ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದರೂ ಪೂರ್ಣ ಪ್ರಮಾಣದ ಆಡಳಿತ ನಡೆಸಲು ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿರುವ ಅವರು, ಡಿಕೆಶಿ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಪುಕ್ಕಲು ಮತ್ತು ಅಸಮರ್ಥ ಸಿಎಂ ಎಂದು ಜರೆದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿರುವ ಆರ್ ಅಶೋಕ, ಸರ್ಕಾರದ ವೈಫಲ್ಯಗಳು, ಸಚಿವ ಸಂಪುಟ ವಿಸ್ತರಣೆಯ ವಿಳಂಬ, ರೈತರ ಕಷ್ಟಗಳು ಹಾಗೂ ಮಕ್ಕಳ ಉಚಿತ ಇನ್ಸುಲಿನ್ ಯೋಜನೆಯ ಅನುಷ್ಠಾನದಲ್ಲಿನ ನಿರ್ಲಕ್ಷ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಅಧಿಕಾರಕ್ಕೆ ಬಂದು ತಿಂಗಳಾದರೂ ಪೂರ್ಣ ಪ್ರಮಾಣದ ಸರ್ಕಾರ ನಡೆಸಲಾಗದ ನೀವು ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದ್ದೀರಿ. ನಿಮ್ಮ ರಾಜಕೀಯ ಗೊಂದಲ ಹಾಗೂ ಪುಕ್ಕಲುತನಕ್ಕೆ ರಾಜ್ಯದ ಅನ್ನದಾತರನ್ನು ಬಲಿ ಕೊಡುವುದನ್ನು ನಿಲ್ಲಿಸಿ. ನಿಮ್ಮಂತಹ ಪುಕ್ಕಲು ನಾಯಕರು ಅಧಿಕಾರದಲ್ಲಿದ್ದರೆಷ್ಟು, ಬಿಟ್ಟರೆಷ್ಟು ಎಂದು ಪ್ರಶ್ನಿಸಿರುವ ಅಶೋಕ, ಸಂಪುಟ ವಿಸ್ತರಣೆ ಮಾಡಲು ನಿಮಗೇಕೆ ಇಷ್ಟೊಂದು ಭಯ ಎಂದು ಕೇಳಿದ್ದಾರೆ.
ಸಂಪುಟ ವಿಸ್ತರಣೆಗೆ ಕೈಹಾಕಿದರೆ ಸ್ವಪಕ್ಷದ ಶಾಸಕರೇ ಬಂಡಾಯ ಏಳುತ್ತಾರೆ ಎಂಬ ಆತಂಕ ನಿಮ್ಮನ್ನು ಕಾಡುತ್ತಿದೆಯೇ? ಸಚಿವಾಕಾಂಕ್ಷಿಗಳು ಬಂಡಾಯವೆದ್ದರೆ ಅತ್ತು, ಕರೆದು, ಕಾಡಿ ಬೇಡಿ ಪಡೆದುಕೊಂಡಿರುವ ಕುರ್ಚಿಯೇ ಕೈತಪ್ಪಿ ಹೋಗಬಹುದು ಎಂಬ ಭಯವೇ? ಅಥವಾ ಹೈಕಮಾಂಡ್ನ ರಬ್ಬರ್ ಸ್ಟ್ಯಾಂಪ್ ಆಗಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ತಾಕತ್ತೇ ನಿಮಗಿಲ್ಲವೇ ಎಂದು ಅಶೋಕ ಲೇವಡಿ ಮಾಡಿದ್ದಾರೆ.
ರೈತರ ಕಣ್ಣೀರನ್ನು ಸರ್ಕಾರ ನಿರ್ಲಕ್ಷಿಸಿದೆ:
ರಾಜ್ಯದಲ್ಲಿ ಸದ್ಯ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗುತ್ತಿದೆ. ಮತ್ತೊಂದೆಡೆ ಕಮಿಷನ್ ಏಜೆಂಟರ ಹಾವಳಿ ಮತ್ತು ಬೆಲೆ ಕುಸಿತದಿಂದಾಗಿ ಟೊಮೇಟೊ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ. 14 ಕೆಜಿಯ ಟೊಮೇಟೊ ಬಾಕ್ಸ್ ಬೆಲೆ ಕೇವಲ 150 ರೂಪಾಯಿಗೆ ಕುಸಿದಿದ್ದು, ರೈತರು ಬೀದಿಗೆ ಬೀಳುವಂತಾಗಿದೆ. ಚಿತ್ರದುರ್ಗ, ವಿಜಯಪುರ, ಗದಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ರೈತರು ಕಂಗಾಲಾಗಿದ್ದಾರೆ. ಆದರೆ, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರದಲ್ಲಿ ರೈತರ ಅಹವಾಲು ಕೇಳಲು ಒಬ್ಬ ಪೂರ್ಣಾವಧಿ ಕೃಷಿ ಸಚಿವರಿಲ್ಲದಿರುವುದು ದುರಂತ ಎಂದು ಅವರು ಕಿಡಿಕಾರಿದ್ದಾರೆ.
ನಿಮ್ಮ ಆಂತರಿಕ ಕಲಹಗಳನ್ನು ಮರೆಮಾಚುವುದು ಮತ್ತು ಕುರ್ಚಿ ಭದ್ರಪಡಿಸಿಕೊಳ್ಳುವುದೇ ನಿಮಗೆ ಮುಖ್ಯವಾಗಿದೆಯೇ ಹೊರತು ರೈತರ ಹಿತರಕ್ಷಣೆ ಅಲ್ಲ ಎಂದು ಆಕ್ಷೇಪಿಸಿರುವ ಅವರು, ತಕ್ಷಣವೇ ಕೃಷಿ ಸೇರಿದಂತೆ ಖಾಲಿ ಇರುವ ಇಲಾಖೆಗಳಿಗೆ ಪೂರ್ಣಾವಧಿ ಸಚಿವರನ್ನು ನೇಮಿಸಿ ಜನಸಾಮಾನ್ಯರ ರಕ್ಷಣೆಗೆ ನಿಲ್ಲಿ. ಇಲ್ಲದಿದ್ದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಮಕ್ಕಳ ಉಚಿತ ಇನ್ಸುಲಿನ್ ಯೋಜನೆ ಹಳ್ಳ ಹಿಡಿದಿದೆ:
ಮತ್ತೊಂದು ಪೋಸ್ಟ್ನಲ್ಲಿ ಮಕ್ಕಳ ಆರೋಗ್ಯ ಯೋಜನೆಯ ವಿಳಂಬದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಅಶೋಕ, ಟೈಪ್ 1 ಮಧುಮೇಹದಿಂದ ಬಳಲುತ್ತಿರುವ 18 ವರ್ಷದೊಳಗಿನ ಪುಟ್ಟ ಮಕ್ಕಳ ಜೀವ ರಕ್ಷಕ ಉಚಿತ ಇನ್ಸುಲಿನ್ ಯೋಜನೆಯನ್ನು ಘೋಷಿಸಿ ನಾಲ್ಕೈದು ತಿಂಗಳು ಕಳೆದರೂ ಇಂದಿಗೂ ಜಾರಿಗೆ ತಂದಿಲ್ಲ. ಈ ನಿರ್ದಯಿ, ಜನವಿರೋಧಿ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಜೆಟ್ನಲ್ಲಿ ಕೇವಲ ಪ್ರಚಾರಕ್ಕಾಗಿ ಸುಳ್ಳು ಘೋಷಣೆಗಳನ್ನು ಕೂಗಿ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದ್ದೀರಾ? ಕುಮಾರಕೃಪಾದಲ್ಲಿ ಕುಳಿತು ಕಮಿಷನ್ ಲೆಕ್ಕಾಚಾರ ಮಾಡುವುದರಲ್ಲಿ ಬ್ಯುಸಿಯಾಗಿರುವ ನಿಮಗೆ, ಇನ್ಸುಲಿನ್ಗಾಗಿ ತಿಂಗಳಿಗೆ 2 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಲಾರದೆ ಕಣ್ಣೀರು ಹಾಕುತ್ತಿರುವ ಬಡ ಪೋಷಕರ ಆಕ್ರಂದನ ಕೇಳಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳ ಘೋರ ನಿರ್ಲಕ್ಷ್ಯ ಮತ್ತು ಟೆಂಡರ್ ಪ್ರಕ್ರಿಯೆಯ ವಿಳಂಬದಿಂದಾಗಿ ಈ ಯೋಜನೆ ಹಳ್ಳ ಹಿಡಿದಿದೆ. ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ಮೇಲಾಗಲಿ ಅಥವಾ ಆಡಳಿತದ ಮೇಲಾಗಲಿ ಯಾವುದೇ ಹಿಡಿತವಿಲ್ಲದಂತಾಗಿದೆ.
ರಾಜ್ಯದಲ್ಲಿ ಸದ್ಯ 7,000ಕ್ಕೂ ಹೆಚ್ಚು ಟೈಪ್ 1 ಮಧುಮೇಹ ಬಾಧಿತ ಮಕ್ಕಳು ಇನ್ಸುಲಿನ್ ಸಿಗದೆ ತತ್ತರಿಸುತ್ತಿದ್ದಾರೆ. ಹಣವಿಲ್ಲದ ಬಡ ಪೋಷಕರು ಮಕ್ಕಳಿಗೆ ಕಡಿಮೆ ಪ್ರಮಾಣದ ಇನ್ಸುಲಿನ್ ನೀಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಒಂದು ವೇಳೆ ಆ ಮಕ್ಕಳಿಗೆ ಏನಾದರೂ ಪ್ರಾಣಾಪಾಯವಾದರೆ ಅದು ಸರ್ಕಾರಿ ಪ್ರಾಯೋಜಿತ ಕೊಲೆಯಾಗುವುದಿಲ್ಲವೇ ಎಂದು ಅಶೋಕ ಅತ್ಯಂತ ಗಂಭೀರ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ಇನ್ಸುಲಿನ್ಗಾಗಿ ಎನ್ಜಿಒಗಳ ನೆರವು ಪಡೆಯುವ ಸ್ಥಿತಿಗೆ ಬಂದು ನಿಂತಿವೆ ಎಂದು ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.







