‘ಸತ್ಯೊಡು ಬತ್ತಿನಕ್ಲೆಗ್ ತಿಗಲೆಡ್ ಸಾದಿ ತೋಜಾವ, ಅನ್ಯಾಯೊಡು ಬತ್ತಿನಕ್ಲೆಗ್ ಸುರಿಯೊಡು ಸಾದಿ ತೋಜಾವ’ ಎಂಬ ಅಮರ ವಾಕ್ಯವನ್ನು ಸಾವಿರಾರು ವರ್ಷಗಳ ಹಿಂದೆ ಸಾರಿದ ತುಳುನಾಡಿನ ವೀರಪುರುಷರಾದ ಕೋಟಿಚೆನ್ನಯರು ಆಟವಾಡಿ ಬೆಳೆದ ಮೂಲ ಸ್ಥಾನ ಪುತ್ತೂರಿನ ಪಡುಮಲೆಯಿಂದ ಸುಮಾರು 2ಕಿ.ಮೀ ದೂರದಲ್ಲಿರುವ ಗೆಜ್ಜೆಗಿರಿ ನಂದನಬಿತ್ತಲ್ ಕ್ಷೇತ್ರ. ಗೆಜ್ಜೆಗಿರಿ ನಂದನ ಬಿತ್ತಲು ಕೋಟಿ ಚೆನ್ನಯರ ತಾಯಿ ದೇಯಿಬೈದ್ಯೆತಿಗೆ ಪುನರ್ ಜೀವನ ನೀಡಿದ ಮನೆ.
ತನ್ನ ಕುಲಕಸುಬಾದ ಮೂರ್ತೆಗಾರಿಕೆ ಮಾಡುತ್ತಿದ್ದ ಸಾಯನಬೈದ್ಯ ಎಂಬ ನಾಟಿವೈದ್ಯ ಒಂದು ದಿನ ಸಂಕಮಲೆ ಬೆಟ್ಟದಲ್ಲಿ ತಾಳೆ ಮರವನ್ನೇರಿ ಮೂರ್ತೆಗಾರಿಕೆ ಮಾಡುತ್ತಿದ್ದ. ಆಗ ಆತನಿಗೆ ಯಾರೋ ಅಳುತ್ತಿರುವ ಶಬ್ದ ಕೇಳಲು, ಆತ ಮರದ ತುದಿಯಿಂದ ಕೆಳಗೆ ಇಳಿಯುತ್ತಾನೆ. ತಾನು ತಾಳೆಮರವೇರಲು ಕಟ್ಟಿದ ಬಿದಿರಿನ ಗಂಟಿಗೆ ಒರಗಿ ಕಣ್ಣಿಗೆ ಬಟ್ಟೆ ಕಟ್ಟಿ ಕೊಂಡಿದ್ದ ಹೆಣ್ಣು ಮಗಳೊಬ್ಬಳು ಅಳುತ್ತಿರಲು, ಆಕೆಯಲ್ಲಿ ಸಾಯನಬೈದ್ಯ ಅಳುವ ಕಾರಣವೇನೆಂದು ಕೇಳುತ್ತಾನೆ. ಆಕೆ ಮದುವೆಗೆ ಮುಂಚೆ ಋತುಮತಿಯಾದ ಕಾರಣ ಆಕೆಯ ತಂದೆ ತಾಯಿ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟಿರುವುದಾಗಿ (ಅಂದಿನ ಕಾಲದ ಪದ್ಧತಿಯಂತೆ) ಹೇಳುತ್ತಾಳೆ. ಆಕೆಯನ್ನು ತಂಗಿಯಾಗಿ ಸ್ವೀಕರಿಸಿದ ಸಾಯನಬೈದ್ಯ ಮನೆಗೆ ಕರೆದುಕೊಂಡು ಬಂದು ಅವಳಿಗೆ ನಾಟಿ ವಿದ್ಯೆಯನ್ನು ಹೇಳಿ ಕೊಟ್ಟು ಸಾಕಿ ಸಲಹುತ್ತಾನೆ. ದೇಯಿಬೈದ್ಯೆತಿಗೆ ಆಶ್ರಯ ನೀಡಿ ಅವಳಿಗೆ ಬದುಕು ನೀಡಿದ ಮನೆಯೇ ಗೆಜ್ಜೆ ಗಿರಿ ನಂದನಬಿತ್ತಲ್ ಕ್ಷೇತ್ರ.

ಮುಂದೆ ಅವಳನ್ನು ತನ್ನ ಬಾವನಾದ ಕಾಂತಣ್ಣ ಬೈದ್ಯನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಅವಳಿ ಮಕ್ಕಳಾದ ಕೋಟಿಚೆನ್ನಯರಿಗೆ ಜನ್ಮ ನೀಡಿದ 16ನೇ ದಿನ ಆಕಸ್ಮಿಕವಾಗಿ ಬೀಡಿನ ಸಮೀಪದ ಕೆರೆಯಲ್ಲಿ ದೇಯಿಬೈದ್ಯೆತಿ ಮರಣವನ್ನು ಅಪ್ಪುತ್ತಾಳೆ. ಸಹೋದರಿಯ ಕಳೇಬರವನ್ನು ಗೆಜ್ಜೆಗಿರಿಮನೆಗೆ ತಂದು ಧಪನ ಮಾಡುವ ಅಣ್ಣ ಸಾಯನಬೈದ್ಯ ತನ್ನ ತಂಗಿಯ ಅವಳಿ ಮಕ್ಕಳಾದ ಕೋಟಿ ಚೆನ್ನಯರನ್ನು ತನ್ನ ಮನೆಗೆ ಕರೆತಂದು ಆರೈಕೆ ಮಾಡುತ್ತಾನೆ. ಅವಳಿ ವೀರರಿಗೆ ಗುರುವಾಗಿ, ಮಾರ್ಗದರ್ಶಕನಾಗಿ ಸಲಹುತ್ತಾನೆ. ಮಾವನ ಮನೆಯಾದ ಗೆಜ್ಜೆಗಿರಿಯಲ್ಲೇ ಕೋಟಿ ಚೆನ್ನಯರು ಬೆಳೆದು ದೊಡ್ಡವರಾಗಿ ತುಳುನಾಡಿನ ವೀರ ಪರಾಕ್ರಮಶಾಲಿಗಳಾಗುತ್ತಾರೆ.
ದೇಯಿಬೈದ್ಯೆತಿಗೆ ಆಶ್ರಯ ನೀಡಿ ಅವಳಿಗೆ ಬದುಕು ನೀಡಿದ ಮನೆಯೇ ಗೆಜ್ಜೆ ಗಿರಿ ನಂದನಬಿತ್ತಲ್ ಕ್ಷೇತ್ರ. ಕೋಟಿ ಚೆನ್ನಯರು, ಸಾಯನಬೈದ್ಯ, ದೇಯಿ ಬೈದ್ಯೆತಿ ಬಾಳಿ ಬದುಕಿದ ಮೂಲಮನೆಯೇ ಸತ್ಯ ಧರ್ಮ ಚಾವಡಿ.
ಸರೋಳಿ ಮಂಜಕಟ್ಟೆ ಮುಂಭಾಗದಲ್ಲಿ ಧೂಮಾವತಿ ದೈವದ ಗುಡಿಯಿದೆ. ಸಾಯನ ಬೈದ್ಯನ ಹಿರಿಯರ ಕಾಲದಿಂದಲೂ ಆರಾಧಿಸುತ್ತಿದ್ದ ಧೂಮಾವತಿ ದೈವವನ್ನು ನಂಬಿ ಈಗಲೂ ಆ ಸ್ಥಳದಲ್ಲಿ ಆರಾಧನೆ ನಡೆಯುತ್ತಿದೆ.
ದೇಯಿಬೈದ್ಯೆತಿಯನ್ನು ದಫನ ಮಾಡಿದ ಸ್ಥಳ ದೇಯಿಬೈದ್ಯೆತಿಯ ಮಹಾ ಸಮಾಧಿ. ದೇಯಿಬೈದ್ಯೆತಿ ನಾಗ ಬ್ರಹ್ಮ ರನ್ನು ನೆನೆದು ನಾಟಿ ಔಷಧಿ ಕೊಡುತ್ತಿದ್ದ ಜಾಗ ನಾಗನ ಕಟ್ಟೆ. ಕೋಟಿ ಚೆನ್ನಯರು ವ್ಯಾಯಾಮ ಮಾಡುತ್ತಿದ್ದ ಸ್ಥಳವೇ ಗರಡಿ ಮನೆ.

ದೇಯಿಬೈದ್ಯೆತಿಗೆ ಪುನರ್ ಜೀವನ ನೀಡಿದ, ಸಾಯನ ಬೈದ್ಯನ ಕರ್ಮಭೂಮಿ, ಕೋಟಿ ಚೆನ್ನಯರ ಮೂಲಸ್ಥಾನ ಪುತ್ತೂರಿನ ಗೆಜ್ಜೆಗಿರಿ ನಂದನಬಿತ್ತಲ್ ಕ್ಷೇತ್ರದಲ್ಲಿ ಇದೀಗ ಬ್ರಹ್ಮಕಲಶಾಭಿಷೇಕದ ಸಂಭ್ರಮ.
ಸತ್ಯ ಧರ್ಮ ಚಾವಡಿಯಲ್ಲಿ ಮಾತೆ ದೇಯಿಬೈದ್ಯೆತಿಯ ಬಿಂಬ ಪ್ರತಿಷ್ಠೆ, ಗುರು ಸಾಯನಬೈದ್ಯರ ಗುರುಪೀಠ ಸ್ಥಾಪಿಸಲಾಗಿದ್ದು, ಗೆಜ್ಜೆಗಿರಿಯ ಶಿಖರಾಗ್ರದಲ್ಲಿ ನಿರ್ಮಿಸಲಾದ ಮೂಲಸ್ಥಾನ ಗರಡಿಯಲ್ಲಿ ಕೋಟಿ ಚೆನ್ನಯರ ಜೊತೆಗೆ ಗುರು ಸಾಯಿ ಬೈದ್ಯರ ಬಿಂಬ ಪ್ರತಿಷ್ಠೆ ಮಾಡಲಾಗಿದೆ.
ಪರಶುರಾಮ ಸೃಷ್ಠಿಯ ತುಳುನಾಡು ಈ ಪುಣ್ಯ ಉತ್ಸವದಲ್ಲಿ ಮಿಂದೇಳುತ್ತಿದೆ. ಪುಣ್ಯ ಭೂಮಿ ಎನಿಸಿಕೊಂಡಿರುವ ತುಳುನಾಡಿನಲ್ಲಿ ಜನ್ಮತಾಳಿದ ಇಂತಹ ಮಹಿಮೆಯುಳ್ಳ ಮಹಾತ್ಮರ ಆದರ್ಶಗಳೇ ಇಲ್ಲಿನ ಜನರ ಬದುಕನ್ನು ಸೌಹಾರ್ದ ಸಾಮರಸ್ಯದ ಕಡಲಾಗಿಸಿದೆ.








