ಕಂಡುಕೇಳರಿಯದ ಭಾರೀ ಮಳೆಗೆ ಮುಳುಗಿದ ಉಡುಪಿ
ಉಡುಪಿ, ಸೆಪ್ಟೆಂಬರ್20: ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಈ ಭಾರಿ ಮಳೆಗೆ ಉಡುಪಿ ನಗರ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ನಾಲ್ಕು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಉಡುಪಿ ಮುಳುಗಡೆಯಾಗಿದೆ. ಕಂಡುಕೇಳರಿಯದ ಭಾರೀ ಮಳೆಗೆ ಜನತೆ ಮನೆಯಿಂದ ಹೊರಬರಲಾರದೆ ಪರದಾಡುವಂತಾಗಿದೆ. ಭಾರಿ ಮಳೆಯ ಪರಿಣಾಮ ಸ್ವರ್ಣ ನದಿ, ಸೀತನದಿ ಉಕ್ಕಿ ಹರಿಯುತ್ತಿದೆ.
ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಆವರಣ, ನಗರದ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಪುತ್ತಿಗೆ ಪರಿಸರದಲ್ಲಿ ಕೃತಕ ನೆರೆಯಿಂದಾಗಿ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ಕಲ್ಸಂಕ ಬೈಲಕೆರೆ ಬಳಿ ಕ್ರೇನ್ ಮೂಲಕ ಅಪಾಯದಲ್ಲಿದ್ದವರ ರಕ್ಷಣೆ
ಮಾಡಲಾಗಿದ್ದರೆ, ದೋಣಿಯಲ್ಲಿ ತಗ್ಗು ಪ್ರದೇಶದಲ್ಲಿ ಸಿಕ್ಕಿಬಿದ್ದವರ ರಕ್ಷಣೆ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಗಳು ನಿರತರಾಗಿದ್ದಾರೆ. ನಗರದ ಅಂಗಡಿ ಗೋದಾಮುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಶನಿವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯ ಆರ್ಭಟ ಇನ್ನೂ ಮುಂದುವರೆದಿದೆ. ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.
https://twitter.com/SaakshaTv/status/1307574721135783936?s=19








