ಮುಂಬೈ, ಆಗಸ್ಟ್ 03, 2026: ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳ ಸಹಿತ ಒಟ್ಟು 39 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಬಾಕ್ಸಿಂಗ್ನಲ್ಲಿ ಭಾರತ ದಾಖಲೆಯ ಪ್ರದರ್ಶನ ತೋರಿದರೆ, ಪ್ಯಾರಾ ಕ್ರೀಡಾಪಟುಗಳೂ ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲೇ ಅತ್ಯುತ್ತಮ ನಿರ್ವಹಣೆಯನ್ನು ನೀಡಿದ್ದಾರೆ.
ರಿಲಯನ್ಸ್ ಫೌಂಡೇಶನ್ನ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಎಂ. ಅಂಬಾನಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, “ಪ್ರತಿಯೊಂದು ಪದಕದ ಹಿಂದೆ ಅಸಾಧಾರಣ ಪರಿಶ್ರಮ, ದೃಢಸಂಕಲ್ಪ, ತ್ಯಾಗ ಮತ್ತು ಎಂದಿಗೂ ಸೋಲೊಪ್ಪದ ಭಾರತದ ಮನೋಭಾವ ಅಡಗಿದೆ. ನಮ್ಮ ಕ್ರೀಡಾಪಟುಗಳು ಮತ್ತೊಮ್ಮೆ ಇಡೀ ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಮಹಿಳಾ ಕ್ರೀಡಾಪಟುಗಳು ಹಾಗೂ ಪ್ಯಾರಾ ಅಥ್ಲೀಟ್ಗಳ ಸಾಧನೆಯನ್ನು ಅವರು ವಿಶೇಷವಾಗಿ ಶ್ಲಾಘಿಸಿದ್ದಾರೆ. ಅಲ್ಲದೆ ರಿಲಯನ್ಸ್ ಫೌಂಡೇಶನ್ಗೆ ಸೇರಿದ ಲವ್ಲಿನಾ ಬೊರ್ಗೊಹೈನ್, ಮುರಳಿ ಶ್ರೀಶಂಕರ್ ಹಾಗೂ ತೇಜಸ್ವಿನ್ ಶಂಕರ್ ಅವರ ಅತ್ಯುತ್ತಮ ಪ್ರದರ್ಶನಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ. “ರಿಲಯನ್ಸ್ ಫೌಂಡೇಶನ್ನಲ್ಲಿ ನಾವು ತಳಮಟ್ಟದಿಂದ ಜಾಗತಿಕ ಮಟ್ಟದವರೆಗೆ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ಮೂಲಕ ಪ್ರತಿಯೊಬ್ಬ ಅಥ್ಲೀಟ್ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸಲು ನೆರವಾಗುವ ನಂಬಿಕೆಯನ್ನು ಹೊಂದಿದ್ದೇವೆ” ಎಂದಿದ್ದಾರೆ.
2030ರಲ್ಲಿ ಅಹಮದಾಬಾದ್ನಲ್ಲಿ ನಡೆಯಲಿರುವ ಶತಮಾನೋತ್ಸವ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯ ವಹಿಸಲು ಭಾರತ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಚಾಂಪಿಯನ್ಗಳು ಹೊಸ ತಲೆಮಾರಿನ ಕನಸುಗಳಿಗೆ ಹೊಸ ಚೈತನ್ಯ ತುಂಬಿದ್ದಾರೆ. ಅವರ ಸಾಧನೆಗಳು ಭಾರತದ ಕ್ರೀಡಾ ಪಯಣದ ಆರಂಭವಷ್ಟೇ ಆಗಿದ್ದು, ನಮ್ಮ ಅತ್ಯುತ್ತಮ ಸಾಧನೆಗಳು ಇನ್ನೂ ಮುಂದೆ ಇವೆ ಎಂಬುದನ್ನು ನೆನಪಿಸುತ್ತವೆ.
ಅವರ ಯಶಸ್ಸು ಪ್ರತಿಯೊಬ್ಬ ಯುವ ಭಾರತೀಯನಿಗೂ ನಿರ್ಭಯವಾಗಿ ಕನಸು ಕಾಣಲು, ಅವಿರತವಾಗಿ ಶ್ರಮಿಸಲು ಹಾಗೂ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಎತ್ತಿಹಿಡಿಯಲು ಸ್ಫೂರ್ತಿಯಾಗಲಿ. ಜೈ ಹಿಂದ್!” ಎಂದು ನೀತಾ ಅಂಬಾನಿ ಅವರು ಹೇಳಿದ್ದಾರೆ.








