ನವರಸನಾಯಕ ಜಗ್ಗೇಶ್ ನೇರಾನೇರ ಮಾತುಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅಷ್ಟು ಮಾತ್ರವಲ್ಲದೆ ಮಾನವೀಯತೆ ಗುಣದಿಂದಲ್ಲೂ ಹಾಗಾಗ ಸುದ್ದಿಗೆ ಬರುತ್ತಾರೆ ಅಂತಹದ್ದೇ ಸುದ್ದಿ ಇದೀಗಾ ವೈರಲ್ ಆಗಿದೆ.
ಖಾಸಗಿ ವಾಹಿನಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಸರಿಗಮಪ ಸೀಸನ್ 17” ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಇಬ್ಬರು ಅಂಧ ಗಾಯಕಿಯರಿಗೆ ಕರುನಾಡ ಪಟೇಲ ಜಗ್ಗೇಶ್ ನೆರವಿಗೆ ಧಾವಿಸಿದ್ದಾರೆ. ತಮ್ಮ ತವರು ಜಿಲ್ಲೆಯವರೇ ಆದ ಈ ಅಂಧ ಸಹೋದರಿಯರ ಕರುಣಾಜನಕ ಕಥೆಯ ಕೇಳಿ ಮಗುವಿನಂತೆ ಮರುಗಿದ ಜಗ್ಗೇಶ್ ಅವರಿಗೆ ಸೂರು ಕಟ್ಟಿಸಿಕೊಡಲು ಮುಂದಾಗಿದ್ದಾರೆ.
ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್ ಗೆ ಈ ಜವಾಬ್ದಾರಿ ವಹಿಸಿದ್ದಾರೆ. ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಅಂಧರ ಬಾಳಲ್ಲಿ ಬೆಳಕ ಮೂಡಿಸಲು ಮುಂದಾಗಿದ್ದಾರೆ. ಜಗ್ಗೇಶ್ ಅವರ ಈ ಔದಾರ್ಯ ಗುಣಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತ, ಸರಿಗಮಪ ಕಾರ್ಯಕ್ರಮದಲ್ಲಿ ತೀರ್ಪುಗಾರರಲ್ಲಿ ಒಬ್ಬರಾದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಈ ಸಹೋದರಿಯಗೆ ನೆರವು ನೀಡಲು ಮುಂದೆ ಬಂದಿದ್ದಾರೆ. ಇನ್ನ ಪ್ರತಿ ತಿಂಗಳ ದಿನಸಿ ವ್ಯವಸ್ಥೆಯನ್ನ ವಹಿಸಿಕೊಂಡು ಮಾನವೀಯತೆಯನ್ನ ಮೆರೆದಿದ್ದಾರೆ. ಒಟ್ಟಾರೆ, ದುರ್ಬಲ ವರ್ಗದವರ ಸಹಾಯಕ್ಕೆ ಚಂದನವನದ ತಾರೆಯರು ಮುಂದೆ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ.








