ಅಂದು ಚಾಪೆಲ್ ಕೆಂಗಣ್ಣಿಗೆ ಗುರಿಯಾಗಿದ್ದ ದೀಪಕ್ ಚಾಹರ್ ಇಂದು ಜಗ ಮೆಚ್ಚಿದ ಕ್ರಿಕೆಟಿಗ..!
ದೀಪಕ್ ಚಾಹರ್.. ಸದ್ಯ ಟ್ರೆಂಡಿಂಗ್ ನಲ್ಲಿರುವ ಕ್ರಿಕೆಟಗ. ಶ್ರೀಲಂಕಾ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ದೀಪಕ್ ಚಾಹರ್ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ರೋಚಕ ಗೆಲುವನ್ನು ತಂದುಕೊಟ್ಟಿದ್ದರು. ಜೊತೆಗೆ ಸರಣಿ ಕೂಡ ಟೀಮ್ ಇಂಡಿಯಾದ ಕೈವಶವಾಗಿದೆ.
ಹಾಗೇ ನೋಡಿದ್ರೆ ಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬಹುತೇಕ ಸೋಲಿನ ದವಡೆಗೆ ಸಿಲುಕಿತ್ತು. ಗೆಲುವು ಮರಿಚೀಕೆಯಾಗಿತ್ತು. ಆದ್ರೆ ದೀಪಕ್ ಚಾಹರ್ ನೋಡ ನೋಡುತ್ತಲೇ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು. ದೀಪಕ್ ಚಾಹರ್ ಅವರ ಅಜೇಯ 69 ರನ್ ಲಂಕಾ ತಂಡದ ಆಟಗಾರರಿಗೆ ಕಣ್ಣೀರುಭರಿಸುವಂತೆ ಮಾಡಿತ್ತು.
ಆದ್ರೆ ಇದೇ ದೀಪಕ್ ಚಾಹರ್ 13 ವರ್ಷಗಳ ಹಿಂದೆ ಎಷ್ಟೊಂದು ಅವಮಾನ ಅನುಭವಿಸಿದ್ದರು ಎಂಬುದನ್ನು ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಈಗ ಬಹಿರಂಗಪಡಿಸಿದ್ದಾರೆ. ಈ ಸ್ಟೋರಿಯನ್ನು ದೀಪಕ್ ಚಾಹರ್ ಈ ಹಿಂದೆಯೇ ಹೇಳಿಕೊಂಡಿದ್ದರು. ಅದನ್ನು ಈಗ ವೆಂಕಿ ಮತ್ತೆ ನೆನಪು ಮಾಡಿಕೊಂಡಿದ್ದಾರೆ.
ಅದು 2008. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಟೀಮ್ ಇಂಡಿಯಾದ ವಿವಾದಾತ್ಮಕ ಕೋಚ್ ಗ್ರೆಗ್ ಚಾಪೆಲ್ ರಾಜಸ್ತಾನ ಕ್ರಿಕೆಟ್ ಸಂಸ್ಥೆಯ ಅಕಾಡೆಮಿಯ ನಿರ್ದೇಶಕರಾಗಿದ್ದರು. ಆಗ ದೀಪಕ್ ಚಾಹರ್ ಅವರು 19 ವಯೋಮಿತಿ ಕ್ರಿಕೆಟ್ ತಂಡದಲ್ಲಿದ್ದರು. ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ವಾಪಸ್ ಬಂದಿದ್ದರು. ಆಗ ದೀಪಕ್ ಚಾಹರ್ ಗೆ ಆಘಾತ ನೀಡಿದ್ದು ಗ್ರೇಗ್ ಚಾಪೆಲ್.
ದೀಪಕ್ ಹೆಚ್ಚು ಎತ್ತರವಿಲ್ಲ. ಹಾಗಾಗಿ ನೀನು ಕ್ರಿಕೆಟಿಗನಾಗಲು ಸಾಧ್ಯವಿಲ್ಲ, ಅಲ್ಲದೆ ಗ್ರೆಗ್ ಚಾಪೆಲ್ ಅವರು ದೀಪಕ್ ಚಾಹರ್ ಅವರನ್ನು ಪರಿಗಣನೆಗೆ ಕೂಡ ತೆಗೆದುಕೊಂಡಿರಲಿಲ್ಲ. ಆಗ ನಾನು ಅಳುತ್ತಾ ಕೂತಿದ್ದೆ. 50 ಮಂದಿ ಯುವ ಕ್ರಿಕೆಟಿಗರನ್ನು ಆಯ್ಕೆ ಮಾಡಿದ್ದ ಗ್ರೆಗ್ ಚಾಪೆಲ್ ನನಗೆ ಸ್ಥಾನವನ್ನೇ ನೀಡಿರಲಿಲ್ಲ. ನನ್ನನ್ನು ಮನೆಗೆ ಕಳುಹಿಸಿದ್ದರು. ಆದ್ರೆ ನಾನು ಸುಮ್ಮನೆ ಕೂರಲಿಲ್ಲ. ಕಠಿಣ ಅಭ್ಯಾಸ ನಡೆಸಿದ್ದೆ. ಪರಿಣಾಮ ಎರಡೇ ವರ್ಷಗಳಲ್ಲಿ ರಾಜಸ್ತಾನ ರಣಜಿ ತಂಡದಲ್ಲಿ ಸ್ಥಾನ ಪಡೆದುಕೊಂಡೆ ಎಂದು ದೀಪಕ್ ಚಾಹರ್ ಈ ಹಿಂದೆಯೇ ಹೇಳಿಕೊಂಡಿದ್ದರು.
ಇದೀಗ ಇದೇ ವಿಚಾರವನ್ನು ವೆಂಕಟೇಶ್ ಪ್ರಸಾದ್ ನೆನಪು ಮಾಡಿಕೊಂಡಿದ್ದಾರೆ. ಅಲ್ಲದೆ ವಿದೇಶಿ ಕೋಚ್ ಗಳನ್ನು ಗಂಭೀರವಾಗಿ ಪರಿಗಣಿಸಬೇಡಿ. ನಿಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇಡಿ ಎಂಬುದು ನೀತಿ ಪಾಠವಾಗಿದೆ ಎಂದು ವೆಂಕಿ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ ವೆಂಕಟೇಶ್ ಪ್ರಸಾದ್ ಅವರು ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಮತ್ತು ಐಪಿಎಲ್ ಫ್ರಾಂಚೈಸಿಗಳು ಕೂಡ ವಿದೇಶಿ ಕೋಚ್ ಗಳತ್ತ ಮುಖಮಾಡದೇ ಭಾರತೀಯ ಕೋಚ್ ಗಳ ಬಗ್ಗೆ ಗಮನ ಹರಿಸಿ ಎಂದು ಕೂಡ ಹೇಳಿದ್ದಾರೆ. ಐಪಿಎಲ್ ನಲ್ಲಿ ಬಹುತೇಕ ಫ್ರಾಂಚೈಸಿಗಳ ಕೋಚ್ ಗಳು ವಿದೇಶಿಗರು. ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಹೊರತುಪಡಿಸಿ ಇನ್ನುಳಿದ ಏಳು ಫ್ರಾಂಚೈಸಿಗಳ ಕೋಚ್ ಗಳು ಕೂಡ ವಿದೇಶಿಗರೇ. ಹೀಗಾಗಿ ಭಾರತೀಯ ಕೋಚ್ ಗಳತ್ತ ಮುಖ ಮಾಡಿ ಎಂದು ಐಪಿಎಲ್ ಫ್ರಾಂಚೈಸಿಗಳಿಗೆ ಪರೋಕ್ಷವಾಗಿ ವೆಂಕಟೇಶ್ ಪ್ರಸಾದ್ ಸಂದೇಶ ರವಾನಿಸಿದ್ದಾರೆ.








