ಇಡೀ ದೇಶವೇ ರಾಮ ಮಂದಿರ ನಿರ್ಮಾಣ ನಿರ್ಧಾರವನ್ನು ಸ್ವಾಗತಿಸಿದ್ರೆ ಎಐಎಂಐಎಂನ ಅಧ್ಯಕ್ಷರಾದ ಅಸಾದುದ್ದೀನ್ ಒವೈಸಿ ಮಾತ್ರ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಮುಂಜಾನೆ ಅಷ್ಟೇ ಈ ಬಗ್ಗೆ ಟ್ವೀಟ್ ಮಾಡಿದ್ದ ಅಸಾದುದ್ದೀನ್ ಬಾಬ್ರಿ ಇತ್ತು, ಅಲ್ಲೇ ಇದೆ, ಅಲ್ಲೇ ಇರಲಿದೆ ಎಂದು ಹೇಳುವ ಮೂಲಕ ರಾಮ ಮಂದಿರ ನಿರ್ಮಾಣದ ನಿಲುವನ್ನು ವಿರೋಧಿಸಿದ್ರು. ಇದೀಗ ಈ ಕುರಿತಾಗಿ ಮಾತನಾಡಿರುವ ಓವೈಸಿ ಕಾಂಗ್ರೆಸ್ ಸೇರಿದಂತೆ ಜಾತ್ಯಾತೀತ ಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್ ಕೂಡ ಸಮಾನ ಪಾತ್ರ ಹೊಂದಿದೆ ಎಂದು ಅಸಾದುದ್ದೀನ್ ಕಿಡಿಕಾರಿದ್ದಾರೆ. “ಇಂದು ತಾವು ಭಾವುಕರಾಗಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾನೂ ಭಾವುಕನಾದೆ. ಸಹಬಾಳ್ವೆ ಮತ್ತು ಪೌರತ್ವದ ಸಮಾನತೆಯನ್ನು ನಂಬಿದವನಾಗಿ ನಾನು ಕೂಡ ಅಷ್ಟೇ ಭಾವುಕನಾಗಿದ್ದೇನೆ. ಪ್ರಧಾನಿ ಮಂತ್ರಿಗಳೇ 450 ವರ್ಷಗಳಿಂದ ಅಲ್ಲಿ ಮಸೀದಿ ಇತ್ತು. ಹೀಗಾಗಿ ನಾನೂ ಭಾವುಕನಾಗಿದ್ದೇನೆ” ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಭಾರತದ ಎಲ್ಲ ಜಾತ್ಯತೀತ ಪಕ್ಷಗಳಿಗೆ ನನ್ನದೊಂದು ಪ್ರಶ್ನೆ ಎಂದಿರುವ ಓವೈಸಿ “ರಾಮ ಮಂದಿರ ನಿರ್ಮಾಣ ಮಾಡಿದ್ದು ಜಾತ್ಯತೀತ ನಡೆಯೇ? ಇದು ಸೋದರತೆಯನ್ನು ಸಾರುತ್ತದೆಯೇ? ಅಲ್ಲಿದ್ದ ಮಸೀದಿಯನ್ನು ಧ್ವಂಸ ಮಾಡಲಾಯಿತು. ಸಾವಿರಾರು ಮಂದಿ ಹತರಾದರು. ಇದು ಸಹಬಾಳ್ವೆಯೇ? ಜಾತ್ಯತೀತ ಪಕ್ಷಗಳು ಈ ವಿಚಾರದಲ್ಲಿ ಸಂಪೂರ್ಣ ಬೆತ್ತಲಾಗಿವೆ” ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ದೇ ಬಾಬ್ರಿ ಧ್ವಂಸ ಮಾಡುವುದರಲ್ಲಿ ಕಾಂಗ್ರೆಸ್ ನದ್ದೂ ಸಮಪಾತ್ರವಿದೆ ಎಂದು ಕಿಡಿಕಾರಿದ್ದಾರೆ ಓವೈಸಿ.
ಇದೇ ವೇಳೆ ಭೂಮಿ ಪೂಜೆಗೆ ಮೋಹನ್ ಭಾಗವತ್ ಭಾಗಿಯಾಗಿದ್ದನ್ನು ಪ್ರಶ್ನಿಸಿರುವ ಅಸಾದುದ್ದೀನ್ “ಭೂಮಿ ಪೂಜೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಿದ್ದರ ಅರ್ಥವೇನು? ಇಂದು ಹೊಸ ಭಾರತದ ಉದಯವಾಗಿದೆ ಎಂದು ಅವರು ಹೇಳಿದ್ದಾರೆ. ಅದು ಏನನ್ನು ಸೂಚಿಸುತ್ತಿದೆ? ಅವರು ಹಿಂದೂ ರಾಷ್ಟ್ರವನ್ನು ಕಟ್ಟಲು ಹೊರಟಿದ್ದಾರೆ ಎಂಬುದಲ್ಲವೇ? ಅಲ್ಲಿ ಮುಸ್ಲಿಮರನ್ನು 2 ನೇ ದರ್ಜೆಯ ನಾಗರಿಕರನ್ನಾಗಿ ಮಾಡಲಾಗುತ್ತಿದೆ ಅಲ್ಲವೇ? “ಎಂದೂ ಪ್ರಶ್ನಿಸಿದ್ದಾರೆ.