ಆ ಕ್ರಾಂತಿಕಾರಿ ಬುದುಕಿದ್ದು ಸಾಮಾನ್ಯ ಮನುಷ್ಯನ ಜೀವಿತ ಅವಧಿಯ ಕಾಲುಭಾಗವಷ್ಟೆ. ಆದ್ರೆ ಶತಶತಮಾನಗಳು ಕಳೆದರೂ ಭಾರತದ ಸ್ವಾತಂತ್ರ್ಯ ಇತಿಹಾಸದ ಮಹಾಸಂಗ್ರಾಮದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯುವಂತದ್ದು. ರಾಷ್ಟ್ರಯಜ್ಞದಲ್ಲಿ ತನ್ನ ಬದುಕನ್ನೇ ಆಹುತಿ ಮಾಡಿಕೊಂಡು ಹುತಾತ್ಮನಾದ ತ್ಯಾಗಮಯಿ ಆತ. ಇಂದು ಆ ಮಹಾನ್ ಹೋರಾಟಗಾರನ ಜನ್ಮಜಯಂತಿ.
ಆಜಾದ್ ಅನ್ನೋ ಧೀರೋದ್ಧಾತ ಹೆಸರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಜರಾಮರವಾಗಿ ಉಳಿಯುವಂತದ್ದು. ಕ್ರಾಂತಿಯ ಕಿಡಿ ಹಚ್ಚಿ ಭಾರತೀಯರ ಮನಮನಗಳಲ್ಲಿ ಸ್ವಾತಂತ್ರ ಹೋರಾಟದ ಮಹಾಜ್ವಾಲಾಗ್ನಿ ಹೊತ್ತಿಸಿದವರಲ್ಲಿ ಅವರು ಕೂಡಾ ಮೊದಲಿಗರು. ಬದುಕಿದ್ದು 24 ವರ್ಷ ಆದ್ರೆ ಆಜಾದ್ ಅನ್ನುವ ಹೆಸರಿನ ಹಿಂದಿರುವ ಸ್ವಾಭಿಮಾನ, ರಾಷ್ಟ್ರಭಕ್ತಿಗಳ ಸಿಂಹ ಘರ್ಜನೆ ಇನ್ನೂ ಆಗಾಗ ಬೇರೆ ಬೇರೆ ಸ್ವರೂಪದಲ್ಲಿ ಕೇಳಿಸುತ್ತದೆ.
1921ರಲ್ಲಿ ದೇಶಾದ್ಯಂತ ನಡೆಯುತ್ತಿದ್ದ ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಕಾಶಿಯಲ್ಲಿ ಆಂಗ್ಲ ಪೊಲೀಸರ ಮೇಲೆ ಕಲ್ಲು ಬೀಸಿ ಬಂಧನಕ್ಕೊಳಗಾಗಿದ್ದ ಆ ಬಾಲಕ ಕಣ್ಣಲ್ಲಿ ಕ್ಷಾತ್ರ ತೇಜಸ್ಸಿತ್ತು. ಅಷ್ಟರಲ್ಲಾಗಲೇ ಪೊಲೀಸರನ್ನು ಮೈಲುಗಟ್ಟಲೇ ಓಡಿಸಿ ಸುಸ್ತು ಮಾಡಿದ್ದ ಅವನ ಕಣ್ಣಲೆಯ ವಯೋ ಸಹಜ ಕೀಟಲೆ ಮಾಡಿದ್ದ ಕುರುಹಿತ್ತು. ಎದುರಿದ್ದ ನ್ಯಾಯಾಧೀಶರು ನಿನ್ನ ಹೆಸರೇನೆಂದು ಬಾಲಕನನ್ನು ಪ್ರಶ್ನಿಸಿದರು, ಅವನು ಆಜಾದ್ ಎಂದು ಉತ್ತರಿಸಿದ. ಅಪ್ಪ ಯಾರೂ ಅಂದದು. ಸ್ವಾದೀನತೆ ಎಂದ. ಮನೆಯೆಲ್ಲಿ ಎಂದು ಕೇಳಿದರು, ಸೆರೆಮನೆ ಎಂದು ಗುಡುಗಿದ. ನ್ಯಾಯಾಧೀಶ 15 ಚಡಿಯೇಟಿನ ಶಿಕ್ಷೆ ನೀಡಿದ. ಮುಂದೆ ಅದೇ ಬಾಲಕ ಹಲವು ಕಾಲ ಬ್ರಿಟೀಶ್ ರಾಜ್ ಆಡಳಿತಕ್ಕೆ ತಲೆನೋವು ತಂದ. ಆಂಗ್ಲರ ಎಲ್ಲಾ ತಂತ್ರಗಳಿಗೂ ಪ್ರತಿತಂತ್ರ ಹಣೆದು, ಕೈಗೆ ಸಿಗದೆ ಭೂಗತನಾಗಿ ಹತ್ತಾರು ಚಳುವಳಿ ಕಟ್ಟಿದ. ಒಂದೇ ಬಾರಿಯೂ ಸೆರೆಮನೆಗೆ ಹೋಗದೇ ಕೊನೆಗೆ ಪ್ರಾಣಾರ್ಪಣೆ ಮಾಡಿ ತನ್ನ ಬದುಕನ್ನು ಸಾರ್ಥಕಗೊಳಿಸಿದ. ಅಸಂಖ್ಯ ಭಾರತೀಯರ ಹೃದಯ ಸಾಮ್ರಾಜ್ಯದಲ್ಲಿ ನೆಲೆಗೊಂಡು ರೋಮರೋಮಗಳು ನಿಮಿರಿನಿಲ್ಲುವ ಆ ಹೆಸರೇ ಆಜಾದ್ ಚಂದ್ರಶೇಖರ್.
“ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ. ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!” ಶತ್ರುಗಳ ಗುಂಡಿಗೆ ಎದೆಯೊಡ್ಡುತ್ತೇವೆ, ಸ್ವತಂತ್ರರಾಗಿಯೇ ಇದ್ದೇವೇ, ಸ್ವಾತಂತ್ರರಾಗಿಯೇ ಇರುತ್ತೇವೆ. ಹೀಗಂತ ಸಿಂಹದಂತೆ ಘರ್ಜಿಸಿದ ಆಜಾದ್ ಭಾರತ ಸ್ವಾತಂತ್ರ್ಯ ಇತಿಹಾಸದ ಮಹಾನ್ ಕ್ರಾಂತಿಕಾರಿ; ಸಿಡಿಲಮರಿ. ಅಸಲಿಗೆ ಆಜಾದ್ರ ಪೂರ್ತಿ ಹೆಸರು ಪಂಡಿತ್ ಚಂದ್ರಶೇಖರ್ ಸೀತಾರಾಮ್ ತಿವಾರಿ. ಸ್ವಾತಂತ್ರ ಹೋರಾಟದ ಕಿಡಿ ಹಚ್ಚಿದ ಇನ್ನೊಬ್ಬ ಕ್ರಾಂತಿಕಾರಿ ಯುಗದ್ರಷ್ಟ ಭಗತ್ ಸಿಂಗ್, ಆಜಾದ್ರನ್ನು ಕರೆಯುತ್ತಿದ್ದಿದ್ದೇ ಪಂಡಿತ್ಜೀ ಎಂದು.
ಚಂದ್ರಶೇಖರ್ ಆಜಾದ್ ಹುಟ್ಟಿದ್ದು 23 ಜುಲೈ 1906ರಲ್ಲಿ, ಮಧ್ಯಪ್ರದೇಶದ ಅಲಿರಾಜಪುರ್ ಜಿಲ್ಲೆಯ ಭಾಂವರಾ ಗ್ರಾಮದಲ್ಲಿ. ತೀರಾ ಬಡ ಕುಟುಂಬದ ಪಂಡಿತ್ ಸೀತಾರಾಮ್ ತಿವಾರಿ ಹಾಗೂ ಜಗರಾಣಿ ದೇವಿ ದಂಪತಿಗಳ ಮಗ ಆಜಾದ್. ಆಜಾದ್ ತಂದೆ ಯಾವುದೋ ತೋಟದಲ್ಲಿ ಮಾಲಿಯಾಗಿ ಕೆಲಸ ಮಾಡುತ್ತಿದ್ದ ಬಡ ಕೂಲಿ. ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ನೆರವಾಗಬೇಕೆಂದು ಓದಿಗೆ ತಿಲಾಂಜಲಿ ನೀಡಿ ಮುಂಬೈಗೆ ತೆರಳಿ ಕೆಲ ಕಾಲ ಕೂಲಿ ಮಾಡಿದ ಚಂದ್ರಶೇಖರ್ ಆ ಬಳಿಕ ಸಂಸ್ಕೃತ ಅಧ್ಯಯನ ಮಾಡಬೇಕು ಅನ್ನುವ ಮಹದಾಸೆಯಿಂದ ಕಾಶಿಗೆ ತೆರಳಿದ. ಆಜಾದ್ ಸಂಸ್ಕೃತ ಪಂಡಿತನಾಗದೆ ರಾಷ್ಟ್ರಭಕ್ತಿಯ ದೀವಿಗೆಗೆ ಹೋರಾಟದ ತೈಲ ಅರ್ಪಿಸುವ ಕ್ರಾಂತಿಕಾರಿಯಾಗಿ ಬದಲಾಗಿದ್ದು ಇದೇ ಕಾಶಿಯಲ್ಲೆ. ಆಂಗ್ಲರು ಮೊದಲ ಬಾರಿಗೆ ಹಾಗೂ ಕೊನೆಯ ಬಾರಿಗೆ ಆಜಾದ್ ಮೈ ಮುಟ್ಟಿದ್ದು ಇಲ್ಲೇ. ಅಂದರೆ ಆಜಾದ್ ತನ್ನ ಬಾಲ್ಯದಲ್ಲೇ ಚಡಿಯೇಟಿನ ಶಿಕ್ಷೆಗೆ ಗುರುಯಾಗಿದ್ದು ಕಾಶಿಯಲ್ಲಿ. ಮಹಾತ್ಮ ಗಾಂಧಿಯ ಅಸಹಕಾರ ಚಳುವಳಿಯ ಮೋಡಿಗೆ ಒಳಗಾಗಿದ್ದ 14ರ ಬಾಲಕ ಮೈಮೇಲೆ ಬೀಳುತ್ತಿದ್ದ ಪ್ರತೀ ಚಡಿಯೇಟುಗಳಿಗೂ ಭಾರತ್ ಮಾತಾ ಕಿ ಜೈ, ಗಾಂಧೀ ಕೀ ಜೈ ಎನ್ನುತ್ತಿದ್ದ. ಅದಾದ ನಂತರ ನಿರಂತರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಚಳುವಳಿ ಕಟ್ಟಿದ ಚಂದ್ರಶೇಖರ್ ಆಜಾದ್ ಇದ್ದ ಕೊನೆಯ ಬುಲೇಟ್ ಅನ್ನು ತನ್ನ ತಲೆಗೆ ಸಿಡಿಸಿಕೊಂಡು ಸಾಯುವವರೆಗೂ ಬಂಧನಕ್ಕೆ ಒಳಗಾಗಲೇ ಇಲ್ಲ.
ಆಜಾದ್ ಕ್ರಾಂತಿಕಾರಿಗಳ ಸಂಪರ್ಕಕ್ಕೆ ಬಂದಿದ್ದು ದೇಶವೇ ಬೆಚ್ಚಿಬಿದ್ದ 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡ್ ನಂತರ. 1921ರ ಅಸಹಕಾರ ಚಳವಳಿಯಲ್ಲಿ ನೇರವಾಗಿ ಆಜಾದ್ ಶಾಮೀಲರಾದ್ರು. 1924ರಲ್ಲಿ ಹಿಂದುಸ್ಥಾನಿ ಪ್ರಜಾತಾಂತ್ರಿಕ ಸಂಘಕ್ಕೆ ಸೇರ್ಪಡೆಯಾಗಿ ಕ್ರಾಂತಿಯ ರೂಪುರೇಷೆಗಳನ್ನು ಯೋಜಿಸತೊಡಗಿದರು ಆಜಾದ್. ಆದ್ರೆ ಬ್ರಿಟೀಶ್ ಅಧಿಪತ್ಯದ ಅಹಂಕಾರಕ್ಕೆ ಬಿಸ್ಮಿಲ್ಲಾ ರಾಮ್ಪ್ರಸಾದ್ ಜೊತೆ ಆಜಾದ್ ಸವಾಲು ಹಾಕಿದ ಘಟನೆ 1925ರ ಕಾಕೋರಿ ರೈಲು ದರೋಡೆ. 1926ರಲ್ಲಿ ವೈಸ್ರಾಯ್ ಪ್ರಯಾಣಿಸುತ್ತಿದ್ದ ರೈಲನ್ನು ಸ್ಪೋಟಿಸಲು ನಡೆಸಿದ ವಿಫಲ ಯತ್ನ. 1928ರಲ್ಲಿ ಹಿಂದುಸ್ಥಾನ ಸೋಷಲಿಸ್ಟ್ ರಿಪಬ್ಲಿಕನ್ ಅಸೋಷಿಯೇಷನ್ ಸಂಘಟನೆ ಸ್ಥಾಪನೆ. 1928ರಲ್ಲಿ ಭಗತ್ ಸಿಂಗ್ ಜೊತೆಗೂಡಿ ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್ ಸಾವಿಗೆ ಕಾರಣನಾಗಿದ್ದ ಸಾಂಡರ್ಸನ್ ಹತ್ಯೆ. ಇವೆಲ್ಲವೂ ಚಂದ್ರಶೇಖರ್ ಆಜಾದ್ ಅನ್ನುವ ಕ್ರಾಂತಿಯ ಅಗ್ನಿದಿವ್ಯನ ಸಂಘರ್ಷಮಯ ಬದುಕಿನ ರಕ್ತಸಿಕ್ತ ಅಧ್ಯಾಯಗಳ ಪ್ರಮುಖ ಘಟ್ಟಗಳು.
ರಾಷ್ಟ್ರದ ಚಳುವಳಿಯಲ್ಲಿ ಅದಾಗಲೇ ಕ್ರಾಂತಿಕಾರಿಗಳೆಂದು ಗುರುತಿಸಿಕೊಂಡಿದ್ದ ರಾಮ್ಪ್ರಸಾದ್ ಬಿಸ್ಮಿಲ್ಲಾ, ಆಜಾದ್ರ ಕ್ರಾಂತಿಕಾರಿ ಗುರು. ಬಿಸ್ಮಿಲ್ಲಾ ನೇತೃತ್ವದ ಹಿಂದೂಸ್ತಾನ್ ರಿಪಬ್ಲಿಕ್ ಆರ್ಮಿ, ಆಜಾದ್ ಸೇರಿಕೊಂಡ ಮೊದಲ ಹೋರಾಟದ ಸಂಘಟನೆ. ಕ್ರಾಂತಿಕಾರಿ ಚಟುವಟಿಕೆಗಳಿಗೆ ಬೇಕಿದ್ದ ಹಣವನ್ನು ಗಳಿಸಿಕೊಳ್ಳಲು ಆಂಗ್ಲ ಪ್ರಭುತ್ವದ ಖಜಾನೆಯನ್ನು ಲೂಟಿ ಮಾಡಬೇಕೆಂದು ಯೋಜನೆ ರಚನೆಯಾಯ್ತು. ಬಿಸ್ಮಿಲ್ಲಾ ರಾಮ್ಪ್ರಸಾದ್ ಹಾಗೂ ಆಜಾದ್ ಮುಂದಾಳತ್ವದಲ್ಲೇ ಹಣೆದ ಯೋಜನೆಯಿದು. ಪೂರ್ವನಿರ್ಧಾರದಂತೆ 1925 ಆಗಸ್ಟ್ 9 ರಂದು ಕಾಕೋರಿ ಎಂಬ ಸ್ಥಳದಲ್ಲಿ ರೈಲಿನ ದರೋಡೆಯೂ ನಡೆಯಿತು. ಅದಾದ ನಂತರ ಆ ಲೂಟಿಯಲ್ಲಿ ಭಾಗವಹಿಸಿದ ಎಲ್ಲ 9 ಕ್ರಾಂತಿಕಾರಿಗಳೂ ಬಂಧನಕ್ಕೆ ಒಳಗಾದ್ರೂ, ಆದ್ರೆ ಒಬ್ಬ ಮೆಹರುಬಿಯಾ ಕ್ರಾಂತಿಕಾರಿ ಮಾತ್ರ ಪೊಲೀಸರಿಗೆ ಮಣ್ಣು ಮುಕ್ಕಿಸಿದ್ದ; ಅವನೇ ಚಂದ್ರಶೇಖರ್ ಆಜಾದ್
ಚಂದ್ರಶೇಖರ್ ಆಜಾದ್ ಹಣೆದ ಯೋಜನೆಗಳಲ್ಲಿ ಪ್ರಮುಖವಾದವು ಕಾಕೂರಿ ಲೂಟಿ, ಸ್ಯಾಂಡರ್ಸನ್ ಹತ್ಯೆ ಹಾಗೂ ಪಾರ್ಲಿಮೆಂಟ್ನಲ್ಲಿ ಬಾಂಬ್ ದಾಳಿ. ಈ ಮೂರು ಪ್ರಕರಣಗಳ ಮಾಸ್ಟರ್ ಮೈಂಡ್ ಆಗಿ ನೇರವಾಗಿ ಭಾಗಿಯಾಗಿದ್ದ ಆಜಾದ್ ಕೊನೆಗೂ ಪೊಲೀಸರ ವ್ಯೂಹಕ್ಕೆ ಸಿಕ್ಕಿ ಬೀಳಲೇ ಇಲ್ಲ. ಅಂತಿಮವಾಗಿ ಪೊಲೀಸರು ವಶ ಪಡೆದಿದ್ದು ಆಜಾದ್ರ ಮೃತ ಪಾರ್ಥಿವ ಶರೀರ ಮಾತ್ರ.
ಕಾಕೂರಿ ಲೂಟಿ ಪ್ರಕರಣದಲ್ಲಿ ರಾಮ್ಪ್ರಸಾದ್ ಬಿಸ್ಮಿಲ್ಲಾ, ಅಶ್ಫಾಕುಲ್ಲಾ ಖಾನ್ ಹಾಗೂ ಇನ್ನೊಬ್ಬ ಕ್ರಾಂತಿಕಾರಿಯನ್ನು ಬ್ರಿಟೀಶ್ ಸರ್ಕಾರ ಗಲ್ಲಿಗೇರಿಸಿತು. ಹಿಂದೂಸ್ತಾನಿ ರಿಪಬ್ಲಿಕ್ ಆರ್ಮಿ ತನ್ನ ಒಡೆಯನನ್ನು ಹಿರಿಯರನ್ನು ಕಳೆದುಕೊಂಡಂತದಾಗ ಅದರ ನೇತೃತ್ವ ವಹಿಸಿದವರು ಆಜಾದ್, ಆಗ ಆಜಾದ್ ಜೊತೆಗೆ ಬೆಸೆದ ಇನ್ನೊಂದು ತೊಳು ಕ್ರಾಂತಿಕಾರಿ ಭಗತ್ ಸಿಂಗ್ರದ್ದು. 1928 ಸೆಪ್ಟೆಂಬರ 8ರಂದು ದಿಲ್ಲಿಯ ಪಾಳುಬಿದ್ದ ಕೋಟೆ ಫಿರೋಜ್ ಷಾ ಕೊಟ್ಲಾದಲ್ಲಿ ಮಹತ್ವದ ಸಭೆ ನಡೆಸಲಾಯ್ತು. ಇವರಿಬ್ಬರು ಸೇರಿ ಹಿಂದೂಸ್ತಾನಿ ರಿಪಬ್ಲಿಕ್ ಆರ್ಮಿ ಸಂಘಟನೆಯನ್ನು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಎಂದು ಬದಲಾಯಿಸಲಾಯುವ ನಿರ್ಧಾರ ತೆಗೆದುಕೊಂಡಿದ್ದೇ ಆಗ. ಆಗಲೂ ಅದರ ನೇತೃತ್ವದ ಚುಕ್ಕಾಣಿ ಹಿಡಿದಿದ್ದು ಚಂದ್ರಶೇಖರ್ ಆಜಾದರೇ. ಅಖಂಡ ಭಾರತದ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಸ್ವಾತಂತ್ರ್ಯಾ ನಂತರ ಭಾರತದ ಭವಿತವ್ಯಕ್ಕೆ ಸಮಾಜವಾದಿ ಸಿದ್ದಾಂತಗಳ ಅಳವಡಿಕೆ ಈ ಸಂಘಟನೆಯ ಪ್ರಮುಖ ಧ್ಯೇಯವಾಗಿತ್ತು.
ಕ್ರಾಂತಿಕಾರಿಗಳ ಚಳುವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ ಬ್ರಿಟೀಶ್ ಸರ್ಕಾರ ಸೈಮನ್ ಕಮಿಷನ್ ನೇಮಿಸಿತು. ಇದನ್ನು ವಿರೋಧಿಸಿ ಪ್ರತಿಭಟನೆಗೆ ಬಂದಿದ್ದ ಹಿರಿಯ ಜೀವ ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್. ಆ ವೇಳೆ ಪೊಲೀಸ್ ಅಧಿಕಾರಿ ಸ್ಕಾಟ್ನ ಅದೊಂದು ಮಾರಣಾಂತಿಕ ಹಲ್ಲೆ ಲಜಪತ್ರಾಯ್ರ ಜೀವವನ್ನೇ ಬಲಿಪಡೆದುಕೊಂಡಿತು. ಪಂಜಾಬ್ನ ಹೋರಾಟದ ಮುಖ್ಯ ಭೂಮಿಕೆಗೆ ಚೈತನ್ಯ ಶಕ್ತಿಯಂತಿದ್ದ ಲಾಲಾಜಿ 1928ರ ನವೆಂಬರ್ 17ರಂದು ನಿಧನರಾದರು. ಇದರಿಂದ ಕೆರಳಿದ ಕ್ರಾಂತಿಕಾರಿಗಳ ಕಣ್ಣಲ್ಲಿ ಸೇಡಿನ-ಪ್ರತಿಕಾರದ ಕಿಚ್ಚು ಮನೆ ಮಾಡಿತು. ಸಶಸ್ತ್ರ ಹೋರಾಟದಿಂದ ಮಾತ್ರ ಬ್ರಿಟೀಶರ ಸೊಕ್ಕು ಮುರಿಯಲು ಸಾಧ್ಯ ಎನ್ನುವುದನ್ನು ನಂಬಿದ್ದ ಆಜಾದ್ ಸ್ಕಾಟ್ನನ್ನು ಕೊಲ್ಲುವ ಯೋಜನೆ ರೂಪಿಸಿದರು. ಆದ್ರೆ ಸತ್ತಿದ್ದು ಇನ್ನೊಬ್ಬ ಅಧಿಕಾರಿ ಸ್ಯಾಂಡರ್ಸನ್. ಈ ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದು ಆಜಾದ್, ಭಗತ್ ಸಿಂಗ್ ಹಾಗೂ ರಾಜಗುರು. ಇದಾದ ನಂತರ ಎಷ್ಟೇ ಪ್ರಯತ್ನಿಸಿದ್ರೂ ಮೂವರನ್ನು ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಾಗಲೇ ಇಲ್ಲ.. ಲಾಲಾಜಿ ಹತ್ಯೆಗೆ ಪ್ರತಿಕಾರ ಸ್ಯಾಂಡರ್ಸ್ನ್ ಹತ್ಯೆ ಎನ್ನುವ ಕ್ರಾಂತಿಕಾರಿಗಳ ಭಿತ್ತಿಪತ್ರಗಳು ಲಾಹೋರ್ನಾದ್ಯಂತ ಕಂಡುಬಂದವು.
ಏಪ್ರಿಲ್ 1929ರಲ್ಲಿ ಸ್ವಾತಂತ್ರ ಹೋರಾಟದ ಕತ್ತು ಹಿಸುಕುವ ಮತ್ತೆರಡು ಮಸೂದೆಗಳು ಬ್ರಿಟೀಶ್ ಪಾರ್ಲಿಮೆಂಟ್ನಲ್ಲಿ ಅಂಗಿಕಾರವಾಗಲಿದ್ದವು. ಇದನ್ನು ವಿರೋಧಿಸಿ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಸಂಘಟನೆ ಕ್ರಾಂತಿಕಾರಿಗಳು ರೂಪಿಸಿದ ಮತ್ತೊಂದು ಯೋಜನೆ ಪಾರ್ಲಿಮೆಂಟ್ನಲ್ಲಿ ಬಾಂಬ್ ಸಿಡಿಸುವುದು. ಇದರ ಯೋಜನೆಯ ರೂಪುರೇಷೆ ಹಣೆದವರು ಭಗತ್ ಸಿಂಗ್ ಹಾಗೂ ಆಜಾದ್. ಆದ್ರೆ ಕಾರ್ಯರೂಪಕ್ಕಿಳಿಸಿದವರು ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್ತಾ. ಪೂರ್ವಯೋಜನೆಯಂತೆ ಲಾಹೋರ್ನ ಸಂಸತ್ತಿನಲ್ಲಿ ಬಾಂಬ್ ಸ್ಫೋಟಿಸಿದ ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್ತಾ, ಕ್ರಾಂತಿ ಚಿರಾಯುವಾಗಲಿ ಎನ್ನುತ್ತಾ ಘೋಷಣೆ ಕೂಗಿ ಬಂಧನಕ್ಕೊಳಗಾದ್ರು. ಬಟುಕೇಶ್ವರ್ ದತ್ತಾಗೆ ಜೀವಾವದಿ ಶಿಕ್ಷೆಯಾದ್ರೆ ಕಾಕೋರಿ ಲೂಟಿ ಹಾಗೂ ಸ್ಯಾಂಡರ್ಸನ್ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಕಾರಣ ಭಗತ್ ಸಿಂಗ್ಗೆ ಗಲ್ಲು ಶಿಕ್ಷೆ ಪ್ರಕಟವಾಯ್ತು.
ಅಂದು 1931 ಫೆಬ್ರವರಿ 27. ಅಲಹಬಾದ್ನ ಆಲ್ಫ್ರೆಡ್ ಪಾರ್ಕ್ನಲ್ಲಿ ಆಜಾದ್ ಮತ್ತು ಸುಖ್ದೇವ್ ರಹಸ್ಯ ಚರ್ಚೆ ನಡೆಸುತ್ತಿದ್ದರು. ಪೊಲೀಸ್ ಅಧಿಕಾರಿ ಹಾಲಿನ್ಸ್ ನೇತೃತ್ವದಲ್ಲಿ ಪೊಲೀಸ್ ಪಡೆ ಪಾರ್ಕ್ಗೆ ಮುತ್ತಿಗೆ ಹಾಕಿತು. ಶತಾಯಗತಾಯ ಆಜಾದ್ರನ್ನು ಬಂಧಿಸಲೇಬೇಕು ಅನ್ನುವ ನಿರ್ಧಾರಕ್ಕೆ ಹಾಲಿನ್ಸ್ ಬಂದಿದ್ದ. ಇದು ಗಮನಕ್ಕೆ ಬರುತ್ತಿದ್ದಂತೆ ಸುಖದೇವ್ಗೆ ತಪ್ಪಿಸಿಕೊಳ್ಳಲು ಹೇಳಿದ ಆಜಾದ್ ತನ್ನ ಬಳಿ ಇದ್ದ ಎರಡೂ ಪಿಸ್ತೂಲುಗಳಿಂದ ಪೊಲೀಸರ ಮೇಲೆ ಸತತ ಗುಂಡಿನ ದಾಳಿ ನಡೆಸಿದ. ಈ ದಾಳಿಯಲ್ಲಿ ಮೂವರು ಪೊಲೀಸರು ಮೃತರಾದರು. ಇನ್ನೇನು ಪೊಲೀಸರ ಕೈ ಮೇಲಾಗುತ್ತಿದೆ ಅನ್ನುವ ವಿಷಯ ಅರಿವಾಗುತ್ತಿದ್ದಂತೆ ಆಜಾದ್ ತನ್ನ ಬಳಿ ಇದ್ದ ಒಂದು ಬುಲೇಟ್ನಿಂದ ಆತ್ಮಾರ್ಪಣೆ ಮಾಡಿಕೊಂಡರು.
ನಂಬಿಕೆದ್ರೋಹವೆಸಗಿ ಆಜಾದ್ರ ಸಾವಿಗೆ ಕಾರಣನಾಗಿದ್ದು ಓರ್ವ ಭಾರತೀಯ ಹಾಗೂ ಆಜಾದ್ರ ನಿಕಟವರ್ತಿತಾಗಿದ್ದ ವ್ಯಕ್ತಿಯೇ. ವೀರಭದ್ರ ತಿವಾರಿ ಹಾಗೂ ಯಶ್ಪಾಲ್ ಎನ್ನುವವರು ಎಸಗಿದ ವಿಶ್ವಾಸದ್ರೋಹ ಧೀಮಂತ ಕೆಚ್ಚೆದೆಯ ಹೋರಾಟಗಾರ ಆಜಾದರ ಸಾವಿಗೆ ಕಾರಣವಾಯ್ತು. ಆಲ್ಫ್ರೆಡ್ ಉದ್ಯಾನದಲ್ಲಿ ಚಂದ್ರಶೇಖರ್ ಆಜಾದ್ ಇದ್ದಾರೆ ಅನ್ನುವ ಮಾಹಿತಿಯನ್ನು, ಆಜಾದ್ ಬಂಧನಕ್ಕೆಂದೇ ನಿಯೋಜನೆಗೊಂಡಿದ್ದ ಶಂಭುನಾಥ್ ಎಂಬ ಅಧಿಕಾರಿಗೆ ಮಾಹಿತಿ ನೀಡಿದವರೇ ಈ ದ್ರೋಹಿಗಳು.
ಚಂದ್ರಶೇಖರ್ ಆಜಾದ್ ಅನ್ನುವ ಹೆಸರೂ ಇವತ್ತಿಗೂ ಅಸಂಖ್ಯ ಭಾರತೀಯರಲ್ಲಿ ಉಲ್ಲಾಸ ಚೈತನ್ಯ ಮೂಡಿಸುತ್ತದೆ. ರಾಷ್ಟ್ರಪ್ರೇಮಕ್ಕೆ ಕೊಡುವ ಉದಾಹರಣೆಯಾಗಿ ಅವರ ಹೆಸರನ್ನು ಹೇಳಲಾಗುತ್ತೆ. ಆಜಾದ್ ಸ್ವಾತಂತ್ರ್ಯಾನಂತರ ಭಾರತದ ಆಡಳಿತ ವ್ಯವಸ್ಥೆ ಹೇಗಿರಬೇಕು ಎಂದೂ ಚಿಂತಿಸಿದ್ದರು. ಇನ್ನು ಅವರ ಜೀವನದ ಬಹುಭಾಗವನ್ನು ಝಾನ್ಸಿಯಲ್ಲೇ ಕಳೆದಿದ್ದರು ಅನ್ನುವ ವಿಷಯವೂ ಬಹಳ ಜನರಿಗೆ ತಿಳಿದಿಲ್ಲ.
ಆಜಾದ್ ಹುತಾತ್ಮರಾದ 2 ಗಂಟೆಯ ನಂತರವೂ ಅವರ ಪೊಲೀಸರು ಅವರ ಬಳಿ ಹೋಗಿರಲಿಲ್ಲ. ಅವರ ಕೈನಲ್ಲಿ ಪಿಸ್ತೂಲ್ ಹಾಗೆಯೇ ಇತ್ತು. ಅಜಾದ್ ಮೃತರಾದ ಸುದ್ದಿ ಕೇಳಿ ಆಲ್ಫ್ರೆಡ್ ಪಾರ್ಕಿನಲ್ಲಿ ಸಾವಿರಾರು ದೇಶಪ್ರೇಮಿಗಳು, ಕ್ರಾಂತಿಕಾರಿಗಳು, ಆಜಾದ್ರ ಅಭಿಮಾನಿಗಳು ಜಮೆಯಾಗತೊಡಗಿದ್ದರು. ಆದರೆ ಪೊಲೀಸರು ಯಾರನ್ನೂ ಅತ್ತ ಬಿಡದೆ ಗುಪ್ತವಾಗಿ ಆಜಾದ್ರ ದೇಹವನ್ನು ಸಾಗಿಸಿ ಗಂಗಾನದಿಯ ತೀರದಲ್ಲಿ ರಹಸ್ಯವಾಗಿ ಅಂತ್ಯಕ್ರಿಯೆ ನಡೆಸಲಾಯ್ತು.
ಆಜಾದ್ ತಮ್ಮ ಒಟ್ಟಾರೆ 24 ವರ್ಷಗಳ ಬದುಕನ್ನು ಮೀಸಲಿಟ್ಟಿದ್ದೇ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹಾಗಾಗಿ ಮದುವೆಯಾಗದೇ ಬ್ರಹ್ಮಚಾರಿಯಾಗುಳಿದ್ರು. ತಮ್ಮ ಜೀವಿತದ ಬಹುತೇಕ ದಿನಗಳನ್ನು ಝಾನ್ಸಿಯಲ್ಲಿ ಕಳೆದ್ರು. ಝಾನ್ಸಿ ಅವರ ಸಂಘಟನೆ ಕಾರ್ಯಚಟುವಟಿಕೆಯ ಕೇಂದ್ರಸ್ಥಳವಾಗಿತ್ತು. ಝಾನ್ಸಿಯಿಂದ 15 ಕಿಲೋಮೀಟರ್ಗಳಷ್ಟು ದೂರದ ಆರ್ಚ್ಛಾ ಅರಣ್ಯದಲ್ಲಿ ಶಸ್ತ್ರಾಸ್ತ್ರ ಬಳಕೆ ಅಭ್ಯಾಸ ನಡೆಸುತ್ತಿದ್ದರು ಆಜಾದ್. ಅತ್ಯದ್ಭುತ ಗುರಿ ಹೊಂದಿದ್ದ ಆಜಾದ್ ಸಂಘಟನೆಯ ಸದಸ್ಯರಿಗೆ ಶಸ್ತ್ರಾಸ್ತ್ರ ಬಳಕೆಯ ತರಬೇತಿ ಸಹ ನೀಡುತ್ತಿದ್ದರು. ಅದೇ ಅರಣ್ಯದಲ್ಲಿ ಹರಿಯುತ್ತಿದ್ದ ಸಾತಾರ್ ಕಿರುನದಿಯ ತೀರದಲ್ಲಿ ಹನುಮಂತನ ಮಂದಿರದ ಬಳಿ ಕುಟೀರ ನಿರ್ಮಿಸಿಕೊಂಡು ಪಂಡಿತ್ ಹರಿಶಂಕರ್ ಬ್ರಹ್ಮಚಾರಿ ಎನ್ನುವ ಹೆಸರಿನಲ್ಲಿ ಕೆಲ ಕಾಲ ಬದುಕಿದ್ದರು. ಅವರು ಬದುಕಿದ್ದಾಗ ಹಳ್ಳಿಯ ಮಕ್ಕಳಿಗೆ ಆಗಾಗ ಪಾಠ ಮಾಡಲು ತೆರಳುತ್ತಿದ್ದ ಧೀಮಾರ್ಪುರ ಅವರ ಮರಣಾನಂತರ ಜಾದ್ಪುರವೆಂದು ಬದಲಾಗಿದೆ. ಝಾನ್ಸಿಯ ದಂಡುಪ್ರದೇಶದ ಸಾದರ್ ಬಜಾರ್ನಲ್ಲಿದ್ದ ಬುಂದೇಲ್ಖಂಡ್ ಮೋಟಾರ್ ಗ್ಯಾರೇಜಿನಲ್ಲಿಯೇ ಆಜಾದ್ ಕಾರ್ ಚಲಾಯಿಸುವುದನ್ನು ಕಲಿತಿದ್ದರು.
ಚಂದ್ರಶೇಖರ್ ಆಜಾದ್ ವ್ಯಕ್ತಿತ್ವದಲ್ಲೇ ಒಂದು ಪ್ರಖರ ಮೊನಚಿತ್ತು. ನಾಯಕತ್ವದ ಗುಣಗಳು, ಸಂಘಟನಾತ್ಮಕ ಸ್ವಭಾವ ಅವರಿಗೆ ಬಾಲ್ಯದಿಂದಲೇ ಸಿದ್ಧಿಸಿತ್ತು. ಸದಾಶಿವರಾವ್ ಮಲ್ಕಾಪುರ್ಕರ್, ವಿಶ್ವನಾಥ್ ವೈಶಂಪಾಯನ್, ಭಗವಾನ್ ದಾಸ್ ಮಾಹೌರ್, ಪಂಡಿತ್ ರಘುನಾಥ್ ವಿನಾಯಕ್ ಧುಲೇಕರ್ ಮತ್ತು ಪಂಡಿತ್ ಸೀತಾರಾಮ್ ಭಾಸ್ಕರ್ ಭಾಗವತ್ ಮುಂತಾದ ಕ್ರಾಂತಿಕಾರಿಗಳ ಗರಡಿ ಹುರಿಗೊಂಡಿದ್ದೇ ಚಂದ್ರಶೇಖರ್ ಆಜಾದ್ರ ನಾಯಕತ್ವದಲ್ಲಿ.
ಆಜಾದರ ಬಗೆಗಿನ ರಹಸ್ಯ ಕಡತವೊಂದು ಇಂದಿಗೂ ಲಕ್ನೌನ ಗೋಖಲೆ ಮಾರ್ಗ್ ರಸ್ತೆಯಲ್ಲಿರುವ C.I.D. ಪ್ರಧಾನ ಕಚೇರಿಯಲ್ಲಿ ರಕ್ಷಣೆಯಲ್ಲಿದೆ. ಸಾಯುವಾಗ ಅವರ ಕೈನಲ್ಲಿದ್ದ ಕೋಲ್ಟ್ ಕಂಪೆನಿಯ ಪಿಸ್ತೂಲ್, ಅಲಹಾಬಾದ್ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಆಜಾದ್ ಕೊನೆಯ ಬುಲೆಟ್ವರೆಗೆ ಹೋರಾಡಿ ಮಡಿದ ಆಲ್ಫ್ರೆಡ್ ಉದ್ಯಾನವನ್ನು ಚಂದ್ರಶೇಖರ ಆಜಾದ್ ಉದ್ಯಾನವೆಂದು ಮರು ನಾಮಕರಣಗೊಳಿಸಲಾಗಿದೆ. 1964ರಲ್ಲಿ ತೆರೆಕಂಡ ಆಜಾದ್ ಜೀವನಾಧಾರಿತ ಸಿನಿಮಾದಲ್ಲಿ ಮನೋಜ್ ಕುಮಾರ್ರ ನಟಿಸಿದ್ದರು. ಶಹೀದ್ ಭಗತ್ ಸಿಂಗ್, ದ ಲೆಜೆಂಡ್ ಆಫ್ ಭಗತ್ ಸಿಂಗ್, ರಂಗ್ ದೇ ಬಸಂತಿ ಚಿತ್ರಗಳಲ್ಲಿ ಆಜಾದ್ ಪಾತ್ರ ನಿರೂಪಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಕೆಲವು ಮೂಲಗಳ ಮಾಹಿತಿಯ ಪ್ರಕಾರ ಆಜಾದ್ರ ನಾಯಕತ್ವದ ಗುಣಗಳು, ಸಂಘಟನೆ, ತರ್ಕಶಕ್ತಿ, ಆಲೋಚನಾ ಕ್ರಮ ಹಾಗೂ ದೇಶಪ್ರೇಮ ಆಚಾರ್ಯ ಕೃಪಾಲಾನಿಯಿಂದ ನೆಹರೂವರೆಗೆ ಪ್ರಭಾವಗೊಳಿಸಿತ್ತು. ಹೀಗಾಗಿ ಆಜಾದ್ರನ್ನು ದುಂಡುಮೇಜಿನ ಸಭೆಗೆ ಪ್ರತಿನಿಧಿಯನ್ನಾಗಿಸಿ ರಾಯಭಾರಿಯನ್ನಾಗಿ ಕಳುಹಿಸಲು ಕಾಂಗ್ರೆಸ್ ಅಧಿವೇಶನದಲ್ಲಿ ನಿರ್ಧಾರಿಸಿತ್ತು. ದುಂಡುಮೇಜಿನ ಸಭೆಯಲ್ಲಿ ಭಾರತವನ್ನು ಸಂಪೂರ್ಣ ಸ್ವತಂತ್ರಗೊಳಿಸಲು ಆಜಾದ್ ಭಾಷಣ ಮಂಡಿಸಬೇಕಾಗಿತ್ತು. ಅದಾದ ನಂತರ ಸಮಾಜವಾದಿ ವ್ಯವಸ್ಥೆ ಅಧ್ಯಯನ ಮಾಡಲು ರಷ್ಯಾಕ್ಕೆ ಭೇಟಿ ನೀಡಲು ಆಜಾದ್ ಯೋಚಿಸಿದ್ದರು.
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪ್ರಚಂಡ ರಣ ಪರಾಕ್ರಮಿ, ಧ್ಯೇಯಕ್ಕಾಗಿ ಜೀವವನ್ನೇ ಮುಡುಪಿಟ್ಟ ಅದಮ್ಯ ಸಾಹಸಿ, ಧೀರೋದಾತ್ತ ಕ್ರಾಂತಿಕಾರಿ, ಸ್ವಾತಂತ್ರ್ಯಯಜ್ಞಕ್ಕೆ ತನ್ನನ್ನೇ ಸಮಿಧೆಯನ್ನಾಗಿಸಿ ಬದುಕು ಮುಗಿಸಿದ ರಾಷ್ಟ್ರಪ್ರೇಮಿ ಚಂದ್ರಶೇಖರ ಆಜಾದ್ರ ಜನ್ಮಜಯಂತಿ ಇಂದು. ನಮ್ಮ ಇಂದಿನ ಪೀಳಿಗೆಯ ಮಕ್ಕಳಿಗೆ ಆಜಾದ್ರ ಕಥೆ ಹೇಳಿ ದೇಶಪ್ರೇಮ ಬೆಳೆಸಬೇಕಿದೆ.
ಶಹೀದ್ ಚಂದ್ರಶೇಖರ್ ಆಜಾದ್ ನಮ್ಮೆಲ್ಲರ ಜನಮಾನಸದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಹೆಸರು. ಬದುಕಿದ್ದು ಕೆಲವೇ ಕಾಲವಾದರೂ ನರನಾಡಿಗಳಲ್ಲಿ ರಾಷ್ಟ್ರಪ್ರೇಮವನ್ನೇ ತುಂಬಿಕೊಂಡಿದ್ದ ಕ್ರಾಂತಿಕಾರಿ ಆಜಾದ್ ಚಿರಸ್ಥಾಯಿಯಾಗಿ ಉಳಿಯುತ್ತಾರೆ.
-ವಿಭಾ








