ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ ತಿರುಮಲ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ತಲೆಬೋಳಿಸಿಕೊಂಡು ತನ್ನ ಗೆಳತಿಯ ಜೊತೆ ಬೆಳಗ್ಗಿನ ಸುಪ್ರಭಾತ ಪೂಜೆಯಲ್ಲಿ ಭಾಗಿಯಾಗಿದ್ದರು. ಸಾಂಪ್ರದಾಯಿಕ ಬಿಳಿ ಉಡುಪನ್ನು ಧರಿಸಿದ್ದ ಈ ಜೋಡಿಯ ಫೋಟೋಗಳು ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ತಿರುಪತಿ ತಿಮ್ಮಪ್ಪನಿಗೆ ಅನೇಕ ಭಕ್ತರು ಮುಡಿಕೊಡುವ ಮೂಲಕ ತನ್ನ ನಂಬಿಕೆ, ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಇದೀಗ ಪಾಂಡ್ಯ ತಲೆಬೋಳಿಸಿಕೊಂಡಿರುವ ಕಾರಣವನ್ನು ಹೇಳಿಕೊಂಡಿಲ್ಲ. ಆದ್ರೆ ಕಷ್ಟ ಬಂದಾಗ ವೆಂಕಟರಮಣ ಎಂಬಂತೆ ಹಾರ್ದಿಕ್ ಪಾಂಡ್ಯ ಅವರು ತನ್ನ ಸಂಕಷ್ಟ ಕಾಲದಲ್ಲಿ ಬಾಲಾಜಿಯ ಮೊರೆ ಹೋಗಿದ್ದಾರೆ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಅವರು ತಮ್ಮ ವೃತ್ತಿ ಜೀವನದ ನಿರ್ಣಾಯಕ ಘಟ್ಟದಲ್ಲಿದ್ದಾರೆ. 2026ರ ಐಪಿಎಲ್ನಲ್ಲಿ ಬೆನ್ನು ನೋವು ಮತ್ತು ತೊಡೆಯ ಗಾಯದಿಂದ ಬಳಲುತ್ತಿದ್ದರು. ಹೀಗಾಗಿ ಟೀಮ್ ಇಂಡಿಯಾ ಟೀಮ್ ಇಂಡಿಯಾದಿಂದಲೂ ಹೊರಗುಳಿದಿದ್ದಾರೆ. ಇದೀಗ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಪುನರ್ವಸತಿಯಲ್ಲಿ ಭಾಗಿಯಾಗಿದ್ದು, ತಂಡವನ್ನು ಸೇರಿಕೊಳ್ಳುವ ಹಾದಿಯಲ್ಲಿದ್ದಾರೆ.
ಈಗಾಗಲೇ, ಅಫಘಾನಿಸ್ತಾನ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದದ ವೈಟ್ ಬಾಲ್ ಸರಣಿಗಳನ್ನು ಪಾಂಡ್ಯ ಮಿಸ್ ಮಾಡಿಕೊಂಡಿದ್ದರು. ಹಾರ್ದಿಕ್ ಪಾಂಡ್ಯ ಅದ್ಭುತ ಆಲ್ ರೌಂಡರ್ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಟ್ ಮತ್ತು ಚೆಂಡಿನಲ್ಲಿ ತಂಡಕ್ಕೆ ಆಧಾರವಾಗಿದ್ದ ಪಾಂಡ್ಯ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳುವ ಉಮೇದಿನಲ್ಲಿದ್ದಾರೆ. ಇದೀಗ ತನ್ನ ಸಂಕಷ್ಟಗಳು ನಿವಾರಣೆಯಾಗಲಿ ಅಂತ ಬಾಲಾಜಿಯ ದರ್ಶನ ಮಾಡಿದ್ದಾರೆ.







