ಇದು ಹಳ್ಳಿ ಹುಡುಗಿ ಬಂಗಾರದ ರಾಣಿಯಾದ ನೈಜ ಕಥೆ.
ಈ ಸಾಧನೆಯ ಹಿಂದೆ ಕಡುಬಡತನದ ನೋವಿದೆ. ಹಸಿವಿನಿಂದ ಸಂಕಟಪಟ್ಟ ದಿನಗಳ ನೆನಪಿದೆ. ಕಟ್ಟಿಗೆಯ ಭಾರವನ್ನು ಹೊತ್ತು 2-3 ಕಿಲೋ ಮೀಟರ್ ದೂರ ನಡೆದಾಡಿದ್ದ ಬೇನೆ ಇದೆ. ಬಿದಿರಿನ ಕೋಲುನಿಂದ ಶುರುವಾದ ಮೊದಲ ಅಭ್ಯಾಸದ ತಂತ್ರವಿದೆ. ಅಲ್ಲಿಂದ ವೇಟ್ ಲಿಫ್ಟಿಂಗ್ ಭಾರ ಎತ್ತುವ ಮಟ್ಟಕ್ಕೆ ಬೆಳೆದ ಪರಿಶ್ರಮದ ಪಯಣವಿದೆ.
ಪ್ರತಿ ದಿನ 40 ಕಿಲೋ ಮೀಟರ್ ದೂರ ಪ್ರಯಾಣಿಸಿದ ದಣಿವಿದೆ. ಮರಳು ಸಾಗಿಸುವ ಲಾರಿ ಚಾಲಕರ ನೆರವಿನ ಮಾನವಿಯತೆ ಇದೆ. ಸುಸ್ತಾಗಿ ಮನೆಗೆ ಬಂದಾಗ ಸಹೋದರ -ಸಹೋದರಿಯರು ತೋರುತ್ತಿದ್ದ ಪ್ರೀತಿ ಇದೆ. ಪ್ರತಿ ದಿನ ಮೊಟ್ಟೆ – ಹಾಲು ನೀಡಿ ಬೆಳೆಸಿದ ಅಮ್ಮನ ವಾತ್ಸಲ್ಯವಿದೆ. ಪ್ರತಿ ಹೆಜ್ಜೆಯಲ್ಲೂ ಅಪ್ಪನ ತ್ಯಾಗವಿದೆ. ಕೈ ಹಿಡಿದು ಮುನ್ನಡೆಸಿದ್ದ ಗುರುವಿನ ಆರ್ಶಿವಾದವಿದೆ.
ಹೀಗೆ ಸಾಧನೆಯ ಹಾದಿಯಲ್ಲಿದ್ದ ಸವಾಲುಗಳನ್ನು ಮೆಟ್ಟಿ ನಿಂತ ಧೀರೆ. ಪ್ರತಿಭೆ, ಸಾಮಥ್ರ್ಯ, ಶಿಸ್ತು ಮತ್ತು ಬದ್ಧತೆಯಿಂದಲೇ ಯಶಸ್ಸಿನ ಶಿಖರವೇರಿದ ತರುಣಿ. ತನ್ನ ಅಪ್ರತಿಮ ಸಾಧನೆಯಿಂದಲೇ ತನ್ನ ಹುಟ್ಟೂರಿನ ಚಿತ್ರಣವನ್ನೇ ಬದಲಾಯಿಸಿದ್ದ ನಾರಿ. ನೂರಾರು ಯುವ ವೇಟ್ಲಿಫ್ಟರ್ಗಳಿಗೆ ಸ್ಪೂರ್ತಿಯ ಚಿಲುಮೆ. ಮಣಿಪುರದ ಹೆಮ್ಮೆಯ ಮಗಳು.
ಮೀರಾಬಾಯಿ ಚಾನು
ಭಾರತೀಯ ವೇಟ್ ಲಿಫ್ಟಿಂಗ್ನ ಯುವರಾಣಿ. ಸತತ ಮೂರು ಕಾಮನ್ವೆಲ್ತ್ ಗೇಮ್ಸ್ಗಳ ಬಂಗಾರದ ಹುಡುಗಿ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಯುವತಿ. ಒಟ್ಟು ಇಲ್ಲಿಯವರೆಗೆ 9 ಚಿನ್ನ, 5 ಬೆಳ್ಳಿ, 1 ಕಂಚು ಸೇರಿ 15 ಪದಕಗಳು ಆಕೆಯ ಕೊರಳಿನಲ್ಲಿ ಬೆಲೆಕಟ್ಟಲಾಗದ ಆಭರಣಗಳಾಗಿವೆ
ಮೂರು ದಿನಗಳ ಕಠಿಣ ಉಪವಾಸ..!
ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮೀರಾ ದಾಖಲೆಯ ಚಿನ್ನ ಗೆದ್ದಿದ್ದಳು. ಆದ್ರೆ ಈ ಚಿನ್ನದ ಪದಕದ ಹಿಂದೆ ಮೂರು ದಿನಗಳ ಕಠಿಣ ಉಪವಾಸದ ತಪಸ್ಸಿದೆ.
ಸ್ಪರ್ಧೆಗೆ ಮುನ್ನ ನಡೆಸುವ ತಪಾಸನೆಯ ವೇಳೆ ತನ್ನ ತೂಕವನ್ನು ಸರಿ ಹೊಂದಿಸಬೇಕು. ಮೀರಾ ತೂಕ 50.5 ಕೆಜಿ. ಆದ್ರೆ ಆಕೆ ಸ್ಪರ್ಧಿಸುವುದು 48ಕೆಜಿ ವಿಭಾಗದಲ್ಲಿ. ಹೀಗಾಗಿ ತನ್ನ ತೂಕವನ್ನು 48 ಕೆಜಿಗಿಂತಲೂ ಸ್ವಲ್ಪ ಕಮ್ಮಿ ಇರುವಂತೆ ಕಾಯ್ದುಕೊಳ್ಳಬೇಕು. 2 ಕೆಜಿ ತೂಕ ಇಳಿಸಲು ಊಟ, ತಿಂಡಿ ನೀರಿಲ್ಲದೆ ದೇಹವನ್ನು ದಂಡಿಸಿ ನರಕಯಾತನೆ ಅನುಭವಿಸಿದ್ದಳು.
ದಯವಿಟ್ಟು ಬೇಗ ಮುಗಿಸಿ.. ನನಗೆ ಪಿಜ್ಹಾ ತಿನ್ನಬೇಕು..!
ಪದಕ ಗೆದ್ದ ತಕ್ಷಣ ಮೀರಾ ಭಾವುಕಳಾಗಿದ್ದಳು. ವರದಿಗಾರರ ಪ್ರಶ್ನೆಗೆ ಸಂತಸದಿಂದಲೇ ಉತ್ತರ ನೀಡುತ್ತಿದ್ದಳು. ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಿದ್ದಾಗ, ಮೀರಾ ದಯವಿಟ್ಟು ಬೇಗ ಮುಗಿಸಿ. ಹೊಟ್ಟೆ ಹಸಿಯುತ್ತಿದೆ. ಏನಾದ್ರೂ ತಿನ್ನಬೇಕು. ಎರಡು ಮೂರು ದಿನದಿಂದ ಏನು ತಿಂದಿಲ್ಲ ಅಂದಾಗ ಅತ್ತ ಕಡೆಯಿಂದ ಪಿಜ್ಹಾ ಹಿಡಿದುಕೊಂಡು ಒಬ್ಬ ಹುಡುಗ ಬಂದಿದ್ದ.
ಅದನ್ನು ನೋಡಿದ್ದ ತಕ್ಷಣ ಮೀರಾಳ ಖುಷಿಗೆ ಪಾರವೇ ಇರಲಿಲ್ಲ. ಕೊನೆಗೆ ಪತ್ರಕರ್ತರ ಜೊತೆ ಹರಟೆ ಹೊಡೆಯುತ್ತಲೇ ಪಿಜ್ಹಾ ತಿಂದು ಸಂಭ್ರಮಿಸಿದ್ದಳು. ಅಂದ ಹಾಗೇ ಈ ಪಿಜ್ಹಾವನ್ನು ಆರ್ಡರ್ ಮಾಡಿದ್ದು ಹಿರಿಯ ಪತ್ರಕರ್ತ ಬೊರಿಯಾ ಮಜುಂದಾರ್.
ನಿಜ, ಈ ಪಿಜ್ಹಾಗೂ ಮೀರಾಬಾಯಿಗೂ ಒಂಥರಾ ನಂಟಿದೆ. ಹಾಗಂತ ಮೀರಾ ಪ್ರತಿ ದಿನ ಪಿಜ್ಹಾ ತಿನ್ನಲ್ಲ. ಬರೀ ಡಯಟ್ ಫುಡ್ನಲ್ಲಿರುತ್ತಾಳೆ. ಆದ್ರೆ ಸ್ಪರ್ಧೆಯ ಯಶಸ್ಸಿನ ಸಂಭ್ರಮಕ್ಕೆ ಮಾತ್ರ ಪಿಜ್ಹಾ ತಿನ್ನುತ್ತಾಳೆ. ಸಾಮಾನ್ಯವಾಗಿ ವೇಟ್ ಲಿಫ್ಟರ್ಗಳು ಹೆಚ್ಚು ತಿನ್ನುತ್ತಾರೆ ಅಂತಾರೆ. ಆದ್ರೆ ನಾವು ತಿನ್ನುವುದು ಕಮ್ಮಿ. ತೂಕವನ್ನು ಕಾಯ್ದುಕೊಳ್ಳಲು ಡಯಟ್ ಫುಡ್ ತಿನ್ನಬೇಕಾಗುತ್ತದೆ ಅಂತಾಳೆ.
2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ನಂತರ ವರದಿಗಾರರ ಪ್ರಶ್ನೆಯೊಂದಕ್ಕೆ ಮೀರಾ ಉತ್ತರಿಸಿದ್ದು ಹೀಗೆ.. ಮೊದಲು ನಾನು ಪಿಜ್ಹಾ ತಿನ್ನುತ್ತೇನೆ. ತುಂಬಾ ದಿನಗಳಿಂದ ಪಿಜ್ಹಾ ತಿಂದಿಲ್ಲ ಎಂದಿದ್ದಳು. ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ನಂತರ ಮೀರಾಳಿಗೆ ಡೋಮಿನೊಸ್ ಕಂಪೆನಿಯೂ ಜೀವನ ಪೂರ್ತಿ ಉಚಿತವಾಗಿ ಫಿಜ್ಹಾ ನೀಡುವುದಾಗಿ ಘೋಷಣೆ ಮಾಡಿತ್ತು.
ಮೀರಾ ಬದುಕಿನ ಗಾಡ್ ಫಾದರ್ ಯಾರು..?
2016ರ ರಿಯೋ ಒಲಿಂಪಿಕ್ಸ್, ಮೀರಾ ಬದುಕಿನ ಕರಾಳ ಮತ್ತು ಕಹಿಯಾದ ಅಧ್ಯಾಯವಾಗಿತ್ತು. ಮೂರು ಯತ್ನಗಳಲ್ಲೂ ಭಾರ ಎತ್ತಲು ವಿಫಲವಾಗಿದ್ದಾಗ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಆಗ ಖಿನ್ನತೆಗೆ ಜಾರಿದ್ದ ಮೀರಾಳಿಗೆ ಧೈರ್ಯ ತುಂಬಿದ್ದು ಕೋಚ್ ವಿಜಯ್ ಶರ್ಮಾ. ಮೀರಾಳ ಪ್ರತಿ ಹೆಜ್ಜೆಯಲ್ಲೂ ವಿಜಯ್ ಶರ್ಮಾ ಬೆಂಬಲ ನೀಡಿದ್ರು. ಪರಿಣಾಮ ಟೋಕಿಯೋ ಒಲಿಂಪಿಕ್ಸ್ನ ಬೆಳ್ಳಿಯ ಪದಕವನ್ನು ಗುರುವಿನ ಕೊರಳಿಗೆ ಹಾಕಿ ಭಾವುಕಳಾಗಿದ್ದಳು.
ಇದೇ ವೇಳೆ, ಮೀರಾ ಧರಿಸಿದ್ದ ಒಲಿಂಪಿಕ್ಸ್ ರಿಂಗ್ಗಳ ಆಕಾರದ ಚಿನ್ನದ ಕಿವಿ ಓಲೆಗಳು ಸಾಕಷ್ಟು ಗಮನ ಸೆಳೆದಿದ್ದವು. ಇದರ ಹಿಂದಿನ ರಹಸ್ಯ ಏನು ಅಂದ್ರೆ ಮೀರಾ ತಾಯಿ ತನ್ನ ಮಗಳ ಒಲಿಂಪಿಕ್ಸ್ ಕನಸು ನಸನಾಗಲಿ ಎಂದು ತನ್ನ ಒಡವೆಯನ್ನು ಮಾರಿ ಮಗಳಿಗೆ ಒಲಿಂಪಿಕ್ ರಿಂಗ್ನಂತಿರುವ ಕಿವಿ ಓಲೆ ಮಾಡಿಸಿಕೊಟ್ಟಿದ್ದರು.
ಹÀಳ್ಳಿಯ ಚಿತ್ರಣವನ್ನೇ ಬದಲಾಯಿಸಿದ್ದ ಒಲಿಂಪಿಕ್ ಬೆಳ್ಳಿ ಪದಕ
ಮೀರಾ ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಮಣಿಪುರದ ನಾಂಗ್ಪೋಕ್ ಕಾಕ್ಚಿಂಗ್ ಹಳ್ಳಿಯಲ್ಲಿ ಬದಲಾವಣೆಯ ಪರ್ವ ಶುರುವಾಗಿತ್ತು. ಇಡೀ ಊರಿಗೆ ವಿದ್ಯುತ್ ಸಂಪರ್ಕ, ಪ್ರತಿ ಮನೆಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಣಿಪುರ ಸರ್ಕಾರ ಮಾಡಿತ್ತು.
ಹಾಗೇ ಮೀರಾ ಬಾಲ್ಯದಲ್ಲಿ ಸಂಚರಿಸುತ್ತಿದ್ದ ಗುಂಡಿ ಬಿದ್ದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಹಳ್ಳಿಯ ಸುತ್ತಮುತ್ತ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಜೊತೆಗೆ ಹಳ್ಳಿಯಲ್ಲಿ ಅತ್ಯಾಧುನಿಕ ಮಾದರಿಯ ವೇಟ್ ಲಿಫ್ಟಿಂಗ್ ತರಬೇತಿ ಕೇಂದ್ರ ಮತ್ತು ಕ್ರೀಡಾ ಸಂಕಿರ್ಣವನ್ನು ನಿರ್ಮಿಸಲಾಗಿದೆ.
ಅಷ್ಟೇ ಅಲ್ಲ, ಈ ಹಳ್ಳಿಯಲ್ಲಿ ಕೇಂದ್ರ ಸರ್ಕಾರ ಸುಮಾರು 30 ಕೋಟಿಯ ಹ್ಯಾಂಡ್ಲೂಮ್ ಕ್ಲಸ್ಟರ್ ಯೋಜನೆಗೆ ಅನುಮೋದನೆ ನೀಡಿದೆ. ಇದರಿಂದ ಈ ಹಳ್ಳಿಯ ನೂರಾರು ಬಡ ಮಹಿಳೆಯರು ಸ್ವಾವಲಂಬನೆಯ ಬದುಕು ರೂಪಿಸಲು ಸಾಧ್ಯವಾಗಲಿದೆ.
2020ರಲ್ಲಿ ತನಗೆ ಬಾಲ್ಯದಲ್ಲಿ ಮಾನವೀಯತೆಯ ನೆರವು ನೀಡಿದ್ದ ಸುಮಾರು 150 ಚಾಲಕರನ್ನು ಮನೆಗೆ ಕರೆದು ಮೀರಾಬಾಯಿ ಸತ್ಕರಿಸಿದ್ದಳು. ಈ ಮೂಲಕ ತನ್ನ ಬದುಕು ರೂಪಿಸಲು ಸಹಕರಿಸಿದ್ದ ಲಾರಿ ಚಾಲಕರಿಗೆ ಕೃತಜ್ಞತೆ ಸಲ್ಲಿಸಿದ್ದಳು.
ಮುಂದಿನ ಗುರಿ ಲಾಸ್ ಏಜಂಲೀಸ್ ಒಲಿಂಪಿಕ್ಸ್ ಮತ್ತು 2026ರ ಏಷ್ಯನ್ ಗೇಮ್ಸ್..!
ಮೀರಾಳ ಮುಂದಿನ ಗುರಿ ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆಲ್ಲುವುದು. ಇಲ್ಲಿಯ ತನಕ ಮೀರಾಳಿಗೆ ಏಷ್ಯನ್ ಗೇಮ್ಸ್ ಪದಕ ಮರೀಚಿಕೆಯಾಗಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಮತ್ತೆ ಪದಕ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದಾಳೆ.
ಬಿಲ್ಲುಗಾರಿಕೆಯ ಕನಸು…ವೇಟ್ ಲಿಫ್ಟಿಂಗ್ನಲ್ಲಿ ಸಾಧನೆ..!
ಮೀರಾಳ ಸಹೋದರರು ಪ್ರತಿ ದಿನ ಫುಟ್ಬಾಲ್ ಆಡುತ್ತಿದ್ದರು. ಆಟ ಮುಗಿಸಿ ಮನೆಗೆ ಬರುವಾಗ ಬಟ್ಟೆ ಎಲ್ಲಾ ಕೊಳಕು ಮಾಡಿಕೊಂಡು ಬರುತ್ತಿದ್ದರು. ಇದು ಪುಟಾಣಿ ಚಾನುಗೆ ಅಸಹ್ಯ ಹುಟ್ಟಿಸುತ್ತಿತ್ತು. ನಾನು ಮೈಗೆ ಕೆಸರು ಹಚ್ಚಿಕೊಳ್ಳುವ ಆಟ ಆಡಲ್ಲ. ನೋಡಲು ಶಿಸ್ತು, ಸ್ವಚ್ಛವಾಗಿ ಮತ್ತು ಸ್ಟೈಲೀಶ್ ಆಗಿರುವ ಆಟವನ್ನೇ ಆಡುತ್ತೇನೆ ಎಂದು ತಾಯಿಯ ಬಳಿ ಹೇಳಿಕೊಳ್ಳುತ್ತಿದ್ದಳು.
ಆರಂಭದಲ್ಲಿ ಮೀರಾಳಿಗೆ ವೇಟ್ ಲಿಫ್ಟರ್ ಆಗುವ ಸಣ್ಣ ಅಲೋಚನೆಯೂ ಇರಲಿಲ್ಲ ಪ್ರಸಿದ್ದ ಬಿಲ್ಲುಗಾರ್ತಿ ದೀಪಿಕಾ ಕುಮಾರಿಯ ಪೋಸ್ಟರ್ ನೋಡಿ ತಾನು ಒಬ್ಬ ಬಿಲ್ಲುಗಾರ್ತಿಯಾಗಬೇಕು ಎಂದು ಕನಸು ಕಾಣುತ್ತಿದ್ದಳು.
ಆದ್ರೆ ಇಂಫಾಲದ ಕ್ರೀಡಾ ಸಂಕೀರ್ಣದಲ್ಲಿ ಆರ್ಚೆರಿ ತರಬೇತಿ ಕೇಂದ್ರ ಇರಲಿಲ್ಲ. ಹೀಗಾಗಿ ಪಕ್ಕದಲ್ಲೇ ಇದ್ದ ವೇಟ್ ಲಿಫ್ಟಿಂಗ್ ಹಾಲ್ನಲ್ಲಿ ಭಾರತದ ಖ್ಯಾತ ವೇಟ್ ಲಿಫ್ಟರ್ ಕುಂಜುರಾಣಿ ದೇವಿಯ ಸಾಧನೆಯ ವಿಡಿಯೋಗಳನ್ನು ನೋಡಿದ ನಂತರ ಮೀರಾ ಮನಸ್ಸು ಬದಲಾಯಿಸಿದ್ದಳು.
ಮೊದಲ ಕೋಚ್ನ ಅಗ್ನಿಪರೀಕ್ಷೆ ಗೆದ್ದ ಚಾನು..!
ಬಿದಿರಿನ ಕೋಲಿನಿಂದಲೇ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಮೀರಾ, 13ನೇ ವಯಸ್ಸಿನಲ್ಲಿ ಇಂಫಾಲದ ಕ್ರೀಡಾ ಸಂಕೀರ್ಣದಲ್ಲಿ ಅಭ್ಯಾಸ ಶುರು ಮಾಡಿದ್ದಳು. ಆದ್ರೆ ಈ ಸಣ್ಣ ಹುಡುಗಿಯ ಶಕ್ತಿಯನ್ನು ಕೋಚ್ ಅನಿತಾ ಚಾನು ನಂಬಿರಲಿಲ್ಲ. ಹಾಗಾಗಿ ಮೀರಾಳಿಗೆ ಕಠಿಣ ಪರೀಕ್ಷೆಯನ್ನು ಒಡ್ಡಿದ್ದರು. ಪ್ರತಿ ದಿನ 4 ಕಿಲೋಮೀಟರ್ ದೂರ ಓಡಬೇಕು. ಹಾಗೇ ಜಿಮ್ನಲ್ಲಿದ್ದ ಭಾರವಾದ ತೂಕಗಳನ್ನು ಜೋಡಿಸಬೇಕು ಎಂದು ಹೇಳಿದ್ದರು. ಆದ್ರೆ ಮೀರಾ ಕೋಚ್ ಅನ್ನು ಅಚ್ಚರಿಗೊಳಿಸಿದ್ದಳು. ಒಂದು ತಿಂಗಳು ಕೋಚ್ ನೀಡಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಳು. ಆಕೆಯ ಶಿಸ್ತು, ಬದ್ದತೆ, ನಂಬಿಕೆಯನ್ನು ನೋಡಿ ಕೋಚ್ ಅನಿತಾ ಮೀರಾಳನ್ನು ಉಚಿತವಾಗಿ ಅಕಾಡೆಮಿಗೆ ಸೇರಿಸಿಕೊಂಡಿದ್ದರು.
ಶಾಲಾ ಪುಸ್ತಕಗಳಿಗಿಂತ ಕ್ರೀಡಾ ಪತ್ರಿಕೆಗಳೇ ಸರ್ವಸ್ವ..!
ಮೀರಾಬಾಯಿಗೆ ಬಾಲ್ಯದಲ್ಲೇ ಪಠ್ಯ ಪುಸ್ತಕದ ಮೇಲೆ ಆಸಕ್ತಿ ಇರಲಿಲ್ಲ. ಬ್ಯಾಗ್ನಲ್ಲಿ ಕುಂಜೂರಾಣಿ ಫೋಟೋ ಮತ್ತು ಕ್ರೀಡಾ ಮ್ಯಾಗಜೀನ್ಗಳನ್ನಿಟ್ಟುಕೊಳ್ಳುತ್ತಿದ್ದಳು. ಕುಂಜುರಾಣಿಯ ಸಾಧನೆಗಳೇ ಮೀರಾಳಿಗೆ ಪಾಠಕ್ಕಿಂತ ದೊಡ್ಡ ಪ್ರೇರಣೆಯಾಗಿದ್ದವು.
ಯಾರು ಈ ಮೀರಬಾಯಿ ಚಾನು..!
ಮಣಿಪುರದ ಇಂಫಾಲದ ನಾಂಗ್ಪೋಕ್ ಕಾಕ್ಚಿಂಗ್ ಎಂಬ ಸಣ್ಣ ಹಳ್ಳಿಯೇ ಮೀರಾಳ ಹುಟ್ಟೂರು. ತಂದೆ ಪಿಡಬ್ಲ್ಯೂಡಿ ಇಲಾಖೆಯ ದಿಗೂಲಿ ಕಾರ್ಮಿಕ. ತಾಯಿ ಹಳ್ಳಿಯಲ್ಲಿಯೇ ಟೀ ಅಂಗಡಿ ನಡೆಸುತ್ತಿದ್ದರು. ಒಟ್ಟು ಆರು ಮಕ್ಕಳಲ್ಲಿ ಮೀರಾ ಕೊನೆಯವಳು. ಹಾಗಾಗಿ ಸಹೋದರ, ಸಹೋದರಿಯರ ಪ್ರೀತಿಯ ತಂಗಿಯಾಗಿದ್ದಳು. ಅಲ್ಲದೆ ಮೀರಬಾಯಿ ಎಂದು ಅಕ್ಕನೇ ತಂಗಿಗೆ ಹೆಸರಿಟ್ಟಿದ್ದಳು.
ಮೀರಾಳ “ಬಾಹುಬಲಿ” ಶಕ್ತಿಯನ್ನು ಗುರುತಿಸಿದ್ದ ಅಣ್ಣ..!
ಕುಟುಂಬದಲ್ಲಿ ಅಣ್ಣ – ತಂಗಿಯಂದಿರ ಜಗಳ ಮಾಮೂಲಿ. ಹಾಗೇ ಮೀರಾ ಕುಟುಂಬದಲ್ಲೂ ಒಬ್ಬರಿಗೊಬ್ಬರು ಜಗಳವಾಡುತ್ತಾಲೇ ಆಡುತ್ತಿದ್ದರು. ಆದ್ರೆ ಸಣ್ಣ ವಯಸ್ಸಿನಲ್ಲೂ ಇವರಿಗೆ ಮನೆಯ ಬಡತನದ ಅರಿವಿತ್ತು. ಹೀಗಾಗಿ ಕಾಡಿನಿಂದ ಕಟ್ಟಿಗೆ ಕಡಿದುಕೊಂಡು ಬರುವುದು ಇವರಿಗೆ ದಿನ ನಿತ್ಯದ ಕೆಲಸವಾಗಿತ್ತು. ಆಗ ತಂಗಿಗೆ ಮೀರಾಗೆ ಅಣ್ಣ ಸುಖೋಮ್ ಕಾವಲುಗಾರನಾಗಿದ್ದ.
ಒಂದು ದಿನ ಭಾರವಾದ ಸೌದೆ ಕಟ್ಟನ್ನು ಎತ್ತಲು ಅಣ್ಣನಿಗೆ ಸಾಧ್ಯವಾಗಲಿಲ್ಲ. ಆದ್ರೆ ಮೀರಾ ಆ ಸೌದೆಯ ಕಟ್ಟನ್ನು ಸುಲಭವಾಗಿ ಎತ್ತಿಕೊಂಡು ಬಂದಿದ್ದಳು. ಇದರಿಂದ ಆಶ್ಚರ್ಯಗೊಂಡ ಸುಖೋಯ್ ತಂಗಿಗೆ ವೇಟ್ ಲಿಫ್ಟಿಂಗ್ನತ್ತ ಗಮನ ಹರಿಸುವಂತೆ ಸಲಹೆ ನೀಡಿದ್ದ. ಅಲ್ಲದೆ ಜೀಮ್ಗೆ ಸೇರಿಸುವಂತೆ ಹೆತ್ತವರಿಗೆ ಒತ್ತಾಯ ಮಾಡಿದ್ದ.
ಹೀಗೆ, ಅಣ್ಣನ ಕನಸನ್ನು ಭಗ್ನಗೊಳಿಸಲಿಲ್ಲ. ಅಪ್ಪ- ಅಮ್ಮನ ತ್ಯಾಗ, ವಾತ್ಸಲ್ಯಕ್ಕೆ ದಕ್ಕೆಯನ್ನುಂಟು ಮಾಡಲಿಲ್ಲ. ಗುರುವಿನ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. ತನಗೆ ನೆರವು ನೀಡಿದವರನ್ನು ಎಂದಿಗೂ ಮರೆಯಲಿಲ್ಲ. ಅಕ್ಕಂದಿರ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ. ಎಲ್ಲರ ಮುಖದಲ್ಲೂ ಮಂದಹಾಸ ಬೀರುವಂತೆ ಮಾಡಿದ್ದಾಳೆ.
ವಯಸ್ಸಿನಲ್ಲಿ ಕಿರಿಯವಳು. ಆದ್ರೆ ಇಡೀ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಳೆ. ಇವತ್ತು ಮೀರಾ ಮನೆಯಲ್ಲಿ ಬಡತನ ಮಾಯವಾಗಿದೆ. ಹುಟ್ಟೂರು ಮಾದರಿ ಗ್ರಾಮವಾಗಿ ಬದಲಾಗಿದೆ. ಆಕೆಯ ಸಾಧನೆ ಯುವ ಕನಸುಗಳಿಗೆ ಪ್ರೇರಣೆಯಾಗಿದೆ.
ಒಟ್ಟಿನಲ್ಲಿ ಕಬ್ಬಿಣದ ಭಾರ ಎತ್ತುವ ಮೂಲಕ ಚಿನ್ನ, ಬೆಳ್ಳಿಯ ಪದಕಗಳು ನಿನ್ನ ಕೊರಳಿಗೆ ಮಾಲೆಯಾಗಿವೆ. ತ್ಯಾಗ, ಶಿಸ್ತು, ಪರಿಶ್ರಮ, ಮಾನವೀಯತೆ ಗುಣಗಳು ನಿನ್ನ ವ್ಯಕ್ತಿತ್ವವನ್ನು ಅಲಂಕರಿಸಿವೆ. ನಿನ್ನ ಅಪ್ರತಿಮ ಸಾಧನೆಗಳು ಭಾರತದ ಮುಕುಟಕ್ಕೆ ಗರಿಗಳಾಗಿ ಸೇರಿಕೊಂಡಿವೆ.
ಮೀರಾಬಾಯಿ ಚಾನು… ಅದಕ್ಕಾಗಿ ಅಂದಿರೋದು ನೀನು ಭಾರತೀಯ ವೇಟ್ ಲಿಫ್ಟಿಂಗ್ನ ಯುವರಾಣಿ ಅಂತ..!
ಸನತ್ ರೈ








