ಬೆಂಗಳೂರು: ರಾಜ್ಯದಲ್ಲಿ ‘ವಂದೇ ಮಾತರಂ’ ಗೀತೆಯ ಗಾಯನ ಈಗ ಸರ್ಕಾರ ಮತ್ತು ಹಿಂದುತ್ವನಿಷ್ಠ ನಾಯಕರ ನಡುವಿನ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ. ವಂದೇ ಮಾತರಂ ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಬೇಕು, ಅದಕ್ಕಿಂತ ಹೆಚ್ಚು ಹಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆಗೆ ಹಿಂದುತ್ವನಿಷ್ಠ ನಾಯಕ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ. ಸರ್ಕಾರದ ಈ ನಿಯಮವನ್ನು ದಿಕ್ಕರಿಸಿರುವ ಅವರು, ನಾವಂತೂ ಸಂಪೂರ್ಣ ವಂದೇ ಮಾತರಂ ಹಾಡೇ ತೀರುತ್ತೇವೆ ಎಂದು ರಣಕಹಳೆ ಊದಿದ್ದಾರೆ.
ಬ್ರಿಟಿಷರ ಕಾಲದ ಕೋತ್ವಾಲ್ ಸಂಸ್ಕೃತಿ ನೆನಪಿಸಿದ ಸೂಲಿಬೆಲೆ
ಸಚಿವ ತಂಗಡಗಿ ಅವರ ಎಚ್ಚರಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚಕ್ರವರ್ತಿ ಸೂಲಿಬೆಲೆ, ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ಸ್ಮರಿಸಿದ್ದಾರೆ. ಅಂದು ಬ್ರಿಟಿಷರ ಆಡಳಿತದಲ್ಲಿ ವಂದೇ ಮಾತರಂ ಹಾಡಲು ಕೋತ್ವಾಲರ ಅನುಮತಿ ಪಡೆಯಬೇಕಾದ ದುಸ್ಥಿತಿ ಇತ್ತು. ಈಗಿನ ಕಾಂಗ್ರೆಸ್ ಸರ್ಕಾರ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ದೇಶದ ಸ್ವಾತಂತ್ರ್ಯಕ್ಕೆ ಉಸಿರು ನೀಡಿದ ಗೀತೆಯನ್ನು ಹಾಡಲು ಸರ್ಕಾರದ ಅನುಮತಿ ಬೇಕಿಲ್ಲ ಮತ್ತು ಇಂತಹ ನಿರ್ಬಂಧಗಳನ್ನು ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಧೈರ್ಯವಿದ್ದರೆ ಬಂಧಿಸಿ, ನಾವಂತೂ ನಿಲ್ಲಿಸುವುದಿಲ್ಲ
ಸಚಿವರ ಎಚ್ಚರಿಕೆಯನ್ನು ಬಹಿರಂಗವಾಗಿ ತಿರಸ್ಕರಿಸಿರುವ ಸೂಲಿಬೆಲೆ, ನಾವು ನಿನ್ನೆ ಕೂಡ ಸಂಪೂರ್ಣ ವಂದೇ ಮಾತರಂ ಹಾಡಿದ್ದೆವು, ಇಂದು ಹಾಡುತ್ತೇವೆ ಮತ್ತು ನಾಳೆಯೂ ಹಾಡುತ್ತೇವೆ. ಇನ್ನು ಮುಂದೆ ನಮ್ಮ ವೇದಿಕೆಯ ಮೇಲಿನ ಪ್ರತಿಯೊಂದು ಕಾರ್ಯಕ್ರಮವೂ ಸಂಪೂರ್ಣ ವಂದೇ ಮಾತರಂನೊಂದಿಗೇ ಮುಕ್ತಾಯಗೊಳ್ಳಲಿದೆ. ನಿಮ್ಮಲ್ಲಿ ಧೈರ್ಯವಿದ್ದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಿ ಅಥವಾ ಬಂಧಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ರಾಷ್ಟ್ರಪ್ರೇಮದ ಭಾವನೆಗಳನ್ನು ನಿಯಮಗಳ ಚೌಕಟ್ಟಿನಲ್ಲಿ ಬಂಧಿಸಲು ಸಾಧ್ಯವಿಲ್ಲ ಎಂದು ಅವರು ಗುಡುಗಿದ್ದಾರೆ.
ರಾಷ್ಟ್ರಪ್ರೇಮಕ್ಕೆ ನಿಯಮಗಳ ಹಂಗೇಕೆ?
ಸರ್ಕಾರದ ನಿಯಮಗಳ ಪ್ರಕಾರ ರಾಷ್ಟ್ರಗೀತೆ ಅಥವಾ ರಾಷ್ಟ್ರಗೀತೆಯ ನಿಗದಿತ ಚರಣಗಳನ್ನೇ ಹಾಡಬೇಕು ಎಂಬ ವಾದವನ್ನು ಸೂಲಿಬೆಲೆ ತಳ್ಳಿಹಾಕಿದ್ದಾರೆ. ಇಂತಹ ಬಂಧನಗಳು ಸಾರ್ವಜನಿಕರಲ್ಲಿ ಇರುವ ರಾಷ್ಟ್ರಪ್ರೇಮದ ಕಿಚ್ಚನ್ನು ನಂದಿಸಲು ಮಾಡುವ ಪ್ರಯತ್ನಗಳಾಗಿವೆ. ವಂದೇ ಮಾತರಂ ಎನ್ನುವುದು ಕೇವಲ ಹಾಡಲ್ಲ, ಅದು ಭಾರತೀಯರ ಭಾವನೆ. ಆ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.








