ಬೆಂಗಳೂರು: ಬಿಡದಿಯ 35 ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರ ವಿರುದ್ಧ ಕಾಂಗ್ರೆಸ್ನ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ನಟ ಸಾರ್ವಭೌಮ’ ಮತ್ತು ‘ನಾಟಕರತ್ನ’ ಎಂದು ಕರೆದಿರುವ ಅವರು, ವಿಧಾನಸಭೆ ಅಧಿವೇಶನದಲ್ಲಿ ಬಿಡದಿ ವಿಚಾರ ಚರ್ಚೆಗೆ ಬರುವುದನ್ನು ರೋಚಕ ನಾಟಕಕ್ಕೆ ಹೋಲಿಸಿ ಕಟುವಾಗಿ ಲೇವಡಿ ಮಾಡಿದ್ದಾರೆ.
ಸದನದಲ್ಲಿ ಪ್ರದರ್ಶನಗೊಳ್ಳಲಿದೆ ಬಿಡದಿ ಮಹಾನಾಟಕ
ಬಿಡದಿಯ ಭೂಮಿ ವಿಚಾರವಾಗಿ ಪ್ರತಿಪಕ್ಷಗಳು ಸದನದಲ್ಲಿ ವಿಷಯ ಪ್ರಸ್ತಾಪಿಸಲು ಸಿದ್ಧತೆ ನಡೆಸಿರುವುದನ್ನು ಟೀಕಿಸಿದ ಪ್ರದೀಪ್ ಈಶ್ವರ್, ನಾಳೆಯಿಂದ ವಿಧಾನಮಂಡಲದ ಕಲಾಪದಲ್ಲಿ ‘ಬಿಡದಿ ನಾಟಕ’ ಆರಂಭವಾಗಲಿದೆ. ಈ ನಾಟಕಕ್ಕೆ ಮುಖ್ಯ ಪಾತ್ರಧಾರಿ ಹಾಗೂ ಕಥಾನಾಯಕ ಬೇರೆ ಯಾರೂ ಅಲ್ಲ, ಸ್ವತಃ ಎಚ್.ಡಿ. ಕುಮಾರಸ್ವಾಮಿ ಅವರೇ. ಇನ್ನು ಹಿನ್ನೆಲೆಯಲ್ಲಿ ಕುತಂತ್ರ ನಡೆಸುವ ‘ಶಕುನಿ’ ಪಾತ್ರವನ್ನು ಬಿಜೆಪಿ ನಾಯಕ ಆರ್. ಅಶೋಕ್ ನಿರ್ವಹಿಸಲಿದ್ದಾರೆ. ಮಹಾಭಾರತದ ‘ದುಶ್ಯಾಸನ’ನ ಪಾತ್ರಕ್ಕೆ ಎಂಎಲ್ಸಿ ರವಿಕುಮಾರ್ ಅಥವಾ ಛಲವಾದಿ ನಾರಾಯಣಸ್ವಾಮಿ ಬರಲಿದ್ದಾರೆ ಎಂದು ಪ್ರದೀಪ್ ಈಶ್ವರ್ ಪಾತ್ರಗಳನ್ನು ಹಂಚಿ ಹಾಸ್ಯಾಸ್ಪದವಾಗಿ ಟೀಕಿಸಿದ್ದಾರೆ.
ಈ ಇಡೀ ನಾಟಕದ ರಂಗಸಜ್ಜಿಕೆಯು ನಿಖಿಲ್ ಕುಮಾರಸ್ವಾಮಿ ಅವರಿಗೆ ಸೇರಿದ 35 ಎಕರೆ ಜಮೀನಿನ ಅಂಗಳದಲ್ಲೇ ನಡೆಯಲಿದೆ ಎಂದು ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಅವರ ಕೈಗಡಿಯಾರದ ವಿಚಾರವನ್ನು ಎಳೆದುತಂದ ಶಾಸಕರು, ಸಮಯ ನನ್ನ ವಾಚ್ನಲ್ಲಿ 75 ಲಕ್ಷ ರೂಪಾಯಿ ತೋರಿಸಬಹುದು, ಆದರೆ ಕುಮಾರಣ್ಣ ಹಾಕುವ ಸಿಂಪಲ್ ವಾಚ್ನಲ್ಲಿ ಸರಿಯಾದ ಸಮಯ ತೋರಿಸುತ್ತದೆ. ಹಾಗಾಗಿ ಈ ನಾಟಕ ಯಾವ ಸಮಯಕ್ಕೆ ಆರಂಭವಾಗಬೇಕು ಎಂಬುದನ್ನು ಕುಮಾರಸ್ವಾಮಿ ಅವರೇ ತಮ್ಮ ಸಿಂಪಲ್ ವಾಚ್ ನೋಡಿ ನಿಗದಿ ಮಾಡಲಿ ಎಂದು ಸವಾಲು ಎಸೆದಿದ್ದಾರೆ.
ಬಿಡದಿ ಟೌನ್ಶಿಪ್ ಮತ್ತು ಜಮೀನಿನ ವಿಚಾರವು ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕಲಾಪದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ-ಜೆಡಿಎಸ್ ಪ್ಲಾನ್ ಮಾಡಿದೆ. ಆದರೆ ಕಲಾಪ ನಡುವೆ ಪ್ರದೀಪ್ ಈಶ್ವರ್ ಅವರು ಪ್ರತಿಪಕ್ಷ ನಾಯಕರನ್ನೇ ನಾಟಕದ ಪಾತ್ರಧಾರಿಗಳನ್ನಾಗಿ ಮಾಡಿ ದಾಳಿ ನಡೆಸಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ. ಬಿಡದಿ ವಿಷಯ ಕಲಾಪಕ್ಕೆ ಬರುತ್ತಿದ್ದಂತೆ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ಮತ್ತು ಭಾರಿ ಗದ್ದಲ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.







