ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಜಲಾಶಯಗಳಲ್ಲಿನ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಯಾವುದೇ ಗ್ರಾಮ – ನಗರ ಪ್ರದೇಶಗಳಲ್ಲಿ ಯಾರೊಬ್ಬರಿಗೂ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನೀರಿನ ಕೊರತೆ ಹೆಚ್ಚಾಗುವ ಸಂದರ್ಭಗಳಲ್ಲಿ ಜನರು ನೀರನ್ನು ಶೇಖರಿಸಿಟ್ಟುಕೊಳ್ಳುತ್ತಾರೆ. ಇದರಿಂದ ಡೆಂಗ್ಯೂ, ಚಿಕೂನ್ ಗುನ್ಯಾ ರೀತಿಯ ಸಾಂಕ್ರಾಮಿಕಗಳು ಹರಡಬಹುದು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ಸೂಕ್ತ ತಿಳುವಳಿಕೆ ನೀಡಬೇಕು. ನಿಯಮಿತವಾಗಿ ಟಾಸ್ಕ್ ಫೋರ್ಸ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು ಎಂದು ನಿರ್ದೇಶಿಸಿದರು.
ಸಾಮಾನ್ಯವಾಗಿ ಬರಗಾಲದ ವರ್ಷಗಳಲ್ಲಿ ಕಲುಷಿತ ನೀರು ಕುಡಿದು ಸಮಸ್ಯೆಗೆ ಸಿಲುಕಿಕೊಳ್ಳುವವರ ಪ್ರಮಾಣ ಹೆಚ್ಚಿರುತ್ತದೆ. ಈ ಕುರಿತು ನೀವುಗಳು ಹೆಚ್ಚಿನ ನಿಗಾವಹಿಸಿ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು. ಎಲ್ ನಿನೊ ಇರುವ ವರ್ಷಗಳಲ್ಲಿ ಸಾಮಾನ್ಯವಾಗಿ ಬಿಟ್ಟು ಬಿಟ್ಟು ಮಳೆ ಬರುವುದರಿಂದ ಹಠಾತ್ ಪ್ರವಾಹಗಳು, ಸಿಡಿಲುಗಳು ಬರುವ ಸಂಭವಗಳು ಹೆಚ್ಚಿರುತ್ತವೆ. ಹವಾಮಾನ ಸೂಚನೆಗಳನ್ನು ಆಧರಿಸಿ ಕ್ರಮವಹಿಸಬೇಕು ಎಂದು ತಿಳಿಸಿದರು.
ಬಿತ್ತನೆ ಬೀಜ ಕೊರತೆ ಆಗಬಾರದು. ಬೀಜ ಬಿತ್ತನೆ ಮಾಡಿದ ಮೇಲೆ ಮಳೆ ಇಲ್ಲವಾಗಿ ಮತ್ತೆ ಮಳೆ ಬಂದರೆ ಮತ್ತೆ ಬೀಜ-ಗೊಬ್ಬರಕ್ಕೆ ಬೇಡಿಕೆ ಬರಬಹುದು. ಅದಕ್ಕೆ ಸಿದ್ಧರಾಗಿ. ಬೆಳೆ ಒಣಗಿ ಮತ್ತೆ ಮಳೆ ಬಿದ್ದಾಗ ಏಕಾಏಕಿ ಬಿತ್ತನೆ ಬೀಜ, ಗೊಬ್ಬರಗಳಿಗೆ ಬೇಡಿಕೆ ಹೆಚ್ಚಬಹುದು. ರೈತರ ಒತ್ತಡ ಹೆಚ್ಚಾಗಲೂಬಹುದು ಅದನ್ನು ನಿರ್ವಹಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಸ್ಪಷ್ಟ ಸೂಚನೆ ನೀಡಿದರು.
ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ನಿಮ್ಮ ವರದಿಗಳ ಪ್ರಕಾರ ಜಾನುವಾರುಗಳಿಗೆ ಮೇವಿನ ಸಂಗ್ರಹ ಕಡಿಮೆ ಇದೆ. ಇದನ್ನು ಜಿಲ್ಲಾಧಿಕಾರಿಗಳು ಮತ್ತು ಸಿಇಓಗಳು ನಿಮ್ಮ ತಂಡದ ಮೂಲಕ ಪರಿಶೀಲನೆ ಮಾಡಿಸಿ ಖಚಿತ ಪಡಿಸಿಕೊಳ್ಳಿ. ಕೊಳವೆ ಬಾವಿ ಸೇರಿದಂತೆ ಯಾರ್ಯಾರಲ್ಲಿ ನೀರಿನ ಮೂಲಗಳಿವೆಯೊ ಅವರು ಮೇವು ಬೆಳೆಯುವಂತೆ ಪ್ರೋತ್ಸಾಹ ನೀಡಿ. ಮೇವಿನ ಬೀಜಗಳ ಕಿಟ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಹೇಳಿದರು.
ಯಾವ ಜನವಸತಿ ಪ್ರದೇಶಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಾಗ ನೀರಿನ ಸಂಗ್ರಹಣೆಗಳು ಹೆಚ್ಚು ಕಾಲ ಇರುವಂತಾದರೆ ಡೆಂಗ್ಯೂನಂತಹ ಕಾಯಿಲೆಗಳು ತೀವ್ರಗೊಳ್ಳಬಹುದು. ಅದರ ಕುರಿತು ಮುನ್ನೆಚ್ಚರಿಕೆ ವಹಿಸಿ. ರೈತರಿಗೆ ಕಡಿಮೆ ಮಳೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವಂತೆ ತಿಳಿಸಿದರು.
ನಿಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತುರ್ತು ಅಗತ್ಯಗಳಿಗಾಗಿ 5 ಕೋಟಿ ರೂ. ಗಳನ್ನು ಒದಗಿಸಿದ್ದೇವೆ. ಅದನ್ನು ಬಳಕೆ ಮಾಡಿ. ಕುಡಿಯುವ ನೀರಿಗೆ ಜಲಾಶಯಗಳ ನೀರನ್ನು ಬಳಸಿ. ಕೊಳವೆ ಬಾವಿಗಳಲ್ಲಿ ಖಾಲಿಯಾದರೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ತೆಗೆದುಕೊಳ್ಳಿ. ನಂತರವೂ ಸಮಸ್ಯೆಗಳಿದ್ದರೆ ಕೊಳವೆ ಬಾವಿಗಳನ್ನು ಡೀಪನಿಂಗ್ ಮಾಡಿ. ಕಡೆಯ ಆದ್ಯತೆ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದು. ಈ ನಡುವೆ ತುರ್ತು ಅಗತ್ಯಗಳಿದ್ದರೆ ಟ್ಯಾಂಕರ್ ಬಳಸಿ ಎಂದು ಸೂಚಿಸಿದರು.
ರಾಜ್ಯದ ಪ್ರತಿ ತಾಲ್ಲೂಕಿಗೂ ಒಬ್ಬೊಬ್ಬರಂತೆ ಹಿರಿಯ ಕೆಎಎಸ್ ಅಧಿಕಾರಿಗಳನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ. ಇವರನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಮುಖ್ಯ ಕಾರ್ಯದರ್ಶಿಯವರು ಈ ಕುರಿತು ಗಮನ ಹರಿಸಬೇಕು ಎಂದರು.
ಒಟ್ಟಾರೆ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಅಗತ್ಯ ಲಸಿಕೆ ಇತ್ಯಾದಿಗಳ ಕುರಿತು ಗಮನ ಹರಿಸಿ. ರೈತರಿಗೆ ಬೇಕಿರುವ ಬಿತ್ತನೆ ಬೀಜ, ಗೊಬ್ಬರಗಳ ದಾಸ್ತಾನನ್ನು ಸಮರ್ಪಕವಾಗಿಟ್ಟುಕೊಳ್ಳಿ. ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಈ ಭಾಗದಲ್ಲಿ ಉದ್ಯೋಗಕ್ಕಾಗಿ ಗುಳೆ ಹೋಗುವವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ನರೇಗಾ ಯೋಜನೆ ಕೂಡ ಮಾರ್ಪಾಟಾಗಿದೆ. ಲಭ್ಯ ಅನುದಾನ ಮತ್ತು ಯೋಜನೆಗಳನ್ನು ಬಳಸಿಕೊಂಡು ಜನರಿಗೆ ಉದ್ಯೋಗವನ್ನು ನೀಡಲು ಕ್ರಮವಹಿಸಬೇಕು ಎಂದು ತಿಳಿಸಿದರು.