ಇತಿಹಾಸ ಹೇಳದಿರುವ ಸತ್ಯದ ಬೆನ್ನು ಹತ್ತಿ; ಪೋರ್ಚುಗೀಸರ ಹೆಡಮುರಿ ಕಟ್ಟಿದ ಕೆಳದಿಯ ದೊಡ್ಡ ಸಂಕಣ್ಣ ನಾಯಕ:
ನಮ್ಮ ಭಾರತದ ಸಂಪನ್ಮೂಲಗಳನ್ನು ದೋಚಲು ಆಂಗ್ಲರ ಜೊತೆಗೆ ಪೋರ್ಚುಗೀಸ್, ಪ್ರೆಂಚ್ ಮತ್ತು ಡಚ್ಚ್ ರೂ ನಮ್ಮ ದೇಶಕ್ಕೆ ವ್ಯಾಪಾರಕ್ಕಾಗಿ ಬಂದು ಇಲ್ಲಿಯ ಹೇರಳವಾದ ಸಂಪತ್ತನ್ನು ನೋಡಿ, ಈ ಭಾರತ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಒಬ್ಬರ ಮೇಲೆ ಇನ್ನೊಬ್ಬರು ಸೆಣಸಾಡುತ್ತಾರೆ. ಕರ್ನಾಟಕದಲ್ಲಿ ಆಂಗ್ಲರಿಗಿಂತ ಬಹಳ ಮುಂಚೆಯೇ ಪೋರ್ಚುಗೀಸ್ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ತನ್ನ ಕ್ರೌರ್ಯವನ್ನು ಪ್ರದರ್ಶಿಸಿ ಸ್ಥಳೀಯರಿಗೆ ತಮ್ಮ ನಿಜವಾದ ಉದ್ದೇಶವನ್ನು ಬಹಳ ಹಿಂಸಾತ್ಮಕ ರೀತಿಯಲ್ಲಿ ಬಹಿರಂಗಪಡಿಸುತ್ತದೆ. ಕರ್ನಾಟಕಕ್ಕೆ ಕಾಲಿಟ್ಟು ಅರ್ಧ ಶತಮಾನ ಕಳೆಯುವಷ್ಟರಲ್ಲಿ ತನ್ನ ಅತಿರೇಕದ ವರ್ತನೆ ಮತ್ತು ಚಟುವಟಿಕೆಯಿಂದ ಪೋರ್ಚುಗೀಸ್ ಅಂದು ಕರ್ನಾಟಕವನ್ನು ಆಳುತ್ತಿದ್ದ ವಿಜಯನಗರದ ರಾಯರ ಅವಕೃಪೆಗೆ ಕಾರಣವಾಗುತ್ತಾರೆ. ಅಂದು ವಿಜಯನಗರದ ವಾಸ್ತವ ಆಡಳಿತಗಾರರಾಗಿದ್ದ ಅಳಿಯ ರಾಮರಾಯರು ಪೋರ್ಚುಗೀಸ್ ಗೆ ಸರಿಯಾದ ಪಾಠ ಕಲಿಸಲು ತೀರ್ಮಾನಿಸಿದಾಗ 1558ರಲ್ಲಿ ವಿಜಯನಗರದ ಬೃಹತ್ ಸೈನ್ಯ ಪೋರ್ಚುಗೀಸ್ ಅವರ ಭಾರತದ ರಾಜಧಾನಿಯಾಗಿದ್ದ ಗೋವಾ ಮೇಲೆ ದಂಡೆದ್ದಿ ಹೋಗುತ್ತದೆ.
ಅಂದು ನಡೆದ ಆ ಭಯಾನಕ ಯುದ್ಧದಲ್ಲಿ ಪೋರ್ಚುಗೀಸ್ ಅನ್ನು ಸದೆಬಡಿದು ಅಂದಿನ ಭಾರತದ ಪೋರ್ಚುಗೀಸ್ (Estado da India) ವೈಸರಾಯ್ ಫ್ರಾನ್ಸಿಸ್ಕೋ ಬ್ಯಾರೆಟೊ (Francisco Barreto) ಅನ್ನು ಕೈಗೆ ಬೇಡಿ ಹಾಕಿ ಅಳಿಯ ರಾಮರಾಯರ ಮುಂದೆ ಪ್ರದರ್ಶಿಸಿದ್ದು ವಿಜಯನಗರದ ಮಹಾನ್ ಸೇನಾಧಿಪತಿ ಮತ್ತು ಕೆಳದಿಯ ಅರಸ ದೊಡ್ಡ ಸಂಕಣ್ಣ ನಾಯಕರು. ಆದರೆ ಇಂದು ನಮ್ಮ ದೇಶದಲ್ಲಿ ಆಂಗ್ಲರ ವಿರುದ್ಧ ಹೋರಾಡಿದ ರಾಜ ಮತ್ತು ರಾಣಿಯನ್ನು ಮಾತ್ರ ಸ್ಮರಿಸುವಾಗ ಇವರಷ್ಟೇ ಪರಾಕ್ರಮಿಯಾಗಿ ಕ್ರೂರ ಪೋರ್ಚುಗೀಸ್ ಜೊತೆಗೆ ಸೆಣಸಾಡಿದ ನಮ್ಮ ಕರ್ನಾಟಕದ ವೀರ ರಾಣಿ ಮತ್ತು ರಾಜರನ್ನು ಸ್ಮರಿಸದೆ ಇರುವುದು ನಾವುಗಳು ಮಾಡುತ್ತಿರುವ ಅಕ್ಷಮ್ಯ ಅಪರಾಧ.
ಕರ್ನಾಟಕದ ಮಲೆನಾಡು ಮತ್ತು ಕರಾವಳಿಯನ್ನು ಆಳಿದ ನಮ್ಮ ಕೆಳದಿಯ ಅರಸರಲ್ಲಿ ಒಬ್ಬರಾದ ಮಹಾಪರಾಕ್ರಮಿ ದೊಡ್ಡ ಸಂಕಣ್ಣ ನಾಯಕರು 1558ರಲ್ಲಿ ತನ್ನ ನೌಕಾ ಶಕ್ತಿಯ ಮೇಲೆ ಭಾರತದ ಕೊಂಕಣ ಮತ್ತು ಕರ್ನಾಟಕದ ಕರಾವಳಿ ಮತ್ತು ಕೇರಳದ ಮಲಬಾರ್ ನಲ್ಲಿ ಹಿಂಸಾತ್ಮಕ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದ್ದ ಪೋರ್ಚುಗೀಸ್ ಸೈನ್ಯವನ್ನು ಬಗ್ಗುಬಡಿದು ಕೀರ್ತಿಪತಾಕೆಯನ್ನು ಹಾರಿಸಿದ ವಿಜಯದ ಸಂಕೇತವಾಗಿ ಕಟ್ಟಿಸಿದ ಸ್ಮಾರಕವೇ ಇಕ್ಕೇರಿಯ “ಶ್ರೀ ಅಖಿಲಾಂಡೇಶ್ವರಿ (ಪಾರ್ವತಿ) ದೇವಾಲಯ”.
1558ರ ವಿಜಯನಗರ ಮತ್ತು ಪೋರ್ಚುಗೀಸ್ ಯುದ್ಧ:-
17 ಮೇ 1498ರಲ್ಲಿ ವಾಸ್ಕೋ ಡಾ ಗಾಮಾ ಕೇರಳದ ಕ್ಯಾಲಿಕಟ್ ಹತ್ತಿರ ಬಂದು ಇಳಿಯುವ ಮುಂಚೆ ಅಂದರೆ ೧೪ ಮತ್ತು ೧೫ ನೇ ಶತಮಾನದಲ್ಲಿ ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರದಲ್ಲಿ ತನ್ನ ನೌಕಾ ಶಕ್ತಿಯ ಆಧಾರದ ಮೇಲೆ ಭಾರತದ ವ್ಯಾಪಾರದಲ್ಲಿ ತನ್ನ ಪಾರುಪತ್ಯವನ್ನು ಮೆರೆದಿದ್ದು ಅರಬರು. ಮಸಾಲೆ ಪದಾರ್ಥಗಳಾದ ಕಾಳು ಮೆಣಸು ಮತ್ತು ಏಲಕ್ಕಿಯ ಬದಲಿಗೆ ಸ್ಥಳೀಯವಾಗಿ ಬಹು ಬೇಡಿಕೆ ಇದ್ದ ಪರ್ಷಿಯನ್ ಮತ್ತು ಅರಬ್ ಕುದುರೆಗಳನ್ನು ಇಲ್ಲಿಯ ರಾಜರಿಗೆ ಒದಗಿಸುತ್ತಿದ್ದ ಅರಬರಿಗೆ ಅಂದು ಈ ವಹಿವಾಟುಗಳಿಂದ ಅಪಾರವಾದ ಸಂಪತ್ತನ್ನು ಕ್ರೋಡೀಕರಿಸಿತ್ತು. ಆದರೆ ಪೋರ್ಚುಗೀಸ್ ಅವರ ಆಗಮನದ ನಂತರ ಇಲ್ಲಿಯ ಚಿತ್ರಣವು ಬದಲಾಗುತ್ತದೆ, ತನ್ನ ನೌಕಾ ಶಕ್ತಿಯ ಸಾಮರ್ಥ್ಯದ ಮೇಲೆ ಹಿಂದೂ ಮಹಾಸಾಗರ ಮತ್ತು ಅದರ ಸುತ್ತಲಿನ ನೀರಿನಲ್ಲಿ ಅಂದರೆ ಹೊರ್ಮುಜ್ ಜಲಸಂಧಿಗಳಿಂದ ಮಲ್ಕಾ (straits of Hormuz to the starts of Malacca) ಜಲಸಂಧಿಗಳವರೆಗೂ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡ ಪರಿಣಾಮವಾಗಿ ೧೬ನೇ ಶತಮಾನದಲ್ಲಿ ಭಾರತದ ವ್ಯಾಪಾರ ಕ್ಷೇತ್ರದ ಮೇಲೆ ತನ್ನ ಪ್ರಭಾವವನ್ನು ಪೋರ್ಚುಗೀಸ್ ಬೀರುತ್ತದೆ. ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿದ ಗೋವಾ ಅನ್ನು ವಶಪಡಿಸಿಕೊಂಡ ನಂತರ ಅಂದು ಕರ್ನಾಟಕದ ಅತ್ಯಂತ ಪ್ರಭಾವಿ ರಾಜ್ಯವಾಗಿದ್ದ ವಿಜಯನಗರದ ರಾಯರ ಜೊತೆಗೆ ಸ್ನೇಹ ಹಸ್ತವನ್ನು ಚಾಚುತ್ತದೆ.
ಪೋರ್ಚುಗೀಸ್ ಕುದುರೆ ವ್ಯಾಪಾರಿಯಾಗಿದ್ದ ನುನಿಜ್ (Fernao Nuniz) ಪ್ರಕಾರ ಕೃಷ್ಣದೇವರಾಯರ ಆಳ್ವಿಕೆಯ ಕಾಲದಲ್ಲಿ ಪ್ರತಿವರ್ಷ ಸರಿಸುಮಾರು 13000 ಪರ್ಷಿಯನ್ ಮತ್ತು ಅರಬ್ ಕುದುರೆಗಳನ್ನು ಕೊಳ್ಳುತ್ತಿದ್ದರು. ಕಾಲಕ್ರಮೇಣ ಪೋರ್ಚುಗೀಸ್ ಶಕ್ತಿಶಾಲಿ ಆದಂತೆ ತನ್ನ ನೀಚ ಬುದ್ಧಿಯ ಪ್ರದರ್ಶನ ಮಾಡಲು ಪ್ರರಾಂಭಿಸುತ್ತದೆ. ಹಿಂದೂ ಮಹಾಸಾಗರದಲ್ಲಿ ಯಾವುದೇ ರಾಜ ಅಥವಾ ವ್ಯಾಪಾರಿ ನೌಕೆಯನ್ನು ಸಮುದ್ರದಲ್ಲಿ ಇಳಿಸುವ ಮುಂಚೆಯೇ ಪೋರ್ಚುಗೀಸ್ ಅವರಿಂದ ನೌಕಾ ಚೀಟಿಯನ್ನು (Cartaz) ಪಡೆಯ ಬೇಕಿತ್ತು ಇಲ್ಲದಿದ್ದರೆ ಆ ನೌಕೆಯನ್ನು
ಸಮುದ್ರದ ಮದ್ಯದಲ್ಲಿ ಗುಂಡಿಕ್ಕಿ ಬೆಂಕಿ ಹಚ್ಚಿ ಸುಡುತ್ತಿದ್ದರು ಅಥವಾ ಅದನ್ನು ಜಪ್ತಿ ಮಾಡುತ್ತಿದ್ದರು. ಇನ್ನೂ ಸ್ವಲ್ಪ ವರ್ಷಗಳ ನಂತರ ಇವರ ಉಪಟಳ ಎಷ್ಟು ಜಾಸ್ತಿ ಅಗುತ್ತದೆ ಅಂದರೆ ವಿಜಯನಗರದ ಅರಸರು ಮತ್ತು ಅವರ ಅಧೀನದಲ್ಲಿ ಇದ್ದ ಗೇರುಸೊಪ್ಪ, ಭಟ್ಕಳ ಮತ್ತು ಮಂಗಳೂರು ಸಾಮಂತರಿಗೆ ಅರಬ್ ವ್ಯಾಪಾರಿಗಳ ನೌಕೆಯನ್ನು ನಿಲ್ಲಿಸಲು ಹೊನ್ನಾವರ, ಭಟ್ಕಳ, ಬಸರೂರು, ಬಾರಕೂರು ಮತ್ತು ಮಂಗಳೂರಿನ ಬಂದರಿನಲ್ಲಿ ಅವಕಾಶ ನೀಡಬಾರದು, ಮಸಾಲೆ ಪದಾರ್ಥಗಳು, ಅಕ್ಕಿ, ಆಯುಧ ಮಾಡಲು ಕಬ್ಬಿಣ ಮತ್ತು ಗುಂಡು ಮದ್ದು ಮಾಡಲು ಬೇಕಾಗುವ ಸಾಲ್ಟಪೆಟ್ರ (Saltpetre)ವನ್ನು ತಮಗೆ ನೀಡ ಬೇಕು, ತಾವು ಹೇಳಿದ ಬೆಲೆಯೇ ಅಂತಿಮ ಅನ್ನುವಷ್ಟರ ಮಟ್ಟಿಗೆ ಬಂದು ನಿಲ್ಲುತ್ತದೆ ಪೋರ್ಚುಗೀಸ್ ಅವರ ಬೇಡಿಕೆ.
ವಿಜಯನಗರದ ಅರಸರು ತಮ್ಮದೇ ನೌಕೆಯ ಮುಖೇನ ಕುದುರೆಗಳನ್ನು ಆಮದು ಮಾಡಿಕೊಂಡರು ಸಹಾ ಅವರಿಗು ನೌಕಾ ಚೀಟಿ ಪಡಿಯಬೇಕಿತ್ತು ಮತ್ತು ಕೆಲವು ವಸ್ತುಗಳನ್ನು ಪೋರ್ಚುಗೀಸ್ ಬಿಟ್ಟರೆ ಬೇರೆ ಯಾರೂ ಅದನ್ನು ನೌಕೆಯಲ್ಲಿ ಹಾಕಿ ಕೊಂಡು ಕೊಲ್ಲಿ ರಾಷ್ಟ್ರಗಳಿಗೆ ಹೋಗುವ ಹಾಗೆ ಇರಲಿಲ್ಲ. ಇನ್ನೂ 1557ರಲ್ಲಿ ಪೋರ್ಚುಗೀಸ್ ತನ್ನ ಎಲ್ಲಾ ಶಿಷ್ಟಾಚಾರವನ್ನು ಮರೆತು ಮಂಗಳೂರಿನ ಮೇಲೆ ಆಕ್ರಮಣ ಮಾಡುತ್ತದೆ, ಇದರ ನೇತೃತ್ವ ವಹಿಸಿದ ಲುಯಿಜ್ (Luiz Mello da Silva) ಮಂಗಳೂರಿನ ಸುಪ್ರಸಿದ್ಧ ದೇವಾಲಯವನ್ನು ದೋಚಿ ಅದರ ಜೊತೆಗೆ ಇಡೀ ಊರಿಗೆ ಬೆಂಕಿ ಹಚ್ಚುತ್ತಾನೆ. ಸಾವಿರಾರು ಜನರನ್ನು ಕೊಂದು ತನ್ನ ಕ್ರೌರ್ಯವನ್ನು ಪ್ರದರ್ಶಿಸಿದ ಪೋರ್ಚುಗೀಸರ ಈ ನಡೆ ಅಳಿಯ ರಾಮರಾಯರ ಸಿಟ್ಟಿಗೆ ಕಾರಣವಾಗುತ್ತದೆ. ಈ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು 1558ರಲ್ಲಿ ಒಂದು ದೊಡ್ಡ ಸೈನ್ಯವನ್ನು ತನ್ನ ಸೋದರ ಸಂಬಂಧಿ ವಿಠ್ಠಲ ನಾಯಕರ ನಾಯಕತ್ವದಲ್ಲಿ ಗೋವಾ ಮೇಲೆ ದಾಳಿ ಮಾಡಲು ಕಳಿಸುತ್ತಾನೆ. ಅದೇ ಸಮಯಕ್ಕೆ ತನ್ನ ಆಪ್ತ ಮತ್ತು ಮಹಾಪರಾಕ್ರಮಿ ಕೆಳದಿಯ ದೊಡ್ಡ ಸಂಕಣ್ಣ ನಾಯಕರಿಗೆ ಈ ಯುದ್ಧದಲ್ಲಿ ತನ್ನ ಸೈನ್ಯದ ಜೊತೆಗೆ ವಿಠ್ಠಲ ನಾಯಕನನ್ನು ಸೇರಲು ಅಳಿಯ ರಾಮರಾಯರು ಆದೇಶಿಸುತ್ತಾರೆ. ಈ ಯುದ್ಧದಲ್ಲಿ ದೊಡ್ಡ ಸಂಕಣ್ಣ ನಾಯಕರು ಮತ್ತು ಕೆಳದಿಯ ವೀರ ಯೋಧರ ಸಾಹಸದ ಪರಿಣಾಮವಾಗಿ ವಿಜಯನಗರದ ಸೈನ್ಯ ಪೋರ್ಚುಗೀಸ್ ಅನ್ನು ಸೋಲಿಸಿ ಗೋವಾವನ್ನು ವಶಪಡಿಸಿ ಕೊಳ್ಳುತ್ತದೆ.
ಇನ್ನೂ ನಮ್ಮ ಕೆಳದಿಯ ದೊಡ್ಡ ಸಂಕಣ್ಣ ನಾಯಕರು ಅಂದಿನ ಭಾರತದ ಪೋರ್ಚುಗೀಸ್ ವೈಸರಾಯ್ ಆಗಿದ್ದ ಫ್ರಾನ್ಸಿಸ್ಕೋ ಬ್ಯಾರೆಟೊ (Francisco Barreto) ಅನ್ನು ಬಂಧಿಸಿ ಅಳಿಯ ರಾಮರಾಯರ ಮುಂದೆ ನಿಲ್ಲಿಸುತ್ತಾರೆ. ದೊಡ್ಡ ಸಂಕಣ್ಣ ನಾಯಕರ ಈ ಮಹಾನ್ ಶೌರ್ಯಕ್ಕಾಗಿ ಅಳಿಯ ರಾಮರಾಯರು “ಭುಜಕೀರ್ತಿ” ಎಂಬ ಬಿರುದನ್ನು ನೀಡಿ ಕೆಳದಿಗೆ ಕಳಿಸಿ ಕೊಡುತ್ತಾನೆ. ದೊಡ್ಡ ಸಂಕಣ್ಣ ನಾಯಕರು ತಮ್ಮ ಈ ಮಹಾನ್ ಸಾಧನೆಯನ್ನು ವಿಜೃಂಭಿಸಲು ಇಕ್ಕೇರಿಯ ಶ್ರೀ ಅಖಿಲಾಂಡೇಶ್ವರಿ ದೇವಾಲಯದಲ್ಲಿ ಪೋರ್ಚುಗೀಸ್ ವೈಸರಾಯ್ ಮತ್ತು ಅವನ ಪ್ರಮುಖ ಸೇನಾಧಿಕಾರಿಗಳ ಉಬ್ಬು ಶಿಲ್ಪಗಳನ್ನು ಸಿಂಹ ಗಜಯಾಲಿಯ ಮೇಲೆ ಕೆತ್ತಿಸುತ್ತಾನೆ.
ಪೋರ್ಚುಗೀಸ್ ವೈಸರಾಯ್ ಮತ್ತು ಅಧಿಕಾರಿಗಳ ಉಬ್ಬು ಶಿಲ್ಪ:-
ಶ್ರೀ ಅಖಿಲಾಂಡೇಶ್ವರಿ ದೇವಾಲಯದ ಮುಂಭಾಗದಲ್ಲಿ ನಾಲ್ಕು ಮತ್ತು ಒಳಭಾಗದಲ್ಲಿ ಎರಡು ಕಂಬಗಳು ಇದ್ದು ಇದರಲ್ಲಿ ಆನೆಯ ಮೇಲೆ ಸಿಂಹವು ಕುದುರೆಯ ರೀತಿಯಲ್ಲಿ ಮುಂಭಾಗದ ಕಾಲು ಎತ್ತಿರುವ ಭಂಗಿಯಲ್ಲಿ ಇದ್ದು ಇವುಗಳ ಮೇಲೆ ಒಟ್ಟಾರೆ ಹನ್ನೆರಡು (12) ಪೋರ್ಚುಗೀಸ್ ರನ್ನು ಕೆತ್ತಲಾಗಿದೆ. ವಿಶೇಷ ಸಂಗತಿ ಏನೆಂದರೆ ಬಹುಶಃ ಹಂಪಿಯ ವಿಜಯ ವಿಠ್ಠಲ ದೇವಾಲಯ ಮತ್ತು ಮಹಾನವಮಿ ದಿಬ್ಬ ಬಿಟ್ಟರೆ ಪೋರ್ಚುಗೀಸ್ ಅವರ ಶಿಲ್ಪಗಳು ಸಿಗುವುದು ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರದ ಇಕ್ಕೇರಿ ದೇವಾಲಯದಲ್ಲಿ ಮಾತ್ರ. ಈ ಶಿಲ್ಪಗಳನ್ನು ನೋಡಿದಾಗ ಅಂದು ಪೋರ್ಚುಗೀಸ್ ಅವರು ಧರಿಸುತ್ತಿದ್ದ ವಸ್ತ್ರಗಳು, ಟೋಪಿ, ಅವರ ಹಾವ ಭಾವ ಮತ್ತು ಕತ್ತಿಗಳನ್ನು ಕಾಣಬಹುದು. ಎಲ್ಲಾ ಹನ್ನೆರಡು ಶಿಲ್ಪಗಳು ಬೇರೆ ಬೇರೆ ವೇಷಭೂಷಣವನ್ನು ತೋರಿಸುತ್ತಿದ್ದು ಅಂದು ಚಾಲ್ತಿಯಲ್ಲಿದ್ದ ಎಲ್ಲಾ ರೀತಿಯ ಪೋರ್ಚುಗೀಸ್ ಅವರ ಕೇಶ ಮತ್ತು ವೇಷ ವಿನ್ಯಾಸವನ್ನು ಅದ್ಯಯನ ಮಾಡಲು ಅದ್ಭುತವಾದ ಶಿಲ್ಪಗಳಾಗಿವೆ. ಅಂದಿನ ಕಾಲದಲ್ಲಿ ನಾವುಗಳು ನಮ್ಮ ಮೇಲ್ ಅಂಗಿಯ ಗಂಟನ್ನು ಎದೆಯ ಅಕ್ಕಪಕ್ಕದಲ್ಲಿ ಕಟ್ಟಿದರೆ ಪೋರ್ಚುಗೀಸ್ ಅವರು ಇಂದಿನ ರೀತಿಯಲ್ಲಿ ಮದ್ಯದಲ್ಲಿ ಕಟ್ಟುತ್ತಿದ್ದರು. ಪೋರ್ಚುಗೀಸ್ ಅಂದು ಧರಿಸುತ್ತಿದ್ದ ಟೋಪಿ, ನೆರಗೆ ನೆರಗೆಯ ಅರ್ಧ ಮತ್ತು ಸಂಪೂರ್ಣ ಕೈ ತೋಳಿನ ಮೇಲ್ ಅಂಗಿ, ಚಡ್ಡಿ,
ಲೆಗ್ಗಿಂಗ್ ಮೇಲೆ ಚಡ್ಡಿ, ಹೀಗೆ ಹತ್ತು ಹಲವು ವೇಷಭೂಷಣಗಳನ್ನು ಗಮನಿಸಬಹುದು. ಇನ್ನೂ ಅಂದಿನ ಕಾಲದಲ್ಲಿ ಪೋರ್ಚುಗೀಸ್ ಅವರು ಪ್ರದರ್ಶಿಸುತ್ತಿದ್ದ ಮೀಸೆ ಮತ್ತು ಗಡ್ಡವನ್ನು ತೋರಿಸುವ ಈ ಶಿಲ್ಪಗಳು ನಿಜವಾಗಿಯೂ ಗಮನಾರ್ಹವಾಗಿದೆ. ಎಲ್ಲಾ ಹನ್ನೆರಡು ಶಿಲ್ಪಗಳಲ್ಲಿ ಪೋರ್ಚುಗೀಸ್ ಸೈನ್ಯಾಧಿಕಾರಿಗಳು ತಮ್ಮ ಕೈಯಲ್ಲಿ ಚಿಲ್ಲಮ್ಮ ಮತ್ತು ಕಂಜರಲ್ಲಿ (Chillam and Khanjarli) ಎಂಬ ಎರಡು ಬಗೆಯ ಕತ್ತಿಗಳನ್ನು ವಿವಿಧ ಭಂಗಿಯಲ್ಲಿ ಹಿಡಿದುಕೊಂಡಿರುವುದನ್ನು ಕಾಣಬಹುದು.
16ನೇ ಶತಮಾನದಲ್ಲಿ ಅತ್ಯಂತ ಪ್ರಭಾವ ಬೀರುತ್ತಿದ್ದ ಪೋರ್ಚುಗೀಸ್ ಅವರನ್ನು ಕಂಬಗಳಲ್ಲಿ ಕೆತ್ತಿ ಒಂದು ರೀತಿ ದೇವಾಲಯದ ದ್ವಾರಪಾಲಕರನ್ನಾಗಿ ತೋರಿಸಿ ಅದರ ಮೂಲಕ 1558ರ ಯುದ್ಧದಲ್ಲಿ ಪೋರ್ಚುಗೀಸ್ ಮೇಲೆ ವಿಜಯ ಸಾಧಿಸಿದ್ದನ್ನು ಜನರಿಗೆ ತೋರಿಸಲು ಮತ್ತು ಆ ಇತಿಹಾಸವನ್ನು ಸಾರಲು ಈ ಶಿಲ್ಪಗಳನ್ನು ಕೆಳದಿಯ ದೊಡ್ಡ ಸಂಕಣ್ಣ ನಾಯಕರು ಕೆತ್ತಿಸಿರ ಬಹುದು. ಒಂದು ಕಂಬದಲ್ಲಿ ಒಬ್ಬ ಪೋರ್ಚುಗೀಸ್ ಪಾದುಕೆಯನ್ನು ಧರಿಸಿದ್ದು ಬಹುಶಃ ಇವನೇ ಅಂದಿನ ಭಾರತದ ಪೋರ್ಚುಗೀಸ್ ವೈಸರಾಯ್ ಆಗಿದ್ದ ಫ್ರಾನ್ಸಿಸ್ಕೋ ಬ್ಯಾರೆಟೊ (Francisco Barreto) ಇರಬಹುದು, ಆದರೆ ಇವನ ಹಣೆಯ ಮೇಲೆ ತಿಲಕ ಇರುವುದು ಕುತೂಹಲ ಕೆರಳಿಸುತ್ತದೆ. ಬಹುಶಃ ಪೆಡ್ರೊ ಅಳಿಯ ರಾಮರಾಯರಿಗೆ ಶರಣಾದ ನಂತರದಲ್ಲಿ ಅವನಿಗೆ ತಿಲಕ ಇಟ್ಟು, ಎಲೆ ಅಡಿಕೆ ಕೊಟ್ಟು ಜೊತೆಗೆ ಎಚ್ಚರಿಕೆಯನ್ನು ನೀಡಿ ಗೋವಾಕ್ಕೆ ಕಳಿಸಿ ಕೊಟ್ಟಿರಬೇಕು.
ಶ್ರೀ ಅಖಿಲಾಂಡೇಶ್ವರಿ ದೇವಾಲಯ:-
ಶ್ರೀ ಶಿವತತ್ತ್ವರತ್ನಾಕರ ಮತ್ತು 1623ರಲ್ಲಿ ಇಕ್ಕೇರಿಗೆ ಬಂದಿದ್ದ ಪಿಯತ್ರೊ ದೆಲ್ಲವೆಲೆಯ ವರ್ಣನೆ ಮತ್ತು ನಕಾಶೆಯ ಪ್ರಕಾರ ಶ್ರೀ ಅಘೋರೇಶ್ವರ ದೇವಾಲಯವನ್ನು ದೊಡ್ಡ ಸಂಕಣ್ಣ ನಾಯಕರು ಕಟ್ಟಿಸಿರುವ ಬಗ್ಗೆ ಮಾಹಿತಿ ನೀಡಿದರೆ, ಶಿವಗೀತೆಯ ಉಲ್ಲೇಖಗಳಿಂದ ವೆಂಕಟಪ್ಪ ನಾಯಕರು ದೇವಾಲಯಕ್ಕೆ ಮಾಡಿಸಿದ ಬದಲಾವಣೆ ಮತ್ತು ಹೊಸ ಸೇರ್ಪಡೆಗಳು ವೇದ್ಯವಾಗುತ್ತದೆ. ಇನ್ನೂ ಶ್ರೀ ಅಖಿಲಾಂಡೇಶ್ವರಿ ದೇವಾಲಯವೂ ಸಹಾ ದೊಡ್ಡ ಸಂಕಣ್ಣ ನಾಯಕರ ಕಾಲದಲ್ಲಿ ನಿರ್ಮಾಣ ಮಾಡಿದ್ದು ತದನಂತರ ಭದ್ರಪ್ಪನಾಯಕರ ಕಾಲದಲ್ಲಿ ಕೆಲವು ಹೊಸ ಸೇರ್ಪಡೆ ಅಥವಾ ಜೀರ್ಣೋದ್ಧಾರ ಮಾಡಿರಬಹುದಾಗಿದೆ. ಶ್ರೀ ಅಖಿಲಾಂಡೇಶ್ವರಿ ದೇವಾಲಯದ ವಿನ್ಯಾಸವು ವಿಶಿಷ್ಠವಾಗಿದ್ದು ಇದರಲ್ಲಿ ಹೊಯ್ಸಳ, ವಿಜಯನಗರ ಮತ್ತು ಕೆಳದಿಯ ಭಾರತೀಯ – ಇಸ್ಲಾಂ ವಾಸ್ತು ಲಕ್ಷಣಗಳನ್ನು ಗಮನಿಸಬಹುದು. ಇನ್ನೂ ಈ ದೇವಾಲಯದಲ್ಲಿ ಇರುವ ಗಜಸಿಂಹಯಾಲಿ (ಪೋರ್ಚುಗೀಸ್ ರನ್ನು ಹೊರತುಪಡಿಸಿ) ಮತ್ತು ಕೆಲವು ವಾಸ್ತುಶಿಲ್ಪವನ್ನು 1670ರಲ್ಲಿ ಬಿಜಾಪುರದಲ್ಲಿ ನಿರ್ಮಾಣ ಮಾಡಿದ ಸ್ಮಾರಕದಲ್ಲಿ ನಾವು ಕಾಣಬಹುದು, ಹಾಗಾಗಿ ಕೆಳದಿಯವರಂತೆ ಬಿಜಾಪೂರದ ಆದಿಲ್ ಶಾಹಿಗಳು ಸಹಾ ನಮ್ಮ ವಾಸ್ತುಶಿಲ್ಪಕ್ಕೆ ಮಾರುಹೋಗಿದ್ದರು ಎಂದು ಸಾಬೀತು ಪಡಿಸುತ್ತದೆ.
ಅದೇನೇ ಇರಲಿ ನಮ್ಮ ಸಾಹಿತ್ಯ ಗ್ರಂಥಗಳಾಗಿರುವ ಶ್ರೀ ಶಿವತತ್ತ್ವರತ್ನಾಕರ, ಕೆಳದಿ ನೃಪವಿಜಯ ಮತ್ತು ರಾಮರಾಜಿಯಮುದಲ್ಲಿ 1558ರ ಪೋರ್ಚುಗೀಸ್ ಮೇಲೆ
ಪ್ರಚಂಡ ವಿಜಯಸಾಧಿಸಿದ ವಿಜಯನಗರ ಮತ್ತು ಅದಕ್ಕೆ ಮೂಲ ಕಾರಣವಾಗಿದ್ದ ಕೆಳದಿಯ ದೊಡ್ಡ ಸಂಕಣ್ಣ ನಾಯಕರ ಬಗ್ಗೆ ಮಾಹಿತಿ ನೀಡಿದರು ಸಹಾ ಇಂದು ಯಾರಿಗೂ ಇವರು ತಿಳಿದಿಲ್ಲ. ಸ್ಥಳೀಯ ಮಕ್ಕಳಿಗೆ ಇದನ್ನು ಹೇಳಿಕೊಡಲು ಅವರ ಪಾಠಗಳಲ್ಲಿ ಕೆಳದಿಯ ಒಂದು ವಿಷಯವೇ ಇಲ್ಲ!!! 15 ಆಗಷ್ಟ್ 1947ರಲ್ಲಿ ಆಂಗ್ಲರಿಂದ ಭಾರತ ಸ್ವಾತಂತ್ರ್ಯ ಪಡೆದರೆ ಇನ್ನೊಂದು ಕಡೆ ಪೋರ್ಚುಗೀಸ್ ಅವರಿಂದ ಗೋವಾ ಸ್ವಾತಂತ್ರ್ಯ ಪಡೆದಿದ್ದು 1961ರಲ್ಲಿ ಎಂದು ನಾವುಗಳು ಮರೆಯುವಂತಿಲ್ಲ. ಇವುಗಳ ಮದ್ಯದಲ್ಲಿ ಆಂಗ್ಲರಿಗಿಂತ ಸುದೀರ್ಘ ಸಮಯ ಭಾರತದ ಗೋವಾ ಅನ್ನು ಆಳಿದ ಪೋರ್ಚುಗೀಸ್ ಅವರಿಗೆ ಮೊದಲ ಬಾರಿ ಸೋಲಿನ ರುಚಿ ತೋರಿಸಿದ ಕೆಳದಿಯ ದೊಡ್ಡ ಸಂಕಣ್ಣ ನಾಯಕರನ್ನು ನಾವುಗಳು ನಮ್ಮ ಎದೆಯಲ್ಲಿ ಇಟ್ಟಿ ಪೂಜಿಸ ಬೇಕು.
ಲೇಖನ:- ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ








