ಕೇಂದ್ರದ ವಿರುದ್ಧ ವಿಪಕ್ಷಗಳು ಗರಂ
ಮಹಾಮಾರಿ ಕೊರೋನಾ ವೈರಸ್ ಅಬ್ಬರದ ನಡುವೆಯೇ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನೋತ್ತರ, ಶೂನ್ಯ ಅವಧಿ ರದ್ದು ನಿರ್ಣಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕರು ತೀವ್ರವಾಗಿ ಕಿಡಿಕಾರುತ್ತಿದ್ದಾರೆ.
ಮಾನ್ಸೂನ್ ಅಧಿವೇಶನ ಆರಂಭ
ಲೋಕಸಭೆಯ ಮಾನ್ಸೂನ್ ಅಧಿವೇಶನ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಅವರು ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಎಲ್ಲಾ ಸದಸ್ಯರೂ ಅಗಲಿದ ಗಣ್ಯರಿಗೆ ಮೌನ ಪ್ರಾರ್ಥನೆ ನಡೆಸಿ ಗೌರವ ಸಲ್ಲಿಸಿದ ನಂತರ ಕಲಾಪವನ್ನು ಒಂದು ಗಂಟೆ ಅವಧಿಗೆ ಸ್ಪೀಕರ್ ಮುಂದೂಡಿದರು.
92,071 ಮಂದಿಗೆ ಸೋಂಕು
ದೇಶದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಒಂದೇ ದಿನ ಬರೋಬ್ಬರಿ 92,071 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 48,46,428ಕ್ಕೆ ತಲುಪಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 1,136 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖಅಯೆ ಕೂಡ 79,772ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಗಡಿಯಲ್ಲಿ ಉದ್ವಿಗ್ನ
ವಿದೇಶಾಂಗ ಸಚಿವ ಜೈಶಂಕರ್, ಚೀನಾದ ವಿದೇಶಾಂಗ ಸಚಿವರೊಡನೆ ಮಾಸ್ಕೋದಲ್ಲಿ ನಡೆಸಿದ ಸಂವಾದದ ನಂತರವೂ ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಡಾಖ್ನ ರೆಜಾಗ್ ಲಾ ಬಳಿಯ ಮುಖ್ಪಾರಿ ಶಿಖರದಲ್ಲಿ ಶೂಟಿಂಗ್ ವ್ಯಾಪ್ತಿಯ ಅಂತರದಲ್ಲಿ ಭಾರತ-ಚೀನಾ ಪಡೆಗಳು ಪರಸ್ಪರ ಕಾವಲು ಕಾಯುವುದನ್ನು ಮುಂದುವರಿಸಿದೆ.
ಪ್ರಧಾನಿ ನವಿಲುಗಳ ಜೊತೆ ಬ್ಯುಸಿ
ಪ್ರಧಾನಿಯವರು ನವಿಲುಗಳ ಜೊತೆ ಬ್ಯುಸಿಯಾಗಿದ್ದಾರೆ, ಹೀಗಾಗಿ ದೇಶದ ಜನರು ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳಬೇಕು, ನಿಮ್ಮ ಜಾಗ್ರತೆಯಲ್ಲಿ ನೀವಿರಿ ಎಂದು ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿಯವರ ಕಾಲೆಳೆದಿದ್ದಾರೆ.
ನೆಮ್ಮದಿ ಕಿತ್ತುಕೊಂಡ ಮಳೆ
ಕಳೆದ ಮೂರು ವರ್ಷಗಳಿಂದಲೂ ಕೊಡಗಿನಲ್ಲಿ ಸಂಭವಿಸುತ್ತಿರುವ ಭೀಕರ ಪ್ರವಾಹ ಮತ್ತು ಭೂಕುಸಿತ ಜಿಲ್ಲೆಯ ಜನರ ನೆಮ್ಮದಿಯನ್ನೇ ಕಿತ್ತುಕೊಂಡಿದೆ. ಕಳೆದ ಮೂರು ದಿನಗಳಿಂದ ತಲಕಾವೇರಿ, ಬ್ರಹ್ಮಗಿರಿಬೆಟ್ಟ, ಬಾಗಮಂಡಲ, ನಾಪೋಕ್ಲು ಸೇರಿದಂತೆ ಕಾವೇರಿ ನದಿಪಾತ್ರದ ಪ್ರದೇಶದಲ್ಲಿ ಧಾರಕಾರವಾಗಿ ಸುರಿಯುತ್ತಿದೆ. ಹೀಗೆ ಮಳೆ ಮುಂದುವರೆದಲ್ಲಿ ತ್ರಿವೇಣಿ ಸಂಗ್ರಮ ಮುಳುಗಡೆಯಾಗುವ ಸಾಧ್ಯತೆ ಇದ್ದು, ಜನರಲ್ಲಿ ಪ್ರವಾಹ ಆತಂಕ ಮನೆ ಮಾಡಿದೆ.
ಸೇವೆ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್
ಪ್ರಸಿದ್ದ ನಾಗಾರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ, ಕೊರೋನವೈರಸ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಸೇವೆಗಳನ್ನು ಮತ್ತೆ ಪುನರಾರಂಭಗೊಳಿಸಲು ಮುಜರಾಯಿ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಇಂದಿನಿಂದ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಎಲ್ಲಾ ಸೇವೆಗಳು ಆರಂಭವಾಗಲಿದೆ.
ಕಂಗನಾಗೆ ನೋಟಿಸ್
ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿಯ ಅಕ್ರಮ ನಿರ್ಮಾಣ ಭಾಗವನ್ನು ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಬೃಹತ್ ಮುಂಬೈ ಪಾಲಿಕೆ ಮತ್ತೊಂದು ನೊಟೀಸ್ ಜಾರಿಗೊಳಿಸಿದೆ. ಈ ಬಾರಿ ನಟಿಯ ಮನೆಯ ಕೆಲವು ಭಾಗಗಳು ಅಕ್ರಮವಾಗಿ ನಿರ್ಮಾಣಗೊಂಡಿವೆ ಎಂಬ ಕಾರಣ ನೀಡಿ ಬಿಎಂಸಿ ನೊಟೀಸ್ ಜಾರಿಗೊಳಿಸಿದೆ.
ಉಲ್ಟಾ ಹೊಡೆದ ಐಂದ್ರಿತಾ
ಡ್ರಗ್ ಪೆಡ್ಲರ್ ಹಾಗೂ ಕ್ಯಾಸಿನೋ ಒಡೆಯ ಶೇಖ್ ಪಾಸಿಲ್ ಕೊಲೊಂಬೋ ಪಾರ್ಟಿಗೆ ಗುಳಿಕೆನ್ನೆ ಬೆಡಗಿ ಐಂದ್ರಿತಾ ಹೋಗಿದ್ದ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ. ವೈರಲ್ ಆದ ಫೋಟೋ ಹಾಗೂ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ನಟಿ ಐಂದ್ರಿತಾ ರೇ ಉಲ್ಟಾ ಹೊಡೆದಿದ್ದಾರೆ.
ಥೀಮ್ಗೆ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ..!
ಆಸ್ಟ್ರೀಯದ ಡಾಮಿನಿಕ್ ಥೀಮ್ ಅವರು ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಡಾಮಿನಿಕ್ ಥೀಮ್ ಅವರು ಜರ್ಮನಿಯ ಅಲೆಕ್ಸಾಂಡರ್ ಝಿವೆರೆವ್ ವಿರುದ್ಧ ಪ್ರಯಾಸದ ಜಯ ಸಾಧಿಸಿದ್ರು. ಮೊದಲ ಎರಡು ಸೆಟ್ ಗಳನ್ನು ಸೋತಿದ್ದ ಡಾಮಿನಿಕ್ ಥೀಮ್ ನಂತರದ ಎರಡು ಸೆಟ್ ಗಳನ್ನು ಸುಲಭವಾಗಿ ಗೆದ್ದುಕೊಂಡ್ರು. ಆದ್ರೆ ಅಂತಿಮ ಸೆಟ್ ನಲ್ಲಿ ಅಲೆಕ್ಸಾಂಡರ್ ಅವರು ದಿಟ್ಟ ಹೋರಾಟವನ್ನು ನೀಡಿದ್ರು. ಆದ್ರೂ ಡಾಮಿನಿಕ್ ಅವರ ಅದ್ಭುತ ಆಟದಿಂದ ಅಲೆಕ್ಸಾಂಡರ್ ಅವರು ತಲೆಬಾಗಲೇಬೇಕಾಯ್ತು.
ಇಂಗ್ಲೆಂಡ್ ಗೆ ಜಯ
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 24 ರನ್ ಗಳಿಂದ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ 1-1ರಿಂದ ಸಮಬಲಗೊಂಡಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ 231 ರನ್ ಗಳ ಸವಾಲಿಗೆ ಪ್ರತ್ಯುತ್ತರ ನೀಡಿದ ಆಸ್ಟ್ರೇಲಿಯಾ 207 ರನ್ ಗಳಿಗೆ ಸರ್ವಪತನಗೊಂಡು 24 ರನ್ ಗಳಿಂದ ಸೋಲು ಅನುಭವಿಸಿತ್ತು.
ರಾಯಲ್ಸ್ ಗೆ ವಾರ್ನ್ ಮೆಂಟರ್
ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಹಾಗೂ ರಾಜಸ್ತಾನ ರಾಯಲ್ಸ್ ತಂಡದ ಮಾಜಿ ಕೋಚ್ ಕಮ್ ನಾಯಕ ಶೇನ್ ವಾರ್ನ್ ಅವರು ಮತ್ತೆ ರಾಜಸ್ತಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಶೇನ್ ವಾರ್ನ್ ಅವರು ರಾಯಲ್ಸ್ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ. 2008ರ ಮೊದಲ ಐಪಿಎಲ್ ನಲ್ಲಿ ಶೇನ್ ವಾರ್ನ್ ಅವರು ರಾಜಸ್ತಾನ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಆಗಿ ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
https://youtu.be/hCJbcF6MKbg








