ಬೇಕೇ ಬೇಕು… ಸುರೇಶ್ ರೈನಾ…ಬೇಕು.. ಸಾಮಾಜಿಕ ಜಾಲ ತಾಣದಲ್ಲಿ ಸಿಎಸ್ಕೆ ಅಭಿಮಾನಿಗಳ ಡಿಮ್ಯಾಂಡ್..!
ಚೆನ್ನೈ ಸೂಪರ್ ಕಿಂಗ್ಸ್ ತಂಡ 2020ರ ಐಪಿಎಲ್ ಟೂರ್ನಿಯಲ್ಲಿ ಅಭಿಮಾನಿಗಳನ್ನು ನಿರಾಸೆಗೊಳಿಸುತ್ತಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಧೋನಿ ಪಡೆ ಈಗ ಒತ್ತಡಕ್ಕೆ ಸಿಲುಕಿದೆ. ದಿಟ್ಟ ನಿರ್ಧಾರದೊಂದಿಗೆ ಗ್ಯಾಂಬ್ಲಿಂಗ್ ಮಾಡುತ್ತಾ ತಂಡವನ್ನು ಗೆಲುವಿನ ದಡ ಸೇರಿಸುತ್ತಿದ್ದ ಧೋನಿಯ ಗೇಮ್ ಪ್ಲಾನ್ ಗಳು ವರ್ಕ್ ಔಟ್ ಆಗುತ್ತಿಲ್ಲ
ಮುಖ್ಯವಾಗಿ ಸಿಎಸ್ ಕೆ ತಂಡ ಉತ್ತಮ ಆರಂಭ ಪಡೆದುಕೊಳ್ಳುತ್ತಿಲ್ಲ. ಹಾಗೇ ಮೂರನೇ ಕ್ರಮಾಂಕದ ಬ್ಯಾಟ್ಸ್ ಮೆನ್ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಹೊಸ ಅಭಿಯಾನವನ್ನು ಶುರು ಮಾಡಿಕೊಂಡಿದ್ದಾರೆ.
ಸಿಎಸ್ಕೆ ತಂಡದ ಚಿನ್ನ ತಲಾ ಸುರೇಶ್ ರೈನಾ ಮತ್ತೆ ತಂಡವನ್ನು ಸೇರಿಕೊಳ್ಳಬೇಕು ಎಂದು ಸಿಎಸ್ಕೆ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನವನ್ನು ಶುರು ಮಾಡಿಕೊಂಡಿರುವ ಸಿಎಸ್ ಕೆ ಅಭಿಮಾನಿಗಳು ಸುರೇಶ್ ರೈನಾ ತಂಡವನ್ನು ಸೇರಿಕೊಳ್ಳಬೇಕು. ಮೂರನೇ ಕ್ರಮಾಂಕದ ಕೊರತೆಯನ್ನು ನಿವಾರಿಸಬೇಕು ಅನ್ನೋ ಬೇಡಿಕೆಯನ್ನು ಮುಂದಿಟ್ಟುಕೊಂಡಿದ್ದಾರೆ.
ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹೊರನಡೆದಿದ್ದರು. ತನ್ನ ಕುಟುಂಬದ ಮೇಲೆ ನಡೆದ ಭೀಕರ ಹತ್ಯೆಯ ಕಾರಣದಿಂದಾಗಿ ಸುರೇಶ್ ರೈನಾ ದುಬೈನಿಂದ ತವರಿಗೆ ಆಗಮಿಸಿದ್ದರು. ಸುರೇಶ್ ರೈನಾ ತಂಡದಿಂದ ನಿರ್ಗಮಿಸುತ್ತಿದ್ದಂತೆ ಸಿಎಸ್ಕೆ ತಂಡದ ಮಾಲೀಕ ಎನ್. ಶ್ರೀನಿವಾಸನ್ ರೈನಾ ವಿರುದ್ಧ ಕಿಡಿ ಕಾರಿದ್ದರು. ಕೇದಾರ್ ಜಾಧವ್ ಕೂಡ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಆದ್ರೆ ಈ ಬಗ್ಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.
ಈ ನಡುವೆ, ಸುರೇಶ್ ರೈನಾ ಮತ್ತೆ ತಂಡವನ್ನು ಸೇರಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ರೂ ಸಿಎಸ್ಕೆ ಮ್ಯಾನೇಜ್ ಮೆಂಟ್ ಯಾವುದೇ ಉತ್ತರವನ್ನು ಹೇಳಿಲ್ಲ. ಇದೀಗ ರೈನಾ ಅವರ ಅನುಪಸ್ಥಿತಿ ಸಿಎಸ್ಕೆ ತಂಡದ ಮೇಲೆ ಗಾಢವಾದ ಪರಿಣಾಮ ಬೀರುತ್ತಿದೆ.
ಸಿಎಸ್ಕೆ ತಂಡ ಉತ್ತಮ ಆರಂಭವನ್ನು ಪಡೆಯಲು ವಿಫಲವಾದಾಗ ಸುರೇಶ್ ರೈನಾ ಮೂರನೇ ಕ್ರಮಾಂಕದಲ್ಲಿ ಜವಾಬ್ದಾರಿಯುತವಾಗಿ ತಂಡಕ್ಕೆ ಆಧಾರವಾಗುತ್ತಿದ್ದರು. ಹೀಗಾಗಿ ಕೊನೆಯ ಕ್ಷಣಗಳಲ್ಲಿ ಸವಾಲು ಎಷ್ಟೇ ದೊಡ್ಡದಾಗಿರಲಿ, ಧೋನಿಗೆ ಯಾವುದೇ ಒತ್ತಡಗಳು ಇಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗುತ್ತಿತ್ತು.
ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಸಿಎಸ್ಕೆ ತಂಡ ಉತ್ತಮ ಆರಂಭವನ್ನು ಪಡೆಯುತ್ತಿಲ್ಲ. ಮೂರನೇ ಕ್ರಮಾಂಕ ಹಾಗೂ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳಿಂದಲೂ ನಿರೀಕ್ಷಿತ ಆಟ ಹೊರಬರುತ್ತಿಲ್ಲ. ಹೀಗಾಗಿ ಧೋನಿ ಒತ್ತಡಕ್ಕೆ ಸಿಲುಕಿದ್ದಾರೆ. ಧೋನಿಗೂ ಸುರೇಶ್ ರೈನಾ ಅವರ ಅನುಪಸ್ಥಿತಿ ಕಾಡುತ್ತಿದೆ ಎಂಬುದು ಮನವರಿಕೆಯಾಗಿದೆ.
ಅದೇ ರೀತಿ ಬೌಲಿಂಗ್ ನಲ್ಲೂ ಜಾದು ಮಾಡುವ ರೈನಾ ಫೀಲ್ಡಿಂಗ್ ನಲ್ಲೂ ರನ್ ವೇಗಕ್ಕೆ ಕಡಿವಾಣ ಹಾಕುತ್ತಿದ್ದರು. ಒಟ್ಟಾರೆಯಾಗಿ ಧೋನಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಎಸ್ ಕೆ ತಂಡದ ಆಟಗಾರರು ಆಟದ ಎಲ್ಲಾ ವಿಭಾಗದಲ್ಲೂ ನಿರಾಸೆ ಮೂಡಿಸುತ್ತಿದ್ದಾರೆ.
ಸುರೇಶ್ ರೈನಾ ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನವನ್ನೇ ನೀಡಿದ್ದಾರೆ. ಗರಿಷ್ಠ ಪಂದ್ಯವನ್ನಾಡಿರುವ ದಾಖಲೆ ಒಂದು ಕಡೆಯಾದ್ರೆ, ಗರಿಷ್ಠ ರನ್ ಪೇರಿಸಿದವರ ಸಾಲಿನಲ್ಲೂ ಮುಂಚೂಣಿಯಲ್ಲಿದ್ದಾರೆ. ಅದೇ ರೀತಿ ಗರಿಷ್ಠ ಸಿಕ್ಸರ್ ಸಿಡಿಸಿದ್ದ ದಾಖಲೆಯ ಪಟ್ಟಿಯಲ್ಲೂ ನಾಲ್ಕನೇ ಸ್ಥಾನದಲ್ಲಿದ್ದಾರೆ.