ಮದ್ದೂರು: ಪೊಲೀಸ್ ಪೇದೆಯೊಬ್ಬಾತ ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ದುರುಪಯೋಗ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.
ತಾಲೂಕಿನ ಕೊಪ್ಪ ಠಾಣೆ ಪೊಲೀಸ್ ಪೇದೆ ಕೆಂಡ ಗಣ್ಣಯ್ಯ ಎಂಬ ಪೊಲೀಸ್ ಪೇದೆಯೇ ಕಳ್ಳರ ಕಳ್ಳನಾಗಿದ್ದು, ವಶಕ್ಕೆ ಪಡೆದು ಜೆಎಂಎಫ್ಸಿ ನ್ಯಾಯಾಲಯದ ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎನ್.ವಿ.ಕೋನಪ್ಪ ಅವರ ನಿವಾಸದಲ್ಲಿ ಹಾಜರಪಡಿಸಿದ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಪೇದೆ ಕೆಂಡಗಣ್ಣಯ್ಯ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ. ಎರಡು ತಿಂಗಳ ನಂತರ ಕೊಪ್ಪ ಠಾಣೆಗೆ ವರ್ಗಾವಣೆಗೊಂಡಿದ್ದರು. ಶ್ರೀರಂಗಪಟ್ಟಣ ಠಾಣೆಯಲ್ಲಿದ್ದಾಗ ನಗುವನಹಳ್ಳಿಯಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ಪೇದೆ ಕೆಂಡಗಣ್ಣಯ್ಯ ಆರೋಪಿಗಳೊಂದಿಗೆ ಸೇರಿ ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ 120 ಗ್ರಾಂ ಚಿನ್ನಾಭರಣ ದಲ್ಲಿ ಕತ್ತಿನ ಸರ ಹಾಗೂ ಬ್ರಾಸ್ ಲೈಟ್ ಮಾಡಿಸಿಕೊಂಡಿದ್ದರು. ಉಳಿದ ಚಿನ್ನವನ್ನು ಮಾರಾಟ ಮಾಡಿದ್ದರು ಎನ್ನಲಾಗಿದೆ.
ಆರೋಪಿಗಳು ಪಟ್ಟಣದ ಕೆಂಗಲ್ ಹನುಮಂತಯ್ಯ ನಗರ ಬಡಾವಣೆಯ ಶರತ್ ಕ್ಲಿನಿಕ್ ನ ಡಾ.ಚಂದ್ರು ಎಂಬುವವರ ಲಕ್ಷಾಂತರ ರು.ಚಿನ್ನಾಭರಣ ಹಾಗೂ ನಗದು ಲೂಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಪೇದೆ ಕೆಂಡಗಣ್ಣಯ್ಯ ನಿಂದ 61 ಗ್ರಾಂ ಚಿನ್ನ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರ ಆದೇಶ ಮೇರೆಗೆ ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಲಾಗಿದೆ.