ಬಾಗಲಕೋಟೆ: ಆರ್ಎಸ್ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರ್ಎಸ್ಎಸ್ ನಾಯಕರ ನಡೆಯನ್ನು ‘ಭಂಡತನ’ ಎಂದು ಕರೆದಿರುವ ಸಚಿವ ವಿಜಯಾನಂದ ಕಾಶಪ್ಪನವರು, ಕಳ್ಳ ದುಡ್ಡನ್ನು ಬಚ್ಚಿಟ್ಟುಕೊಳ್ಳಲು ಸಂಘಟನೆಯನ್ನು ನೋಂದಣಿ ಮಾಡಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಳ್ಳ ದುಡ್ಡಿನ ರಕ್ಷಣೆಗೆ ನೋಂದಣಿ ನಿರಾಕರಣೆ
ಬಾಗಲಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಆರೆಸ್ಸೆಸ್ಗೆ ಅಪಾರ ಪ್ರಮಾಣದ ಕಳ್ಳ ದುಡ್ಡು ಬರುತ್ತಿದೆ. ಒಂದೊಮ್ಮೆ ಸಂಘಟನೆಯನ್ನು ಅಧಿಕೃತವಾಗಿ ನೋಂದಣಿ ಮಾಡಿಸಿದರೆ, ಈ ಅಕ್ರಮ ಹಣ ಎಲ್ಲಿಂದ ಬರುತ್ತದೆ ಎಂಬ ಸತ್ಯ ಸರ್ಕಾರಕ್ಕೆ ಗೊತ್ತಾಗುತ್ತದೆ. ಈ ಕಪ್ಪು ಹಣವನ್ನು ರಕ್ಷಣೆ ಮಾಡಿಕೊಳ್ಳುವ ಒಂದೇ ಒಂದು ಉದ್ದೇಶದಿಂದಲೇ ಅವರು ನೋಂದಣಿ ಮಾಡಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದರು.
ಸಂವಿಧಾನ ಮತ್ತು ಕಾನೂನಿನ ಅರಿವೇ ಇಲ್ಲ
ಆರ್ಎಸ್ಎಸ್ನವರಿಗೆ ದೇಶದ ಸಂವಿಧಾನ ಮತ್ತು ಕಾನೂನಿನ ಬಗ್ಗೆ ಕನಿಷ್ಠ ಗೌರವ ಹಾಗೂ ಅರಿವು ಇದೆಯಾ ಎಂದು ಪ್ರಶ್ನಿಸಿದ ಕಾಶಪ್ಪನವರ್, ನಾವು ಸಂವಿಧಾನದ ಅಡಿಯಲ್ಲಿ ಇರುವ ಪ್ರಜೆಗಳು ಎಂದು ಹೇಳಿಕೊಳ್ಳುವ ಇವರು ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಅದಕ್ಕೇ ಇವರನ್ನು ಭಂಡರು ಎನ್ನುವುದು. ಇವರಿಗೆ ಸಂವಿಧಾನವೂ ಬೇಕಾಗಿಲ್ಲ, ಕಾನೂನೂ ಬೇಕಾಗಿಲ್ಲ. ಯಾವುದೇ ಸಂಘಟನೆ ಇರಲಿ, ಅದಕ್ಕೊಂದು ಹೆಸರಿರಬೇಕು ಮತ್ತು ಸರ್ಕಾರದ ಬಳಿ ನೋಂದಣಿ ಇರಬೇಕು. ಅಂದಾಗ ಮಾತ್ರ ಅದು ಅಧಿಕೃತ ಎನಿಸಿಕೊಳ್ಳುತ್ತದೆ. ನಮ್ಮ ಗೃಹ ಸಚಿವರು ಸಂಘಟನೆಗಳ ಕಡ್ಡಾಯ ನೋಂದಣಿಗೆ ಕಾನೂನು ತರಲು ಹೊರಟಿದ್ದಾರೆ ಎಂದು ಸ್ಪಷ್ಟಪಡಿಸಿದರು.
12 ವರ್ಷದಲ್ಲಿ ಬಿಜೆಪಿಗೆ ಅಷ್ಟೊಂದು ಹಣ ಬಂದಿದ್ದಾದರೂ ಎಲ್ಲಿಂದ?
ಆರ್ಎಸ್ಎಸ್ ಮತ್ತು ಬಿಜೆಪಿಗೆ ಬರುವ ಹಣದ ಮೂಲವನ್ನು ಪ್ರಶ್ನಿಸಿದ ಸಚಿವರು, ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ, 70 ವರ್ಷ ಆಡಳಿತ ನಡೆಸಿದೆ. ಆದರೆ ಕೇವಲ 12 ವರ್ಷಗಳಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿಗೆ ಅಷ್ಟೊಂದು ಅಪಾರ ಪ್ರಮಾಣದ ದುಡ್ಡು ಎಲ್ಲಿಂದ ಬಂತು? ಎಂಬುದನ್ನು ಅವರು ಸಾರ್ವಜನಿಕವಾಗಿ ತೋರಿಸಲಿ, ಲೆಕ್ಕ ಕೊಡಲಿ ಎಂದು ಸವಾಲೆಸೆದರು. ಕೈಯಲ್ಲಿ ಬಡಿಗೆ ಹಿಡಿದುಕೊಂಡು ನೀಡುವ ತರಬೇತಿ ದೇಶದ ರಕ್ಷಣೆಗಾ? ಸ್ವಾತಂತ್ರ್ಯ ಚಳವಳಿಯ ವೇಳೆಯೂ ಇವರು ದೇಶದ ವಿರುದ್ಧವಾಗಿ ನಡೆದುಕೊಂಡಿದ್ದರು. ಇವತ್ತಿಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಗೌರವ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
ಆರೆಸ್ಸೆಸ್ ವಿರುದ್ಧ ಕ್ರಮಕ್ಕೆ ಕಾಲ ಬರಲಿದೆ
ಧೈರ್ಯವಿದ್ದರೆ ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಬಿಜೆಪಿ ನಾಯಕರ ಸವಾಲಿಗೆ ಉತ್ತರಿಸಿದ ಕಾಶಪ್ಪನವರ್, ಪ್ರತಿಯೊಂದಕ್ಕೂ ಸೂಕ್ತ ಕಾಲ ಬರಲಿದೆ. ತಕ್ಷಣವೇ ಎಲ್ಲವೂ ಆಗುವುದಿಲ್ಲ. ಮೊದಲು ಸರಿಯಾದ ಕಾನೂನು ರೂಪಿಸಲಾಗುತ್ತದೆ, ಆ ಬಳಿಕ ಖಂಡಿತವಾಗಿಯೂ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ನಮ್ಮ ಸರ್ಕಾರ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ತತ್ವದಂತೆ ಎಲ್ಲರನ್ನೂ ಅಪ್ಪಿಕೊಳ್ಳುವ ಕೆಲಸ ಮಾಡುತ್ತದೆ. ಆದರೆ ಆರ್ಎಸ್ಎಸ್ ಬೆದರಿಕೆ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.







