ನ್ಯೂಸ್ ಆಂಕರ್ ಆಗಿ ವೃತ್ತಿ ಜೀವನ ಆರಂಭಿಸಿ ಬಿಗ್ ಬಾಸ್ ಕನ್ನಡ ಸೀಸನ್ 12 ರ ಮೂಲಕ ಮನೆಮಾತಾಗಿದ್ದ ಜಾಹ್ನವಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಜಾಹ್ನವಿ ಇತ್ತೀಚೆಗಷ್ಟೇ ರಾಜಕೀಯಕ್ಕೆ ಪ್ರವೇಶಿಸಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಇದೀಗ ಮಾಂಸಾಹಾರ ಸೇವನೆಯ ಕುರಿತು ಅವರು ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ನಾನ್ ವೆಜ್ ಹೋಟೆಲ್ ಉದ್ಘಾಟನೆಯಲ್ಲಿ ಅಸಲಿ ವಿಷಯ ಬಿಚ್ಚಿಟ್ಟ ನಟಿ
ಇತ್ತೀಚೆಗೆ ನಾನ್ ವೆಜ್ ಹೋಟೆಲ್ ಒಂದರ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ತೆರಳಿದ್ದ ಜಾಹ್ನವಿ ತಮ್ಮ ಆಹಾರ ಪದ್ಧತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ತಮಗೆ ಚಿಕನ್ ಬಿರಿಯಾನಿ ಎಂದರೆ ಬಹಳ ಇಷ್ಟ ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನನಗೆ ಮಟನ್ ಗಿಂತ ಚಿಕನ್ ಎಂದರೆ ಹೆಚ್ಚು ಪ್ರೀತಿ ಮತ್ತು ಖಾರವಾಗಿರುವ ಆಹಾರವನ್ನು ಇಷ್ಟಪಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಮನೆಯಲ್ಲಿ ನಾನ್ ವೆಜ್ ಮಾಡಿದರೆ ಅಮ್ಮ ಹೊರಗೆ ಹಾಕ್ತಾರೆ
ತಮ್ಮ ಸಮುದಾಯ ಮತ್ತು ಮನೆಯ ಸಂಪ್ರದಾಯದ ಬಗ್ಗೆ ಮಾತನಾಡಿದ ಜಾಹ್ನವಿ ನಾವು ಲಿಂಗಾಯತರು ಹೀಗಾಗಿ ನಮ್ಮ ಮನೆಯಲ್ಲಿ ಮಾಂಸಾಹಾರ ಮಾಡುವುದಿಲ್ಲ. ಒಂದು ವೇಳೆ ಏನಾದರೂ ಮನೆಯಲ್ಲಿ ನಾನ್ ವೆಜ್ ಮಾಡಿದರೆ ನಮ್ಮ ಅಮ್ಮ ನನ್ನನ್ನು ಮನೆಯಿಂದ ಆಚೆ ಹಾಕುತ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಆದರೆ ಸವಿರುಚಿ ಕಾರ್ಯಕ್ರಮ ಮಾಡುವಾಗ ಮತ್ತು ಹೊರಗಡೆ ಹೋದಾಗ ನಾನು ಮಾಂಸಾಹಾರ ಸೇವನೆ ಮಾಡಿದ್ದೇನೆ ಅದನ್ನು ಎಲ್ಲರೂ ನೋಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈಗ ಮಾಂಸಾಹಾರ ಬಿಟ್ಟಿದ್ದೇನೆ ಎಂದ ಜಾಹ್ನವಿ
ಮಾಂಸಾಹಾರ ಸೇವನೆಯ ಬಗ್ಗೆ ಇಷ್ಟೊಂದು ಮುಕ್ತವಾಗಿ ಮಾತನಾಡಿದ ಜಾಹ್ನವಿ ಮತ್ತೊಂದು ಅಚ್ಚರಿಯ ವಿಷಯವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಕಳೆದ ಕೆಲವು ದಿನಗಳಿಂದ ಅವರು ಮಾಂಸಾಹಾರ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರಂತೆ. ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆದಾಗಿನಿಂದ ಮಾಂಸಾಹಾರ ತಿನ್ನಬಾರದು ಎಂದು ನಿರ್ಧರಿಸಿದ್ದು ಈಗ ಕೇವಲ ಸಸ್ಯಾಹಾರಕ್ಕೆ ಮಾತ್ರ ಸೀಮಿತವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಾದ ವಿವಾದದ ಕಿಡಿ
ಜಾಹ್ನವಿ ಅವರ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಬಣಗಳಾಗಿ ವಿಂಗಡಣೆಯಾಗಿದ್ದಾರೆ. ಕೆಲವರು ಲಿಂಗಾಯತರು ಮಾಂಸಾಹಾರ ಸೇವಿಸುವುದು ತಪ್ಪು ಎಂದು ವಾದಿಸುತ್ತಿದ್ದರೆ ಇನ್ನು ಕೆಲವರು ಆಹಾರ ಪದ್ಧತಿ ಎಂಬುದು ವೈಯಕ್ತಿಕ ಆಯ್ಕೆ ಅದರ ಬಗ್ಗೆ ಚರ್ಚೆ ಮಾಡುವುದು ಅನಗತ್ಯ ಎಂದು ಜಾಹ್ನವಿ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ಜಾಹ್ನವಿ ತಮ್ಮ ಹೇಳಿಕೆಗಳ ಮೂಲಕ ಸುದ್ದಿಯಲ್ಲಿ ಮುಂದುವರಿದಿದ್ದಾರೆ.








