ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ಭೂ ಮಾಲೀಕರಿಗೆ ಸಿಎಂ ಡಿಕೆಶಿ ನಿವೇಶನ ಪತ್ರ ಹಂಚಿಕೆ
ಬೆಂಗಳೂರು- ಆಗಸ್ಟ್ 31- ಬೆಂಗಳೂರು ಕನಸಿನ ನಗರ. ಇಡೀ ವಿಶ್ವವೇ ಬೆಂಗಳೂರನ್ನು ನೋಡುತ್ತಿದೆ. ಬೆಂಗಳೂರು ಜಗತ್ತಿನ ಪ್ರಮುಖ ನಗರವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯ ಹಿಂದೆ ಸಾವಿರಾರು ರೈತರು, ಭೂ ಮಾಲೀಕರ ಕೊಡುಗೆ ಇದೆ. ಹೀಗಾಗಿ ಅಭಿವೃದ್ಧಿಯ ಜೊತೆಗೆ ಭೂಮಿ ಕೊಟ್ಟವರ ಕುಟುಂಬಗಳ ಬದುಕು ಬೆಳೆಯಬೇಕು. ಅಭಿವೃದ್ಧಿಯ ಫಲದಲ್ಲಿ ಅವರಿಗೂ ನ್ಯಾಯಯುತ ಪಾಲು ಸಿಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಇಂದು ಬೆಂಗಳೂರಿನ ನೆಹರೂ ತಾರಾಲಯದ ಯು.ಆರ್. ಭವನದಲ್ಲಿ ನಡೆದ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ಭೂ ಮಾಲೀಕರಿಗೆ ನಿವೇಶನ ಹಂಚಿಕೆ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಮಿ ನೀಡಿದ ರೈತರ ಕೊಡುಗೆಯನ್ನು ಸರ್ಕಾರ ಎಂದಿಗೂ ಮರೆಯುವುದಿಲ್ಲ. ಅವರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಇದು ಕೇವಲ ನಿವೇಶನ ಹಂಚಿಕೆಯ ಪತ್ರ ವಿತರಿಸುವ ಕಾರ್ಯಕ್ರಮವಲ್ಲ. ಹಲವು ವರ್ಷಗಳಿಂದ ಕಾಯುತ್ತಿರುವ ಭೂ ಮಾಲೀಕರ ನಿರೀಕ್ಷೆಗಳಿಗೆ ಉತ್ತರ ನೀಡುವ ದಿನ. ಬೆಂಗಳೂರಿನ ಅಭಿವೃದ್ಧಿಗಾಗಿ ಭೂಮಿ ನೀಡಿದವರಿಗೆ ಅಭಿವೃದ್ಧಿಯಲ್ಲೇ ಪಾಲು ನೀಡುವ ದಿನವಾಗಿದೆ ಎಂದರು.
ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ಯೋಜನೆ ಹಲವು ವರ್ಷಗಳಿಂದ ಭೂ ಸ್ವಾಧೀನ, ಕಾನೂನು ವ್ಯಾಜ್ಯಗಳು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳ ನಡುವೆ ಸಾಗಿ ಬಂದಿದೆ. ಕಾನೂನು ಮತ್ತು ನ್ಯಾಯಾಲಯದ ನಿರ್ದೇಶನಗಳನ್ನು ಗೌರವಿಸುತ್ತಲೇ, ಅರ್ಹ ಭೂ ಮಾಲೀಕರ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಅನಗತ್ಯ ವಿಳಂಬಕ್ಕೆ ಅವಕಾಶ ನೀಡದೇ ದಾಖಲೆಗಳ ಆಧಾರದ ಮೇಲೆ ಅರ್ಹರಿಗೆ ಅವರ ಹಕ್ಕುಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಇನ್ನು ಲೇ ಔಟ್ನ ರಸ್ತೆಯೊಂದಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಹೆಸರನ್ನು ಇಡಲಾಗುವುದು. ಹಾಗೇ ಲೇ ಔಟ್ಗೆ ಭೂಮಿ ನೀಡಿದ ಪ್ರತಿಯೊಬ್ಬರ ಹೆಸರುಗಳನ್ನು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಮಾಡಲಾಗುವುದು. ಇದೇ ವೇಳೆ ಭೂ ಮಾಲೀಕರಿಗೆ ನಿವೇಶನಗಳನ್ನು ಮಾರಾಟ ಮಾಡಬೇಡಿ. ನಿಮ್ಮ ಸೈಟ್ಗಳ ಬೆಲೆ ಮುಂದಿನ ದಿನಗಳಲ್ಲಿ ದುಪ್ಟಟ್ಟು ಆಗಲಿದೆ ಎಂದು ಸಲಹೆ ನೀಡಿದರು.
ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಸದ್ಯ 24,714 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ 18,399 ನಿವೇಶನಗಳನ್ನು ರೈತರು ಹಾಗೂ ಭೂ ಮಾಲೀಕರಿಗೆ ನೀಡಲಾಗಿದೆ. 3,500 ರೆವೆನ್ಯೂ ಸೈಟ್ ಹಾಗೂ 2,815 ಸೈಟ್ಗÀಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು. ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ 40:60 ಅಭಿವೃದ್ಧಿ ಮಾದರಿಯನ್ನು ಅನುಸರಿಸಲಾಗಿದೆ. ಒಂದು ಎಕರೆ ಭೂಮಿಗೆ 9,583 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲಾಗುವುದು ಎಂದರು.
ಬಡಾವಣೆಯ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕ ಮೂಲ ಸೌಕರ್ಯದ ದೃಷ್ಟಿಯಿಂದ ಕೆಲವು ನಿವೇಶನಗಳನ್ನು ಭೂ ಮಾಲೀಕರಿಗೆ ಹಂಚಿಕೆ ಮಾಡಲು ಸಾಧ್ಯವಿಲ್ಲ. ಮುಖ್ಯವಾಗಿ ಕಾರ್ನರ್ ಸೈಟ್, ಕಮರ್ಷಿಯಲ್ ಸೈಟ್, ಸಿಎ ಸೈಟ್ಸ್, ಪಾರ್ಕ್ಗಳು, ಅಗಲವಾದ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲಾಗುತ್ತಿಲ್ಲ. ನಗರ ಯೋಜನೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿವೇಶನಗಳನ್ನು ಪ್ರತ್ಯೇಕವಾಗಿ ಪರಿಣಗಣಿಸಲಾಗಿದೆ. ಹಾಗೇ ಫಲಾನುಭವಿಗಳಿಗೆ ಅಗತ್ಯ ದಾಖಲೆ ನೀಡಿ, ನಿವೇಶನದ ಅಧಿಕೃತ ಸ್ವಾಧೀನ ಪಡೆಯುವವವರೆಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಎಚ್ಡಿಕೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ
ನಾನು ಒಬ್ಬ ರೈತನ ಮಗ. ರೈತರ ಕಷ್ಟ ಏನು ಎಂಬುದು ನನಗೆ ಗೊತ್ತಿದೆ. ಅಭಿವೃದ್ಧಿಗಾಗಿ ಭೂಮಿ ನೀಡುವ ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು. ಇದು ನಮ್ಮ ಸರ್ಕಾರದ ಭೂ ಗ್ಯಾರಂಟಿ ಯೋಜನೆಯಾಗಿದೆ ಎಂದರು.
ಇನ್ನು ರೈತರ ಮಕ್ಕಳು ಎಂದು ಹೇಳಿಕೊಳ್ಳುವ ದೊಡ್ಡ ದೊಡ್ಡವರ ಜಮೀನುಗಳು ಬೆಂಗಳೂರು ಸುತ್ತಮುತ್ತ ಇರುವುದು ನಮಗೂ ಗೊತ್ತಿದೆ. ಅದನ್ನು ಯಾವುದಾದರೂ ಯೋಜನೆಗೆ ಬಿಟ್ಟುಕೊಟ್ಟಿದ್ದಾರೆಯೇ ಎಂದು ಸಿಎಂ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವರಾಮ ಕಾರಂತ ಬಡಾವಣೆ ಕುಮಾರಸ್ವಾಮಿ ಅವರ ಕಾಲದಲ್ಲೇ ಆರಂಭವಾಯಿತು. ನಾನು ಬಿಡಿಎ ಜವಾಬ್ದಾರಿ ವಹಿಸಿಕೊಂಡಾಗ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು. ಪ್ರತಿಯೊಂದಕ್ಕೂ ಲಂಚ ನೀಡಬೇಕಿತ್ತು. ಆಗ ಇದರ ಬಗ್ಗೆ ಮಾತನಾಡಲು ರೈತರ ಮಕ್ಕಳಿಗೆ ಧಮ್ಮು ತಾಕತ್ತು ಇರಲಿಲ್ವಾ ಎಂದು ಪ್ರಶ್ನಿಸಿದರು.
ಬೆಂಗಳೂರು ಸುತ್ತಮುತ್ತ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ. ಯಾವ ಯೋಜನೆಗಳಿಗೂ ಭೂಸ್ವಾಧೀನ ಮಾಡಲು ಬಿಟ್ಟಿಲ್ಲ. ಪೆರಿಫೆರಲ್ ರಿಂಗ್ ರಸ್ತೆಗೆ ಜಮೀನು ಹೋಗುತ್ತದೆ ಎಂಬ ಕಾರಣಕ್ಕೆ ಯೋಜನೆಯ ನಕ್ಷೆಯನ್ನೇ ಬೆದರಿಸಿ ಬದಲಾಯಿಸಿದ್ದರು. ಈಗ ಆ ಜಮೀನಿನ ಬೆಲೆ ಎಕರೆಗೆ 15 ಕೋಟಿ ರೂ. ದಾಟಿದೆ ಅವರು ಹೇಳಿದರು.
ಬೆಂಗಳೂರು ದೆಹಲಿಯ ರೀತಿಯಲ್ಲಿ ಪ್ಲ್ಯಾನ್ ಸಿಟಿ ಆಗಿಲ್ಲ. ಈ ಹಿಂದೆ ಬೆಂಗಳೂರಿನಲ್ಲಿ 60 ಲಕ್ಷ ಜನ ಸಂಖ್ಯೆ ಇತ್ತು. ಈಗ ಒಂದೂವರೆ ಕೋಟಿ ಜನಸಂಖ್ಯೆ ಇದೆ. ಸುಮಾರು 1.40 ವಾಹನಗಳಿವೆ. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ರಸ್ತೆಗಳು ಸರಿಯಾಗಿಲ್ಲ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಭೂಮಿ ನಿಮ್ಮದು. ತ್ಯಾಗ ನಿಮ್ಮದು. ಅಭಿವೃದ್ಧಿ ಬೆಂಗಳೂರಿನದ್ದು. ನಮ್ಮನ್ನು ಕೈಬಿಡಬೇಡಿ ಎಂದರು.
ಎಲ್ಲಿದೆ ಶಿವರಾಮಕಾರಂತ ಬಡಾವಣೆ..?
ಬೆಂಗಳೂರು ಉತ್ತರ ಭಾಗದಲ್ಲಿರುವ 17 ಹಳ್ಳಿಗಳನ್ನು ಸ್ವಾಧೀನಪಡಿಸಿಕೊಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು, ಡಾ. ಕೆ. ಶಿವರಾಮ ಕಾರಂತ ಬಡಾವಣೆಯನ್ನು ನಿರ್ಮಾಣ ಮಾಡಿದೆ. ಬಡಾವಣೆಯ ಒಟ್ಟು ವಿಸ್ತೀರ್ಣ – 3 ಸಾವಿರ ಎಕರೆಗಳು. ಭೂಮಾಲೀಕರಿಗೆ ಹಂಚಿಕೆ ಮಾಡಿರುವ ನಿವೇಶನಗಳ ಒಟ್ಟು ವಿಸ್ರ್ತಿರ್ಣ – 3 ಕೋಟಿ ಚದರ ಅಡಿ. ಭೂಮಾಲೀಕರ ಒಟ್ಟು ಸಂಖ್ಯೆ- 3,886. ರೆವಿನ್ಯೂ ನಿವೇಶನದಾರರ ಒಟ್ಟು ಸಂಖ್ಯೆ – 3,500. ಒಟ್ಟಾರೆ, 16,419.89 ಕೋಟಿ ವೆಚ್ಚದಲ್ಲಿ ಡಾ. ಕೆ. ಶಿವರಾಮ ಕಾರಂತ ಬಡಾವಣೆಯನ್ನು ನಿರ್ಮಾಣ ಮಾಡಲಾಗಿದೆ .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರು ಹಾಗೂ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಸಚಿವರಾದ ಕೃಷ್ಣ ಬೈರೇಗೌಡ, ಶಾಸಕರಾದ ಎಸ್.ಆರ್. ವಿಶ್ವನಾಥ್, ಎಸ್.ಮುನಿರಾಜು, ಬಿಡಿಎ ಆಯುಕ್ತರಾದ ಮೇಜರ್ ಮಣಿವಣ್ಣನ್ ಪಿ., ಹಾಗೂ ಬಿಡಿಎ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.







