ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..!
ಅವನು ಶಾಲೆಗೆ ಹೋಗಿ ಓದಿದ್ದು ಬರೀ 8ನೇ ಕ್ಲಾಸ್..! ಆದ್ರೆ ಈಗಿನ ವೃತ್ತಿ ಭಾರತೀಯ ನೌಕಾಪಡೆಯಲ್ಲಿ ಅಧೀನ ಅಧಿಕಾರಿ..!
ಆತ ಹಸಿವನ್ನು ನೀಗಿಸಲು ಢಾಬಾದಲ್ಲಿ ಪಾತ್ರೆ ತೊಳೆಯುತ್ತಿದ್ದ. ಅಚ್ಚರಿ ಅಂದ್ರೆ ಈಗ ಅದೇ ಕೈಗಳಲ್ಲಿ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನ ಬೆಳ್ಳಿಯ ಪದಕ ಹೊಳೆಯುತ್ತಿದೆ.
ಅವನಿಗೆ ಆರ್ಥಿಕ ಸಮಸ್ಯೆಯೇ ಶಾಪವಾಗಿ ಕಾಡುತ್ತಿತ್ತು. ಹೀಗಾಗಿ ಹೀಗಾಗಿ ವೇಟ್ ಲಿಫ್ಟಿಂಗ್ನಿಂದ ದೂರ ಉಳಿದಿದ್ದ. ಪ್ರಸ್ತುತ ಅದೇ ವೇಟ್ ಲಿಫ್ಟಿಂಗ್ ಆತನ ಬದುಕನ್ನೇ ಹಸನಾಗಿಸಿದೆ.
ಈತ ಇಂಫಾಲ್ನ ರಾಷ್ಟ್ರೀಯ ಅಕಾಡೆಮಿಯಲ್ಲಿ ತರಬೇತಿ ಜೊತೆಗೆ ಪದವಿ ಮುಗಿಸಿದ್ದ. ನಂತರ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಉನ್ನತ ಕ್ರೀಡಾ ಶಿಕ್ಷಣದಲ್ಲೂ ಪದವಿ ಪಡೆದಿದ್ದ. ಹಾಗಾಗಿ ಇವತ್ತು ಈತನ ಫ್ಯಾಮಿಲಿಯವರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ಇವನ ತಂದೆ ಚಾಲಕ, ತಾಯಿ ಮನೆಕೆಲಸದಾಕೆ..ಇವನು ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕ. ಆದ್ರೆ ಇಂದು ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಭಾರತದ ಹೆಮ್ಮೆಯ ಮಗನಾಗಿದ್ದಾನೆ.
ಈತನ ಹೆಸರು – ರಿಷಿಕಾಂತ ಸಿಂಗ್.
2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತ.
ಚಿನ್ನದ ಪದಕ ಕೈತಪ್ಪಿದ್ರೂ ಬೆಳ್ಳಿಯ ಪದಕ ರಿಷಿಕಾಂತ ಸಿಂಗ್ನ ಕೊರಳಿಗೆ ಮಾಲೆಯಾಗಿದೆ ಸ್ನಾಚ್ನಲ್ಲಿ ಎತ್ತಿದ್ದ 121 ಕೆಜಿ ಭಾರ ಕಾಮನ್ವೆಲ್ಸ್ ಗೇಮ್ಸ್ನಲ್ಲಿ ದಾಖಲೆಯಾಗಿದೆ. ಕ್ಲೀನ್ ಆಂಡ್ ಜರ್ಕ್ನಲ್ಲಿ 143 ಕೆಜಿ ಭಾರ ಎತ್ತಿ ಒಟ್ಟು 264 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ಸೇರ್ಪಡೆಯಾಗಿದೆ.
ಈ ಬೆಳ್ಳಿ ಪದಕ ಸಂಭ್ರಮದ ಹಿಂದೆ ರಿಷಿಕಾಂತನ ಬದುಕಿನ ಕಷ್ಟದ ದಿಗಳಿವೆ. ಕಠಿಣ ಪರಿಶ್ರಮದ ತಪಸ್ಸಿದೆ. ದಿನಕ್ಕೆ 150 ರೂಪಾಯಿ ಸಂಪಾದನೆ ಮಾಡುತ್ತಿದ್ದ ಹುಡುಗ, ಇಂದು ಕಾಮನ್ವೆಲ್ತ್ ಗೇಮ್ಸ್ನ ಪೋಡಿಯಂನಲ್ಲಿ ನಿಂತಿದ್ದು ಅದ್ಭುತ ಸಾಧನೆಯಾಗಿದೆ.
ಒಂದು ಕ್ಷಣ ರಿಷಿಗೆ, ಬಾಲ್ಯದ ಕಷ್ಟದ ದಿನಗಳು ಫ್ಲ್ಯಾಷ್ಬ್ಯಾಕ್ನಂತೆ ಕಣ್ಣ ಮುಂದೆ ಹಾದು ಹೋದವು. ಢಾಬಾದಲ್ಲಿ ಪಾತ್ರೆ ತೊಳೆಯುತ್ತಿದ್ದ ಆ ದಿನಗಳು ನೆನಪಾದವು. ತನ್ನ ತಂದೆ, ತಾಯಿಯ ತ್ಯಾಗವನ್ನು ನೆನೆದು ಕಣ್ಣಲ್ಲಿ ಆನಂದಬಾಷ್ಪ ಸುರಿಯುತ್ತಿತ್ತು. ಸ್ಪರ್ಧೆಯ ವೇಳೆ ತಂದೆ ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೂ ರಿಷಿ ಕುಗ್ಗಲಿಲ್ಲ. ಎಲ್ಲವನ್ನೂ ಮರೆತು ತನ್ನ ಗುರಿಯತ್ತ ಹೆಜ್ಜೆ ಹಾಕಿದ್ದ.
ಒಟ್ಟು 264 ಕೆಜಿ ಭಾರ ಎತ್ತಿರುವ ರಿಷಿಕಾಂತ್ ಹಿಂದಿನ ಶಕ್ತಿಯೇ ಕುಟುಂಬದ ಸಮರ್ಪಣೆಯ ಮನೋಭಾವನೆ. ಎಷ್ಟೇ ಕಷ್ಟ, ಬಡತನವಿದ್ರೂ ರಿಷಿಕಾಂತ್ ಸಾಧನೆಗೆ ತಂದೆ, ತಾಯಿ ಅಡ್ಡಿಪಡಿಸಿರಲಿಲ್ಲ. ತನ್ನ ಮಗನ ಸಾಮಥ್ರ್ಯ, ಶಕ್ತಿಯ ಬಗ್ಗೆ ಅಚಲ ವಿಶ್ವಾಸ ರಿಷಿಕಾಂತನ ಹೆತ್ತವರಿಗಿತ್ತು. ಹಾಗಾಗಿಯೇ ಇವತ್ತು ರಿಷಕಾಂತ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾನೆ.
ಹೌದು, ರಿಷಿಕಾಂತನ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ. ಅದು ಕಲ್ಲು ಮುಳ್ಳಿನ ಹಾದಿಯ ಪಯಣ. ಬಡತನ ಅನ್ನೋದೇ ಆತನ ಮೊದಲ ಶತ್ರು. ಆದ್ರೆ ಈ ಶತ್ರುವನ್ನು ಮಿತ್ರನನ್ನಾಗಿಸಿಕೊಂಡಿದ್ದು ಪರಿಶ್ರಮ ಮತ್ತು ಸಾಮಥ್ರ್ಯದಿಂದ. ಪ್ರತಿ ಹೆಜ್ಜೆಯಲ್ಲೂ ಸವಾಲುಗಳು, ಪ್ರತಿ ಕ್ಷಣವೂ ಅಡೆತಡೆಗಳು. ಇದನ್ನೆಲ್ಲಾ ಮೆಟ್ಟಿ ನಿಂತು ಕಾಮನ್ವೆಲ್ತ್ ಗೇಮ್ಸ್ ಪದಕ ಗೆದ್ದಿರೋದು ಸಾಮಾನ್ಯ ಸಂಗತಿಯಲ್ಲ.
ರಿಷಿಕಾಂತ ಸಿಂಗ್, ಮಣಿಪುರದ ಇಂಫಾಲ್ನ ನೈರಂಗಬಾದ್ ಗ್ರಾಮದ ಸಾಮಾನ್ಯ ಕುಟುಂಬದ ಹುಡುಗ. ಅಪ್ಪ – ಅಮ್ಮ ಸಂಸಾರದ ಜವಾಬ್ದಾರಿಯನ್ನು ನಿಭಾಯಿಸಲು ಪಡುತ್ತಿದ್ದ ಕಷ್ಟಗಳನ್ನು ಕಣ್ಣಾರೆ ನೋಡುತ್ತಿದ್ದ. ಹೀಗಾಗಿ ಸಹೋದರನ ಶಿಕ್ಷಣಕ್ಕಾಗಿ ಢಾಬಾವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.(ರಿಷಿ ಸಹೋದರ ಈಗ ವಾಯುಪಡೆಯಲ್ಲಿ ಅಧಿಕಾರಿ) ಇದರ ನಡುವೆ, ರಿಷಿಗೆ ಫುಟ್ಬಾಲ್ ಆಟಗಾರನಾಗಬೇಕು, ವೇಟ್ ಲಿಫ್ಟರ್ ಆಗಬೇಕು, ಬಾಕ್ಸರ್ ಆಗಬೇಕು ಎಂದು ಕನಸು ಕಾಣುತ್ತಿದ್ದ. ಆದ್ರೆ ಒಂದು ದಿನದ ಊಟಕ್ಕಾಗಿ ಹೋರಾಟ ನಡೆಸುತ್ತಿದ್ದ ರಿಷಿಗೆ, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡೋದು ಗಗನ ಕುಸುಮವಾಗಿತ್ತು.
ಆದ್ರೆ ಛಲ, ಹಠ ಬಿಡದ ರಿಷಿ ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ವೇಟ್ ಲಿಫ್ಟಿಂಗ್ ಸ್ಪರ್ಧೆಯನ್ನು. ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ಅಲ್ಪ ಸ್ವಲ್ಪ ಉಳಿಸಿಕೊಂಡು ಜಿಮ್ ಸೇರಿಕೊಂಡಿದ್ದ. ಆದ್ರೆ ಪೌಷ್ಟಿಕ ಆಹಾರ ಈತನ ಕನಸಿಗೆ ಅಡ್ಡಿಯನ್ನುಂಟು ಮಾಡಿತ್ತು. ಕೆಲವೊಂದು ಬಾರಿ ಹಸಿವಿನಿಂದಲೇ ನಿದ್ರೆಗೆ ಜಾರಿದ್ರೂ ಆತ್ಮವಿಶ್ವಾಸಕ್ಕೆ ಒಂಚೂರು ದಕ್ಕೆಯಾಗಲಿಲ್ಲ.
ಪ್ರತಿ ದಿನ 40 ಕಿಲೋ ಮೀಟರ್ ಸೈಕಲ್ ಸವಾರಿ. ಇದು ರಿಷಿಯ ಕಾಲುಗಳಿಗೆ ಮತ್ತು ಕೈಗಳಿಗೆ ಶಕ್ತಿಯನ್ನು ನೀಡಿತ್ತು. ಬಡತನವಿದ್ರೂ ವೇಟ್ ಲಿಫ್ಟಿಂಗ್ ತನ್ನ ಬದುಕು ಅಂತ ಸಮರ್ಪಣೆ ಮಾಡಿಕೊಂಡಿದ್ದ. 2016ರ ರಾಷ್ಟ್ರೀಯ ಚಾಂಪಿಯನ್ಶಿಪ್ ಮತ್ತು 2017ರ ಜೂನಿಯರ್ ಕಾಮನ್ವೆಲ್ತ್ನಲ್ಲಿ ಕಂಚಿನ ಪದಕ ಗೆದ್ದು ತನ್ನ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಅನಾವರಣಗೊಳಿಸಿದ್ದ.
ಆದ್ರೆ ರಿಷಿಗೆ ವೇಟ್ ಲಿಫ್ಟಿಂಗ್ಗಿಂತ ತನ್ನ ಕುಟುಂಬವೇ ಮುಖ್ಯವಾಗಿತ್ತು. ತಾನು ದುಡಿದ್ರೆ ಅಪ್ಪ ಅಮ್ಮ ನೆಮ್ಮದಿಯಾಗಿರಬಹುದು. ಸಹೋದರನ ಶಿಕ್ಷಣಕ್ಕೂ ನೆರವಾಗಬಹುದು.. ಹೀಗಾಗಿ ವೇಟ್ ಲಿಫ್ಟಿಂಗ್ ಅಥವಾ ದುಡಿಮೆಯ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಅಂತಹ ಪರಿಸ್ಥಿತಿಯಲ್ಲಿ ರಿಷಿಗೆ ದುಡಿಮೆಯೇ ಮುಖ್ಯವಾಗಿತ್ತು.
ವೇಟ್ ಲಿಫ್ಟಿಂಗ್ನಿಂದ ದೂರವೇ ಉಳಿದ ರಿಷಿ, ಯಾವುದೇ ಕೆಲಸಗಳನ್ನು ಮಾಡಲು ಹಿಂಜರಿಕೆ ಮಾಡುತ್ತಿರಲಿಲ್ಲ. ತುತ್ತು ಅನ್ನಕ್ಕಾಗಿ ಕಟ್ಟಡ ಕಾರ್ಮಿನಾಗಿಯೂ ದುಡಿದಿದ್ದ. ಸ್ನೇಹಿತರ ಸಂಪರ್ಕವನ್ನು ಕಳೆದುಕೊಂಡಿದ್ದ. ಪ್ರತಿ ದಿನ ತಾನು ಎಲ್ಲಿ ಕೆಲಸ ಮಾಡಬೇಕು ಎಂದು ಯೋಚಿಸುತ್ತಿದ್ದ.
ಆದ್ರೆ ವಿಧಿಯಾಟ ಬೇರೆನೇ ಇತ್ತು. ರಿಷಿಯ ಭ್ಯಾಗ್ಯದ ಬಾಗಿಲು ತೆರೆಯುವಂತೆ ಮಾಡಿದ್ದು ಮಣಿಪುರ ವೇಟ್ ಲಿಫ್ಟಿಂಗ್ ಫೆಡರೇಷನ್À ಕಾರ್ಯದರ್ಶಿ ಸುನೀಲ್ ಎಲಾಂಗ್ಬುಮ್. ಸುನೀಲ್ ಅವರ ಒಂದೇ ಒಂದು ಫೋನ್ ಕರೆ ರಿಷಿಯ ಬದುಕಿನ ದಿಕ್ಕನ್ನೇ ಬದಲಾಯಿತ್ತು. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ಕೇವಲ ಒಂದು ವರ್ಷದಲ್ಲಿ ಸೀನಿಯರ್ ನ್ಯಾಷನಲ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ. ಹೀಗಾಗಿಯೇ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದ. ಅಲ್ಲಿಗೆ ರಿಷಿ ಕುಟುಂಬದ ಕಷ್ಟದ ದಿನಗಳು ಮಾಯವಾದವು.
ಇಂಫಾಲ್ನ ಖುಮಾನ್ ಲ್ಯಾಂಪಕ್ನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದ ರಿಷಿ, ಪುಣೆಯ ಸೇನಾ ಕ್ರೀಡಾ ಸಂಸ್ಥೆ ಮತ್ತು ಪಟಿಯಾಲದ ನೇತಾಜಿ ಸುಭಾಶ್ ಚಂದ್ರ ರಾಷ್ಡ್ರೀಯ ಕ್ರೀಡಾ ಸಂಸ್ಥೆಯಲ್ಲಿ ತರಬೇತಿ ಜೊತೆಗೆ ಕ್ರೀಡಾ ಶಿಕ್ಷಣದಲ್ಲಿ ಪದವಿಯನ್ನು ಪಡೆದುಕೊಂಡಿದ್ದ. ಬಳಿಕ, ಬಲ್ಗೆರಿಯಾದ ರಾಷ್ಟ್ರೀಯ ಕ್ರೀಡಾ ಅಕಾಡೆಮಿಯಲ್ಲೂ ವಿಶೇಷ ತರಬೇತಿ ಪಡೆದು ಅಂತಾರಾಷ್ಟ್ರೀಯ ಸ್ಪರ್ಧೆಯ ಗುಣಮಟ್ಟದ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದ. ಹೀಗೆ ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲು ಏರಿದ್ದ ರಿಷಿಕಾಂತ ಅಪ್ರತಿಮ ಸಾಧಕನಾಗಿ ಹೊರಹೊಮ್ಮಿದ್ದಾನೆ.
ಹಾಗೇ ನೋಡಿದ್ರೆ ರಿಷಿಯ ಅತ್ಯುತ್ತಮ ಪ್ರದರ್ಶನ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬಂದಿಲ್ಲ. 2025ರ ಕಾಮನ್ವೆಲ್ತ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 271 ಕೆಜಿ ಭಾರ ಎತ್ತಿ ದಾಖಲೆ ಬರೆದಿದ್ದ. ಒಂದು ವೇಳೆ ಇದೇ ಪ್ರದರ್ಶನ ಗ್ಲಾಸ್ಗೋ ಕಾಮನ್ವೆಲ್ತ್ನಲ್ಲಿ ಬರುತ್ತಿದ್ರೆ ಇವತ್ತು ಚಿನ್ನದ ಪದಕಗೊಂದಿಗೆ ಕಂಗೊಳಿಸುತ್ತಿದ್ದ. ಆದ್ರೆ ಅದೃಷ್ಟ ಬೆಳ್ಳಿಯ ಪದಕಕ್ಕೆ ಸೀಮಿತವಾಗಿತ್ತು ಅಷ್ಟೇ.
ಆದ್ರೂ ಎಂಟನೇ ಕ್ಲಾಸ್ ಓದಿದ್ದ ರಿಷಿಯ ಸಾಧನೆ ಬರೀ ಸಾಧನೆಯಲ್ಲ. ಅದು ಅತ್ಯದ್ಭುತ ಸಾಧನೆಯ ಜೊತೆಗೆ ಸ್ಪೂರ್ತಿಯ ಚಿಲುಮೆ. ಆದ್ರೆ ರಿಷಿಯ ಕನಸು,ಗುರಿ ಇಷ್ಟಕ್ಕೆ ಸೀಮಿತವಾಗಿಲ್ಲ. ರಿಷಿಯ ಮುಂದಿನ ಗುರಿ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವುದು. ಆಲ್ ದಿ ಬೆಸ್ಟ್ ರಿಷಿ..!
ಸನತ್ ರೈ
saakshatv.com







