ಬೆಂಗಳೂರು : ಬಿಜೆಪಿ ಸರ್ಕಾರ ಮೊದಲು ಎಸ್ ಡಿಪಿಐ ಅನ್ನು ಬ್ಯಾನ್ ಮಾಡಲಿ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಸಂಘ ಪರಿವಾರ, ಎಸ್ ಡಿಪಿಐ ಒಂದೇ ನಾಣ್ಯದ ಮುಖಗಳಿದ್ದಂತೆ. ಹೆಡ್, ಟೈಲ್ ಎರಡೂ ಅವರೇ ಎಂದರು. ದಕ್ಷಿಣ ಕನ್ನಡದಲ್ಲಿ ಏನು ಮಾಡಿದರು, ಇಲ್ಲಿ ಏನು ಮಾಡಿದರು ಎಂಬುದು ನನಗೆ ಗೊತ್ತಿದೆ. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಸರ್ಕಾರ ಮೊದಲು ಎಸ್ ಡಿಪಿಐ ಅನ್ನು ಬ್ಯಾನ್ ಮಾಡಲಿ. ಘಟನೆ ಬಗ್ಗೆ ತನಿಖೆ ಮಾಡಲು ಆರು ಜನರ ತಂಡ ರಚನೆ ಮಾಡಿದ್ದಾರೆ. ಘಟನೆಯ ಹಿಂದಿನ ವಿಚಾರವನ್ನು ಅರಿಯಬೇಕಿದೆ. ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್ ಡಿಪಿಐನಿಂದ ನಮಗೆ ಡ್ಯಾಮೇಜ್ ಆಗಿದೆ. ಇದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಮತಗಳು ಹಂಚಿ ಹೋಗುವುದು ನಮ್ಮವೇ ತಾನೇ. ಅದಕ್ಕಾಗಿ ಅವರು ಎಸ್ ಡಿಪಿಐಅನ್ನು ಬ್ಯಾನ್ ಮಾಡುತ್ತಿಲ್ಲ ಎಂದ ರಾಮಲಿಂಗಾ ರೆಡ್ಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಇವರದ್ದೇ ಸರ್ಕಾರವಿದೆ. ಏಕೆ ಅವರು ಎಸ್ ಡಿಪಿಐಅನ್ನು ಬ್ಯಾನ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.