2011ರ ವಿಶ್ವಕಪ್ ಫೈನಲ್ – ಧೋನಿಯ ಆ ಒಂದು ಐತಿಹಾಸಿಕ ನಿರ್ಧಾರಕ್ಕೆ ಕಾರಣ ನಾನೇ…- ಮುರಳೀಧರನ್..!
011ರ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದೆಂದಿಗೂ ಮರೆಯುವುದಿಲ್ಲ. ಟೀಮ್ ಇಂಡಿಯಾದ ಸಾಂಘಿಕ ಆಟದಿಂದಾಗಿಯೇ ಟೀಮ್ ಇಂಡಿಯಾ ಎರಡನೇ ಬಾರಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಫೈನಲ್ ಪಂದ್ಯದಲ್ಲಿ ಗೌತಮ್ ಗಂಭೀರ್ ಅವರ ಮನಮೋಹಕ ಆಟವನ್ನಾಡಿದ್ರೂ ಅಲ್ಲಿ ಹೀರೋ ಆಗಿದ್ದು ಟೀಮ್ ಇಂಡಿಯಾದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ.
ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದುಕೊಂಡು ಮ್ಯಾಚ್ ವಿನ್ನಿಂಗ್ ಆಟವನ್ನಾಡಿದ್ದ ಧೋನಿಯ ಆ ಒಂದು ಸಿಕ್ಸರ್ ಅನ್ನು ಕ್ರ್ರಿಕೆಟ್ ಅಭಿಮಾನಿಗಳು ಕಣ್ಣಂಚಿನಲ್ಲಿ ಒಂದು ಕ್ಷಣ ನೆನಪಿಸಿಕೊಳ್ಳುತ್ತಾರೆ.
ಹೌದು, ಫೈನಲ್ ಪಂದ್ಯದ ಧೋನಿಯ ಆ ಒಂದು ನಿರ್ಧಾರ ಹೆಚ್ಚು ಮಹತ್ವ ಪಡೆದುಕೊಂಡಿತ್ತು. ಯುವರಾಜ್ ಸಿಂಗ್ ಜಾಗದಲ್ಲಿ ಧೋನಿ ಬ್ಯಾಟ್ ಹಿಡಿದು ಕ್ರೀಸ್ ಗೆ ಆಗಮಿಸುತ್ತಿದ್ದಾಗ ಎಲ್ಲರೂ ಅಚ್ಚರಿಗೊಂಡಿದ್ರು.
ಆದ್ರೆ ಧೋನಿಯ ಆ ನಿರ್ಧಾರದ ಹಿಂದೆ ಬಲವಾದ ಕಾರಣವಿತ್ತು. ಒಂದು ಕಡೆ ಎಡ ಗೈ ಬ್ಯಾಟ್ಸ್ ಮೆನ್ ಗೌತಮ್ ಗಂಭೀರ್ ಬ್ಯಾಟಿಂಗ್ ಮಾಡುತ್ತಿದ್ದರು. ಅಲ್ಲದೆ ಯುವಿ ಕೂಡ ಎಡಗೈ ಬ್ಯಾಟ್ಸ್ ಮೆನ್. ಹೀಗಾಗಿ ಬಲ ಗೈ ಬ್ಯಾಟ್ಸ್ ಮೆನ್ ಆಗಿದ್ದ ಧೋನಿ ಆಡಿದ್ರೆ ರೈಟ್ – ಲೆಫ್ಟ್ ಕಾಂಬಿನೇಷನ್ ವರ್ಕ್ ಔಟ್ ಆಗಬಹುದು ಎಂಬ ಲೆಕ್ಕಚಾರವೂ ಇತ್ತು.
ಈ ನಡುವೆ, ಇದೀಗ ಧೋನಿಯ ಆ ನಿರ್ಧಾರದ ಹಿಂದಿನ ರಹಸ್ಯವನ್ನು ಶ್ರೀಲಂಕಾದ ಮಾಜಿ ವೇಗಿ ಮುತ್ತಯ್ಯ ಮುರಳೀಧರನ್ ಬಹಿರಂಗಪಡಿಸಿದ್ದಾರೆ.
ಧೋನಿ ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆಯಲು ಕಾರಣ ನಾನೇ ಎಂದು ಮುರಳೀಧರನ್ ಹೇಳಿಕೊಂಡಿದ್ದಾರೆ. ಅಲ್ಲದೇ ಇದಕ್ಕೆ ಕಾರಣವನ್ನೂ ಹೇಳಿದ್ದಾರೆ
ಮಹೇಂದ್ರ ಸಿಂಗ್ ಧೋನಿ ನನ್ನ ದೂಸ್ರಾ ಎಸೆತಗಳನ್ನು ಬೇಗನೇ ಅರಿತುಕೊಳ್ಳುತ್ತಿದ್ದರು. ಹಾಗಂತ ಯುವರಾಜ್ ದೂಸ್ರಾ ಎಸೆತಗಳನ್ನು ಅರಿತುಕೊಂಡಿದ್ದರು ಎಂದು ನಾನು ಹೇಳಲ್ಲ. ಆದ್ರೆ ಧೋನಿಗೆ ದೂಸ್ರಾ ಎಸೆತಗಳಿಗೆ ಆಡುವ ಸಾಮಥ್ಯ ಹೆಚ್ಚಿತ್ತು. ಹೀಗಾಗಿ ಧೋನಿ ಯುವಿ ಬದಲು ಕ್ರೀಸ್ ಗೆ ಆಗಮಿಸಿದ್ದರು. ಇದಕ್ಕೆ ಕಾರಣ ನಾನೇ ಎಂದು ಮುರಳೀಧರನ್ ಹೇಳಿದ್ರು.
ನಾನು ಐಪಿಎಲ್ ನಲ್ಲಿ ಸಿಎಸ್ ಕೆ ಪರ ಆಡುತ್ತಿದ್ದಾಗ ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿದ್ದೆ. ಧೋನಿ ನನ್ನ ದೂಸ್ರಾ ಎಸೆತಗಳನ್ನು ಚೆನ್ನಾಗಿ ಅರಿತುಕೊಂಡಿದ್ದರು. ಇದು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಧೋನಿಯ ಅಚ್ಚರಿಯ ನಿರ್ಧಾರಕ್ಕೆ ಕಾರಣವಾಯ್ತು ಎಂದು ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಟೀಮ್ ಇಂಡಿಯಾದಲ್ಲಿ ನನ್ನ ದೂಸ್ರಾ ಎಸೆತಗಳನ್ನು ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಗೌತಮ್ ಗಂಭೀರ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಆದ್ರೆ ರಾಹುಲ್ ದ್ರಾವಿಡ್ ಚೆನ್ನಾಗಿ ಅರಿತುಕೊಂಡಿಲ್ಲ. ಸೆಹ್ವಾಗ್ ಅವರಂತೂ ಅರಿತುಕೊಂಡಿದ್ದಾರೋ ಇಲ್ವೋ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಮುರಳೀಧರನ್ ಅವರು ತನ್ನ ದೂಸ್ರಾ ಎಸೆತಗಳ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನಾನು ದೂಸ್ರಾ ಎಸೆತಗಳನ್ನು ಬೌಲಿಂಗ್ ಮಾಡುವಾಗ ಚೆಂಡಿನ ಸೀಮ್ ಅನ್ನು ಬಳಸುವುದಿಲ್ಲ. ಹೀಗಾಗಿ ಸೀಮ್ ಅನ್ನು ನೋಡಿಕೊಂಡು ಆಡಲು ಸಾಧ್ಯವಾಗುವುದಿಲ್ಲ. ಆದ್ರಿಂದ ಅದನ್ನು ನನ್ನ ಮಣಿಕಟ್ಟಿನಿಂದ ನೋಡಬೇಕು. ಶ್ರೀಲಂಕಾ ಆಟಗಾರರಲ್ಲಿ ಕುಮಾರ ಸಂಗಕ್ಕರ, ಮಹೇಲಾ ಜಯವರ್ಧನೆ, ಅರವಿಂದ ಡಿ ಸಿಲ್ವಾ ಮತ್ತು ಮರ್ವಾನ್ ಅಟಪಟ್ಟು ದೂಸ್ರಾ ಎಸೆತಗಳಿಗೆ ಆಡುವುದನ್ನು ತಿಳಿದುಕೊಂಡಿದ್ದರು. ಆದ್ರೆ ತಿಲಕರತ್ನೆ ದಿಲ್ಷಾನ್ ಯಾವತ್ತೂ ಅರಿತುಕೊಂಡಿರಲಿಲ್ಲ ಎಂದು ಮುರಳೀಧರನ್ ಹೇಳಿದ್ದಾರೆ.








