ಪ್ರಧಾನಿ ಮೋದಿಗೆ ಆತ್ಮಹತ್ಯೆ ಪತ್ರವನ್ನು ಬರೆದು 16 ವರ್ಷದ ಬಾಲಕಿ ಆತ್ಮಹತ್ಯೆ
ಸಂಭಾಲ್ (ಉತ್ತರ ಪ್ರದೇಶ), ಅಗಸ್ಟ್20: ಸ್ವಾತಂತ್ರ್ಯ ದಿನದ ಮುನ್ನಾದಿನದಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕಿ 18 ಪುಟಗಳ ಆತ್ಮಹತ್ಯೆ ಪತ್ರವನ್ನು ಬರೆದಿದ್ದು, ಅದನ್ನು ಓದಿದ ಆಕೆಯ ಕುಟುಂಬ, ಸ್ನೇಹಿತರು ಮತ್ತು ಪೊಲೀಸರು ಕೂಡ ಆಘಾತಕ್ಕೊಳಗಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಬರೆದ ಆ ಪತ್ರದಲ್ಲಿ ಮಾಲಿನ್ಯ, ಭ್ರಷ್ಟಾಚಾರ ಮತ್ತು ಮರಗಳನ್ನು ಕಡಿಯುವುದು ಮುಂತಾದ ವಿಷಯಗಳ ಬಗ್ಗೆ ಬಾಲಕಿ ಕಳವಳ ವ್ಯಕ್ತಪಡಿಸಿದ್ದಾಳೆ. ಮಂಗಳವಾರ ಮರುಪಡೆಯಲಾದ ಆತ್ಮಹತ್ಯಾ ಪತ್ರದಲ್ಲಿ ಅವಳು ಪ್ರಧಾನಿಯನ್ನು ಭೇಟಿ ಮಾಡಿ ಈ ವಿಷಯಗಳನ್ನು ಅವರೊಂದಿಗೆ ಚರ್ಚಿಸಲು ಬಯಸುತ್ತಿದ್ದಳು ಎಂದು ಉಲ್ಲೇಖಿಸಿದ್ದಾಳೆ.
ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಗ್ರಹಿಸಲು, ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ನಿಷೇಧ ಮತ್ತು ಹೋಳಿಯ ಮೇಲೆ ರಾಸಾಯನಿಕರಹಿತ ಬಣ್ಣಗಳನ್ನು ಜಾರಿಗೆ ತರಲು ಅವಳು ಪ್ರಧಾನಿಯನ್ನು ಒತ್ತಾಯಿಸಿದ್ದಾಳೆ. ಪತ್ರದ ಪ್ರಕಾರ, ವಯಸ್ಸಾದ ಜನರು ಎದುರಿಸುತ್ತಿರುವ ಸಮಸ್ಯೆಗಳಿಂದಲೂ ಆಕೆ ದುಃಖಿತಳಾಗಿದ್ದಳು. ಮಕ್ಕಳು ತಮ್ಮ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಸ್ಥಳದಲ್ಲಿ ನಾನು ಇನ್ನು ಮುಂದೆ ವಾಸಿಸಲು ಬಯಸುವುದಿಲ್ಲ ಎಂದು ಅವಳು ಪತ್ರದಲ್ಲಿ ಬರೆದಿದ್ದಾಳೆ.
ಕುಟುಂಬ ಸದಸ್ಯರು ತಮ್ಮ ಮಗಳ ಕೊನೆಯ ಆಶಯದಂತೆ, ಆ ಪತ್ರವನ್ನು ಪ್ರಧಾನಿ ಮೋದಿಗೆ ತಲುಪಿಸಲು ಬಯಸಿದ್ದಾರೆ. ಕೃಷಿಕರಾಗಿರುವ ಹುಡುಗಿಯ ತಂದೆ, ಆತ್ಮಹತ್ಯೆ ಪತ್ರದಲ್ಲಿ ನನ್ನ ಮಗಳ ಕೊನೆಯ ಆಸೆಯಿದೆ. ಪತ್ರವು ಪ್ರಧಾನಮಂತ್ರಿಯನ್ನು ತಲುಪಬೇಕು ಎಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

ಬಾಲಕಿ ಬಾಬ್ರಲಾದ ಖಾಸಗಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಗುನ್ನೌರ್ ಎಸ್ಎಚ್ಒ ದೇವೇಂದ್ರ ಕುಮಾರ್, ಆಗಸ್ಟ್ 14 ರ ರಾತ್ರಿ ಬಾಲಕಿ ತನ್ನನ್ನು ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ರಿವಾಲ್ವರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಕೂಡ ಪ್ರಾರಂಭಿಸಲಾಗಿದೆ. ಮಂಗಳವಾರ, ಅವರ ಮನೆಯಲ್ಲಿರುವ ನೋಟ್ ಬುಕ್ ನಲ್ಲಿ 18 ಪುಟಗಳ ಆತ್ಮಹತ್ಯೆ ಪತ್ರ ಕೂಡ ಕಂಡುಬಂದಿದೆ. ಆಕೆಯ ಪೋಷಕರು ಮಾನಸಿಕ ಸಮಸ್ಯೆಗಳಿಗೆ ಆಕೆ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ನಮಗೆ ತಿಳಿಸಿದ್ದಾರೆ ಎಂದು ಹೇಳಿದರು.








