ಉಡುಪಿ: ಕರ್ನಾಟಕದಲ್ಲಿ ಎನ್ಪಿಆರ್ ರದ್ದುಗೊಳಿಸುವಂತೆ ಆಗ್ರಹಿಸಿ ವಿ ದ ಪೀಪಲ್ ಆಫ್ ಇಂಡಿಯಾ ಉಡುಪಿ ಇದರ ನೇತೃತ್ವದಲ್ಲಿ ಉಡುಪಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಮೂಹಿಕ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಈ ಉಪವಾಸ ಸತ್ಯಾಗ್ರಹ ಸಂಜೆ ಆರು ಗಂಟೆಯವರೆಗೆ ಮುಂದುವರಿಯಲಿದೆ. ಸಂವಿಧಾನದ ಪೀಠಿಕೆ ವಾಚಿಸುವ ಮೂಲಕ ಹಿರಿಯ ಚಿಂತಕ ಜಿ.ರಾಜಶೇಖರ್ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.
ಈ ವೇಳೆ ಸಾಮಾಜಿಕ ಹೋರಾಟಗಾರ ಅಮೃತ್ ಶೆಣೈ ಮಾತನಾಡಿ, ಈ ಹಿಂದಿನ ಸರಕಾರಗಳು ಈ ದೇಶದಲ್ಲಿ ಸುಶಿಕ್ಷತರ, ನಿರುದ್ಯೋಗ ಹಾಗೂ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ಜನಗಣತಿಯನ್ನು ನಡೆಸುತ್ತಿತ್ತು. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆ. ಅದನ್ನು ಪ್ರತಿ 10 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಅಂದರೆ 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿಯ ಬದಲು ಮೋದಿ ಸರಕಾರ 2020ರ ಏಪ್ರಿಲ್ ನಲ್ಲಿ ನಡೆಸುವ ಮೂಲಕ ದೇಶದ ಖಜಾನೆಯನ್ನು ಲೂಟಿ ಮಾಡಲಿದೆ ಮತ್ತು ಇಡೀ ದೇಶವನ್ನು ಸಂಪೂರ್ಣ ದಿವಾಳಿ ಮಾಡುತ್ತಿದೆ ಎಂದು ಆರೋಪಿಸಿದರು.
ಸತ್ಯಾಗ್ರಹದಲ್ಲಿ ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ರೈ, ಹಿರಿಯ ಚಿಂತಕ ಪ್ರೊ.ಫಣಿರಾಜ್, ತಾಪಂ ಸದಸ್ಯೆ ಸುನೀತಾ ಶೆಟ್ಟಿ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಎಸ್ಡಿಪಿಐ ಮುಖಂಡ ಅಬ್ದುರ್ರಹ್ಮಾನ್ ಮಲ್ಪೆ, ವಿವಿಧ ಸಂಘಟನೆಗಳ ಮುಖಂಡರಾದ ಎಂ.ಪಿ.ಮೊಯ್ದಿನಬ್ಬ, ಅಬ್ದುಲ್ ಅಝೀಝ್ ಉದ್ಯಾವರ, ಅಬೂಬಕರ್ ನೇಜಾರು, ಸಲಾವುದ್ದೀನ್, ಚಾರ್ಲ್ಸ್ ಆಯಂಬ್ಲರ್, ಖತೀಬ್ ರಶೀದ್, ಮುಹಮ್ಮದ್ ವೌಲಾ, ನಝೀರ್ ಅಂಬಾಗಿಲು, ಪ್ರೊ.ಸಿರಿಲ್ ಮಥಾಯಸ್, ಗೀತಾ ವಾಗ್ಳೆ ಮತ್ತಿತರರು ಭಾಗವಹಿಸಿದ್ದಾರೆ.








