಡಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು.







