ಸಚಿವ ಸಂಪುಟ ವಿಸ್ತರಣೆಯ ಭಾರವನ್ನ ಇಳಿಸಿಕೊಂಡಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಇದೀಗ ಉಸ್ತುವಾರಿ ಸಚಿವರ ನೇಮಕ ವಿಚಾರ ಮತ್ತೆ ತಲೆಭಾರವಾಗುವಂತೆ ಮಾಡಿದೆ.
ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡು ಸಂತಸದ ನಗುಬೀರಿದ್ದ ಯಡಿಯೂರಪ್ಪ ಅವರಿಗೆ ಆ ಸಂತಸ ಮಾಸುವ ಮುನ್ನವೇ ಉಸ್ತುವಾರಿ ಸಚಿವರ ನೇಮಕಾತಿಯ ವಿಚಾರ ಸಂತಸವನ್ನ ಮಾರನೇ ದಿನವೇ ಮರೆಯಾಗಿ ಹೋಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಹಲವು ಸಚಿವರು ಕಣ್ಣಿಟ್ಟಿದ್ದು ಸಮಸ್ಯೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ನಡುವೆ ಸಿಎಂ ವಲಸಿಗರ ಒತ್ತಡಕ್ಕೆ ಮಣಿದರೆ ಸಚಿವ ಆರ್.ಅಶೋಕ್, ಡಿಸಿಎಂ ಡಾ. ಅಶ್ವಥ್ ನಾರಾಯಣ ಜಿಲ್ಲಾ ಉಸ್ತುವಾರಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


ಈ ಮಧ್ಯ ಹಾವೇರಿ ಜಿಲ್ಲಾ ಉಸ್ತುವಾರಿಗೆ ಸಚಿವ ಬಿ.ಸಿ.ಪಾಟೀಲ್ ಬೇಡಿಕೆ ಇಟ್ಟಿದರೆ, ಮಂಡ್ಯ ಜಿಲ್ಲಾ ಉಸ್ತುವಾರಿಗಾಗಿ ನಾರಾಯಣಗೌಡ ಕಣ್ಣಿಟ್ಟಿದ್ದಾರೆ. ಇದರ ಜೊತೆಗೆ ಚಿಕ್ಕಬಳ್ಳಾಪುರಕ್ಕೆ ನಾನೇ ಉಸ್ತುವಾರಿ ಎಂದು ಈಗಾಗಲೇ ಡಾ.ಕೆ.ಸುಧಾಕರ್ ಜಿಲ್ಲಾದ್ಯಂತ ಹೇಲಿಕೊಂಡು ತಿರುಗಾಡುತ್ತಿದ್ದಾರೆ. ಈ ನಡುವೆ ಬೆಂಗಳೂರು ಗ್ರಾಮಾಂತರಕ್ಕೆ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಕೆ.ಗೋಪಾಲಯ್ಯ ಕೂಡ ಟವಲ್ ಹಾಕಿ ನನಗೆ ಕೊಡಿ ಎಂದು ಸಿಎಂರನ್ನು ದುಂಬಾಲು ಬಿದ್ದಿದ್ದಾರೆ.


ಇತ್ತ, ಬೆಳಗಾವಿ ಸಾಹುಕಾರ ಹಾಗೂ ರೆಬಲ್ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿಗೆ ಚುನಾವಣೆಗೂ ಮುನ್ನ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಒಂದುವೇಳೆ ನುಡಿದಂತೆ ಸಿಎಂ ಬೆಳಗಾವಿ ಉಸ್ತುವಾರಿಯನ್ನ ನೀಡಿದ್ದೇ ಆದರೆ. ಹಿರಿಯ ಬಿಜೆಪಿ ಮುಖಂಡ ಮಾಜಿಸಿಎಂ ಹಾಗೂ ಸಚಿವ ಜಗದೀಶ್ ಶೆಟ್ಟರ್ ಗೆ ಬೆಳಗಾವಿ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ. ಉ.ಕನ್ನಡ ಜಿಲ್ಲಾ ಉಸ್ತುವಾರಿಗೆ ಶಿವರಾಮ್ ಹೆಬ್ಬಾರ್, ಶ್ರೀಮಂತ ಪಾಟೀಲ್ ವಿಜಯಪುರ ಜಿಲ್ಲಾ ಉಸ್ತುವಾರಿಗೆ ಬೇಡಿಕೆ ಇಟ್ಟು ತಮ್ಮ ಬೆಂಬಲಿಗರಿಂದ ಸಿಎಂಗೆ ಹೇಳಿಸಿ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಇನ್ನು, ಎರಡೆರೆಡು ಜಿಲ್ಲಾ ಉಸ್ತುವಾರಿ ಸ್ಥಾನ ಪಡೆದಿರುವ ಸಚಿವರಿಗೆ ಒಂದು ಜಿಲ್ಲೆಗೆ ಕೋಕ್ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲ ಹಾಗೂ ವಲಸೆ ಸಚಿವರ ನಡುವೆ ಉಸ್ತುವಾರಿ ಸ್ಥಾನಮಾನಕ್ಕಾಗಿ ನಡೆಯುತ್ತಿರುವ ಪರೋಕ್ಷ ಹಾಗೂ ನೇರ ಜಿದ್ದಾಜಿದ್ದಿಯಲ್ಲಿ ಸಿಎಂ ಯಡಿಯೂರಪ್ಪ ಹೈರಾಣಾಗಿದ್ದಾರೆ. ವಲಸಿಗರಿಗೆ ಉಸ್ತುವಾರಿ ನೀಡುವ ಬಗ್ಗೆ ಯಡಿಯೂರಪ್ಪ ಮನಸ್ಸಿದ್ದರೂ, ಮೂಲ ಬಿಜೆಪಿಗರ ಮುನಿಸಿಗೆ ಕಾರಣವಾಗಬೇಂಕೆಂಬ ಆತಂಕ ಕೂಡ ತೀವ್ರ ತಿಕ್ಕಾಟವನ್ನುಂಟು ಮಾಡಿದೆ. ಉಸ್ತುವಾರಿ ನೇಮಕಾತಿ ವಿಚಾರವಾಗಿ ಯಾವುದೇ ಆಂತರಿಕ ಅಸಮಾಧಾನ ಉಂಟಾಗದಂತೆ ಹೇಗೆ ಹಂಚಿಕೆ ಮಾಡಲಿದ್ದಾರೆ ಎಂಬುದು ಆಡಳಿತ ಪಕ್ಷಕ್ಕೆ ಮಾತ್ರವಲ್ಲದೇ ವಿಪಕ್ಷಗಳಿಗೂ ಕುತೂಹಲ ಕೆರಳಿಸಿದೆ.








