ಟೀಮ್ ಆಯ್ಕೆ ವಿಚಾರ ಆಯ್ಕೆ ಸಮಿತಿಗೆ ಬಿಟ್ಟಿದ್ದು – ಭಿನ್ನ ಸ್ವರಕ್ಕೆ ತೆರೆ ಎಳೆದ ಬಿಗ್ ಬಾಸ್ ಗಂಗೂಲಿ
ಟೀಮ್ ಇಂಡಿಯಾ ಆಯ್ಕೆ ಸಮಿತಿ ನಿರ್ಧಾರದ ಬಗ್ಗೆ ಉಂಟಾಗಿರುವ ಭಿನ್ನ ಸ್ವರಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತೆರೆ ಎಳೆದಿದ್ದಾರೆ.
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಶುಬ್ಮನ್ ಗಿಲ್ ಬದಲಾಗಿ ಅಭಿಮನ್ಯು ಈಶ್ವರನ್ ಅವರ ಸೇರ್ಪಡೆ ಹಾಗೂ ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಅವರನ್ನು ಆಯ್ಕೆಗೆ ಪರಿಗಣಿಸಬೇಕು ಎಂದು ಕೇಳಿಬರುತ್ತಿದ್ದ ಒತ್ತಡಗಳಿಗೆ ಗಂಗೂಲಿ ಸೂಕ್ತ ಉತ್ತರವನ್ನು ನೀಡಿದ್ದಾರೆ. ಟೀಮ್ ಆಯ್ಕೆ ವಿಚಾರ ಆಯ್ಕೆ ಸಮಿತಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಜೂನ್ 28ರಂದು ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಆಯ್ಕೆ ಸಮಿತಿಗೆ ಹೆಚ್ಚುವರಿಯಾಗಿ ಇಬ್ಬರು ಆರಂಭಿಕರನ್ನು ಕಳುಹಿಸಿಕೊಡಿ ಅಂತ ಮನವಿ ಮಾಡಿಕೊಂಡಿತ್ತು. ಆದ್ರೆ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಅವರು ಟೀಮ್ ಮ್ಯಾನೇಜ್ ಮೆಂಟ್ ನ ಮನವಿಗೆ ಸ್ಪಂದಿಸಿರಲಿಲ್ಲ. ಯಾಕಂದ್ರೆ ಸದ್ಯದ ತಂಡದಲ್ಲಿ ನಾಲ್ವರು ಆರಂಭಿಕ ಆಟಗಾರರು ಇದ್ದಾರೆ. ಹೀಗಾಗಿ ಆಯ್ಕೆ ಸಮಿತಿ ಯಾವುದೇ ಪ್ರತಿಕ್ರಿಯೆ ಕೂಡ ನೀಡಿರಲಿಲ್ಲ.
ಇದೀಗ ಗಂಗೂಲಿ ಜುಲೈ 8ರಂದು ತನ್ನ 49ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಆಯ್ಕೆ ಸಮಿತಿಯ ನಿರ್ಧಾರವನ್ನು ಪ್ರಶ್ನೆ ಮಾಡಲ್ಲ. ತಂಡದ ಆಯ್ಕೆ ವಿಚಾರ ಆಯ್ಕೆ ಸಮಿತಿಗೆ ಬಿಟ್ಟಿದ್ದು ಎಂದು ಗಂಗೂಲಿ ಹೇಳಿದ್ದಾರೆ.
ಇನ್ನು ಐಪಿಎಲ್ ಸೆಪ್ಟಂಬರ್ ನಲ್ಲಿ ಯುಎಇ ನಲ್ಲಿ ಯಾವುದೇ ಅಡೆ ತಡೆ ಇಲ್ಲದೆ ನಡೆಯಲಿದೆ ಎಂದು ದಾದಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಯುಎಇ ನಲ್ಲಿ ಸಂಘಟಿಸುವುದು ಅನಿವಾರ್ಯವಾಗಿದೆ. ಭಾರತದಲ್ಲಿ ಆಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ
ಎಂಬ ಬೇಸರವಿದೆ. ಆದ್ರೆ ಪರಿಸ್ಥಿತಿ ಹಾಗಿದೆ. ಕಳೆದ ಬಾರಿಯೂ ಈ ಟೂರ್ನಿ ರದ್ದಾಗಿತ್ತು. ಈ ಬಾರಿಯೂ ರದ್ದುಗೊಳಿಸಿದ್ರೆ ಆಟಕ್ಕೆ ಭಾರಿ ನಷ್ಟವಾಗುತ್ತದೆ ಎಂದ ಗಂಗೂಲಿ, ತನ್ನ ಆರೋಗ್ಯದ ಬಗ್ಗೆಯೂ ಗಂಗೂಲಿ ಮಾಹಿತಿ ನೀಡಿದ್ರು. ನಾನು ಈಗ ಫಿಟ್ ಆಗಿದ್ದೇನೆ. ಯಾವುದೇ ತೊಂದರೆ ಇಲ್ಲ. ಕೋವಿಡ್ ಬಗ್ಗೆ ಎಲ್ಲರೂ ಎಚ್ಚರದಿಂದ ಇರಿ ಎಂದು ಸೌರವ್ ಗಂಗೂಲಿ ಮನವಿ ಕೂಡ ಮಾಡಿಕೊಂಡ್ರು.








