ಕಾಫಿ ಪುರಾಣ ಅನ್ನುವ ಒಂದು ಹಿಲೇರಿಯಸ್ ಹಾಸ್ಯದ ಕಾಲ್ಪನಿಕ ಚಿತ್ರಣ: ಸತ್ಯಲೋಕ – ಅಮರಾವತಿಯಲ್ಲಿ ಹುಟ್ಟಿತೇ ಕಾಫೀ ಪೇಯ!
ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ “ಕಾಫಿ”ರ ಮತ್ತು “ಚಹಾ”ಜಹಾನರ ನಡುವಿನ ಸೃಜನಾತ್ಮಕ ಪೋಸ್ಟ್ ಸಮರದಲ್ಲಿ ಹುಟ್ಟಿಕೊಂಡ
ಲಘು ಹಾಸ್ಯದ ಕಾಫಿ ಸೃಷ್ಟಿಯಾದ ಕಾಲ್ಪನಿಕ ಕಥೆಯಿದು.
*
ದೃಶ್ಯ ಒಂದು:
ಸತ್ಯ ಲೋಕದಲ್ಲಿ ಬ್ರಹ್ಮ ನರ ಮನುಷ್ಯರ ಹಣೇ ಬರಹ ತಿದ್ದುತ್ತಾ ಕೂತಿದ್ದರೇ, ಸರಸ್ವತಿ ದೇವಿ ವೀಣೆಯ ಟ್ಯೂನಿಂಗ್ ಮಾಡ್ತಾ ಕೂತಿದ್ದಳು.
ಬ್ರಹ್ಮನಿಗೂ ಮನುಷ್ಯ ಪ್ರಾಣಿಯ ವಿಧಿಲಿಖಿತ ತಿದ್ದೀ ತಿದ್ದೀ ತಲೆ ನೋವು ಬಂತು. ವೀಣಾಪಾಣಿಗೂ ಶೃತಿ ಸೇರುತ್ತಿಲ್ಲ ಎಂದು ತಲೆ ಕೆಟ್ಟಿ ಹೋಯ್ತು. ಬ್ರಹ್ಮ ಲೋಕದ ಅಡಿಗೆ ಮನೆಯಿಂದ ಬಾಣಸಿಗ ಥಟ್ಟನೇ ಸೌಟಿನ ಜೊತೆ ಪ್ರತ್ಯಕ್ಷವಾದವನೇ, ತಲೆ ನೋವಿಗೆ ಅದೇನೊ ಧನ್ವಂತ್ರಿ ಎಲೆಯ ಚಹಾ ಮಾಡಿಕೊಡುವುದಾಗಿ ಭರವಸೆ ನೀಡಿ, ತಯಾರಿಸಿ ಕೊಟ್ಟೂ ಬಿಟ್ಟ.
ಆದ್ರೆ ಅದ್ರಿಂದ ಬ್ರಹ್ಮ ದೇವನ ಹಾಗೂ ಮಾತೆ ಸರಸ್ವತಿಯ ತಲೆ ನೋವು ಒಂದಿನಿತೂ ಕಡಿಮೆಯಾಗಲೇ ಇಲ್ಲ. ಆಗ ಬ್ರಹ್ಮ ಅನಿವಾರ್ಯವಾಗಿ ಶಚಿಪತಿಯನ್ನು ನೆನೆಸಿಕೊಂಡ. ಇಂದ್ರ ಕೂಡಾ ಮರುಕ್ಷಣವೇ ಹಾಜರಾದ.
ಬ್ರಹ್ಮ: “ನೀನು ಶಚಿ ದೇವಿಯನ್ನು ಓಲೈಸಿಕೊಳ್ಳಲು ಉಪ್ಪಿಟ್ಟು, ನೀರು ಮಾವಿನ ಅಪ್ಪೇ ಗೊಜ್ಜು ಮಾಡಿದ್ದು ಸಾಕು ಮಾರಾಯ. ನಂಗೆ ತಲೆ ಸಿಡಿದು ಹಾರ್ತಿದೆ ಏನಾದ್ರೂ ಅಮೃತ ಸದೃಶ್ಯ ಪೇಯ ಮಾಡುವುದನ್ನು ಪ್ರಯೋಗ ಮಾಡು. ಇವತ್ತೇ, ಈಗಲೇ!”
ಇಂದ್ರ: “ಪಿತಾಮಹ ಬ್ರಹ್ಮ! ಡೋಂಟ್ ವರಿ. ಶಚಿಗೂ ಮೈಗ್ರೇನ್ ಪ್ರಾಬ್ಲಂ ಇದೆ. ಅವಳೂ ಬಹಳ ಕಾಲದಿಂದ ಇದನ್ನೇ ಹೇಳ್ತಿದ್ದಳು. ತಲೇಲಿ ಒಂದು ಕಾನ್ಸೆಪ್ಟ್ ಇತ್ತು. ನೀವ್ ಬೇರೆ ತಲೆ ಅಲ್ಲಾಡಿಸಿಕೊಂಡು ಒದ್ದಾಡ್ತಿದ್ದೀರಾ. ಮತ್ತೇ ತಲೆ ಕೆಟ್ಟು ಎಂತೆಂತೋರನ್ನು ಸೃಷ್ಟಿ ಮಾಡಿಬಿಟ್ಟೀರಾ! ಈಗಲೇ ಪ್ರಯೋಗ ಮಾಡಿ ತಂದು ಕೊಡ್ತೀನಿ. ಅಲ್ಲಿ ತನಕ ರಿಲ್ಯಾಕ್ಸ್ ಮಾಡ್ತೀರಿ. ಪ್ಲೀಸ್ ವರ್ಕ್ ಸ್ಟಾಪ್ ಮಾಡಿಬಿಡಿ. ಲಾಗೌಟ್ ಮಾಡಿದ್ರೂ ಆದೀತು..”
ಬ್ರಹ್ಮ: “ಅದೇನು ಮಾಡ್ತಿಯೋ ಬೇಗ ಮಾಡಿಕೊಡು. ನಂಗೆ ನಾಲ್ಕು ತಲೆಗಳೂ ಭರತನಾಟ್ಯ ಆಡ್ತಿವೆ.”
ಇಂದ್ರ ಎಕ್ಸಿಟ್ ಆಗಿ ದೇವಲೋಕದ ಕಡೆ ಹೊರಡ್ತಾನೆ.
ಸೀನ್ ಎಂಡ್
*
ದೃಶ್ಯ ಎರಡು:
ಅಮರಾವತಿಯ ಇಂದ್ರನ ಬೆಡ್ ರೂಂ ಅಲ್ಲೋಲ ಕಲ್ಲೋಲ ಆಗಿದೆ. ಬೆಡ್ ಸ್ಪ್ರೆಡ್ ಸೀಲಂಗ್ ಫ್ಯಾನ್ ಗೆ ನೇತು ಹಾಕಿಕೊಂಡಿದೆ. ದಿಂಬುಗಳು ಕೊಳದಲ್ಲಿ ಈಜಾಡ್ತಿವೆ. ಬೆಡ್ ಲ್ಯಾಂಪ್ ವೈರ್ ಗಳು ಐರಾವತದ ಸೊಂಡಿಲಿಗೆ ಸುತ್ತಿಕೊಂಡಿವೆ. ಕಾಲಿಟ್ಟ ಕಡೆಯಲ್ಲಾ ನೆಲದಲ್ಲಿ ಪರ್ಫ್ಯೂಮ್ ಬಾಟೆಲ್, ಬಾಡಿ ಲೋಷನ್, ಫೇಸ್ ಕ್ರೀಂ. ಪೌಡರ್ ಬಾಟೆಲ್ ಬಿದ್ದು ಉರುಳಾಡ್ತಿವೆ.
ಇಂದ್ರಲೋಕಕ್ಕೆ ಯಾವುದಾದರೂ ರಾಕ್ಷಸ ಸೈನ್ಯ ಮುತ್ತಿಗೆ ಹಾಕಿದೆಯಾ ಎಂದು ಒಂದು ಕ್ಷಣ ಇಂದ್ರ ಅನುಮಾನಿಸಿದ. ಆದರೇ ಮರುಕ್ಷಣವೇ ಅವನ ಚಿತ್ತಕ್ಕೆ ಹೊಳೆಯಿತು, ಹಾಂ ಶಚೀ ದೇವಿಗೂ ತಲೆನೋವು ಒಕ್ಕರಿಸಿಕೊಂಡಿದೆ.
ಈ ಸಮಯದಲ್ಲಿ ಶಚಿ ದೇವಿಯ ಜೊತೆ ಮಾತಾಡುವುದು ಕಷ್ಟ ಸಾಧ್ಯ! ಮೊದಲು ಇದಕ್ಕೊಂದು ಉಪಶಮನ ಕಂಡು ಹಿಡಿಯಲೇ ಬೇಕು ಎಂದು ಕೊಂಡವನೇ, ತಕ್ಷಣ ಪಾಕಶಾಲೆಗೆ ಹಾಜರಿರುವಂತೇ ಅಶ್ವಿನಿ ದೇವತೆಗಳಿಗೆ ಇಂಟರ್ ಕಾಂ ಸಂದೇಶ ಕಳಿಸಿದ.
ಅಮರಾವತಿಯ ಪಾಕಶಾಲೆಯಲ್ಲಿ ಇಂದ್ರ ಸ್ವತಃ ಪ್ರವೇಶಿಸಿ, ಹಾಲಿದೆಯಾ ನೋಡಿದ. ಕಾಮಧೇನು ಗೊಮಾತೆ ಯಾವತ್ತು ಕ್ಷೀರಧಾರೆ ತಪ್ಪಿಸಿದ್ದಾಳೆ! ಕಾಮಧೇನು ಮತ್ತು ಅದರ ಮಗಳು ನಂದಿನಿ ದೇವಲೋಕಕ್ಕೇ ಶೋಭೆ ಎನ್ನುವ ಹೆಮ್ಮೆಯಾಯಿತು ಅವನಿಗೆ.
ನಂದಿನಿಯನ್ನು ಮಹರ್ಷಿ ವಸಿಷ್ಟನಿಗೆ ಹಿಂದೆ ಕೊಟ್ಟಿದ್ದ. ಯಾವಾಗ ಕೌಶಿಕ ರಾಜ ನಂದಿನಿ ಹಸುವಿಗಾಗಿ ಯುದ್ಧಮಾಡಿ ವಿಶ್ವಾಮಿತ್ರನಾದನೋ, ಈ ಋಷಿ ಮುನಿಗಳ ರಗಳೆಯೇ ಬೇಡ ಅಂತ ನಂದಿನಿಯನ್ನು ವಾಪಾಸು ದೇವಲೋಕಕ್ಕೆ ಕರೆತಂದಿದ್ದ.
ಅಶ್ವಿನಿ ದೇವತೆಗಳು ಪ್ರವೇಶಿಸಿದರು.
ಇಂದ್ರ: “ತಲೆನೋವು ನಿವಾರಕ ಶಿರೋಬಾದಕ ಪರಿಹಾರ ಪೇಯ ತಯಾರಿಸಬೇಕೆಂದಿದ್ದೇನೆ. ಏನಾದರೂ ಸಲಹೆಗಳಿವೆಯೇ?”
ಅಶ್ವಿನಿ ದೇವತೆಗಳು: “ಯುವರ್ ಎಕ್ಸಲೆನ್ಸಿ, ಒಂದು ಅದ್ಭುತ ಅವಳಿ ಸಸ್ಯವಿದೇ. ಒಂದರ ಹೆಸರು ಅರಾಬಿಕಾ ಇನ್ನೊಂದು ರೋಬೋಸ್ಟಾ. ಈ ಎರಡು ಜಾತಿಯ ಅವಳಿ ಸಸ್ಯಗಳು ಉತ್ಕೃಷ್ಟವಾದ ಬೀಜಗಳನ್ನು ಪ್ರಧಾನ ಮಾಡುತ್ತವೆ. ಇದೇನಾದರೂ ಪ್ರಯೋಜನವಾಗಬಹುದೇನೋ ಪರಿಶೀಲಿಸಬಹುದು.”
ಇಂದ್ರ: “ಯಾವುದಾದರೂ ಒಂದು ಬೀಜವನ್ನು ಈಗಿಂದೀಗಲೇ ತಂದುಕೊಡಲು ಸಾಧ್ಯವೇ?”
ಅಶ್ವಿನಿದೇವತೆ ಕಣ್ಣು ಮುಚ್ಚಿ ಪ್ರಾರ್ಥಿಸಿ ಕೈ ಮುಷ್ಟಿ ಬಿಗಿ ಹಿಡಿದರು. ಇಬ್ಬರೂ ದೇವತೆಗಳ ಮುಷ್ಟಿಯೂ ಬೀಜಗಳಿಂದ ತುಂಬಿತು.
ಇಂದ್ರ ಒಬ್ಬ ಅಶ್ವಿನಿ ದೇವತೆಯಿಂದ ಪಡೆದ ಒಂದು ಮುಷ್ಟಿ ಅರೇಬಿಕಾ ಕಾಫಿ ಬೀಜವನ್ನು ಬಾಣಲೆಗೆ ಹಾಕಿ ಸ್ಟೌವ್ ಹೊತ್ತಿಸಿದ. ಅದರ ಪಕ್ಕದಲ್ಲೇ ಇನ್ನೊಂದು ಬಾಣಲಿಗೆ ಮತ್ತೊಬ್ಬ ಅಶ್ವಿನಿ ದೇವತೆ ಕೊಟ್ಟ ಮತ್ತೊಂದು ಮುಷ್ಟಿ ರೋಬೋಸ್ಟಾ ಕಾಫಿ ಬೀಜವನ್ನು ಸುರುವಿದ. ಹದವಾದ ಉರಿಯಲ್ಲಿ ಹುರಿಯತೊಡಗಿದ.
ಅದೇ ಸಮಯದಲ್ಲಿ ಅಲ್ಲಿಗೆ ಬಂದ ವಾಯದೇವ.
ಫ್ಲಾಶ್ ಬ್ಯಾಕ್:
ಅದಾಗಲೇ ಅವನಿಗೂ ಮಹರ್ಷಿ ನಾರದರು ಬ್ರಹ್ಮ ಲೋಕದಲ್ಲಿ ಆದ ಘಟನೆ ಮತ್ತು ಶಚಿದೇವಿಯ ಮೈಗ್ರೇನ್ ಶಿರೋಬಾದಕದ ಪ್ರಕೋಪಗಳ ಸಂಗತಿಯನ್ನೂ ಹೇಳಿ, ಇದಕ್ಕಾಗಿ ಗುರು ಬ್ರಹಸ್ಪತಿಯಿಂದ ಈ ಹಿಂದೆಯೇ ಜ್ಞಾನ ಪ್ರಾಪ್ತಿ ಮಾಡಿಕೊಂಡಿದ್ದ ಇಂದ್ರ ದೇವ ಹೊಸ ಪ್ರಯೋಗ ಮಾಡಲು ಹೊರಟಿರುವ ವಿಚಾರ ಹೇಳಿದ್ದರು.
ಕೂಡಲೇ ವಾಯುದೇವ ಭೂಲೋಕಕ್ಕೆ ತೆರಳಿ ಹಿಮಾಲಯದ ತಪ್ಪಲಿನಲ್ಲಿ ಹನುಮಂತ ಸಂಜೀವಿನಿ ಹುಡುಕಿದ್ದ ಮೂಲಿಕಾ ವನದಲ್ಲಿ ಹುಡುಕಾಡಿ ಅತ್ಯಂತ ಕಹಿಯಾದ ಚಿಕೋರಿ ಎಂಬ ಸಸ್ಯದ ಎಲೆಗಳನ್ನು ತೆಗೆದುಕೊಂಡು ಇಂದ್ರಲೋಕದ ಕಡೆಗೆ ದೌಡಾಯಿಸಿದ್ದ.
ಫ್ಲಾಶ್ ಬ್ಯಾಕ್ ಎಂಡ್..
ಅಮರಾವತಿಯ ಪಾಕಶಾಲೆಗೆ ಏಕಾಏಕಿ ಅಪ್ಪಣೆ ಇಲ್ಲದೇ ಹೋರಿಯಂತೆ ಒಳನುಗ್ಗಿದ ವಾಯುದೇವನ ವರ್ತನೆಯಿಂದ ಇಂದ್ರನಿಗೆ ಚೂರು ಅಸಮಧಾನ ಉಂಟಾಯ್ತು. ಇತ್ತೀಚೆಗೆ ಈ ವಾಯು, ವರುಣ, ಅಗ್ನಿ ಇವರಿಗೆಲ್ಲಾ ಶಿಸ್ತು ಕಡಿಮೆಯಾಗಿದೆ. ಇವರ ಮೇಲೊಂದು ಡಿಸಿಪ್ಲಿನರಿ ಆ್ಯಕ್ಷನ್ ತಗೊಳ್ಳಬೇಕು ಎಂದು ಮನಸಿನಲ್ಲೇ ನಿರ್ಧಾರಿಸುವ ಹೊತ್ತಿಗೆ ವಾಯುದೇವ ಮಾತಾಡಿದ.
ವಾಯುದೇವ: “ಯುವರ್ ಎಕ್ಸಲೆನ್ಸಿ, ಅಪ್ಪಣೆ ಇಲ್ಲದೇ ಪ್ರವೇಶ ಪಡೆದಿದ್ದಕ್ಕೆ ಅಪಾಲಜಿ ಚಾಹ್ತಾ ಹೂಂ. ಆದರೆ ಪರಿಸ್ಥಿತಿ ಹಾಗಿತ್ತು. ನೀವು ಈಗ ಹುರಿಯುತ್ತಿರುವ ಬೀಜದ ಜೊತೆಗೆ ಈ ಎಲೆಯನ್ನೂ ಸೇರಿಸಿ ಹುರಿದರೆ ಮಾತ್ರ ಈ ಪೇಯ ಅದ್ಭುತವಾಗುತ್ತದೆ. ಅದರ ಘಮ, ಸ್ವಾದ ಮತ್ತು ಉತ್ಕೃಷ್ಟತೆ ಹೆಚ್ಚುತ್ತದೆ. ಈ ಪತ್ರೆಯ ಹೆಸರು ಚಿಕೋರಿ ಎಂದು. ಇದನ್ನು ಸ್ವತಃ ನಾನೇ ಹಿಮಾಲಯದ ಸಂಜೀವಿನಿ ವನದಿಂದ ತಂದಿದ್ದೇನೆ.”
ಇಂದ್ರ ವಾಯುವಿನ ಮಾತು ಕೇಳಿ ಅಸಮಾಧಾನ ಡಿಸಿಪ್ಲಿನರಿ ಆ್ಯಕ್ಷನ್ ಎಲ್ಲಾ ಮರೆತು ಪ್ರಸನ್ನನಾದ.
ಇಂದ್ರ: “ಹೌದೇ ವಾಯುದೇವ. ಗುಡ್! ಈ ಚಿಕೋರಿ ಎಲೆಯ ಬಗ್ಗೆ ನಿಂಗ್ಯಾರು ಹೇಳಿದರು? ಇದರ ಮಹತ್ವವೇನು?”
ವಾಯುದೇವ: “ಲೋಕಸಂಚಾರದಲ್ಲಿ ನಿರತರಾಗಿದ್ದ ದೂರ್ವಾಸ ಮಹರ್ಷಿಗಳು ಒಮ್ಮೆ ಸಂಜೀವಿನಿ ಪರ್ವತದಲ್ಲಿ ಸಂಚರಿಸುತ್ತಿದ್ದಾಗ ಈ ಚಿಕೋರಿ ಸಸ್ಯಕನ್ಯೆ ಅವರನ್ನು ಅಣಕಿಸುವಂತೆ ಪದೇ ಪದೇ ಅಡ್ಡ ಬರುತ್ತಿದ್ದಳಂತೆ. ಆಗ ಚಿಕೋರಿ ಕನ್ಯೆಯ ಎಲೆಗಳು ಜೇನಿಗಿಂತ ಸಿಹಿಯಾಗಿದ್ದವಂತೆ, ಇದೇ ಅಹಂಕಾರದಲ್ಲಿ ಅವಳು ದೂರ್ವಾಸರನ್ನು ಕೆಣಕಲು ಹೋಗಿದ್ದು. ಆದರೆ ಚಿಕೋರಿ ಸಸ್ಯ ಕನ್ಯೆಯ ಈ ಉಡಾಫೆಯ ವರ್ತನೆಯಿಂದ ಕೋಪಗೊಂಡ ದೂರ್ವಾಸರು, ತಮ್ಮ ಕಮಂಡಲದಿಂದ ಬೊಗಸೆ ನೀರು ಮೊಗೆದು ನಿನ್ನ ಪತ್ರೆಗಳು ಕಹಿಯಾಗಲಿ ಎಂದು ಶಾಪ ಕೊಟ್ಟುಬಿಟ್ಟರಂತೆ.”
ಇಂದ್ರ: “ಓಹ್ ಗಾಡ್! ಹೀಗಾಯ್ತಾ ಕಥೆ. ಆಮೇಲೆ.”
ವಾಯುದೇವ: “ಆಮೇಲೇನು ಮಾಮೂಲಿ ಋಷಿಗಳ ಕಥೇನೇ. ಚಿಕೋರಿ ಸಸ್ಯ ಕನ್ಯೆಗೂ ತನ್ನ ತಪ್ಪಿನ ಅರಿವಾಗಿ ಕ್ಷಮಿಸುವಂತೆ ದೂರ್ವಾಸರಿಗೆ ದೀರ್ಘದಂಡ ನಮಸ್ಕಾರ ಹೊಡೆದಳು. ದೂರ್ವಾಸ ಮುನಿಗಳು ಶಾಂತಚಿತ್ತರಾಗಿ ಹೋಗಲಿ ಕೊಟ್ಟ ಶಾಪವಂತೂ ವಾಪಾಸು ಪಡೆಯಲು ಸಾಧ್ಯವಿಲ್ಲ ಆದರೆ ಒಂದು ವರ ಕೊಡ್ತೀನಿ. ನಿನ್ನ ಎಲೆಗಳನ್ನು ಯಾರು ರೋಬೋಸ್ಟಾ ಅರೇಬಿಕಾ ಬೀಜದೊಂದಿಗೆ ಸೇರಿಸಿ ಪೇಯ ಮಾಡಿ ಕುಡಿದರೇ, ಅವರ ಶಿರೋಬಾದೆ ದೂರವಾಗಲಿ ಎಂದು ವರ ಕೊಟ್ರಂತೆ.”
ಈ ಕಥೆ ಹೇಳಿದ ವಾಯುದೇವ ತನ್ನ ಜೋಳಿಗೆಯಿಂದ ಚಿಕೋರಿ ಸಸ್ಯದ ಕಹಿ ಎಲೆಗಳನ್ನು ಇಂದ್ರನಿಗೆ ಕೊಟ್ಟು ಎಷ್ಟು ಪ್ರಮಾಣದಲ್ಲಿ ಬೆರೆಸಿ ಹುರಿಯಬೇಕು ಎನ್ನುವುದರ ಪರ್ಮುಟೇಶನ್ ಕಾಂಬಿನೇಷನ್ ಸಮೀಕರಣ ಹೇಳಿಕೊಟ್ಟ.
ನಂತರ ಇಂದ್ರ ಈ ಚಿಕೋರಿ ಎಲೆಗಳನ್ನು ಸೇರಿಸಿ ರೋಬೋಸ್ಟಾ ಮತ್ತು ಅರೇಬಿಕಾ ಎರಡೂ ಪ್ರತ್ಯೇಕ ಬೀಜಗಳನ್ನು ಹುರಿದು ಪುಡಿಮಾಡಿ ಪೇಯ ತಯಾರಿಸಿ ರೊಬೋಸ್ಟಾವನ್ನು ಎರಡು ಬಟ್ಟಲಿಲ್ಲಿ ಸತ್ಯಲೋಕದ ಬ್ರಹ್ಮದೇವ ಮತ್ತು ಸರಸ್ವತಿ ದೇವಿಗೂ, ಅರೇಬಿಕಾ ಪೇಯವನ್ನು ಶಚಿದೇವಿಗೂ ಕುಡಿಯಲು ಕೊಟ್ಟ.
ದೃಶ್ಯ ಎಂಡ್..
*
ದೃಶ್ಯ ಮೂರು:
ಸತ್ಯ ಲೋಕದಲ್ಲಿ ಲವಲವಿಕೆಯಿಂದ ಬ್ರಹ್ಮದೇವ ಸೃಷ್ಟಿಕಾರ್ಯದಲ್ಲಿ ತೊಡಗಿದ್ದ. ಸರಸ್ವತಿ ದೇವಿ ಅದ್ಭುತವಾದ ಮಾಲಕಂಸ್ ಹಿಂದೋಳ ರಾಘವನ್ನು ಲಹರಿಯಲ್ಲಿ ನುಡಿಸುತ್ತಾ ವಾತಾವರಣವನ್ನು ಮಧುರವಾಗಿಸಿಟ್ಟಿದ್ದಳು. ಆಗ ಅಲ್ಲಿಗೆ ನಾರದ ಪ್ರವೇಶಿಸಿದ.
ನಾರದ: “ನಾರಾಯಣ, ನಾರಾಯಣ.. ತಂದೇ ಇದೇನು ಎಂದೂ ಇಲ್ಲದ ಉತ್ಸಾಹ, ಸಂಭ್ರಮ, ಹರ್ಷ ಸತ್ಯಲೋಕದಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣವೇನು?”
ಬ್ರಹ್ಮ: “ನಿನಗೆ ತಿಳಿಯದ್ದೇನಿದೆ ನಾರದ? ಈಗೊಂದು ಅರ್ಧ ಗಂಟೆ ಮೊದಲು ನನಗೇ ಮತ್ತು ದೇವಿಗೆ ತಡೆಯಲಾರದಷ್ಟು ತಲೆಶೂಲವಿತ್ತು. ಅವಳದ್ದಾದರೇ ಒಂದು, ನನ್ನದೋ ನಾಲ್ಕು ತಲೆಗಳು. ಕೊನೆಗೆ ಇಂದ್ರ ಅದೇನೋ ಪೇಯ ತಯಾರಿಸಿ ಕೊಟ್ಟ. ವಾಹ್! ಏನದರ ಗಂಧ, ಏನು ಘಮ, ಏನು ಸ್ವಾದ, ಏನು ರುಚಿ. ಶಿರೋಬಾದಕ ತಕ್ಷಣವೇ ಮಾಯವಾಯ್ತು.”
ನಾರದ: “ಹೌದು ತಂದೆ, ಈಗ ತಾನೇ ಅಮರಾವತಿಯಲ್ಲಿ ಮೈಗ್ರೇನ್ ನಿಂದ ಬಳಲಿ ಕೃಶವಾಗಿದ್ದ ಶಚೀದೇವಿಯೂ ಇದೇ ಮಾತು ಹೇಳಿದಳು. ಇಂದ್ರನ ಎರಡೂ ಪ್ರಯೋಗ ಯಶಸ್ವಿಯಾಗಿದೆ. ಅಲ್ಲಿ ಅರೇಬಿಕಾ ಇಲ್ಲಿ ರೋಬೋಸ್ಟಾ. ಏನು ಮಹಿಮೆ ಆ ಪೇಯದ್ದು! ಎಷ್ಟು ಬಣ್ಣಿಸಿದರೂ ಸಾಲದು.”
ಸರಸ್ವತಿ ದೇವಿ: “ಅಷ್ಟೇ ಅಲ್ಲ ನಾರದ. ಈ ಪೇಯವನ್ನು ತಯಾರಿಸುವ ಬಗೆಯನ್ನೂ ಇಂದ್ರ ಹೇಳಿಕೊಟ್ಟಿದ್ದಾನೆ. ಹದವಾಗಿ ಕಾದು ಕೆನೆಗಟ್ಟಿದ ಹಾಲಿಗೆ ಕೊಂಚ ಶರ್ಕರಾಮೃತ ಬೆರೆಸಿ ಕೊಂಚ ಹೊತ್ತು ಕಾಯಿಸಬೇಕು. ನಂತರ ಇಂದ್ರ ತಯಾರಿಸಿರುವ ಆ ಬೀಜದ ಪುಡಿಯನ್ನು ಒಂದು ಅಂದಾಜಿನ ಪ್ರಮಾಣದಲ್ಲಿ ಮಿಶ್ರ ಮಾಡಿ ಸ್ಟೌವ್ ನಿಂದ ಕೆಳಗಿಳಿಸಿಬಿಡಬೇಕು. ಪುಡಿ ಮಿಶ್ರ ಮಾಡಿದ ನಂತರ ಮತ್ತೆ ಕಾಯಿಸಿದರೇ ಪೇಯ ಕಹಿಯಾಗುವುದಂತೆ. ಕೊನೆಯಲ್ಲಿ ಒಂದು ಶುದ್ಧ ತೆಳು ಹತ್ತಿ ಬಟ್ಟೆಯಲ್ಲಿ ಪೇಯವನ್ನು ಸೋಸಿ ಬಿಸಿಯಾಗಿರುವಾಗಲೇ ಹೀರಿಬಿಟ್ಟರೇ ಅದೆಂತಹ ತಲೆನೋವಾದರೂ ಕ್ಷಣಾರ್ಧದಲ್ಲಿ ಮಾಯವಾಗುವುದಂತೆ. ಅಂದ ಹಾಗೆ ಈ ಪೇಯಕ್ಕೊಂದು ನಾಮಕರಣ ಮಾಡಿ ದೇವರ್ಷಿ.”
ನಾರದ: (ಕೊಂಚ ಕ್ಷಣ ಯೋಚಿಸಿ) “ಮಾತೇ, ಈ ಪೇಯವನ್ನು ನಾವು ಕಾಫಿ ಎಂದು ಕರೆಯೋಣ. ದೇವಾನುದೇವತೆಗಳಿಗೆ ಪ್ರಿಯವಾಗಿರುವ ಈ ಕಾಫಿ ಪೇಯನ್ನು ಭೂಲೋಕದಲ್ಲೂ ನರಮಾನವರಿಗೆ ಪರಿಚಯಿಸುತ್ತೇನೆ. ಅವರಿಗೆ ಹೇಗಿದ್ದರೂ ಅಮೃತ ಲಭ್ಯವಿಲ್ಲ. ಈ ಅಮೃತವಾದರೂ ಸಿಗುವಂತಾಗಲೀ.”
ಸರಸ್ವತಿ: “ಒಳ್ಳೆಯ ಯೋಚನೆ ದೇವರ್ಷಿ ನಾರದ. ಹಾಗೇ ಮಾಡಿ.”
ನಾರದ: (ಬ್ರಹ್ಮನ ಕಡೆಗೆ ತಿರುಗಿ) “ಈ ಕಾಫಿ ಪೇಯದ ಮಹಿಮೆ ಸಾರಲು ಈಗಲೇ ಭೂಲೋಕಕ್ಕೆ ತೆರಳುತ್ತೇನೆ. ಅಪ್ಪಣೆ ಕೊಡಿ ತಂದೆ.”
ಬ್ರಹ್ಮ ಮತ್ತು ಸರಸ್ವತಿ ಇಬ್ಬರೂ: “ತಥಾಸ್ತು.”
ನಾರದ ಎಕ್ಸಿಟ್. ಸೀನ್ ಎಂಡ್
*
-ವಿಭಾ (ವಿಶ್ವಾಸ್ ಭಾರದ್ವಾಜ್)








