ಕಲಬುರಗಿ: ಗಂಡ- ಹೆಂಡತಿ ಮಧ್ಯೆ ಜಗಳ ನಡೆದ ಹಿನ್ನೆಲೆಯಲ್ಲಿ ತಾಯಿ ತನ್ನ ಮೂವರು ಮಕ್ಕಳಿಗೆ ಜ್ಯೂಸ್ ಬಾಟಲಿಯಲ್ಲಿ ವಿಷ ಬೆರೆಸಿ ಕುಡಿಸಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಈ ಘಟನೆ ಚಿಂಚೋಳಿ (Chincholi) ತಾಲ್ಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ನಡೆದಿದೆ. ಗೀತಾಬಾಯಿ ಸಂತೋಷ್ ರಾಠೋಡ್(30) ಕೃತ್ಯ ಎಸಗಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ. ಕ್ರಿಮಿನಾಶಕ ಸೇವಿಸಿ ಮಕ್ಕಳಾದ ಚೈತನ್ಯ (4), ಧನುಷ್ (3) ಒಂದೂವರೆ ವರ್ಷದ ಲಕ್ಷ್ಮಿಗೆ ಕುಡಿಸಿದ್ದಾಳೆ. ಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಗಂಡ-ಹೆಂಡತಿ ಮಧ್ಯೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ಸಹ ಇದೇ ರೀತಿ ದಂಪತಿ ಮಧ್ಯೆ ಪರಸ್ಪರ ವಾಗ್ಯುದ್ಧ ನಡೆದ ಬಳಿಕ ಸಂತೋಷ್ ಹೊರಗೆ ಕೆಲಸಕ್ಕೆ ಹೋದ ನಂತರ ಗೀತಾ ಗಂಡನ ಮೇಲಿನ ಸಿಟ್ಟಿನಿಂದ ಮನನೊಂದು ಇಂತಹ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ.
ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಎಲ್ಲರನ್ನೂ ಬೀದರ್ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.