ಮುಂಬೈ, ಜೂನ್ 3 : ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ‘ನಿಸರ್ಗ’ ಸೈಕ್ಲೋನ್ ಮಹಾರಾಷ್ಟ್ರಕ್ಕೆ ಇಂದು ಅಪ್ಪಳಿಸಲಿದೆ.ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ನಿಸರ್ಗ ಚಂಡಮಾರುತ ಮುಂಬೈನಿಂದ 94 ಕಿ. ಮೀ. ದೂರದಲ್ಲಿರುವ ಅಲಿಬಾಗ್ ಪ್ರದೇಶಕ್ಕೆ ಅಪ್ಪಳಿಸಲಿದೆ.
ಗುಜರಾತ್ ಮತ್ತು ಕರ್ನಾಟಕದಲ್ಲಿಯೂ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಮಹಾರಾಷ್ಟ್ರ ಮತ್ತು ಗುಜರಾತ್ನ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಿಸರ್ಗ ಚಂಡಮಾರುತದ ಪರಿಣಾಮವಾಗಿ ಗಂಟೆಗೆ 110 ರಿಂದ 120 ಕಿ. ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಮುಂಬೈ, ಪಾಲ್ಘರ್, ರಾಯಗಢ, ಥಾಣೆ, ರತ್ನಗಿರಿ, ಸಿಂಧುದುರ್ಗ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಗುಜರಾತ್, ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದ್ದು, ಜೂನ್ 4ರ ತನಕ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ಕೊಡಲಾಗಿದೆ. ಮಂಗಳವಾರ ಮಧ್ಯಾಹ್ನದ ಸಮಯಕ್ಕೆ ಚಂಡಮಾರುತದ ಕೇಂದ್ರ ಬಿಂದು ಮುಂಬೈನಿಂದ ದಕ್ಷಿಣಕ್ಕೆ 430 ಕಿ. ಮೀ. ದೂರದಲ್ಲಿ ಇದ್ದು, ಮುಂಬೈಗೆ ನೇರವಾಗಿ ಚಂಡಮಾರುತ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ನಿಸರ್ಗ ಚಂಡಮಾರುತ ದಿಕ್ಕು ಬದಲಿಸಿದ್ದು, ಮುಂಬೈನಿಂದ 94 ಕಿ. ಮೀ. ದೂರದಲ್ಲಿರುವ ಅಲಿಬಾಗ್ ಪ್ರದೇಶಕ್ಕೆ ಅಪ್ಪಳಿಸಲಿದೆ.
ನಿಸರ್ಗ’ ಚಂಡಮಾರುತ ಉತ್ತರ ಮಹಾರಾಷ್ಟ್ರ, ಆಗ್ನೇಯ ಗುಜರಾತ್ ಮಧ್ಯಭಾಗದಲ್ಲಿ ಹಾದು ಹೋಗಲಿದ್ದು ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿಯೂ ಚಂಡಮಾರುತದ ಪರಿಣಾಮವಾಗಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು, ಚಂಡಮಾರುತ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಎರಡೂ ರಾಜ್ಯಗಳಿಗೆ 30 ಎನ್ಡಿಆರ್ಎಫ್ ತಂಡಗಳನ್ನು ಕಳುಹಿಸಿಕೊಡಲಾಗಿದ್ದು, ಮುಂಬೈನ ತಗ್ಗು ಪ್ರದೇಶ ಮತ್ತು ಕೊಳಗೇರಿಯ ಜನರನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲದೇ ಸೇನೆಗೂ ಸನ್ನದ್ಧವಾಗಿ ಇರುವಂತೆ ಸೂಚನೆ ಕೊಡಲಾಗಿದೆ.