ಮಾಸ್ ಮಹಾರಾಜ ರವಿ ತೇಜ ಅಭಿನಯದ ಇತ್ತೀಚಿನ ಚಿತ್ರ ಇರುಮುಡಿ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿರುವ ಈ ಸಿನಿಮಾವನ್ನು ಈಗ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹಾಡಿ ಹೊಗಳಿದ್ದಾರೆ. ಸಿನಿಮಾ ನೋಡಿದ ಬಳಿಕ ಅತ್ಯಂತ ಭಾವುಕರಾಗಿರುವ ರಶ್ಮಿಕಾ, ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ರಶ್ಮಿಕಾ, ನನಗೆ ಇರುಮುಡಿ ಸಿನಿಮಾ ನೋಡುವ ಅದ್ಭುತ ಅವಕಾಶ ಸಿಕ್ಕಿತು. ಇದೊಂದು ಅತ್ಯಂತ ಸುಂದರವಾದ ಮತ್ತು ಭಾವನಾತ್ಮಕ ಸಿನಿಮಾ. ನಾನು ಊಹಿಸಿದಕ್ಕಿಂತಲೂ ಹೆಚ್ಚಾಗಿ ಈ ಚಿತ್ರ ನನ್ನ ಮನಸ್ಸನ್ನು ಕಲಕಿದೆ. ಅದರಲ್ಲೂ ಸಣ್ಣ ನಗರಗಳಲ್ಲಿ ಬೆಳೆಯುವ ಮಕ್ಕಳು ತಮಗಾಗುವ ತೊಂದರೆಗಳನ್ನು ಮುಗ್ಧತೆಯಿಂದ ಹಿರಿಯರ ಬಳಿ ಹೇಳಿಕೊಂಡಾಗ, ನಂತರದ ವಾಸ್ತವವೇ ಬೇರೆಯಾಗಿರುತ್ತದೆ. ಯಾವುದೇ ಪರಿಸ್ಥಿತಿಯಲ್ಲೂ ಸುಮ್ಮನಿರಲು ಅವರಿಗೆ ಹೇಳುವ ಸಮಾಜದ ನಡೆಯನ್ನು ಈ ಸಿನಿಮಾ ಕಣ್ಣಿಗೆ ಕಟ್ಟುವಂತೆ ತೋರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ರಶ್ಮಿಕಾ, ಈ ಚಿತ್ರವು ಸಮಾಜದಲ್ಲಿ ಪ್ರತಿಯೊಬ್ಬರೂ ಚರ್ಚಿಸಬೇಕಾದ ಗಂಭೀರ ವಿಷಯವನ್ನು ಒಳಗೊಂಡಿದೆ. ರವಿ ತೇಜ ಸರ್ ಅವರ ಅಭಿನಯ ಅದ್ಭುತವಾಗಿದೆ, ನಿಮ್ಮ ಈ ಯಶಸ್ಸಿಗೆ ಅಭಿನಂದನೆಗಳು. ಚಿತ್ರದಲ್ಲಿ ಕಾಣಿಸಿಕೊಂಡಿರುವ ಪುಟ್ಟ ಬಾಲಕಿ ನಕ್ಷತ್ರ ಅವರ ಮುಗುಳುನಗು ನನ್ನ ಮುಖದಲ್ಲೂ ಮಂದಹಾಸ ತರಿಸಿತು. ಇಂತಹ ಅದ್ಭುತ ಕಥೆಯನ್ನು ತೆರೆಯ ಮೇಲೆ ತಂದ ನಿರ್ದೇಶಕ ಶಿವ ನಿರ್ವಾಣ ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಕಡೆಯಿಂದ ದೊಡ್ಡ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಶಿವ ನಿರ್ವಾಣ ನಿರ್ದೇಶನದ ಈ ಚಿತ್ರದಲ್ಲಿ ರವಿ ತೇಜ ಜೊತೆಗೆ ಪ್ರಿಯಾ ಭವಾನಿ ಶಂಕರ್, ಸಾಯಿ ಕುಮಾರ್, ಅಜಯ್ ಘೋಷ್ ಮತ್ತು ಸ್ವಾಸಿಕಾ ವಿಜಯ್ ಸೇರಿದಂತೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಸಿನಿಮಾ ಬಿಡುಗಡೆಯಾದಾಗಿನಿಂದಲೂ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದ್ದು, ಈಗ ರಶ್ಮಿಕಾ ಮಂದಣ್ಣ ಅವರ ಈ ಭಾವುಕ ಮಾತುಗಳು ಚಿತ್ರದ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಅವರ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.








