ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಸುತ್ತ ಈಗ ವಿವಾದದ ಹುತ್ತವೇ ಬೆಳೆಯುತ್ತಿದೆ. ಜನಪ್ರಿಯ ಯುಟ್ಯೂಬರ್ ಸಮೀರ್ ಎಂಡಿ ತಮ್ಮ ದೂತ ಚಾನೆಲ್ ನಲ್ಲಿ ಬಿಡುಗಡೆ ಮಾಡಿರುವ ಹೊಸ ವಿಡಿಯೋ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ. ಟಾಕ್ಸಿಕ್ ಸಿನಿಮಾ ಅಂದುಕೊಂಡ ಮಟ್ಟಕ್ಕೆ ತಲುಪದಿರಲು ಕಾರಣವೇನು ಮತ್ತು ಈ ಚಿತ್ರದ ಬೃಹತ್ ಬಂಡವಾಳದ ಹಿಂದಿರುವ ನಿಗೂಢತೆ ಏನು ಎಂಬುದನ್ನು ಸಮೀರ್ ಎಂಡಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಗೀತು ಮೋಹನ್ ದಾಸ್ ಆಯ್ಕೆಯೇ ದೊಡ್ಡ ಎಡವಟ್ಟು
ನಿರ್ದೇಶಕಿ ಗೀತು ಮೋಹನ್ ದಾಸ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೇ ಚಿತ್ರಕ್ಕೆ ಮಾರಕವಾಯಿತು ಎಂದು ಸಮೀರ್ ವಿಶ್ಲೇಷಿಸಿದ್ದಾರೆ. ಫಿಲ್ಮ್ ಫೆಸ್ಟಿವಲ್ ಗಾಗಿ ಕಲಾತ್ಮಕ ಸಿನಿಮಾ ಮಾಡುವ ಗೀತು ಅವರಿಗೆ ಕಮರ್ಷಿಯಲ್ ಮತ್ತು ಮಾಸ್ ಸಿನಿಮಾಗಳ ಅನುಭವವಿಲ್ಲ. ಮಾಸ್ ಪ್ರೇಕ್ಷಕರ ನಾಡಿಮಿಡಿತ ಅರಿಯುವಲ್ಲಿ ಅವರು ವಿಫಲರಾಗಿದ್ದಾರೆ. ಇದೇ ಚಿತ್ರದ ಸೋಲಿಗೆ ಮೊದಲ ಕಾರಣ ಎಂದು ಸಮೀರ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಯಶ್ ಮತ್ತು ನಿರ್ದೇಶಕಿ ನಡುವೆ ಈಗೋ ಕ್ಲಾಶ್
ಟಾಕ್ಸಿಕ್ ಚಿತ್ರಕ್ಕೆ ನಟ ಯಶ್ ಅವರೇ ಕಥೆ ಬರೆದಿದ್ದಾರೆ. ಆದರೆ ಗೀತು ಮೋಹನ್ ದಾಸ್ ಅವರ ಕೆಲಸದ ಶೈಲಿ ಮತ್ತು ಯಶ್ ಅವರ ಆಲೋಚನೆಗಳ ನಡುವೆ ಹೊಂದಾಣಿಕೆ ಇರಲಿಲ್ಲ. ನಿರ್ದೇಶಕಿ ತಮಗೆ ಬೇಕಾದಂತೆ ಚಿತ್ರೀಕರಣ ಮಾಡಿರುವುದು ಮತ್ತು ಯಶ್ ಬರೆದ ಕಥೆಯನ್ನು ತೆರೆಯ ಮೇಲೆ ತರುವಲ್ಲಿ ಆದ ವ್ಯತ್ಯಾಸಗಳು ಚಿತ್ರದ ಗುಣಮಟ್ಟವನ್ನು ಕೆಡಿಸಿವೆ. ಇಬ್ಬರ ನಡುವಿನ ಅಹಂ ಸಂಘರ್ಷದಿಂದ ಚಿತ್ರ ಹಾಳಾಗಿದೆ ಎಂದು ಸಮೀರ್ ಗಂಭೀರವಾಗಿ ಆರೋಪಿಸಿದ್ದಾರೆ.
ಕೆವಿಎನ್ ಸಂಸ್ಥೆಯ 700 ಕೋಟಿ ಬಂಡವಾಳದ ಗುಟ್ಟೇನು
ಸಮೀರ್ ಎಂಡಿ ಎತ್ತಿರುವ ಮತ್ತೊಂದು ಪ್ರಮುಖ ಪ್ರಶ್ನೆ ಚಿತ್ರದ ಬಂಡವಾಳದ ಬಗ್ಗೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದ 6 ಸಿನಿಮಾಗಳಲ್ಲಿ 5 ಚಿತ್ರಗಳು ಫ್ಲಾಪ್ ಆಗಿವೆ. ವಿತರಣೆಯಲ್ಲೂ ಲಾಭ ಬಂದಿಲ್ಲ. ಹೀಗಿರುವಾಗ ಟಾಕ್ಸಿಕ್ ಚಿತ್ರದ ಮೇಲೆ 700 ಕೋಟಿ ರೂಪಾಯಿ ಹೂಡಿಕೆ ಮಾಡಲು ಹಣ ಎಲ್ಲಿಂದ ಬಂತು ಎಂದು ಸಮೀರ್ ಪ್ರಶ್ನಿಸಿದ್ದಾರೆ. ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ರಿಯಲ್ ಎಸ್ಟೇಟ್ ನ ಲಾಭದ ಹಣವನ್ನು ಅಥವಾ ಕಪ್ಪು ಹಣವನ್ನು ಸಿನಿಮಾ ಮೂಲಕ ವೈಟ್ ಮಾಡುವ ತಂತ್ರ ಇದರ ಹಿಂದಿರಬಹುದು ಎಂದು ಸಮೀರ್ ಸಂಶಯ ವ್ಯಕ್ತಪಡಿಸಿದ್ದಾರೆ. ಮಲಯಾಳಂನ ಮಾಲಿವುಡ್ ಟೈಮ್ಸ್ ಸಿನಿಮಾ ಮಾದರಿಯಲ್ಲೇ ಇಲ್ಲೂ ತೆರಿಗೆ ವಂಚನೆಯ ಆಟ ನಡೆದಿದೆಯೇ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.
ಟಾಕ್ಸಿಕ್ ಚಿತ್ರವು ಕೇವಲ ತಾಂತ್ರಿಕವಾಗಿ ಮಾತ್ರವಲ್ಲದೆ, ಆಂತರಿಕ ಭಿನ್ನಾಭಿಪ್ರಾಯ ಮತ್ತು ಆರ್ಥಿಕ ಮೂಲಗಳ ವಿಚಾರದಲ್ಲೂ ವಿವಾದಕ್ಕೆ ಸಿಲುಕಿದೆ. ಸಮೀರ್ ಎಂಡಿ ಅವರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಚಿತ್ರತಂಡದ ಮುಂದಿನ ಪ್ರತಿಕ್ರಿಯೆ ಏನು ಎಂಬ ಕುತೂಹಲ ಮೂಡಿಸಿದೆ.








