ಯಕ್ಷರಂಗದ ಹಿರಿಯ ಚೇತನ ಸಂಪಾಜೆ ಶೀನಪ್ಪ ರೈ ವಿಧಿವಶ
ಮಂಗಳೂರು : ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದ ಸಂಪಾಜೆ ಶೀನಪ್ಪ ರೈ ಅವರು ಇಂದು ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶೀನಪ್ಪ ರೈ, ಇಂದು ಮಂಗಳೂರಿನ ತಮ್ಮ ಪುತ್ರನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೊಡಗು ಜಿಲ್ಲೆಯ ಸಂಪಾಜೆಯಲ್ಲಿ ಜನಸಿದ್ದ ಸಂಪಾಜೆ ಶೀನಪ್ಪ ರೈ, ಯಕ್ಷಗಾನ ವಾತಾವರಣದಲ್ಲಿ ಬೆಳೆದವರು. ಅವರ ತಂದೆ ಕೂಡ ಯಕ್ಷಗಾನ ಕಲಾವಿದರಾಗಿದ್ದರು. ಹೀಗಾಗಿ ಅವರಿಗೆ ಬಾಲ್ಯದಿಂದಲೇ ಯಕ್ಷಗಾನದ ಮೇಲೆ ಒಲವಿತ್ತು.
ಆರಂಭಿಕ ಪಾಠವನ್ನು ತಂದೆಯಿಂದ ಕಲಿತ ಅವರು ನಂತರ ನಾಟ್ಯಾಭ್ಯಾಸವನ್ನು ಕುಂಬಳೆ ಕಣ್ಣನ್ ಅವರಿಂದ, ಬಣ್ಣಗಾರಿಕೆಯನ್ನು ಬಣ್ಣದ ಕುಟ್ಯಪ್ಪರಿಂದ ಕಲಿತರು. ತಮ್ಮ 13ನೇ ವಯಸ್ಸಿನಲ್ಲೇ ಇರಾ ಸೋಮನಾಥೇಶ್ವರ ಮೇಳದಲ್ಲಿ ಯಕ್ಷಗಾನ ತಿರುಗಾಟ ಆರಂಭಿಸಿದ ಶೀನಪ್ಪ ರೈ ಅವರು, ನಂತರ ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ ಮೇಳ, ಕಟೀಲು ಮೇಳ, ಹೊಸನಗರ ಎಡನೀರು ಹಾಗೂ ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯವನ್ನು ಮಾಡಿದ್ದರು.
ಮುಖ್ಯವಾಗಿ ರಕ್ತಬೀಜ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಪಾತ್ರಗಳಿಗೆ ಶೀನಪ್ಪ ರೈ ಪ್ರಸಿದ್ಧರಾಗಿದ್ದರು.
ಇನ್ನು ಸಂಪಾಜೆ ಶೀನಪ್ಪ ರೈ ಅವರು ರಾಜ್ಯ ಪ್ರಶಸ್ತಿ, ಯಕ್ಷಗಾನ ಬಯಲಾಟ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.










