ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಕಲಾವಿದ ಪುತ್ತೂರು ಡಾ| ಶ್ರೀಧರ್ ಭಂಡಾರಿ ಇನ್ನಿಲ್ಲ
ಪುತ್ತೂರು, ಫೆಬ್ರವರಿ19: ಯಕ್ಷಗಾನ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಶ್ರೀಧರ ಭಂಡಾರಿಯವರು ಇಂದು ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಪುತ್ತೂರಿನ ಬನ್ನೂರಿನಲ್ಲಿ ವಾಸ್ತವ್ಯವಿದ್ದ ಅವರು ಯುವ ಜನಾಂಗಕ್ಕೆ ಯಕ್ಷ ಪಾಠಗಳನ್ನು ಹೇಳಿಕೊಡುತ್ತಿದ್ದರು. ತಮ್ಮ ಅಜ್ಜನಿಂದ ಪ್ರಭಾವಿತರಾಗಿ ಯಕ್ಷಗಾನದತ್ತ ಆಕರ್ಷಿತರಾದ ಶ್ರೀಧರ ಭಂಡಾರಿಯವರು ಯಕ್ಷರಂಗವನ್ನು ಪ್ರವೇಶಿಸಿದ್ದರು.
ಸಿಡಿಲಮರಿ ಅಭಿಮನ್ಯು, ಸಿಡಿದೆದ್ದ ಗಂಡುಗಲಿ, ಯಕ್ಷಗಾನ ಚತುರ, ಅದ್ಭುತ ನರ್ತಕ, ಗಂಡುಗತ್ತಿನ ಪುಂಡುವೇಷಧಾರಿ , ರಂಗಸ್ಥಳದ ರಾಜ ಮುಂತಾದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶ್ರೀಧರ ಭಂಡಾರಿಯವರು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಬಾಬು, ಮಾಣಂಗಾಯಿ ಕೃಷ್ಣ ಭಟ್ಟರು, ಹೊಸಹಿತ್ಲು ಮಹಾಲಿಂಗ ಭಟ್ಟರು ಮುಂತಾದವರ ನಂತರ ಪುಂಡುವೇಷಧಾರಿಯಾಗಿ ಬಹಳ ಪ್ರಸಿದ್ಧಿಯನ್ನು ಪಡೆದಿದ್ದರು. ಅಭಿಮನ್ಯು ಪಾತ್ರ ಅವರಿಗೆ ಬಹು ದೊಡ್ಡ ಹೆಸರನ್ನು ತಂದುಕೊಟ್ಟಿತು.
ಆಕರ್ಷಕ ಧೀಂಗಿಣ ಶೈಲಿಯ ಸಿಡಿಲಮರಿ ಎಂದೇ ಖ್ಯಾತರಾಗಿದ್ದ ಅವರು ಯಕ್ಷಗಾನದಲ್ಲಿ ಮಾತು ಮತ್ತು ನಾಟ್ಯದಿಂದ ಜನಮೆಚ್ಚುಗೆ ಗಳಿಸಿದ್ದರು.
ಕೇರಳದ ಎರ್ನಾಕುಲಂ ನಲ್ಲಿ ಕೃಷ್ಣ ಪಾತ್ರಕ್ಕೆ ಗೆಜ್ಜೆ ಕಟ್ಟುವ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಶ್ರೀಧರ ಭಂಡಾರಿಯವರು 1963ರಲ್ಲಿ ಧರ್ಮಸ್ಥಳ ಮೇಳ ಸೇರಿದ್ದರು. 1980ರಲ್ಲಿ ಪುತ್ತೂರು ಮೇಳ ಹಾಗೂ 1987ರಲ್ಲಿ ಕಾಂತವರ ಮೇಳಗಳನ್ನು ಸ್ವಂತವಾಗಿ ಕಟ್ಟಿ ಬಳಿಕ ಮತ್ತೆ ಧರ್ಮಸ್ಥಳ ಮೇಳ ಸೇರಿದ್ದರು. ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ 45 ವರ್ಷಗಳ ಕಾಲ ಪ್ರಮುಖ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದರು.
ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮತ್ತು ಪ್ರಶಸ್ತಿಗಳನ್ನು ಗಳಿಸಿದ್ದ ಅವರು ತಮ್ಮ 12ನೇ ವಯಸ್ಸಿನಲ್ಲೇ ಯಕ್ಷಗಾನ ಕಲಿತು, 15ನೇ ವಯಸ್ಸಿನಲ್ಲಿ ರಂಗಸ್ಥಳ ಏರಿದ್ದರು.
ಐದು ದಶಕಗಳ ಕಾಲ ಯಕ್ಷಗಾನ ರಂಗವನ್ನು ಆಳಿದ ಶ್ರೀಧರ ಭಂಡಾರಿಯವರು ಹಿರಿಯ ಯಕ್ಷಗಾನ ಕಲಾವಿದ ಶ್ರೀ ಬಳ್ಳಂಬೆಟ್ಟು ಶೀನಪ್ಪ ಭಂಡಾರಿ ಮತ್ತು ಶ್ರೀಮತಿ ಸುಂದರಿ ದಂಪತಿಗಳ ಪುತ್ರ. ಇವರಿಗೆ ಕನ್ನಡ ಸಂಘ ಮಸ್ಕತ್-2009, ಕುವೈಟ್ ಬಂಟೋತ್ಸವ-2008, ಕನ್ನಡ ಸಂಘ ಬಹರೈನ್-2002, ಯುಎಇ ತುಳುಕೂಟ ದುಬೈ-2001, ಜೇಡ್ ಜಪಾನ್-1991, ಕರ್ನಾಟಕ ಸಂಘ ದುಬೈ-1989, ಡಾಕ್ಟರೇಟ್ ಪದವಿ 2012, ಅಮೆರಿಕದ ಗ್ಲೋಬಲ್ ಫೀಸ್ ಆಫ್ ಹಾನ್ ಸ್ಟನ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ 56 ವರ್ಷಗಳ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಡಾ | ಶ್ರೀಧರ ಭಂಡಾರಿಯವರಿಗೆ ಯಕ್ಷ ಕೌಸ್ತುಭ, ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಪ್ರಶಸ್ತಿ, ಕಂಚಾರು ಆನಂದ ಶೆಟ್ಟಿ ಸ್ಮಾರಕ ಯಕ್ಷಗಾನ ಪ್ರಶಸ್ತಿ ಮುಂಬಯಿ ಡಾ.ಬಿ.ಬಿ ಶೆಟ್ಟಿ ಪ್ರಶಸ್ತಿ, ಅಡ್ಕಸ್ಥಳ ಪ್ರಶಸ್ತಿ, ಶ್ರೀ ರಾಮ ವಿಠಲ ಪ್ರಶಸ್ತಿ, ಪೇಜಾವರ ಎಡನೀರು ಮಠ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲಾ, ಶಾಂತನಾ, ಪುತ್ರರಾದ ಡಾ ಅನಿಲ, ದೇವಿ ಪ್ರಕಾಶ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.