ಮಡಿಕೇರಿ: ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ಮೋಸ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.
ಮೈಸೂರಿನ ರೆಹಮತುವುಲ್ಲಾ ವಂಚನೆ ಮಾಡಿ ನಾಪತ್ತೆಯಾಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ನ್ಯೂ ಡೈಮಂಡ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಶಾಖೆಯನ್ನು ಕುಶಾಲನಗರದಲ್ಲಿ ಆರಂಭಿಸುವುದಾಗಿ, ಕಳೆದ ಐದು ತಿಂಗಳ ಹಿಂದೆ ಕಚೇರಿಯನ್ನು ಕುಶಾಲನಗರದಲ್ಲಿ ಆರಂಭಿಸಿದ್ದ. ಬಳಿಕ ಸ್ಥಳೀಯರನ್ನು ಸಿಬ್ಬಂದಿಯಾಗಿ ನೇಮಿಸಿಕೊಂಡು ಸುತ್ತಮುತ್ತಲ ಹಳ್ಳಿಗಳ 300 ಜನರಿಂದ ತಲಾ ಐದು ಸಾವಿರ ರೂಪಾಯಿಯಂತೆ 15 ಲಕ್ಷ ಹಣ ಸಂಗ್ರಹಿಸಿದ್ದ ಎನ್ನಲಾಗುತ್ತಿದೆ.

ಐದು ಸಾವಿರ ಕಟ್ಟಿದರೆ, ಒಂದು ಲಕ್ಷ ಸಾಲ ಕೊಡುವುದಾಗಿ ನಂಬಿಸಿದ್ದ. ಅದನ್ನು ಎರಡು ವರ್ಷಗಳಲ್ಲಿ ಸಾಲ ಪಡೆದವರು ತೀರಿಸಬೇಕೆಂದು ಷರತ್ತು ವಿಧಿಸಿದ್ದನಂತೆ. ಆದರೆ ಮೂರು ತಿಂಗಳಾದರೂ ಸಂಸ್ಥೆಯೂ ಸಾಲ ನೀಡದಿದ್ದಾಗ, ಅನುಮಾನಗೊಂಡ ಕುಶಾಲನಗರ ಶಾಖೆಯ ಸಿಬ್ಬಂದಿ ನಳಿನಿ ಎಂಬವರು ಬಾಗೇಪಲ್ಲಿಗೆ ಹೋಗಿ ವಿಚಾರಿಸಿದಾಗ ನ್ಯೂ ಡೈಮಂಡ್ ಕೋ ಆಪರೇಟಿವ್ ಸೊಸೈಟಿ ಶಾಖೆ ಮುಚ್ಚಿ ಹೋಗಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿದ ನಳಿನಿ ಮತ್ತು ಹಣ ಕಟ್ಟಿದ್ದ ನೂರಾರು ಜನರು ರೆಹಮತುಲ್ಲಾನಿಗೆ ಫೋನ್ ಮಾಡಿದ್ದಾರೆ. ಆದರೆ ಆತ ಸಂಪರ್ಕಕ್ಕೆ ಸಿಕ್ಕಿಲ್ಲ. ಕಟ್ಟಿದ್ದ ಹಣವನ್ನು ವಾಪಸ್ ನೀಡದೆ ಮೋಸ ಮಾಡುತ್ತಿರುವುದಾಗಿ ಕೊಡಗು ಎಸ್ ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ರೆಹಮತುಲ್ಲಾ ನಾರಾಯಣ ಹೃದಯಾಲಯ ಬೆಂಗಳೂರು ಮತ್ತು ಮೈಸೂರು ಆಸ್ಪತ್ರೆಗಳಲ್ಲಿ ರಿಸಷ್ಪನಿಸ್ಟ್ ಕೆಲಸ ಕೊಡಿಸುವುದಾಗಿ ಮೂರು ಲಕ್ಷ ಪಡೆದು ಮೋಸ ಮಾಡಿದ ಸಂಗತಿ ಬೆಳಕಿಗೆ ಬಂದಿದೆ.
ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿ ಮೋಸ ಮಾಡಿರುವ ಪ್ರಕರಣಗಳು ಮತ್ತೆ ನಡೆಯುತ್ತಿದ್ದರೂ ಜನರು ಮೋಸ ಹೋಗುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸುವ ಕೆಲಸವೂ ಆಗುತ್ತಿದೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಕೊಡಗು ಎಸ್.ಪಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








